ಕೊಲೆ ಮಾಡಿದವರನ್ನು ಶೂಟೌಟ್ ಮಾಡಬೇಕು; ಮುಂದೆ ಏನಾಗುತ್ತೆ ನೋಡೋಣ- ಬಸವರಾಜ ಹೊರಟ್ಟಿ
ಹಾವೇರಿ, ಜುಲೈ, 30: ಹಾವೇರಿಯಲ್ಲಿ ಬಿಜೆಪಿ ಎಂಎಲ್ಸಿ ಬಸವರಾಜ ಹೊರಟ್ಟಿ ಅವರು ಪ್ರವೀಣ್ ಹತ್ಯೆ ಬಗ್ಗೆ ಪ್ರತಿಕ್ರಿಯೆ ನೀಡಿ, ಕರಾವಳಿಯಲ್ಲಿ ನಡೆದ ಘಟನೆಗಳು ನಮ್ಮ ರಾಜ್ಯಕ್ಕೆ ನೋವು ತರುವ ಸಂಗತಿಯಾಗಿದೆ. ಮೇಲಿಂದ ಮೇಲೇ ಈ ರೀತಿ ಘಟನೆಗಳು ನಡೆಯುತ್ತಿವೆ. ಇಂಟಲಿಜೆನ್ಸ್ನವರು ಮೊದಲೇ ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮಾಹಿತಿ ಕೊಡಬೇಕು. ಇಂತಹ ಘಟನೆಗಳು ಮತ್ತೆ ಆಗಬಾರದು ಎಂದರು.
ಇಂಟಲಿಜೆನ್ಸ್ನವರು ಮುಂದೆ ಏನಾಗುತ್ತದೆ ಎಂದು ಮಾಹಿತಿ ಸಂಗ್ರಹಿಸಿ ಸಿಎಂಗೆ ಕೊಡಬೇಕು. ನಾನು ಹಿಂದೆ ಒಮ್ಮೆ ಇಸ್ರೇಲ್ಗೆ ಹೋಗಿದ್ದಾಗ ಅಲ್ಲಿ ಬೆಳಗ್ಗೆ 9ಕ್ಕೆ ಬಾಂಬ್ ಬ್ಲಾಸ್ಟ್ ಆಗಿದ್ದು, ಸಂಜೆನೇ ಆರೋಪಿಗಳನ್ನು ನೇಣಿಗೆ ಹಾಕಿದರು. ಇಂತಹ ವಿಚಾರದಲ್ಲಿ ಯಾರೇ ತಪ್ಪು ಮಾಡಿದ್ದರೂ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕು ಎಂದರು.
ಆದರೆ, ಇಂತಹ ಪ್ರಕರಣದಲ್ಲಿ ಇಲ್ಲಿ ಶಿಕ್ಷೆ ಆಗಿದ್ದು ಇದುವರೆಗೂ ನಮಗೆ ಗೊತ್ತೇ ಇಲ್ಲ. ಆ ರಿಪೋರ್ಟ್, ಅದು ಇದು ಅಂತ ಅನ್ನೋಷ್ಟತ್ತಿಗೆ ಜನರು ಮರೆತು ಬಿಡುತ್ತಾರೆ. ಸರ್ಕಾರ ಯಾವುದೇ ಒತ್ತಡಕ್ಕೂ ಮಣಿಯಬಾರದು. ಈ ತಪ್ಪು ಮಾಡಿರುವುದಕ್ಕೆ ಇಂಥಹ ಶಿಕ್ಷೆ ಕೊಟ್ಟರು ಅಂತ ಜನರಿಗೆ ಗೊತ್ತಾಗಬೇಕು ಎಂದರು.
ವಿಪಕ್ಷಗಳ ಜೊತೆ ಸಭೆ ಮಾಡಿ:
ರಾಜಕೀಯಕ್ಕಾಗಿ ಪರಸ್ಪರ ಟೀಕೆ ಮಾಡುವುದಕ್ಕಿಂತ ಎಲ್ಲರೂ ರಾಜ್ಯದ ಶಾಂತಿಯನ್ನು ಕಾಪಾಡಬೇಕು. ವಿರೋಧ ಪಕ್ಷದವರು ಬರೀ ಟೀಕೆ ಮಾಡುತ್ತಾ ಕುಳಿತುಕೊಂಡರೆ ಯಾವುದೇ ಕೆಲಸಗಳು ಆಗುವುದಿಲ್ಲ. ಸಿಎಂ ವಿರೋಧ ಪಕ್ಷದವರನ್ನು ಕರೆದು ಒಂದು ಸಭೆ ಮಾಡಿ ಮಾತಾಡಬೇಕು.
ಯೋಗಿ ಸರ್ಕಾರದ ಬಗ್ಗೆ ಗೊತ್ತಿಲ್ಲ:
ರಾಜ್ಯದಲ್ಲಿ ಯೋಗಿ ಮಾದರಿ ಸರ್ಕಾರ ತರುವ ವಿಚಾರವಾಗಿ ಮಾತನಾಡಿದ ಅವರು, "ನಾನು ಯೋಗಿನೂ ನೋಡಿಲ್ಲ, ಮತ್ತೊಬ್ಬನನ್ನೂ ನೋಡಿಲ್ಲ". ಈ ತಪ್ಪು ಮಾಡಿದವರಿಗೆ ಇಂತಹ ಶಿಕ್ಷೆ ಆಯಿತು ಅಂತ ಮಾದ್ಯಮಗಳಿಗೆ ಗೊತ್ತಾಗಬೇಕು. ಈಗ ಸತ್ತವರು ಮುಗ್ದರು, ಅವರು ಏನು ಮಾಡಿದ್ದಾರೆ? ಎರಡೂ ಜಾತಿಯವರು ಸತ್ತಿದ್ದಾರೆ. ಯಾವುದೇ ಪಕ್ಷದಲ್ಲಿ, ಅಥವಾ ಸಂಘಟನೆಯಲ್ಲಿ ಇದ್ದಾರೆ ಎನ್ನುವ ಕಾರಣಕ್ಕೆ ಕೊಲೆ ಮಾಡುವ ಹಂತಕ್ಕೆ ಹೋಗಬೇಡಿ, ಅದು ಸರಿಯಲ್ಲ ಎಂದರು. ಹೈದರಾಬಾದ್ನಲ್ಲಿ ನಮ್ಮ ಸಜ್ಜನ್ ಶೂಟೌಟ್ ಮಾಡಲಿಲ್ಲವಾ? ಆ ರೀತಿ ಶೂಟೌಟ್ ಮಾಡಬೇಕು. ಮುಂದೆ ಏನು ಆಗುತ್ತೆ ನೋಡೋಣ. ಇಂತಹ ಸಂದರ್ಭದಲ್ಲಿ ಪೊಲೀಸರು ಹೀಗೆ ಮಾಡಿದರೆ ನಾನು ಅದನ್ನು ತಪ್ಪು ಅನ್ನುವುದಿಲ್ಲ. ಆದರೆ ಇದಕ್ಕೆ ಸಿಎಂ ಗಟ್ಟಿ ನಿರ್ಧಾರ ಮಾಡಬೇಕು," ಎಂದರು.