2023ರ ಚುನಾವಣೆ; ರಾಣೆಬೆನ್ನೂರು ಕ್ಷೇತ್ರಕ್ಕೆ ಸಿದ್ದರಾಮಯ್ಯಗೆ ಆಹ್ವಾನ!
ಹಾವೇರಿ, ಡಿಸೆಂಬರ್ 08; ಪ್ರತಿಪಕ್ಷ ನಾಯಕ, ಬಾದಾಮಿ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಮುಂದಿನ ಚುನಾವಣೆಯಲ್ಲಿ ಯಾವ ಕ್ಷೇತ್ರದಲ್ಲಿ ಕಣಕ್ಕಿಳಿಯಲಿದ್ದಾರೆ?. ಈ ಬಗ್ಗೆ ಜನರಿಗೆ ಮಾತ್ರವಲ್ಲ, ಪ್ರತಿಪಕ್ಷಗಳಿಗೆ ಸಹ ಕುತೂಹಲವಿದೆ. ಬಾಗಲಕೋಟೆ, ಮೈಸೂರು, ಬೆಂಗಳೂರು ಹೀಗೆ ವಿವಿಧ ಜಿಲ್ಲೆಗಳ ಹೆಸರು ಕೇಳಿ ಬರುತ್ತಿದೆ.
ಅದರಲ್ಲೂ ಸೋಮವಾರ ಮಾಜಿ ಶಾಸಕ ಬಿ. ಬಿ. ಚಿಮ್ಮನಕಟ್ಟಿ ಸಿದ್ದರಾಮಯ್ಯಗೆ "ಸ್ವಕ್ಷೇತ್ರದಲ್ಲಿ ಗೆಲ್ಲುವ ಯೋಗ್ಯತೆ ಇಲ್ಲವೆಂದರೆ ಇಲ್ಲಿ ಯಾಕ ನಿಲ್ಲಬೇಕು?. ನಮಗೆ ಯಾಕ ಗಂಟ ಬಿದ್ರಿ ನೀವು?" ಎಂದು ವೇದಿಕೆಯಲ್ಲಿ ಪ್ರಶ್ನೆ ಮಾಡಿದ್ದು ಚರ್ಚೆ ಹುಟ್ಟು ಹಾಕಿದೆ. ಕಾಂಗ್ರೆಸ್ ನಾಯಕರು ಸಹ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಬಾದಾಮಿ; ಮತ್ತೆ ಸಿದ್ದರಾಮಯ್ಯ, ಶ್ರೀರಾಮುಲು ಎದುರಾಳಿಗಳು?
ಮುಂದಿನ ವಿಧಾನಸಭೆ ಚುನಾವಣೆಗೆ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಿಂದ ಕಣಕ್ಕಿಳಿಯುವುದಿಲ್ಲವೇ?, ಬಿ. ಬಿ. ಚಿಮ್ಮನಕಟ್ಟಿಯೇ ಅಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆಯೇ? ಎಂಬ ಪ್ರಶ್ನೆ ಹುಟ್ಟು ಹಾಕಿದೆ. ಇದರ ನಡುವೆಯೇ ಈಗ ಹಾವೇರಿ ಜಿಲ್ಲೆಗೆ ಸಿದ್ದರಾಮಯ್ಯಗೆ ಆಹ್ವಾನ ನೀಡಲಾಗಿದೆ.
ಬಾದಾಮಿಯಲ್ಲಿ ಸ್ಪರ್ಧೆ; ಇಕ್ಕಟ್ಟಿಗೆ ಸಿಲುಕಿದ ಸಿದ್ದರಾಮಯ್ಯ!
ಮಾಜಿ ಶಾಸಕ ಕೆ. ಬಿ. ಕೋಳಿವಾಡ ಪುತ್ರ ಪ್ರಕಾಶ್ ಕೋಳಿವಾಡ ಈ ಕುರಿತು ಫೇಸ್ ಬುಕ್ ಪೋಸ್ಟ್ ಹಾಕಿದ್ದಾರೆ. 'ಸಿದ್ದರಾಮಯ್ಯನವರು ಬಾದಾಮಿ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಕುರಿತು ನೀಡಿರುವ ಆಕ್ಷೇಪಾರ್ಹ ಹೇಳಿಕೆಯಿಂದ ನನಗೆ ವೈಯಕ್ತಿಕವಾಗಿ ನೋವುಂಟಾಗಿದೆ. ಸಿದ್ದರಾಮಯ್ಯ ಸಾಹೇಬರು 2023ರ ವಿಧಾನಸಭಾ ಚುನಾವಣೆಯಲ್ಲಿ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲಿ ಅವರಿಗೆ ಅತ್ಯಧಿಕ ಮತಗಳ ವಿಜಯಮಾಲೆ ಒದಗಿಸಿ ವಿಧಾನಸಭೆಗೆ ಕಳುಹಿಸಿ ಕೊಡುತ್ತೇವೆ' ಎಂದು ಆಹ್ವಾನ ನೀಡಿದ್ದಾರೆ.
ಶಿವಮೊಗ್ಗ-ರಾಣೆಬೆನ್ನೂರು ರೈಲು ಮಾರ್ಗ; ಸಿಹಿಸುದ್ದಿ ಕೊಟ್ಟ ಇಲಾಖೆ
ಮುಂದಿನ ಚುನಾವಣೆ ಸ್ಪರ್ಧೆ ಬಗ್ಗೆ ಮಾತನಾಡಿರುವ ಸಿದ್ದರಾಮಯ್ಯ, "ನನಗೆ ಜನರು ಎಲ್ಲಿ ಪ್ರೀತಿಯಿಂದ ಕರೆಯುತ್ತಾರೋ ಅಲ್ಲಿ ಚುನಾವಣೆಗೆ ನಿಲ್ಲುವೆ. ಬಾದಾಮಿಯಲ್ಲಿ ಕರೆಯುತ್ತಾರೆ, ಮುಂದಿನ ಬಾರಿ ಅಲ್ಲಿಯೇ ನಿಲ್ಲುತ್ತೇನೆ" ಎಂದು ಹೇಳಿದ್ದಾರೆ.
ಬಿ. ಬಿ. ಚಿಮ್ಮನಕಟ್ಟಿಗೆ ಸಹಾಯ; ಬಿ. ಬಿ. ಚಿಮ್ಮನಕಟ್ಟಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವ ನಾರಾಯಣ, "ಮಾಜಿ ಶಾಸಕ ಬಿ. ಬಿ. ಚಿಮ್ಮನಕಟ್ಟಿ ಅವರಿಗೆ ಕಾಂಗ್ರೆಸ್ ಪಕ್ಷವು ಬೇರೆ ರೀತಿಯಲ್ಲಿ ಸಹಾಯ ಮಾಡುತ್ತದೆ. ಬಾದಾಮಿ ಕ್ಷೇತ್ರದ ಜನರು ಸಿದ್ದರಾಮಯ್ಯಗೆ ಬೆಂಬಲ ನೀಡಿದ್ದಾರೆ. ಮತದಾರರ ಮಾತಿಗೆ ಮನ್ನಣೆ ಕೊಡಬೇಕಿದೆ" ಎಂದು ತಿಳಿಸಿದ್ದಾರೆ.
"ಸಿದ್ದರಾಮಯ್ಯ ಒಬ್ಬ ಜನನಾಯಕ. ಅವರು ರಾಜ್ಯದಲ್ಲಿ ಎಲ್ಲಿ ಬೇಕಾದರೂ ಚುನಾವಣೆಗೆ ನಿಲ್ಲಬಹುದು ಮತ್ತು ಎಲ್ಲಿ ನಿಂತರೂ ಅವರು ಗೆಲ್ಲುತ್ತಾರೆ" ಎಂದು ಆರ್. ಧ್ರುವ ನಾರಾಯಣ ಸ್ಪಷ್ಟಪಡಿಸಿದರು.
ಬಿ. ಬಿ. ಚಿಮ್ಮನಕಟ್ಟಿ 2018ರ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರವನ್ನು ಸಿದ್ದರಾಮಯ್ಯಗೆ ಬಿಟ್ಟುಕೊಟ್ಟಿದ್ದರು. ಸಿದ್ದರಾಮಯ್ಯ ಚುನಾವಣೆಗೆ ನಿಂತಿದ್ದರು. ಆದರೆ ಪ್ರಬಲ ಪೈಪೋಟಿ ಎದುರಾಗಿತ್ತು. ಬಿಜೆಪಿಯಿಂದ ಕಣಕ್ಕಿಳಿದಿದ್ದ ಬಿ. ಶ್ರೀರಾಮುಲು 65,903 ಮತಗಳನನ್ನು ಪಡೆದು ಪೈಪೋಟಿ ನೀಡಿದ್ದರು. ಅಂತಿಮವಾಗಿ ಸಿದ್ದರಾಮಯ್ಯ ಗೆಲುವು ಕಂಡಿದ್ದರು.
ಸಿದ್ದರಾಮಯ್ಯ ಬಾದಾಮಿಯ ಜೊತೆಗೆ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿಯೂ ಕಣಕ್ಕಿಳಿದಿದ್ದರು. ಜೆಡಿಎಸ್ನ ಜಿ. ಟಿ. ದೇವೇಗೌಡ ವಿರುದ್ಧ ಚಾಮುಂಡೇಶ್ವರಿಯಲ್ಲಿ ಸೋಲು ಕಂಡಿದ್ದರು. ಈಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಜಿ. ಟಿ. ದೇವೇಗೌಡ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ಬಿ. ಬಿ. ಚಿಮ್ಮನಕಟ್ಟಿ ಹೇಳಿದ್ದೇನು?; ಬಿ. ಬಿ. ಚಿಮ್ಮನಕಟ್ಟಿ ಬಾದಾಮಿಯಲ್ಲಿ ನಡೆದ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, "ಮುಂದಿನ ಸಲ ಸಿದ್ದರಾಮಯ್ಯ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ. ಹಿಂದಿನ ಚುನಾವಣೆಯಲ್ಲಿಯೂ ಆ ಕ್ಷೇತ್ರದಲ್ಲಿ ಟಿಕೆಟ್ ಕೊಟ್ಟಿದ್ದರೆ ಸಿದ್ದರಾಮಯ್ಯ ಗೆಲ್ಲುತ್ತಿದ್ದರು. ಇಲ್ಲಿಗೆ ಬಂದರೆ ನಾನೇನು ಮಾಡಬೇಕು?" ಎಂದು ಪ್ರಶ್ನಿಸಿದ್ದರು. ಈ ಪ್ರಚಾರ ಸಭೆಯ ವೇದಿಕೆಯಲ್ಲಿ ಸಿದ್ದರಾಮಯ್ಯ ಸಹ ಇದ್ದರು.
Recommended Video