ಮೀಸಲಾತಿ ವಿಚಾರ: ಸರ್ಕಾರದ ವಿರುದ್ಧ ಪ್ರಸನ್ನಾನಂದಪುರಿ ಸ್ವಾಮೀಜಿ ಆಕ್ರೋಶ
ಹಾವೇರಿ, ಅಕ್ಟೋಬರ್ 13: ಮೀಸಲಾತಿ ಯಾರ ಮನೆಯ ಆಸ್ತಿಯಲ್ಲ. ನಾವು ಯಾರ ಮನೆ ಆಸ್ತಿಯನ್ನೂ ಕೇಳುತ್ತಿಲ್ಲ. ಮೀಸಲಾತಿ ನಮ್ಮ ಸಂವಿಧಾನಬದ್ಧ ಹಕ್ಕು ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರವು ನಮ್ಮ ಕಿವಿಗೆ ಹೂವು ಇಡುತ್ತಿದೆ, ಇನ್ಮುಂದೆ ಕಿವಿಗೆ ಹೂವು ಇಡಲು ಬಂದರೆ ನಾವು ನಿಮ್ಮ ಕೆಳಗೆ ಹೂವು ಇಡುತ್ತೇವೆ ಎಂದು ವಾಲ್ಮೀಕಿ ಗುರುಪೀಠದ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ರಾಜ್ಯ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ಕೊಟ್ಟ ವಾಲ್ಮೀಕಿ ಶ್ರೀ, ರಾಮುಲು
ಹಾವೇರಿಯಲ್ಲಿ ಮಾತನಾಡಿದ ಅವರು ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ವಾಲ್ಮೀಕಿ ಸಮುದಾಯದ ಮೀಸಲಾತಿ ಹೆಚ್ಚಳ ಮಾಡುತ್ತೇವೆ ಎಂದು ಸಿಎಂ ಯಡಿಯೂರಪ್ಪನವರೇ ಈ ಹಿಂದೆ ಹೇಳಿದ್ದರು. ಚುನಾವಣೆ ಬಂದಾಗ ಮೀಸಲಾತಿ ಹೆಚ್ಚಳದ ಮಾತು ಬರುತ್ತದೆ ಎಂದರು.
ನಾವು ಹೋರಾಟ ಕೈಗೆತ್ತಿಕೊಂಡರೆ ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆ ಬರುವುದು ಗ್ಯಾರಂಟಿ. ವಾಲ್ಮೀಕಿ ಸಮಾಜವನ್ನು ಎಬ್ಬಿಸುವುದು ಕಷ್ಟ, ಒಂದು ಸಾರಿ ಸಮಾಜ ಎದ್ದು ನಿಂತರೆ, ಹಿಡಿಯಲು ನಿಮಗೆ ಅಸಾಧ್ಯ. ನಮ್ಮೆಲ್ಲರ ಶಾಪದಿಂದ ಸಮ್ಮಿಶ್ರ ಸರ್ಕಾರ ಬಿದ್ದು ಹೋಯಿತು. ಬೇಡರ ಶಾಪ ತಟ್ಟಿ ಸಮ್ಮಿಶ್ರ ಸರ್ಕಾರ ಅಧಿಕಾರ ಕಳೆದುಕೊಂಡಿತೆಂದರು.
Recommended Video
ಶೀಘ್ರದಲ್ಲೇ ಸಿಎಂ ಯಡಿಯೂರಪ್ಪನವರು ಕ್ಯಾಬಿನೆಟ್ ಸಭೆ ಕರೆದು ವಾಲ್ಮೀಕಿ ಸಮುದಾಯದ ಮೀಸಲಾತಿ ಹೆಚ್ಚಳ ಕುರಿತು ವರದಿ ಅನುಷ್ಠಾನ ತರುವಂತೆ ಒತ್ತಾಯಿಸಿದರು. ಅಕ್ಟೋಬರ್ 21 ರಿಂದ ಪರಿಶಿಷ್ಟ ಪಂಗಡಕ್ಕೆ 7.5 ಮೀಸಲಾತಿ ಜಾರಿಗಾಗಿ ಬೆಂಗಳೂರಿನಲ್ಲಿ ಅಕ್ಟೋಬರ್ 31 ರವರೆಗೆ ಒಬ್ಬನೇ ಧರಣಿ ಕೂರುತ್ತೇನೆ ಎಂದು ತಿಳಿಸಿದರು.