ರಾಣೇಬೆನ್ನೂರು ಬಿಜೆಪಿ ಟಿಕೆಟ್ ಗೆ ಆಕಾಂಕ್ಷಿಗಳ ನಡುವೆ ಪೈಪೋಟಿ ಜೋರು
ಹಾವೇರಿ, ನವೆಂಬರ್ 15: ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಭಾರತೀಯ ಜನತಾ ಪಕ್ಷದ ಟಿಕೆಟ್ ಗಾಗಿ ಆಕಾಂಕ್ಷಿಗಳ ಮಧ್ಯೆ ಭಾರೀ ಪೈಪೋಟಿ ಏರ್ಪಟ್ಟಿದ್ದು, ಅನರ್ಹ ಶಾಸಕ ಆರ್.ಶಂಕರ್ ಗೆ ಬಿಜೆಪಿ ಟಿಕೆಟ್ ನೀಡುವುದಕ್ಕೆ ಸ್ಥಳೀಯ ಮುಖಂಡರುಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ರಾಣೇಬೆನ್ನೂರು ಜನತೆಯ ವಿಶ್ವಾಸರ್ಹತೆಯನ್ನು ಶಂಕರ್ ಕಳೆದುಕೊಂಡಿದ್ದು, ಅವರಿಗೆ ಟಿಕೆಟ್ ಕೊಟ್ಟರೆ ಪಕ್ಷ ಸೋಲನುಭವಿಸಲಿದೆ ಹೀಗಾಗಿ ನಮಗೇ ಟಿಕೆಟ್ ನೀಡಬೇಕೆಂದು ಕ್ಷೇತ್ರದ ಹಲವು ನಾಯಕರು ಸಿಎಂ ಯಡಿಯೂರಪ್ಪರನ್ನು ದುಂಬಾಲು ಬಿದ್ದಿದ್ದಾರೆ.
ಹಾವೇರಿ ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ್ ಸಜ್ಜನರ್, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿರುವ ಡಾ. ಬಸವರಾಜ ಕೇಲಗಾರ ಮತ್ತು ಇನ್ನೊರ್ವ ಮುಖಂಡ ಅರುಣ್ ಕುಮಾರ ಪೂಜಾರ್ ಬಿಜೆಪಿ ಟಿಕೆಟ್ ಪಡೆದುಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.
ಶಿವರಾಜ್ ಸಜ್ಜನ್ ರಂತೂ ಪದೇ ಪದೇ ಯಡಿಯೂರಪ್ಪರ ಭೇಟಿಯಾಗಿ ತನಗೇ ಪಕ್ಷದ ಟಿಕೆಟ್ ನೀಡಬೇಕೆಂದು ಕೇಳಿಕೊಳ್ಳುತ್ತಿದ್ದಾರೆ. ಅನರ್ಹ ಶಾಸಕ ಆರ್. ಶಂಕರ್ ಗೆ ಪಕ್ಷದ ಟಿಕೆಟ್ ಕೈ ತಪ್ಪುವ ಭೀತಿಯಲ್ಲಿದ್ದು, ತಮ್ಮ ಬೆಂಬಲಿಗರೊಂದಿಗೆ ಬೆಂಗಳೂರಿನ ಸಿಎಂ ನಿವಾಸಕ್ಕೆ ತೆರಳಿ ಮನವಿ ಮಾಡಿಕೊಳ್ಳಲಿದ್ದಾರೆ.
ಉಪ ಚುನಾವಣಾ ಕಣಕ್ಕೆ ಮಾಜಿ ಸ್ಪೀಕರ್: ಶನಿವಾರ ನಾಮಪತ್ರ ಸಲ್ಲಿಕೆ
ಇನ್ನು ಸ್ಥಳೀಯ ಬಿಜೆಪಿ ಮುಖಂಡರು ಹೇಳುವಂತೆ "ಕಳೆದ ಚುನಾವಣೆಗೂ ಈ ಉಪ ಚುನಾವಣೆಗೂ ಕ್ಷೇತ್ರದ ಪರಿಸ್ಥಿತಿ ಬದಲಾಗಿದೆ. ಆರ್.ಶಂಕರ್ ರವರಿಗೆ ಬೆಂಬಲಿಸಲು ಬಿಜೆಪಿ ಕಾರ್ಯಕರ್ತರು ತಯಾರಿಲ್ಲ. ಅವರಿಂದ ಕ್ಷೇತ್ರದಲ್ಲಿ ಯಾವುದೇ ಕೆಲಸವಾಗಿಲ್ಲ, ಹೀಗಾಗಿ ಮೂಲ ಬಿಜೆಪಿಗರಿಗೇ ಬಿ ಫಾರಂ ನೀಡಬೇಕೆಂದು" ಕೇಳಿದ್ದಾರೆ.
ರಾಣೇಬೆನ್ನೂರು ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಸ್ಪರ್ಧಿಸುತ್ತಿದ್ದಾರೆ. ಜೆಡಿಎಸ್ ಪಕ್ಷದಿಂದ ಮಲ್ಲಿಕಾರ್ಜುನ್ ಹಲಗೇರಿ ಹುರಿಯಾಳಾಗಿದ್ದಾರೆ. ಬಿಜೆಪಿಯಿಂದ ಆರ್.ಶಂಕರ್, ಸಜ್ಜನರ್, ಕೇಲಗಾರ, ಪೂಜಾರ್ ನಡುವೆ ಪಕ್ಷದ ಟಿಕೆಟ್ ಗಾಗಿ ತೀರ್ವ ಹಣಾಹಣಿ ನಡೆಯುತ್ತಿದ್ದು, ಅಂತಿಮವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಯಾರಿಗೆ ಕೃಪೆ ತೋರಲಿದ್ದಾರೆ ಅನ್ನುವುದನ್ನು ಕಾದು ನೋಡಬೇಕಿದೆ.