ಮುರುಘಾಮಠದ ಶ್ರೀಗಳ ಬಂಧನವಾಗಿಲ್ಲ: ಸೋಮವಾರ ನಡೆದಿದ್ದೇನು?
ಹಾವೇರಿ, ಆಗಸ್ಟ್ 29: ಚಿತ್ರದುರ್ಗ ಮುರುಘಾಮಠದ ಶಿವಮೂರ್ತಿ ಶರಣರನ್ನು ಬಂಧಿಸಿರುವ ಬಗ್ಗೆ ಹರಡಿರುವ ಊಹಾಪೋಹಗಳೆಲ್ಲ ಸುಳ್ಳು ಎಂದು ಮಠದ ಪರ ವಕೀಲ ಉಮೇಶ್ ಸ್ಪಷ್ಟನೆ ನೀಡಿದ್ದಾರೆ.
ಪೊಲೀಸರು ನನ್ನನ್ನು ಬಂಧಿಸಿಲ್ಲ. ಸೋಮವಾರ ಧಾರವಾಡಕ್ಕೆ ತೆರಳುತ್ತಿದ್ದು, ಇದೀಗ ಪೊಲೀಸ್ ಭದ್ರತೆಯಲ್ಲಿ ಚಿತ್ರದುರ್ಗಕ್ಕೆ ವಾಪಸ್ ಆಗುತ್ತಿದ್ದೇನೆ ಎಂದು ಮುರುಘಮಠದ ಶಿವಮೂರ್ತಿ ಶರಣರು ಸ್ಪಷ್ಟನೆ ನೀಡಿದ್ದಾರೆ.
Breaking: ಸೋನಾಲಿ ಫೋಗಟ್ರಿಂದ ಬಲವಂತದ ಡ್ರಗ್ಸ್ ಸೇವನೆ-ಪೊಲೀಸರು
ಇದಕ್ಕೂ ಮೊದಲು ಬೆಳಗಾವಿಯ ಮೂಲಕ ಮಹಾರಾಷ್ಟ್ರಕ್ಕೆ ಶ್ರೀಗಳು ತೆರಳುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಇದರ ಬೆನ್ನಲ್ಲೇ ಪೊಲೀಸರು ಹಾವೇರಿ ಜಿಲ್ಲೆ ಬಂಕಾಪುರದ ರಾಷ್ಟ್ರೀಯ ಹೆದ್ದಾರಿ ಬಳಿ ಶಿವಮೂರ್ತಿ ಶರಣರನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು ಎಂದು ಸುದ್ದಿಯಾಗಿತ್ತು. ಈ ಕುರಿತು ಸೋಮವಾರ ಬೆಳಗ್ಗೆಯಿಂದ ನಡೆದ ಬೆಳವಣಿಗೆಗಳೇನು ಎಂಬುದನ್ನು ವರದಿಯಲ್ಲಿ ತಿಳಿದುಕೊಳ್ಳೋಣ.
ಮುರುಘಾಮಠದ ಶಿವಮೂರ್ತಿ ಶರಣರ ಬಂಧಿಸಿಲ್ಲ
ಹಾವೇರಿ ಬಳಿ ವಕೀಲರನ್ನು ಭೇಟಿ ಮಾಡುವುದಕ್ಕಾಗಿ ಮುರುಘಾಮಠದ ಶಿವಮೂರ್ತಿ ಶರಣರು ತೆರಳಿದ್ದರು. ಅವರನ್ನು ಪೊಲೀಸರು ಬಂಧಿಸಿಲ್ಲ ಎಂಬುುದು ಸ್ಪಷ್ಟವಾಗಿದೆ. ಇಲ್ಲಿ ಶ್ರೀಗಳನ್ನು ಬಂಧಿಸಿದ್ದಾರೆ ಎಂಬ ಊಹಾಪೋಹಗಳೆಲ್ಲ ಸುಳ್ಳಾಗಿದೆ. ಕೆಲವೇ ಹೊತ್ತಿನಲ್ಲಿ ಚಿತ್ರದುರ್ಗದ ಮಠಕ್ಕೆ ವಾಪಸ್ಸಾಗಲಿರುವ ಶ್ರೀಗಳು ಭಕ್ತರನ್ನು ಉದ್ದೇಶಿಸಿ ಸ್ಪಷ್ಟನೆ ನೀಡಲಿದ್ದಾರೆ ಎಂದು ಮಠದ ಪರ ವಕೀಲ ಉಮೇಶ್ ಮಾಹಿತಿ ನೀಡಿದ್ದಾರೆ.
ಮಹಾರಾಷ್ಟ್ರಕ್ಕೆ ಹೊರಟಿದ್ದರಾ ಶಿವಮೂರ್ತಿ ಶರಣರು?
ಸೋಮವಾರ ಬೆಳಗ್ಗೆ ನಡೆದ ಬೆಳವಣಿಗೆಗಳ ಮಧ್ಯೆ ಶಿವಮೂರ್ತಿ ಶರಣರು ಮಹಾರಾಷ್ಟ್ರಕ್ಕೆ ತೆರಳುತ್ತಿದ್ದರು ಎಂಬ ಊಹಾಪೋಹದ ಸುದ್ದಿಗಳು ಹರಿದಾಡುತ್ತಿದ್ದವು. ಇದರ ಬಗ್ಗೆ ಮಾಹಿತಿ ಪಡೆದುಕೊಂಡಿದ್ದ ಪೊಲೀಸರು, ಬಂಕಾಪುರದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಶಿವಮೂರ್ತಿ ಶರಣರನ್ನು ವಶಕ್ಕೆ ಪಡೆದುಕೊಂಡಿದ್ದರು. ಅಲ್ಲಿಂದ ಶ್ರೀಗಳನ್ನು ಚಿತ್ರದುರ್ಗಕ್ಕೆ ಕರೆದುಕೊಂಡು ಹೋಗಲಾಯಿತು.
ಮುರುಘಾ ಮಠದ ಭಕ್ತರು ಹೇಳುವುದೇನು?
ವಕೀಲರನ್ನು ಭೇಟಿ ಮಾಡುವುದಕ್ಕಾಗಿ ಶಿವಮೂರ್ತಿ ಶರಣರು ತೆರಳುತ್ತಿದ್ದರು. ಈ ವೇಳೆ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ಶ್ರೀಗಳು ಯಾವುದೇ ರೀತಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿರಲಿಲ್ಲ. ವಕೀಲರನ್ನು ಭೇಟಿ ಮಾಡಿ ನಂತರ ಮಠಕ್ಕೆ ವಾಪಸ್ಸಾಗುತ್ತಿದ್ದರು ಎಂದು ಭಕ್ತರು ಹೇಳುತ್ತಿದ್ದಾರೆ ಎಂದು ವರದಿಯಾಗಿದೆ.
ಚಿತ್ರದುರ್ಗದ ಮಠದ ಬಳಿ ಹೆಚ್ಚಿನ ಭದ್ರತೆ
ಮುರುಘಾಮಠದ ಶ್ರೀಗಳನ್ನು ಬಂಧಿಸಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆ ಭಕ್ತರು ಆತಂಕಗೊಂಡಿದ್ದರು. ಈ ಹಿನ್ನೆಲೆ ನೂರಾರು ಸಂಖ್ಯೆಯಲ್ಲಿ ಭಕ್ತರು ಮಠದ ಕಡೆಗೆ ಮುಖ ಮಾಡಿದರು. ಹೀಗಾಗಿ ಪರಿಸ್ಥಿತಿಯನ್ನು ನಿಯಂತ್ರಿಸುವ ಉದ್ದೇಶದಿಂದ ಹೆಚ್ಚಿನ ಪೊಲೀಸ್ ಭದ್ರತೆಯನ್ನು ನಿಯೋಜನೆ ಮಾಡಲಾಗಿದೆ. ಸ್ವತಃ ಡಿವೈಎಸ್ಪಿ ಅವರು ಮಠಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಿದರು.