ಲೂಟಿಕೋರರನ್ನು ಜೈಲಿಗಟ್ಟುತ್ತೇವೆ, ಹಾವೇರಿಯಲ್ಲಿ ರಾಹುಲ್ ಕಾವೇರಿದ ಭಾಷಣ
ಹಾವೇರಿ, ಮಾರ್ಚ್ 9: ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶವನ್ನು ಇಬ್ಭಾಗ ಮಾಡಲು ಹೊರಟಿರುವ ಮೋದಿಯನ್ನು ತಡೆದು ಒಂದೇ ದೇಶವನ್ನು ಸ್ಥಾಪನೆ ಮಾಡುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತಿಳಿಸಿದರು.
ಹಾವೇರಿಯಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪರಿವರ್ತನಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು. ಮೋದಿಯವರು ಭಾರತವನ್ನು ಇಬ್ಭಾಗ ಮಾಡಲು ಹೊರಟಿಸಿದ್ದಾರೆ. ಒಂದು ಅಂಬಾನಿ, ಅದಾನಿ, ನೀರವ್ ಮೋದಿ, ಮಲ್ಯರಂತಹ ಶ್ರೀಮಂತ ದೇಶ. ಮತ್ತೊಂದು ಬಡ, ರೈತ, ಕಾರ್ಮಿಕ, ನಿರುದ್ಯೋಗಿಗಳ ದೇಶ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಒಂದೇ ದೇಶ ಇರಲಿದ್ದು ಲೂಟಿಕೋರರನ್ನು ಜೈಲಿಗೆ ಹಾಕುತ್ತೇವೆ ಎಂದರು.
ಲೋಕಸಭಾ ಚುನಾವಣೆಗೆ ಹಾವೇರಿಯಲ್ಲಿ ಕಾಂಗ್ರೆಸ್ ಪರಿವರ್ತನೆ ಕೂಗು
ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿ ನಡೆದಾಗ 40ಕ್ಕೂ ಹೆಚ್ಚು ಯೋಧರು ಹುತಾತ್ಮರಾದರು. ಇಂದಿನ ಬಿಜೆಪಿ ಸರ್ಕಾರವೇ ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಮಸೂದ್ ಅಜರ್ ನನ್ನು ಭಾರತದಿಂದ ಪಾಕಿಸ್ತಾನಕ್ಕೆ ಕಳುಹಿಸಿತ್ತು. ಇದನ್ನು ಪ್ರಧಾನಿ ಮೋದಿ ಮರೆತಿದ್ದೀರಾ ಎಂದು ಪ್ರಶ್ನೆ ಮಾಡಿ ತರಾಟೆಗೆ ತೆಗೆದುಕೊಂಡರು.
1999ರಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಭಾರತೀಯ ವಿಮಾನವನ್ನು ಹೈಜಾಕ್ ಮಾಡಲಾಗಿತ್ತು. ವಿಮಾನದಲ್ಲಿ 155 ಭಾರತೀಯ ಪ್ರಯಾಣಿಕರಿದ್ದರು.
ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಭಾರತದ ಜೈಲಿನಲ್ಲಿದ್ದ ಮಸೂದ್ ಅಜರ್ನನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸುವಂತೆ ತಾಲಿಬಾನಿ ಉಗ್ರರು ಷರತ್ತು ವಿಧಿಸಿದ್ದರು. ಆಗಿನ ವಿದೇಶಾಂಗ ಸಚಿವ ಜಸ್ವಂತ್ ಸಿಂಗ್, ಮಸೂದ್ ಅಜರ್ನನ್ನು ಪಾಕಿಸ್ತಾನಕ್ಕೆ ಖುದ್ದಾಗಿ ತೆರಳಿ ಬಿಟ್ಟು ಬಂದಿದ್ದರು.
ಮಾತಿನ ಭರದಲ್ಲಿ ರಾಹುಲ್ ಗಾಂಧಿಯನ್ನು ಸಾಯಿಸಿದ ಈಶ್ವರ ಖಂಡ್ರೆ!
ನಾಯಕರೇ ಮಸೂದ್ ಅಜರ್ ನೀವೇ ವಿಮಾನ ನಿಲ್ದಾಣದಲ್ಲಿ ಕರೆದುಕೊಂಡು ಹೋಗಿ ಬಿಟ್ಟು ಬಂದಿದ್ದನ್ನು ಎಲ್ಲಿಯೂ ನಿಮ್ಮ ಭಾಷಣದಲ್ಲಿ ಹೇಳಲ್ಲ ಯಾಕೆ? ಮೋದಿ ಅವರೇ ನಿಮ್ಮ ಮುಂದಿನ ಭಾಷಣದಲ್ಲಿ ಮಸೂದ್ ಅಜರ್ ನನ್ನು ಪಾಕಿಸ್ತಾನಕ್ಕೆ ಬಿಟ್ಟು ಬಂದಿದ್ದು ಯಾಕೆ ಎಂಬುದನ್ನು ದೇಶದ ಜನರಿಗೆ ಹೇಳಬೇಕು ಎಂದು ಆಗ್ರಹಿಸಿದರು. ಮೋದಿಯವರೇ ನಾವು ನಿಮ್ಮ ಹಾಗಲ್ಲ. ಭಯೋತ್ಪಾದನೆಯ ವಿರುದ್ಧ ಹೋರಾಡುತ್ತೇವೆ ಎಂದರು.
ಉದ್ಯೋಗ ಸೃಷ್ಟಿಯಲ್ಲೂ ಮೋದಿ ವಿಫಲ
ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೀನಿ ಎಂದು ಭರವಸೆ ನೀಡಿದ್ದಿರಿ. ವಿದೇಶದಲ್ಲಿರುವ ಕಪ್ಪುಹಣ ತರುತ್ತೀನಿ ಎಂದು ಹೇಳಿದ್ದಿರಿ. ಇವೆಲ್ಲಾ ಪೊಳ್ಳು ಭರವಸೆಗಳು ಎಂದು ರಾಹುಲ್ ಹೇಳಿದರು. ದೇಶದ ಯುವ ಜನರಿಗೆ 5 ವರ್ಷದಿಂದ ಬರೀ ಭರವಸೆ ಭಾಷಣ ಕೇಳಿಸುತ್ತಿದ್ದೀರಾ. 5 ವರ್ಷದಲ್ಲಿ ಎಷ್ಟು ಜನರಿಗೆ ಉದ್ಯೋಗ ಸೃಷ್ಟಿಸಿದ್ದೀರಾ ಹೇಳಿ. ನಿಮ್ಮ ತೀರ್ಮಾನಗಳಿಂದ ಎಷ್ಟು ಜನ ಬೀದಿಗೆ ಬಂದಿದ್ದಾರೆ. 45 ವರ್ಷದಲ್ಲಿ ಹೆಚ್ಚು ನಿರುದ್ಯೋಗ ಹೆಚ್ಚಾಗಿದ್ದೇ ನಿಮ್ಮ ಕಾಲದಲ್ಲಿ ಸೃಷ್ಟಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ರಾಜ್ಯದಲ್ಲಿ ರೈತರ ಸಾಲಮನ್ನಾ ಮಾಡಿದ್ದೇವೆ
ಮುಂದುವರೆದ ರಾಹುಲ್, ಮೋದಿಯಂತೆ ಕಾಂಗ್ರೆಸ್ ಎಂದಿಗೂ ಮಾತು ತಪ್ಪಿಲ್ಲ. ಚುನಾವಣೆಯಲ್ಲಿ ಹೇಳಿದಂತೆ ಮಾಡಿ ತೋರಿಸಿದ್ದೇವೆ. ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಈಗಾಗಲೇ ರೈತರ ಬೆಳೆ ಸಾಲಮನ್ನಾ ಮಾಡಿದೆ. ನಾವು ಅಧಿಕಾರಕ್ಕೆ ಬಂದ ಮೂರು ರಾಜ್ಯಗಳಲ್ಲಿ ಕೂಡ ರೈತರ ಸಾಲಮನ್ನಾ ಮಾಡಿ ಹೇಳಿದಂತೆ ಮಾಡಿ ತೋರಿಸಿದ್ದೇವೆ ಎಂದರು.
ಮಸೂದ್ಗೆ ರಕ್ಷಣ ಕೊಟ್ಟವರೇ ನೀವು
ಪುಲ್ವಾಮಾದಲ್ಲಿ ಸಿಆರ್ಪಿಎಫ್ ಯೋಧರು ಹುತಾತ್ಮರಾದರು. ನಿಮ್ಮ ರಾಷ್ಟ್ರೀಯ ಸಲಹೆಗಾರ ಅಜಿತ್ ದೋವಲ್ ಮಸೂದ್ ಒಟ್ಟಿಗೆ ಕಂದಹಾರ್ನಲ್ಲಿರುವ ಪೋಟೋ ಇಂಟರ್ನೆಟ್ನಲ್ಲಿ ಸಿಗುತ್ತದೆ. ಮಸೂದ್ಗೆ ರಕ್ಷಣೆ ಕೊಟ್ಟವರೆ ನೀವು. ನಿಮ್ಮ ಭಾಷಣದಲ್ಲಿ ಯಾಕೆ ಇದನ್ನು ಮಾತನಾಡುತ್ತಿಲ್ಲ ಎಂದು ಸವಾಲ್ ಹಾಕಿದರು.
ಮೋದಿ ಸರಕಾರಕ್ಕೆ ಹೊಸ ಟ್ಯಾಗ್ ಲೈನ್ ನೀಡಿದ ರಾಹುಲ್ ಗಾಂಧಿ
ಚೀನಾ ಅಧ್ಯಕ್ಷರ ಜೊತೆ ಗುಜರಾತ್ನಲ್ಲಿ ಉಯ್ಯಾಲೆ
ಚೀನಾ ಅಧ್ಯಕ್ಷರ ಜೊತೆ ನೀವು ಗುಜರಾತ್ನಲ್ಲಿ ಉಯ್ಯಾಲೆ ಆಡುವಾಗ, ಚೀನಾ ಸೇನೆ ನಮ್ಮ ಧೋಕ್ಲಾಂ ಗಡಿಗೆ ಬಂದು ಠಿಕಾಣಿ ಹೂಡಿತ್ತು ಅದಕ್ಕೆ ನೀವೇನು ಮಾಡಿದ್ದೀರಾ, ಈಗಲೂ ಚೀನಾದವರು ಅಲ್ಲೇ ಇದ್ದಾರೆ ಏನು ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದರು.
ರಫೇಲ್ ಹಗರಣದ ಬಗ್ಗೆ ಸಂಸತ್ನಲ್ಲಿ ನಾಲ್ಕು ಸವಾಲು
ಸಂಸತ್ನಲ್ಲಿ ರಫೇಲ್ ಹಗರಣದ ಬಗ್ಗೆ ನಾಲ್ಕು ಸವಾಲ್ ಹಾಕಿದ್ದೆ. 1. ಅನಿಲ್ಗೆ ಯಾಕೆ ರಫೆಲ್ ಒಪ್ಪಂದ ಕೊಟ್ಟಿರು ಎಂದು 2. ಅದನ್ನು ಇನ್ನು ಕೂಡ ಯಾಕೆ ಅವರು ರೂಪಿಸಿಲ್ಲ 3. 600 ಕೋಟಿ ಒಪ್ಪಂದಕ್ಕೆ 1600 ಕೋಟಿಗೆ ನೀಡಿದ್ದೇಕೆ 4. ಯಾಕೆ ಎಚ್ಎಎಲ್ಗೆ ಕೊಡಲಿಲ್ಲ ಎಂದು ಈ ನನ್ನ ಪ್ರಶ್ನೆಗಳಿಗೆ ಕಣ್ಣಲ್ಲಿ ಕಣ್ಣಿಟ್ಟು ಮಾತಾಡುವ ಧೈರ್ಯ ಮೋದಿಗೆ ಇಲ್ಲ ಎಂದು ಕುಹುಕವಾಡಿದರು.