Breaking : ಮನೆಕೆಲಸದವರ ಆರೋಗ್ಯ ವಿಚಾರಿಸಿದ ಶಿವರಾಜ್ ಕುಮಾರ್ ದಂಪತಿ
ಹಾವೇರಿ, ಮೇ29: ದೊಡ್ಮನೆ ಕುಟುಂಬ ಪ್ರೀತಿಯನ್ನು ಕೊಟ್ಟು ಪ್ರೀತಿಯನ್ನು ಗಳಿಸಿಕೊಳ್ಳುವ ಕುಟುಂಬ. ದೊಡ್ಮನೆಯಲ್ಲಿ ಕೆಲಸವನ್ನು ಮಾಡಿರುವ ಪ್ರತಿಯೊಬ್ಬರನ್ನು ಪ್ರೀತಿಯಿಂದ ನೋಡಿಕೊಳ್ಳುವುದು ದೊಡ್ಡತನ. ತಮ್ಮ ಮನೆಯಲ್ಲಿ ಕೆಲಸ ಮಾಡಿದ್ದವರ ಆರೋಗ್ಯವನ್ನು ವಿಚಾರಿಸಲು ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಹಾವೇರಿಯ ಹಾನಗಲ್ ತಾಲೂಕಿನ ಕಂಚಿನೆಗಳೂರು ಗ್ರಾಮಕ್ಕೆ ಭೇಟಿ ನೀಡಿದ್ದಾರೆ.
ಶಿವಣ್ಣರವರ ಮನೆಯಲ್ಲಿ ಹಲವಾರು ವರ್ಷ ಕೆಲಸ ಮಾಡಿದ್ದ ದ್ಯಾವಮ್ಮ, ದುರಗಪ್ಪ ಕನ್ನಿ ಕಂಚಿನೆಗಳೂರು ಗ್ರಾಮದಲ್ಲಿ ವಾಸವಾಗಿದ್ದಾರೆ. ಇವರ ಆರೋಗ್ಯವನ್ನು ವಿಚಾರಿಸಲು ಶಿವಣ್ಣ ದಂಪತಿ ಹೋಗಿದ್ದರು. ಈ ವೇಳೆ ಗ್ರಾಮಸ್ತರು ದ್ಯಾವಮ್ಮ ಮನೆ ಬಳಿಯಲ್ಲಿ ಜಮಾಯಿಸಿದ್ದರು. ಶಿವಣ್ಣ ಮತ್ತು ಗೀತಾ ಶಿವರಾಜ್ ಕುಮಾರ್ ಪ್ರೀತಿಯಿಂದ ಬರಮಾಡಿಕೊಂಡರು. ಶಿವಣ್ಣ ದಂಪತಿಯು ಬಡವರ ಮನೆಯ ಪ್ರೀತಿಯ ಸವಿಯನ್ನು ಸವಿದು ದ್ಯಾವಮ್ಮ ಮತ್ತು ದುರಗಪ್ಪ ಕನ್ನಿ ದಂಪತಿಯ ಆರೋಗ್ಯವನ್ನು ವಿಚಾರಿಸಿದರು.
ಶಿವಣ್ಣ ದಂಪತಿಯವರು ಕಳೆದ ಮೂರ್ನಾಲ್ಕು ಉತ್ತರ ಕರ್ನಾಟಕ ಭಾಗದ ಪ್ರವಾಸವನ್ನು ಕೈಗೊಂಡಿದ್ದಾರೆ. ಶಿರಸಿಯ ಮಾರಿಕಾಂಬ ದೇವಾಲಯ, ಸಹಸ್ರ ಲಿಂಗ, ಬನವಾಸಿ ಸೇರಿದಂತೆ ಸುತ್ತಮುತ್ತಲಿನ ದೇವಾಲಯಗಳು, ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದರು.
ಇದೇ ವೇಳೆ ಹಾನಗಲ ತಾಲೂಕು ಕಂಚಿನೆಗಳೂರ ಗ್ರಾಮದ ನಾರಾಯಣ ಕಠಾರಿಯವರ ಮನೆಗೆ ಭೇಟಿ ನೀಡಿದ್ದರು. ತಮ್ಮ ಮನೆಯಲ್ಲಿ ಕೆಲಸ ಮಾಡಿದ್ದ ದ್ಯಾವಮ್ಮ, ದುರಗಪ್ಪ ಕನ್ನಿಯನ್ನು ಭೇಟಿಯಾಗಿ ಯೋಗಕ್ಷೇಮವನ್ನು ವಿಚಾರಿಸಿದ್ದು ಸ್ಥಳೀಯ ಗ್ರಾಮಸ್ಥರಿಗೆ ಭಾರೀ ಸಂತೋಷ ಉಂಟಾಗುವಂತೆ ಮಾಡಿತು.
ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಪ್ರವಾಸದ ನಿಮಿತ್ತ ಹೋಗಿದ್ದರು ತಮ್ಮ ಮನೆಯಲ್ಲಿ ಕೆಲಸ ಮಾಡಿದ್ದವರನ್ನು ನೆನಪಿನಲ್ಲಿಟ್ಟುಕೊಂಡು ಅವರ ಮನೆಗೆ ಭೇಟಿಯನ್ನು ಕೊಟ್ಟು ಆರೋಗ್ಯವನ್ನು ವಿಚಾರಿಸಿದ್ದು ದೊಡ್ಮನೆಯ ದೊಡ್ಡ ಗುಣವನ್ನು ತೋರಿಸುತ್ತದೆ.