ಹಾವೇರಿಯಲ್ಲಿ ಮಳೆ, ಪ್ರವಾಹ ಇಳಿಮುಖ, ತುರ್ತು ಕೆಲಸ ಆರಂಭ
ಹಾವೇರಿ, ಆಗಸ್ಟ್ 12 : ಹಾವೇರಿ ಜಿಲ್ಲೆಯಲ್ಲಿ ಅತಿವೃಷ್ಠಿ ಹಾಗೂ ಪ್ರವಾಹ ಇಳುಮುಖವಾಗುತ್ತಿದ್ದು ಜನ ಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಪ್ರವಾಹದಿಂದ ಹಾಳಾಗಿದ್ದ ರಸ್ತೆ, ಸೇತುವೆ, ವಿದ್ಯುತ್, ಕುಡಿಯುವ ನೀರಿನ ಸಂಪರ್ಕ ಮರು ಸ್ಥಾಪನೆ ಮಾಡುವ ಕೆಲಸ ಆರಂಭವಾಗಿದೆ.
ಜಿಲ್ಲೆಯಲ್ಲಿ ಪ್ರವಾಹದಿಂದ ಸಂತ್ರಸ್ತಗೊಂಡ ಜನರಿಗಾಗಿ 130 ಪರಿಹಾರ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ. ಅಂದಾಜು 15,249 ಜನರು ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಪರಿಸ್ಥಿತಿ ಸುಧಾರಿಸಿದರೆ ಹಂತ ಹಂತವಾಗಿ ಎಲ್ಲರೂ ಮನೆಗೆ ಮರಳಲಿದ್ದಾರೆ.
ಸಂತ್ರಸ್ತರು ಮರಳಿ ಮನೆಗೆ ಹೋದಾಗ ಕುಟುಂಬ ನಿರ್ವಹಣೆಗೆ ಅನುಕೂಲವಾಗಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಆಹಾರದ ಕಿಟ್ಗಳನ್ನು ತಯಾರಿಸಿ ಕುಟುಂಬಗಳಿಗೆ ನೀಡಲು ಸಿದ್ಧತೆ ನಡೆಸುತ್ತಿದ್ದಾರೆ.
ಧಾರವಾಡ : ಪ್ರವಾಹದ ನೀರು ಇಳಿಮುಖ, ರೋಗದ ಭೀತಿ
ಪ್ರತಿ ಆಹಾರದ ಕಿಟ್ನಲ್ಲಿ 10 ಕೆಜಿ ಅಕ್ಕಿ, ಒಂದು ಬೆಳೆ, ಒಂದು ಕೆಜಿ ಸಕ್ಕರೆ, ಒಂದು ಕೆಜಿ ಉಪ್ಪು, ಒಂದು ಕೆಜಿ ಎಣ್ಣೆ ಪೊಟ್ಟಣದೊಂದಿಗೆ ಐದು ಲೀಟರ್ ಸೀಮೆ ಎಣ್ಣೆಯನ್ನು ನೀಡಲಾಗುತ್ತದೆ. ಜಿಲ್ಲಾಡಳಿತ ತತ್ ಕ್ಷಣ ಬದುಕನ್ನು ಕಟ್ಟಿಕೊಳ್ಳಲು ನೆರವಾಗಲು ಸಿದ್ಧತೆ ನಡೆಸಿದೆ.
17 ಜಿಲ್ಲೆಗಳ 80 ತಾಲೂಕು ಪ್ರವಾಹ ಪೀಡಿತ, ಸರ್ಕಾರದ ಘೋಷಣೆ
ನೆರೆ ಹಾವಳಿಯಿಂದ ಕುಡಿಯುವ ನೀರಿನ ಸಂಪರ್ಕ ಹಾಳಾಗಿರುವ ಗ್ರಾಮಗಳಲ್ಲಿ ಟ್ಯಾಂಕರ್ಗಳ ಮೂಲಕ ನೀರು ಪೂರೈಸಲು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಯಾವುದೇ ಕಾರಣಕ್ಕೂ ಕಲುಷಿತ ನೀರು ಕುಡಿದು ಸಾಂಕ್ರಾಮಿಕ ರೋಗಗಳು ಹರಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.
ಆರೋಗ್ಯ ಇಲಾಖೆಗೆ 20 ಲಕ್ಷ ರೂ.ಗಳನ್ನು ನೀಡಿ ತುರ್ತು ಔಷಧಗಳ ಖರೀದಿಗೆ ಸೂಚನೆ ನೀಡಿದ್ದಾರೆ. ಪ್ರತಿ ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗಗಳ ತಪಾಸಣೆ, ಪರಿಹಾರ ಕೇಂದ್ರಗಳಲ್ಲಿ ಸೂಕ್ತ ವೈದ್ಯಕೀಯ ಚಿಕಿತ್ಸಾ ಸೌಕರ್ಯವನ್ನು ಕಲ್ಪಿಸುವಂತೆ ಸೂಚನೆ ನೀಡಲಾಗಿದೆ.
ರಸ್ತೆ ಸಂಪರ್ಕವನ್ನು ದುರಸ್ಥಿಗೊಳಿಸಿ ಜನ, ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡುವ ಕಾರ್ಯ ನಡೆಯುತ್ತಿದೆ. ರಸ್ತೆ, ವಿದ್ಯುತ್, ಕುಡಿಯುವ ನೀರಿನ ಸಂಪರ್ಕ ಸೇರಿದಂತೆ ರೂ.97.89 ಕೋಟಿ ವೆಚ್ಚದ ಮೂಲ ಸೌಕರ್ಯಗಳು ಹಾನಿಯಾಗಿವೆ.
ಜಿಲ್ಲೆಯಲ್ಲಿ 7384 ಮನೆಗಳಿಗೆ ಹಾನಿಯಾಗಿದ್ದು, ಅಂದಾಜು 46 ಕೋಟಿ ರೂ. ಪರಿಹಾರ ಅಗತ್ಯವಾಗಿದೆ. 126 ಪ್ರಾಣಿಗಳ ಜೀವಹಾನಿಯಾಗಿದ್ದು 14.20 ಲಕ್ಷ ರೂ. ಪರಿಹಾರ ನೀಡಬೇಕಾಗಿದೆ. ಬೆಳೆಹಾನಿಯ ನಿಖರ ಮಾಹಿತಿ ಸಂಗ್ರಹಿಸುವ ಕಾರ್ಯ ಪ್ರಗತಿಯಲ್ಲಿದೆ.