ಕೋವಿಡ್ ಆತಂಕದ ಮಧ್ಯೆ ಬಿಜೆಪಿ ಶಾಸಕರ ಭರ್ಜರಿ ಬರ್ತ್ ಡೇ!
ಬೆಂಗಳೂರು, ಆ. 26: ರಾಜ್ಯದಲ್ಲಿ ಕೋರೊನಾ ವೈರಸ್ಗೆ ತುತ್ತಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೂ ಮಾರ್ಗಸೂಚಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಸಾರ್ವಜನಿಕ ಗಣೇಶೋತ್ಸವ ಆಚರಣೆ ಸಂದರ್ಭದಲ್ಲಿ 20ಕ್ಕಿಂತ ಹೆಚ್ಚು ಜನರು ಸೇರಬಾರದು ಎಂದು ಸೂಚಿಸಲಾಗಿದೆ. ಸ್ವತಃ ಸಿಎಂ ಬಿ.ಎಸ್. ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸೋಂಕಿಗೆ ತುತ್ತಾಗಿ ಚೇತರಿಸಿಕೊಂಡಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಂಡು ಸೋಂಕು ನಿಯಂತ್ರಣ ಮಾಡಲು ಸಹಕರಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಆದರೆ ನಮ್ಮ ಕೆಲವು ಜನಪ್ರತಿನಿಧಿಗಳಿಗೆ ಮಾತ್ರ ಬುದ್ಧಿ ಬಂದಂತಿಲ್ಲ.
Recommended Video
ಕೋವಿಡ್ ಆತಂಕದ ಮಧ್ಯೆ ನಿಯಮ ಮುರಿದು ಶಿಸ್ತಿನ ಪಕ್ಷ ಬಿಜೆಯ ಶಾಸಕರೊಬ್ಬರು ಭರ್ಜರಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ತಮ್ಮದೇ ಪಕ್ಷದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೂಪಿಸಿರುವ ಕೋವಿಡ್ ಮಾರ್ಗಸೂಚಿಗಳನ್ನು ಮುರಿದು ಡಿಜೆ, ಎಲ್ಇಡಿ ಟಿವಿ ಹಾಕಿಕೊಂಡು ಭರ್ಜರಿ ಡ್ಯಾನ್ಸ್ ಮಾಡುವ ಮೂಲಕ ಸೋಂಕು ಹರಡಲು ಸಹಾಯಕವಾಗುವಂತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೆ ಹೀಗೆ ಹುಟ್ಟುಹಬ್ಬ ಆಚರಸಿಕೊಂಡಿದ್ದ ಗದಗ್ ಜಿಲ್ಲಾ ಬಿಜೆಪಿ ನಾಯಕರೊಬ್ಬರನ್ನು ಪಕ್ಷದಿಂದ ಅಮಾನತು ಮಾಡಲಾಗಿತ್ತು.
ಬಿಜೆಪಿ ಶಾಸಕ ಭರ್ಜರಿ ಬರ್ಥ್ಡೇ
ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಆತಂಕಕಾರಿಯಾಗಿ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಮದುವೆ ಮಾಡಲು ಕೂಡ ಹಲವು ಷರತ್ತುಗಳೊಂದಿಗೆ ಸರ್ಕಾರ ಅನುಮತಿ ಕೊಟ್ಟಿದೆ. ಆದರೆ ಕೋವಿಡ್-19 ಲಾಕ್ಡೌನ್ ನಿಯಮಗಳು ಮಾತ್ರ ಕೇವಲ ಜನ ಸಾಮಾನ್ಯರಿಗೆ ಮಾತ್ರ ಎಂಬಂತಾಗಿವೆ. ಯಾಕೆಂದರೆ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಪಕ್ಷದ ಶಾಸಕರೊಬ್ಬರು ಸೋಂಕು ಹರಡಲು ಸಹಾಯಕವಾಗುವಂತೆ ಭರ್ಜರಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ನಿನ್ನೆ (ಆ. 25) ತಡ ರಾತ್ರಿ ವರೆಗೂ ಡಿಜೆ ಸೌಂಡ್ ಹಾಗೂ ಸಾವಿರಾರು ಬೆಂಬಲಿಗರ ಡ್ಯಾನ್ಸ್ ಮಧ್ಯೆ ಭರ್ಜರಿ ಹುಟ್ಟುಹಬ್ಬ ಆಚರಿಸಿಕೊಂಡಿರುವುದು ಸಾರ್ವಜನಿಕರ ಭಾರೀ ವಿರೋಧಕ್ಕೆ ಕಾರಣವಾಗಿದೆ. ಆದರೆ ಇದೆಲ್ಲವನ್ನೂ ನಿಯಂತ್ರಿಸಬೇಕಾಗಿದ್ದ ಪೊಲೀಸರು ಮಾತ್ರ ಕಂಡು ಕಾಣದಂತೆ ಸುಮ್ಮನಾಗಿದ್ದಾರೆ ಎಂದು ಜನ ಆರೋಪಿಸಿದ್ದಾರೆ.
ಹೊತ್ತು ಕುಣಿದರು
ಹಾವೇರಿ ಜಿಲ್ಲೆ ರಾಣೇಬೆನ್ನೂರು ಕ್ಷೇತ್ರದ ಬಿಜೆಪಿ ಶಾಸಕ ಅರುಣಕುಮಾರ್ ಪೂಜಾರ್ ಕೋವಿಡ್-19 ಸಂಕಷ್ಟದಲ್ಲಿ ಭರ್ಜರಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ರಾಣೇಬೆನ್ನೂರು ನಗರದ ತಮ್ಮ ನಿವಾಸದ ಬಳಿ ಎಲ್ಇಡಿ ಟಿವಿ, ಸೌಂಡ್ ಸಿಸ್ಟಮ್ ಹಾಕಿ ಬೆಂಬಲಿಗರು ಭಕರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಜೊತೆಗೆ ಶಾಸಕ ಅರುಣಕುಮಾರ್ ಪೂಜಾರ್ ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಕುಣಿದಾಡಿದ್ದಾರೆ. ದೈಹಿಕ ಅಂತರವೂ ಇಲ್ಲದೆ, ಮಾಸ್ಕ್ ಧರಿಸದೆ ಶಾಸಕರನ್ನ ಹೊತ್ತು ಕುಣಿದಾಡಿ ಬರ್ತ್ ಡೇ ಸಂಭ್ರಮಾಚರಣೆ ಮಾಡಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಜೊತೆಗೆ ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ.
ವಿಧಾನಸಭೆ ಅಧಿವೇಶನ
ಇತ್ತೀಚೆಗೆ ಲಾಕ್ಡೌನ್ ಮಾರ್ಗಸೂಚಿಸಿ ಮುರಿದು ಭರ್ಜರಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಆರೋಗ್ಯ ಸಚಿವ ಶ್ರೀರಾಮುಲು ಅವರ ಆಪ್ತ, ಗದಗ್ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಎಸ್.ಎಚ್. ಶಿವನಗೌಡರ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು. ಜೊತೆಗೆ ಗದಗ್ ಪೊಲೀಸರು ವಿಪತ್ತು ನಿರ್ವಹಣಾ ಕಾಯಿದೆಯಡಿ ದೂರು ದಾಖಲಿಸಿದ್ದರು.
ಇದೀಗ ಇದೇ ಸೆಪ್ಟಂಬರ್ 10 ರಿಂದ ವಿಧಾನ ಮಂಡಳ ಮಳೆಗಾಲದ ಅಧಿವೇಶನ ನಡೆಯಲಿದೆ. ಸೋಂಕು ಹರಡದಂತೆ ತಡೆಯಲು ಹಲವು ಕ್ರಮಗಳನ್ನು ವಿಧಾನಸಭೆ ಸಚಿವಾಲಯ ಕೈಗೊಂಡಿದೆ. 70 ವರ್ಷ ಮೇಲ್ಪಟ್ಟ ಸದಸ್ಯರಿಗೆ ಕಲಾಪದಲ್ಲಿ ಭಾಗವಹಿಸುವುದರಿಂದ ರಿಯಾಯತಿ ಕೊಡುವ ಬಗ್ಗೆಯೂ ಚಿಂತನೆ ನಡೆದಿದೆ. ಪರಿಸ್ಥಿತಿ ಹೀಗಿದ್ದಾಗ ಶಾಸಕ ಅರುಣಕುಮಾರ್ ಪೂಜಾರ್ ಅವರ ಈ ರೀತಿಯ ನಿರ್ಲಕ್ಷದ ವರ್ತನೆಯಿಂದ ಹಿರಿಯ ಸದಸ್ಯರಿಗೆ ತೊಂದರೆ ಆಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಹಾವೇರಿ ಜಿಲ್ಲೆಯಲ್ಲಿ ಕೋವಿಡ್
ಹಾವೇರಿ ಜಿಲ್ಲೆಯಲ್ಲಿ ಈವರೆಗೆ ಕೊರೊನಾ ವೈರಸ್ ಸೋಂಕಿನಿಂದ 84 ಜನರು ಮೃತಪಟ್ಟಿದ್ದಾರೆ. ಒಟ್ಟು 3625 ಜನರಿಗೆ ಕೋವಿಡ್ ಸೋಂಕು ತಗುಲಿದ್ದು, 1285 ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ನಿನ್ನೆ ಒಂದೇ ದಿನ 5 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ಇನ್ನು ರಾಣಿಬೆನ್ನೂರು ನಗರದಲ್ಲಿಯೂ ಕೂಡ ಸೋಂಕು ಹರಡುವುದು ಹೆಚ್ಚಾಗುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಸಾಮಾನ್ಯರಿಗೆ ಮಾದರಿ ಆಗಬೇಕಿದ್ದ ಶಾಸಕ ಅರುಣ್ ಕುಮಾರ್ ಪೂಜಾರ್ ಅವರು ಭರ್ಜರಿ ಹುಟ್ಟುಹಬ್ಬ ಆಚರಿಸಿಕೊಂಡಿರುವುದು ಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ. ಜೊತೆಗೆ ಸಾಮಾನ್ಯರಿಗೊಂದು ಕಾನೂನು, ಶಾಸಕರಿಗೊಂದು ಕಾನೂನು ರಾಜ್ಯದಲ್ಲಿ ಜಾರಿಯಲ್ಲಿದೆಯಾ ಎಂದು ರಾಣಿಬೆನ್ನೂರು ಜನರು ಪ್ರಶ್ನಿಸುತ್ತಿದ್ದಾರೆ..