ಬಡಿಯೋದು ಕೊಟ್ಟು ಊದುವುದು ಕೊಂಡಂತಾಗುತ್ತದೆ : ಸಿದ್ದರಾಮಯ್ಯ
ಹಾವೇರಿ, ನವೆಂಬರ್ 27 : "ರಾಣೆಬೆನ್ನೂರು ಕ್ಷೇತ್ರದ ಶಾಸಕರಾಗಿದ್ದ ಆರ್. ಶಂಕರ್ ಅವರ ಕೈ, ಬಾಯಿ ಶುದ್ಧವಿರಲಿಲ್ಲ. ಹಲವು ಸಮೀಕ್ಷೆಗಳಲ್ಲಿ ಶಂಕರ್ ಸೋಲುತ್ತಾರೆಂದು ವರದಿ ಬಂದಿತ್ತು" ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಡಿಸೆಂಬರ್ 5ರಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಕಾಂಗ್ರೆಸ್ನಿಂದ ಕೆ. ಬಿ. ಕೋಳಿವಾಡ ಅಭ್ಯರ್ಥಿ. ಸಿದ್ದರಾಮಯ್ಯ ಕೋಳಿವಾಡ ಪರವಾಗಿ ಕ್ಷೇತ್ರದಲ್ಲಿ ಮಂಗಳವಾರ ಪ್ರಚಾರ ನಡೆಸಿದರು.
ಉಪ ಚುನಾವಣೆ ನಂತರ ಕೋಳಿವಾಡ ರಾಜಕೀಯ ನಿವೃತ್ತಿ
"ಕ್ಷೇತ್ರದ ಶಾಸಕರಾಗಿದ್ದ ಶಂಕರ್ ಅವರ ಕೈ, ಬಾಯಿ ಶುದ್ಧವಿರಲಿಲ್ಲ. ಹಲವು ಸಮೀಕ್ಷೆಗಳಲ್ಲಿ ಶಂಕರ್ ಸೋಲುತ್ತಾರೆಂದು ವರದಿ ಬಂದಿತ್ತು. ಈ ಕಾರಣಕ್ಕಾಗಿ ಬಿಜೆಪಿ ಅವರಿಗೆ ಟಿಕೆಟ್ ನೀಡದೆ ಕ್ರಿಮಿನಲ್ ಹಿನ್ನೆಲೆಯಿರುವ ವ್ಯಕ್ತಿಯೊಬ್ಬನಿಗೆ ಟಿಕೆಟ್ ನೀಡಿದೆ. ಇವರನ್ನೂ ಮತ್ತೆ ಗೆಲ್ಲಿಸಿದರೆ ಬಡಿಯೋದು ಕೊಟ್ಟು ಊದುವುದು ಕೊಂಡಂತಾಗುತ್ತದೆ" ಎಂದು ಸಿದ್ದರಾಮಯ್ಯ ತಿಳಿಸಿದರು.
"ಉತ್ತರ ಕರ್ನಾಟಕದ ಹೆಬ್ಬಾಗಿಲು" ರಾಣೆಬೆನ್ನೂರು ಕ್ಷೇತ್ರ ಪರಿಚಯ
ಅನರ್ಹ ಶಾಸಕ ಆರ್. ಶಂಕರ್ಗೆ ಬಿಜೆಪಿ ಉಪ ಚುನಾವಣೆ ಟಿಕೆಟ್ ಕೊಟ್ಟಿಲ್ಲ. ಅರುಣ ಕುಮಾರ್ ಪೂಜಾರ ಅಭ್ಯರ್ಥಿಯಾಗಿದ್ದಾರೆ. 2004, 2008ರಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿತ್ತು. 2013ರಲ್ಲಿ ಕೆ. ಬಿ. ಕೋಳಿವಾಡ ಗೆದ್ದು ಕ್ಷೇತ್ರವನ್ನು ಕಾಂಗ್ರೆಸ್ಗೆ ತಂದು ಕೊಟ್ಟಿದ್ದರು. 2018ರಲ್ಲಿ ಕೆಪಿಜೆಪಿಯ ಶಂಕರ್ ಗೆದ್ದರು.
15 ಕ್ಷೇತ್ರದ ಉಪ ಚುನಾವಣೆ; ಯಡಿಯೂರಪ್ಪಗೆ ಅಮಿತ್ ಶಾ ಕರೆ!
ಕೋಳಿವಾಡ ಪರವಾದ ಅಲೆ ಇದೆ
"ಕೋಳಿವಾಡ ಅವರಿಗೆ 76 ವರ್ಷ ವಯಸ್ಸಾಗಿದ್ದರೂ ಅವರೊಳಗಿನ ಉತ್ಸಾಹ 26 ಯುವಕನಂತಿದೆ. ಜನತೆಯ ಒಲವು ಕೂಡ ಇವರ ಪರವಾಗಿದೆ ಎಂದು ಇಡೀ ದಿನ ಕ್ಷೇತ್ರದಲ್ಲಿ ಸುತ್ತಾಡಿದ ನನಗೆ ಸ್ಪಷ್ಟವಾಗಿ ಕಂಡಿದೆ. ಬಿಜೆಪಿಯ ಅನೈತಿಕ ಸರ್ಕಾರ ಹೋಗಿ ಕಾಂಗ್ರೆಸ್ನ ಸುಭದ್ರ ಸರ್ಕಾರ ಬರಬೇಕಾದರೆ ಕೋಳಿವಾಡ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡುತ್ತೇನೆ" ಎಂದು ಸಿದ್ದರಾಮಯ್ಯ ಹೇಳಿದರು.
ಸಹಕಾರ ನಮ್ಮ ಪಕ್ಷದ ಅಭ್ಯರ್ಥಿಗೆ ಮಾತ್ರ
"ಕಳೆದ ಬಾರಿ ಕೋಳಿವಾಡ ಅವರ ಪರ ಒಮ್ಮೆ ಮಾತ್ರ ಪ್ರಚಾರಕ್ಕಾಗಿ ಆಗಮಿಸಿದ್ದೆ, ಅದನ್ನೇ ತಪ್ಪಾಗಿ ಬಿಂಬಿಸಲಾಗಿತ್ತು. ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ 'ಅಡ್ಜಸ್ಟ್ಮೆಂಟ್ ರಾಜಕಾರಣವನ್ನು' ಮಾಡಿಲ್ಲ. ಎದುರಿನ ಅಭ್ಯರ್ಥಿ ಯಾವ ಜಾತಿ, ಜನಾಂಗ, ಸಮುದಾಯಕ್ಕೆ ಸೇರಿದವನೇ ಆಗಿರಲಿ, ನನ್ನ ಬೆಂಬಲ, ಸಹಕಾರ ನಮ್ಮ ಪಕ್ಷದ ಅಭ್ಯರ್ಥಿಗೆ ಮಾತ್ರ" ಎಂದು ಸಿದ್ದರಾಮಯ್ಯ ಹೇಳಿದರು.
ಇದು ಕೊನೆಯ ಚುನಾವಣೆ
"ಐದು ಬಾರಿ ನನ್ನನ್ನು ಆಯ್ಕೆ ಮಾಡಿದ್ದೀರಿ. ಈ ಭಾರಿ ಆಯ್ಕೆ ಮಾಡಿ. ನನ್ನನ್ನು ನಗುಮೊಗದ ಮೂಲಕ ನಿವೃತ್ತಿಯಾಗಿಸಿ, ಇದು ನನ್ನ ಕೊನೆಯ ಚುನಾವಣೆ. ಇದು ನನ್ನ ನಿವೃತ್ತಿ ಚುನಾವಣೆ. ಈ ಬಾರಿ ಚುನಾವಣೆಗೆ ನಿಲ್ಲಬಾರದು ಎಂದುಕೊಂಡಿದ್ದೆ. ಆದರೆ, ಸಿದ್ದರಾಮಯ್ಯ ನಿಲ್ಲಿಸಿದ್ದಾರೆ. ಅವರೇ ಬಂದು ಗೆಲ್ಲಿಸುತ್ತೇನೆ ಎಂದಿದ್ದಾರೆ" ಎಂದು ಕೆ. ಬಿ. ಕೋಳಿವಾಡ ಹೇಳಿದರು.
77 ವರ್ಷದ ಕೋಳಿವಾಡ
ಕೆ. ಬಿ. ಕೋಳಿವಾಡಗೆ 77 ವರ್ಷ. 10 ಸಲ ಚುನಾವಣಾ ಕಣಕ್ಕಿಳಿದಿರುವ ಅವರು 5 ಬಾರಿ ಗೆದ್ದು, 5 ಬಾರಿ ಸೋತಿದ್ದಾರೆ. 11ನೇ ಚುನಾವಣೆಯಲ್ಲಿ 40 ವರ್ಷದ ಅರುಣ ಕುಮಾರ ಪೂಜಾರ ಕೋಳಿವಾಡ ಎದುರಾಳಿ. 2013ರ ಚುನಾವಣೆಯಲ್ಲಿ ಗೆದ್ದಿದ್ದ ಕೆ. ಬಿ. ಕೋಳಿವಾಡ 2018ರ ಚುನಾವಣೆಯಲ್ಲಿ ಆರ್. ಶಂಕರ್ ವಿರುದ್ಧ ಸೋತಿದ್ದರು.