ರಾಣೇಬೆನ್ನೂರು ಕದನ: ನದಿ ಪಾತ್ರದ ಮತದಾರರೇ ನಿರ್ಣಾಯಕ
ಹಾವೇರಿ, ನವೆಂಬರ್ 28: ರಾಣೇಬೆನ್ನೂರು ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದೇ ಪ್ರಸಿದ್ದ. ಜಿಲ್ಲೆಯ ವಾಣಿಜ್ಯ ನಗರಿ ಎಂದು ಕರೆಯಿಸಿಕೊಳ್ಳವ ರಾಣೇಬೆನ್ನೂರಲ್ಲಿ ಈಗ ವಿಧಾನಸಭಾ ಉಪ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹಲವು ರಾಜ್ಯಮಟ್ಟದ ನಾಯಕರು ಈಗಾಗಲೇ ಹಲವು ಸುತ್ತಿನ ಪ್ರಚಾರವನ್ನು ಮಾಡಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಮತದಾನ ನಡೆಯಲಿದೆ,
ರಾಣೇಬೆನ್ನೂರು ಕ್ಷೇತ್ರ ಅನಾವಶ್ಯಕವಾಗಿ ಉಪ ಚುನಾವಣೆಯನ್ನು ಎದುರಿಸುವ ಸ್ಥಿತಿ ಎದುರಾಗಿದೆ. ಕ್ಷೇತ್ರದ ಜನರೂ ಕೂಡಾ ಉಪ ಕದನಕ್ಕೆ ಸಜ್ಜಾಗಿದ್ದಾರೆ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳಿಗೆ ಈಗ ಮತದಾನ ದಿನ ಸಮೀಪಿಸುತ್ತಿದ್ದಂತೆಯೇ ಆತಂಕ ಹೆಚ್ಚಾಗಿದೆ.
ಶಮನವಾಗದ ರಾಣೇಬೆನ್ನೂರು ಬಿಜೆಪಿ ಬಂಡಾಯ
೨೦೧೮ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕೆಪಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ ಆರ್.ಶಂಕರ್ ಅವರು ಪ್ರತಿಸ್ಪರ್ಧಿ ಕಾಂಗ್ರೆಸ್ ನ ಕೆ.ಬಿ.ಕೋಳಿವಾಡ ಅವರನ್ನು 4 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು. ಬಿಜೆಪಿ ಅಭ್ಯರ್ಥಿ ಬಸವರಾಜ ಕೇಲಗಾರ 3ನೇ ಸ್ಥಾನ ಪಡೆದಿದ್ದರು.
ಈಗ ಮತ್ತೊಮ್ಮೆ ಚುನಾವಣೆ ಬಂದಿದೆ, ಆದರೆ ಕಳೆದ ಬಾರಿ ಸ್ಪರ್ಧಿಸಿದವರಲ್ಲಿ ಕೋಳಿವಾಡರೊಬ್ಬರೇ ಇರುವುದು. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಅಭ್ಯರ್ಥಿಯನ್ನು ಬದಲಿಸಿವೆ. ಕಳೆದ ಬಾರಿಯ ವಿಜೇತ ಶಾಸಕ ಆರ್, ಈ ಬಾರಿ ಸ್ಪರ್ಧಿಸಿಲ್ಲ, ಬದಲಾಗಿ ಬಿಜೆಪಿ ಸೇರಿ ಪಕ್ಷದ ಅಭ್ಯರ್ಥಿಗೆ ಬೆಂಬಲಿಸಲಿದ್ದಾರೆ.
ಇಲ್ಲಿ ಯಾವುದೇ ಚುನಾವಣೆ ನಡೆದರೂ ತುಂಗಭದ್ರಾ ನದಿ ತೀರದ ಮತದಾರರೇ ಪ್ರಮುಖ ಪಾತ್ರ ವಹಿಸುತ್ತಾ ಬಂದಿದ್ದಾರೆ. ನದಿ ತಟದ ಜನರು ಯಾರ ಕೈ ಹಿಡಿಯುತ್ತಾರೋ ಅವರ ಗೆಲುವು ಶತಸಿದ್ದ. ನದಿ ತೀರದ ಗ್ರಾಮಗಳಲ್ಲಿ ಹೆಚ್ಚಿನ ಜನರು ವಾಸಿಸುತ್ತಿರುವುದರಿಂದ ಚುನಾವಣೆಯಲ್ಲಿ ನಿರ್ಣಾಯಕವಾಗಲಿದ್ದಾರೆ.
ರಾಣೇಬೆನ್ನೂರು ಬಿಜೆಪಿ ಟಿಕೆಟ್ ಗೆ ಆಕಾಂಕ್ಷಿಗಳ ನಡುವೆ ಪೈಪೋಟಿ ಜೋರು
15 ಕ್ಕೂ ಹೆಚ್ಚೂ ಗ್ರಾಮಗಳು ತುಂಗಭದ್ರಾ ನದಿ ದಡದಲ್ಲಿವೆ. ಇಲ್ಲಿ ಮರಳುಗಾರಿಕೆ ಎಗ್ಗಿಲ್ಲದೇ ನಡೆಯುತ್ತದೆ. ಅವರ ಒಲವನ್ನು ಯಾರು ಗಳಿಸುತ್ತಾರೋ ನೋಡಬೇಕು. ಮರಳುಗಾರಿಕೆಗೆ ಯಾರು ಸಹಕರಿಸುತ್ತಾರೋ ಅವರ ಕೈ ಹಿಡಿಯಲಿದ್ದಾರೆ ಇಲ್ಲಿನ ಮತದಾರರು.
ಕಾಂಗ್ರೆಸ್ ನಿಂದ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ, ಬಿಜೆಪಿಯಿಂದ ಅರುಣ್ ಕುಮಾರ್ ಪೂಜಾರ್, ಜೆಡಿಎಸ್ ನಿಂದ ಮಲ್ಲಿಕಾರ್ಜುನ ಹಲಗೇರಿ ಉಪ ಚುನಾವಣಾ ಕಣದಲ್ಲಿದ್ದಾರೆ. ಡಿಸೆಂಬರ್ 05 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 09 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.