ಹಾವೇರಿಯಲ್ಲಿ ಬಸ್ ನಿಲ್ದಾಣದಲ್ಲೇ ಶವವಿಟ್ಟು ಹೋದ ಆಸ್ಪತ್ರೆ ಸಿಬ್ಬಂದಿ!
ಹಾವೇರಿ, ಜುಲೈ 4: ಈಚೆಗೆ ಕೊರೊನಾ ವೈರಸ್ ನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ನಡೆಸುವ ರೀತಿ ಭಾರೀ ಚರ್ಚೆಗೆ ಒಳಪಟ್ಟಿದೆ. ಆರೋಗ್ಯ ಇಲಾಖೆ ಸೋಂಕಿತರ ಅಂತ್ಯಸಂಸ್ಕಾರ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಬಳ್ಳಾರಿಯಲ್ಲಿ, ದಾವಣಗೆರೆ, ರಾಯಚೂರಿನಲ್ಲಿ ಕೊರೊನಾ ವೈರಸ್ ನಿಂದ ಮೃತಪಟ್ಟವರ ಅಂತ್ಯಸಂಸ್ಕಾರವನ್ನು ನಡೆಸಿದ ರೀತಿಗೆ ಖಂಡನೆಯೂ ವ್ಯಕ್ತವಾಗಿದೆ.
Recommended Video
ಹೀಗೆ ಒಂದಾದ ಮೇಲೆ ಒಂದರಂತೆ ಇಂಥ ಸಂಗತಿಗಳು ಕೇಳಿಬರುತ್ತಿದ್ದರೂ ಹಾವೇರಿಯಲ್ಲಿ ಮತ್ತೆ ಅಂಥದ್ದೇ ಒಂದು ಘಟನೆ ಬೆಳಕಿಗೆ ಬಂದಿದೆ. ಅನಾರೋಗ್ಯದಿಂದ ಮೃತಪಟ್ಟ ವ್ಯಕ್ತಿಯ ಮೃತದೇಹವನ್ನು ಎರಡು ಮೂರು ಗಂಟೆಗಳ ಕಾಲ ಆಸ್ಪತ್ರೆ ಪಕ್ಕದ ಬಸ್ ನಿಲ್ದಾಣದಲ್ಲೇ ಸಿಬ್ಬಂದಿ ಇಟ್ಟಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಕೊರೊನಾ ರೋಗಿಗಳ ಶವಸಂಸ್ಕಾರ ವಿಡಿಯೋ; ತನಿಖೆಗೆ ಬಳ್ಳಾರಿ ಡಿಸಿ ಆದೇಶ
ಅನಾರೋಗ್ಯದಿಂದ ಮೃತಪಟ್ಟಿದ್ದ ವ್ಯಕ್ತಿ
ಹಾವೇರಿ ಜಿಲ್ಲೆ ರಾಣೆಬೆನ್ನೂರು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಆದರೆ ಮೃತಪಟ್ಟ ಆ ವ್ಯಕ್ತಿಯ ಶವವನ್ನು ಸಿಬ್ಬಂದಿ ಆಸ್ಪತ್ರೆ ಪಕ್ಕದ ಬಸ್ ನಿಲ್ದಾಣದ ಬಳಿ ಇಟ್ಟಿದ್ದಾರೆ. ರಸ್ತೆಗೆ ಹೊಂದಿಕೊಂಡಿರುವ ಜನನಿಬಿಡ ಪ್ರದೇಶದಲ್ಲಿನ ಬಸ್ ನಿಲ್ದಾಣದ ಬಳಿ ಎರಡು ಮೂರು ಗಂಟೆಗಳ ಕಾಲ ಮೃತದೇಹವನ್ನು ಇಟ್ಟಿದ್ದಾರೆ.
ಮೃತದೇಹಕ್ಕೆ ರಕ್ಷಣಾ ಸಾಮಗ್ರಿ ಹಾಕಿ ಇಟ್ಟಿದ್ದರು
ಮೃತದೇಹಕ್ಕೆ ರಕ್ಷಣಾ ಸಾಮಗ್ರಿಗಳನ್ನು ಹಾಕಿ ಬಸ್ ನಿಲ್ದಾಣದಲ್ಲಿ ಇಟ್ಟಿದ್ದು, ಇದನ್ನು ಕಂಡ ಜನರು ಗಾಬರಿಯಾಗಿದ್ದಾರೆ. ಮೊದಲೇ ಕೊರೊನಾ ವೈರಸ್ ನಿಂದಾಗಿ ಕಂಗಾಲಾಗಿರುವ ಜನರಿಗೆ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಯ ಈ ಕೆಲಸದಿಂದ ಇನ್ನಷ್ಟು ಆತಂಕ ಉಂಟಾಗಿದೆ. ಮೃತದೇಹ ಕಂಡು ಭಯದಲ್ಲಿ ಜನರು ಓಡಾಡಿದ್ದಾರೆ.
ಕೆಮ್ಮಿನಿಂದ ಬಳಲುತ್ತಿದ್ದ ವ್ಯಕ್ತಿಗಿತ್ತೇ ಸೋಂಕು?
ಮೃತದೇಹವನ್ನು ನಿಲ್ದಾಣದಲ್ಲಿಟ್ಟು, ಎರಡು ಮೂರು ಗಂಟೆಗಳ ನಂತರ ಆಂಬುಲೆನ್ಸ್ ನಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಮೂರು ದಿನಗಳ ಹಿಂದೆ ಕೆಮ್ಮಿನಿಂದ ಬಳಲುತ್ತಿದ್ದ ಮೃತನ ಗಂಟಲು ದ್ರವವನ್ನು ಆರೋಗ್ಯ ಇಲಾಖೆ ಪರೀಕ್ಷೆಗೆ ಕಳುಹಿಸಿದೆ. ಆ ವರದಿ ಇನ್ನೂ ಬಂದಿಲ್ಲ. ವರದಿ ಬರದಿದ್ದರೂ ಬಸ್ ನಿಲ್ದಾಣದಲ್ಲೇ ಮೃತದೇಹವಿಟ್ಟು, ನಂತರ ಸ್ಮಶಾನಕ್ಕೆ ಸಾಗಿಸಿದ್ದಾರೆ ಸಿಬ್ಬಂದಿ.
ಬಳ್ಳಾರಿ, ದಾವಣಗೆರೆಯಲ್ಲೂ ಇಂಥದ್ದೇ ಪ್ರಕರಣ
ಕೆಲವೇ ದಿನಗಳ ಹಿಂದೆ ಬಳ್ಳಾರಿಯಲ್ಲಿ ಸೋಂಕಿತರ ಮೃತದೇಹಗಳನ್ನು ಗುಂಡಿಗೆ ಎಸೆಯುತ್ತಿದ್ದ ದೃಶ್ಯ ವೈರಲ್ ಆಗಿತ್ತು. ಆ ನಂತರ ಜಿಲ್ಲಾಧಿಕಾರಿಗಳು ಕ್ಷಮೆಯನ್ನೂ ಯಾಚಿಸಿದ್ದರು. ದಾವಣಗೆರೆಯಲ್ಲೂ ಜೆಸಿಬಿ ಬಳಸಿ ಸೋಂಕಿತೆಯ ಅಂತ್ಯಸಂಸ್ಕಾರ ನಡೆಸಿದ್ದು ಚರ್ಚೆಗೆ ವಿಷಯವಾಗಿತ್ತು. ಇದೀಗ ಹಾವೇರಿಯಲ್ಲಿ ಬಸ್ ನಿಲ್ದಾಣದಲ್ಲಿ ಶವ ಇಟ್ಟು ನಿರ್ಲಕ್ಷ್ಯ ತೋರಿರುವುದು ಕಂಡುಬಂದಿದೆ.