ಎಲ್ಲ ನಿಯಮ ಗಾಳಿಗೆ ತೂರಿ ಭರ್ಜರಿ ಬಂಡಿ ಓಟ ನಡೆಸಿದ ಹಾವೇರಿ ಗ್ರಾಮಸ್ಥರು
ಹಾವೇರಿ, ಜೂನ್ 12: ಕರ್ನಾಟಕದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಅಧಿಕವಾಗುತ್ತಿವೆ. ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಕಾರ್ಯಕ್ರಮಗಳಲ್ಲಿ ಹೆಚ್ಚು ಜನ ಸೇರುವುದನ್ನು ಸರ್ಕಾರ ನಿರ್ಬಂಧಿಸಿದೆ. ಸಾಮಾಜಿಕ ಅಂತರ ಪಾಲನೆಯನ್ನೂ ಕಡ್ಡಾಯ ಮಾಡಿದೆ. ಆದರೆ ಇದಾವುದರ ಪರಿವೆಯೂ ಇಲ್ಲದೇ, ಅನುಮತಿ ಇಲ್ಲದೇ ಇದ್ದರೂ ಸಾವಿರಾರು ಜನ ಕಿಕ್ಕಿರಿದು ಭರ್ಜರಿಯಾಗಿ ಬಂಡಿ ಓಟ ನಡೆಸಿದ ಸಂಗತಿ ಹಾವೇರಿಯಲ್ಲಿ ನಡೆದಿದೆ.
Recommended Video
ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ಬಂಡಿ ಓಟ ಸ್ಪರ್ಧೆಯನ್ನು ನಿನ್ನೆ ಹಮ್ಮಿಕೊಳ್ಳಲಾಗಿತ್ತು. ಪ್ರತಿವರ್ಷ ಕಾರಹುಣ್ಣಿಮೆ ನಂತರ ಬ್ರಹ್ಮಲಿಂಗೇಶ್ವರ ಜಾತ್ರೆ ಪ್ರಯುಕ್ತ ಮೂರು ದಿನಗಳ ಕಾಲ ನಡೆಯುತ್ತಿದ್ದ ಬಂಡಿ ಓಟವನ್ನು ಈ ಬಾರಿ ಕೊರೊನಾ ವೈರಸ್ ಕಾರಣಕ್ಕೆ ಒಂದೇ ದಿನಕ್ಕೆ ಸೀಮಿತ ಮಾಡಿಕೊಂಡಿದ್ದರು ಗ್ರಾಮಸ್ಥರು. ಆದರೆ ಇದರಲ್ಲಿ ಜನಸಾಗರವೇ ಸೇರಿದ್ದು, ಮಾಸ್ಕ್ ಧರಿಸದೇ, ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳದೇ ಎಲ್ಲ ನಿಯಮಗಳನ್ನೂ ಉಲ್ಲಂಘಿಸಿದ್ದಾರೆ. ಅಷ್ಟೇ ಅಲ್ಲದೇ ಅನುಮತಿ ಸಿಗದೇ ಇದ್ದರೂ ಬಂಡಿ ಓಟವನ್ನು ನಡೆಸಿದ್ದಾರೆ.
ಕೊರೊನಾ ಭೀತಿಗೆ ದೇವರ ಮೊರೆ: ಕನಕಪುರದಲ್ಲಿ ಸಾಮಾಜಿಕ ಅಂತರವಿಲ್ಲ
ಜಾತ್ರೆ ಆಚರಿಸಲು ಅನುಮತಿ ಕೋರಿ ಗ್ರಾಮಸ್ಥರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದರು. ಆದರೆ ಜಾತ್ರೆ ರದ್ದುಪಡಿಸುವಂತೆ ಕೋರಿ ಜಿಲ್ಲಾಧಿಕಾರಿಗಳಿಗೆ ತಹಶೀಲ್ದಾರ್ ಶಂಕರ್ ಪತ್ರ ಬರೆದಿದ್ದರು. ಹೀಗಾಗಿ ಅನುಮತಿಯನ್ನು ನಿರಾಕರಿಸಲಾಗಿತ್ತು. ಆದರೂ ಗ್ರಾಮಸ್ಥರು ಎಲ್ಲವನ್ನೂ ಮೀರಿ ಭರ್ಜರಿಯಾಗಿ ಉತ್ಸವ ನಡೆಸಿದ್ದಾರೆ.
ಕೊರೊನಾ ಭೀತಿಯ ನಡುವೆಯೂ ಭರ್ಜರಿಯಾಗಿ ನಡೆದ ಬಂಡಿ ಓಟ.
— oneindiakannada (@OneindiaKannada) June 12, 2020
ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ನಡೆದ ಬಂಡಿ ಓಟ.
ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನಡೆದ ಬಂಡಿ ಓಟ.'' #Karjagivillage #HaveriTaluk pic.twitter.com/25A5mQhnm1
ಅನುಮತಿ ಇಲ್ಲದೇ ಓಟ ಹಮ್ಮಿಕೊಂಡಿದ್ದಕ್ಕಾಗಿ ದೇವಸ್ಥಾನ ಸಮಿತಿಯ ನಲವತ್ತು ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಹಾವೇರಿ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ತಿಳಿಸಿದ್ದಾರೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.