"ಉತ್ತರ ಕರ್ನಾಟಕದ ಹೆಬ್ಬಾಗಿಲು" ರಾಣೆಬೆನ್ನೂರು ಕ್ಷೇತ್ರ ಪರಿಚಯ
ಹಾವೇರಿ ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಉಪ ಚುನಾವಣೆ ಘೋಷಣೆಯಾಗಿದ್ದು, "ಉತ್ತರ ಕರ್ನಾಟಕದ ಹೆಬ್ಬಾಗಿಲು" ಎಂದೇ ಕರೆಸಿಕೊಳ್ಳುವ ರಾಣೆಬೆನ್ನೂರಿನಲ್ಲಿ ಈಗಾಗಲೇ ಸಿದ್ಧತೆ ಶುರುವಾಗಿದೆ.
ವ್ಯಾಪಾರಕ್ಕೆ ಪ್ರಸಿದ್ಧವಾದ ರಾಣೆಬೆನ್ನೂರನ್ನು ವಿಶೇಷ ಸ್ಥಾನದಲ್ಲಿರಿಸಿರುವ ಮತ್ತೂ ಒಂದು ಅಂಶ ಕೃಷ್ಣಮೃಗ ಅಭಯಾರಣ್ಯ. ಏಷ್ಯಾ ಖಂಡದಲ್ಲೇ ಪ್ರಸಿದ್ಧವಾದ ಈ ಅಭಯಾರಣ್ಯ ರಾಣೆಬೆನ್ನೂರಿಗೆ ಹೆಸರು ತಂದುಕೊಟ್ಟಿದೆ. ಇಲ್ಲಿ ಹರಿಯುವ ತುಂಗಭದ್ರೆಯೂ ಊರಿಗೆ ವಿಶೇಷ ಕಳೆ ಕೊಟ್ಟಿದ್ದಾಳೆ. ಸಾರಿಗೆ ಸೌಲಭ್ಯದ ವಿಷಯಕ್ಕೆ ಬಂದರೆ ರಾಣೆಬೆನ್ನೂರು ಉತ್ತಮ ಎಂದೇ ಹೇಳಬಹುದು. ಬೆಂಗಳೂರು ಮತ್ತು ಉತ್ತರ ಕರ್ನಾಟಕವನ್ನು ಸಂಪರ್ಕಿಸುವ ಕ್ಷೇತ್ರ ರಾಣೆಬೆನ್ನೂರಾಗಿದ್ದು, ಒಳ್ಳೆಯ ಸಾರಿಗೆ ಸಂಪರ್ಕವನ್ನು ಹೊಂದಿದೆ. ಹುಬ್ಬಳ್ಳಿ ಹತ್ತಿರವಿದ್ದು, ವಿಮಾನ ಸಂಪರ್ಕವೂ ಇದೆ.
ಹಾವೇರಿ ಜಿಲ್ಲೆಯ 2 ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆ
2011ರ ಜನಗಣತಿ ಪ್ರಕಾರ ಕ್ಷೇತ್ರದ ಜನಸಂಖ್ಯೆ 106,365. ಆರ್ಥಿಕವಾಗಿ ಸಬಲವಾಗುವ ಉದ್ದೇಶದೊಂದಿಗೆ ಉದ್ಯೋಗದ ಮೂಲಮಂತ್ರವನ್ನೇ ಜಪಿಸುತ್ತಾ ಹಲವಾರು ಸಂಘ ಸಂಸ್ಥೆಗಳು ಇಲ್ಲಿ ರೂಪುಗೊಂಡಿವೆ. ಕುರಿ ಉಣ್ಣೆಯ ಸಹಕಾರಿ ಸಂಘ 1942ರಲ್ಲೇ ಸ್ಥಾಪನೆಯಾಗಿದೆ. ಕುರಿ ಸಾಕಣೆ, ಕೈ ಮಗ್ಗ, ಜವಳಿ ಉತ್ಪಾದನೆ ಇಲ್ಲಿನ ಜನರ ಉದ್ಯಮ. ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳೂ ಇಲ್ಲಿನ ಜನರ ಜೀವನಾಡಿ. ಹತ್ತಿ ಮತ್ತು ಜೋಳ ಇಲ್ಲಿನ ಪ್ರಮುಖ ಬೆಳೆ. ಎಣ್ಣೆಕಾಳುಗಳ ಬೀಜಗಳ ಉತ್ಪಾದನೆಗೂ ರಾಣೆಬೆನ್ನೂರು ಜನಪ್ರಿಯ. ಹೀಗಾಗೇ ಇಲ್ಲಿ ಹಲವಾರು ಬೀಜದ ಕಂಪನಿಗಳು ತೆರೆದುಕೊಂಡಿವೆ. ಆದರೆ ಉತ್ತರ ಕರ್ನಾಟಕದ ಬಹುಪಾಲು ಪ್ರದೇಶದಂತೆ ನೀರಿನ ಸಮಸ್ಯೆ ರಾಣೆಬೆನ್ನೂರನ್ನೂ ಬಿಟ್ಟಿಲ್ಲ.
ಇನ್ನು ಈ ಕ್ಷೇತ್ರದ ರಾಜಕೀಯ ಭಾಗಕ್ಕೆ ಬರುವುದಾದರೆ, ರಾಣೆಬೆನ್ನೂರು ಕ್ಷೇತ್ರದಲ್ಲಿ 1,18,396 ಪುರುಷರು ಹಾಗೂ 1,14,076 ಮಹಿಳೆಯರು ಹಾಗೂ 13 ಜನ ಇತರರು ಸೇರಿ 2,32,485 ಮತದಾರರಿದ್ದಾರೆ. ಇದು ವಿಧಾನಸಭೆ ಸ್ಪೀಕರ್ ಕೆ.ಬಿ.ಕೋಳಿವಾಡ ಅವರ ತವರು ಕ್ಷೇತ್ರ. ಲಿಂಗಾಯತರೇ ಪ್ರಧಾನವಾಗಿರುವ ಈ ಕ್ಷೇತ್ರದಲ್ಲಿ 2018ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಆರ್. ಶಂಕರ್ ಗೆಲುವು ಕಂಡಿದ್ದರು. ಅವರು ಅನರ್ಹಗೊಂಡಿದ್ದು, ಉಪಚುನಾವಣೆಗೆ ಕಾಂಗ್ರೆಸ್ ಹಿರಿಯ ಮುಖಂಡ ಕೆ.ಬಿ.ಕೋಳಿವಾಡ ಕ್ಷೇತ್ರದಲ್ಲಿ ತಯಾರಿ ನಡೆಸಿದ್ದಾರೆ. ಕೋಳಿವಾಡ, ಶಂಕರ್ ವಿರುದ್ಧ 4,338 ಮತಗಳ ಅಂತರದಿಂದ ಸೋಲು ಕಂಡಿದ್ದರು.
ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಪರಿಚಯ
ಶಂಕರ್ ಕೂಡ ಬಿಜೆಪಿ ಬೆಂಬಲಿಸಿ ಕೋಳಿವಾಡ ಅವರನ್ನು ಸೋಲಿಸಲು ತಂತ್ರ ರೂಪಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಡಾ.ಬಸವರಾಜ ಎಸ್ ಕೇಲಗಾರ ಮತ್ತೆ ಟಿಕೆಟ್ ಆಕಾಂಕ್ಷೆಯಲ್ಲಿದ್ದಾರೆ. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ್ ಸಜ್ಜನ್ ಚುನಾವಣೆಗೆ ಸನ್ನದ್ಧರಾಗುವಂತಿದ್ದಾರೆ. ಈ ನಡುವೆ ಕೆ.ಎಸ್. ಈಶ್ವರಪ್ಪ ಅವರ ಪುತ್ರ ಕೆ.ಇ. ಕಾಂತೇಶ್ ರಾಣೆಬೆನ್ನೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆ ಎಂಬ ಸುದ್ದಿಯೂ ಹರಿದಾಡುತ್ತಿತ್ತು. ಆದರೆ ಇದು ಸುಳ್ಳು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.
ಉಪಚುನಾವಣೆಯಲ್ಲಿ ಎಷ್ಟು ಸ್ಥಾನ ಗೆದ್ದರೆ ಬಿಜೆಪಿ ಸರ್ಕಾರ ಸೇಫ್?
ಈ ಬಾರಿಯ ಪ್ರವಾಹವೂ ರಾಣೆಬೆನ್ನೂರಿನ ಉಪಚುನಾವಣೆ ಮೇಲೆ ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗಿದೆ. ಭಾರೀ ಮಳೆ ಹಾಗೂ ತುಂಗಭದ್ರಾ, ಕುಮದ್ವತಿ ನದಿ ನೀರಿನ ಪ್ರವಾಹದಿಂದಾಗಿ ತಾಲೂಕಿನ ಹಲವಾರು ಗ್ರಾಮಗಳು ತತ್ತರಿಸಿದ್ದವು. ಸಾಕಷ್ಟು ಬೆಳೆಗಳು ಹಾನಿಯಾಗಿದ್ದವು. ಇಷ್ಟಾಗಿಯೂ ರಾಜ್ಯ ಸರ್ಕಾರ ತಾಲೂಕನ್ನು ಅತಿವೃಷ್ಟಿ ತಾಲೂಕುಗಳ ಪಟ್ಟಿಯಿಂದ ಕೈಬಿಟ್ಟಿತ್ತು. ಇದಕ್ಕೆ ಸ್ಥಳೀಯರು ಆಕ್ರೋಶವನ್ನೂ ವ್ಯಕ್ತಪಡಿಸಿದ್ದರು. ಈ ಆಕ್ರೋಶ ಉಪಚುನಾವಣೆ ಮೇಲೆ ಪರಿಣಾಮ ಬೀರಬಹುದಾದ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ತಮ್ಮ ಸಮಸ್ಯೆಗಳಿಗೆ ಸ್ಪಂದಿಸುವ, ತಮ್ಮ ಕ್ಷೇತ್ರಕ್ಕೆ ಒಳಿತು ಮಾಡುವ ಅಭ್ಯರ್ಥಿಯನ್ನು ಕಂಡುಕೊಳ್ಳುವ ಒಂದು ಅವಕಾಶವನ್ನು ಈ ಪ್ರವಾಹ ಪರಿಸ್ಥಿತಿ ನೀಡಿದ್ದು, ಜನರು ಅದನ್ನು ಹೇಗೆ ಕಂಡುಕೊಳ್ಳುತ್ತಾರೆ ಕಾದು ನೋಡಬೇಕಷ್ಟೆ.