ಗ್ರಾಮಸ್ಥನ ನೂಕಿದ ಸಂಸದ ಉದಾಸಿ ವಿಡಿಯೋ ವೈರಲ್
ಹಾವೇರಿ, ನವೆಂಬರ್ 24: ತಮ್ಮ ಬಳಿ ಅಹವಾಲು ಹೇಳಿಕೊಳ್ಳಲು ಬಂದಿದ್ದ ಗ್ರಾಮಸ್ಥರೊಬ್ಬರೊಂದಿಗೆ ಹಾವೇರಿ ಸಂಸದ ಶಿವಕುಮಾರ್ ಉದಾಸಿ ಅವರು ನಡೆದುಕೊಂಡ ರೀತಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ತನ್ನ ಕಷ್ಟ ಹೇಳಿಕೊಳ್ಳಲು ಬಂದಿದ್ದ ವ್ಯಕ್ತಿಯ ಮೇಲೆ ಸಂಸದ ಉದಾಸಿ ಉದ್ಧಟತನ ತೋರಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅವರ ನಡೆಗೆ ವಿರೋಧ ವ್ಯಕ್ತವಾಗಿದೆ. ಜೊತೆಗೆ ತಮಗಿಂತ ಹಿರಿಯರು ತಮ್ಮ ಮುಂದೆ ಬೇಡಿಕೆ ಇಟ್ಟಾಗ ಸಂಸದರಾದವರು ನಡೆದುಕೊಂಡ ಬಗೆಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತಗೊಂಡಿದೆ.
ಚಿಕ್ಕಮಗಳೂರು: ದಲಿತ ಯುವಕರ ಮೇಲೆ ಪಿಎಸ್ಐ ದರ್ಪ ಖಂಡಿಸಿ ಪ್ರತಿಭಟನೆ
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಸೋಮಸಾಗರ ಗ್ರಾಮದ ರಸ್ತೆ ಭೂಮಿ ಪೂಜೆಗೆಂದು ನವೆಂಬರ್ 20ರಂದು ಉದಾಸಿ ಹೋಗಿದ್ದಾರೆ. ಈ ಸಮಯದಲ್ಲಿ ಗ್ರಾಮಸ್ಥ ಶೇಖಪ್ಪ ಮಡ್ಲೂರು ಎಂಬುವರು ಬಿಜೆಪಿ ಸ್ಥಳೀಯ ಮುಖಂಡರೊಬ್ಬರ ಬಳಿ ತಮ್ಮ ಪ್ರದೇಶದ ಸಮಸ್ಯೆ ಹೇಳಿಕೊಳ್ಳಲು ಮುಂದಾಗಿದ್ದಾರೆ. ಈ ಸಮಯ ಬಂದ ಸಂಸದರು ಗ್ರಾಮಸ್ಥನಿಗೆ ಅಸಡ್ಡೆಯಿಂದ ಉತ್ತರ ನೀಡಿದ್ದಾರೆ. ಇದಕ್ಕೆ ಪ್ರತ್ಯುತ್ತರ ಕೊಡಲು ಮುಂದಾದಾಗ ಶೇಖಪ್ಪನನ್ನು ನೂಕಿದ್ದಾರೆ.
ಹೀಗೆ ಸಂಸದ ಶಿವಕುಮಾರ ಉದಾಸಿ ಗ್ರಾಮಸ್ಥನನ್ನು ನೂಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜನರ ಕಷ್ಟಗಳನ್ನು ಕೇಳಬೇಕಾದ ಜನಪ್ರತಿನಿಧಿಗಳೇ ಹೀಗೆ ವರ್ತಿಸಿದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.