ಕಾಂಗ್ರೆಸ್ ಗೆ ಕೈ ಕೊಟ್ಟ ಮಾಜಿ ಸಚಿವ ಮನೋಹರ್ ತಹಶೀಲ್ದಾರ್ ಜೆಡಿಎಸ್ ಗೆ
ಹಾನಗಲ್ (ಹಾವೇರಿ), ಏಪ್ರಿಲ್ 23: ಕಾಂಗ್ರೆಸ್ ಟಿಕೆಟ್ ಗಿಟ್ಟಿಸುವಲ್ಲಿ ವಿಫಲರಾಗಿದ್ದ ಮಾಜಿ ಸಚಿವ ಮನೋಹರ್ ತಹಶೀಲ್ದಾರ್ ಜೆಡಿಎಸ್ ಗೆ ಹಾರಿದ್ದಾರೆ. ಜೆಡಿಎಸ್ ಟಿಕೆಟ್ ಪಡೆದಿರುವ ಅವರು ನಾಮಪತ್ರ ಸಲ್ಲಿಸಿದ್ದಾರೆ.
ಹಾನಗಲ್ ಕ್ಷೇತ್ರದಿಂದ1978, 1989, 99 ಮತ್ತು 2013ರ ಚುನಾವಣೆಯಲ್ಲಿ ಮನೋಹರ್ ತಹಶೀಲ್ದಾರ್ ಗೆಲುವು ಸಾಧಿಸಿದ್ದರು. 2013ರ ಚುನಾವಣೆಯಲ್ಲಿ ಗೆದ್ದ ಅವರು ಸಿದ್ದರಾಮಯ್ಯ ಸಂಪುಟದಲ್ಲಿ ಅಬಕಾರಿ ಸಚಿವರಾಗಿದ್ದರು.
12 ಹಾಲಿ ಶಾಸಕರಿಗೆ ಟಿಕೆಟ್ ನೀಡದೆ ರಣತಂತ್ರ ಹೂಡಿದ ಕಾಂಗ್ರೆಸ್
ಆದರೆ 2013ರಲ್ಲಿ ಚುನಾವಣೆಯಲ್ಲಿ ಅಲ್ಪ ಅಂತರದಿಂದ ಗೆದ್ದಿದ್ದ ಬಲಿಜ ಸಮುದಾಯದ ತಹಶೀಲ್ದಾರ್ ಗೆ ಕಾಂಗ್ರೆಸ್ ಟಿಕೆಟ್ ನೀಡಿರಲಿಲ್ಲ. ಆ ಚುನಾವಣೆಯಲ್ಲಿ ಅವರು 66,324 ಮತಗಳನ್ನು ಪಡೆದು ಬಿಜೆಪಿಯ (ಕೆಜಿಪಿಯಿಂದ ಸ್ಪರ್ಧಿಸಿದ್ದರು) ಪ್ರಬಲ ಅಭ್ಯರ್ಥಿ ಸಿಎಂ ಉದಾಸಿಯವರನ್ನು ಕೇವಲ 6 ಸಾವಿರ ಚಿಲ್ಲರೆ ಮತಗಳಿಂದ ಸೋಲಿಸಿದ್ದರು.
ಈ ಬಾರಿಯೂ ಇಲ್ಲಿ ಪ್ರಬಲ ಸ್ಪರ್ಧೆ ಎದುರಾಗುವ ಭಯದಲ್ಲಿ ಮೊದಲೇ ಕಾಂಗ್ರೆಸ್ ಅಭ್ಯರ್ಥಿಯನ್ನು ಬದಲಿಸಿದೆ. ಇಲ್ಲಿ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆಯವರಿಗೆ ಟಿಕೆಟ್ ನೀಡಿದೆ.
ಇದರಿಂದ ಬಂಡೆದ್ದ ತಹಶೀಲ್ದಾರ್ ಕಾಂಗ್ರೆಸ್ ಗೆ ಗುಡ್ ಬೈ ಹೇಳಿ ಜೆಡಿಎಸ್ ಪಾಳಯ ಸೇರಿದ್ದಾರೆ. ಮತ್ತು ಜೆಡಿಎಸ್ ಅಭ್ಯರ್ಥಿಯಾಗಿಯೇ ಕಣಕ್ಕಿಳಿಯುತ್ತಿದ್ದಾರೆ.