ಜೆಡಿಎಸ್ ಅಭ್ಯರ್ಥಿಗಳ ಠೇವಣಿ ಉಳಿಸಿಕೊಳ್ಳಲು ಕುಮಾರಸ್ವಾಮಿಗೆ ಸವಾಲ್
ಹಾವೇರಿ, ನವೆಂಬರ್ 27: ಉಪ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜಕೀಯ ನಾಯಕ ಮಾತಿನ ಭರಾಟೆ ಜೋರಾಗಿದೆ. ಜೆಡಿಎಸ್ ಅಭ್ಯರ್ಥಿಗಳ ಠೇವಣಿ ಉಳಿಸಿಕೊಳ್ಳುವಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಸವಾಲ್ ಹಾಕಿದ್ದಾರೆ ಸಚಿವ ಜಗದೀಶ ಶೆಟ್ಟರ್, ಎಲ್ಲ 15 ಕ್ಷೇತ್ರಗಳಲ್ಲಿಯೂ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಶೆಟ್ಟರ್ ಹೇಳಿದ್ದಾರೆ.
ರಾಣೇಬೆನ್ನೂರಿನಲ್ಲಿ ಉಪ ಚುನಾವಣಾ ಪ್ರಚಾರದ ಅಂಗವಾಗಿ ಬಿಜೆಪಿ ಕಚೇರಿಯಲ್ಲಿಂದು ಮಾತನಾಡಿದ ಅವರು, ರಾಣೇಬೆನ್ನೂರ, ಶಿವಾಜಿನಗರ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಗೆಲುವು ಕಾಣಲಿದ್ದಾರೆ ಎಂದರು. ಸೂಕ್ಷ್ಮ ಕ್ಷೇತ್ರ ಶಿವಾಜಿನಗರದಲ್ಲಿ ಅಚ್ಚರಿಯ ಫಲಿತಾಂಶ ಬರಲಿದೆ ಎಂದಿದ್ದಾರೆ.
ಸಂಕ್ರಾಂತಿ ನಂತರ ಮತ್ತೆ ಕುಮಾರಸ್ವಾಮಿ ಸಿಎಂ.?
2018 ರ ವಿಧಾನಸಭಾ ಚುನಾವಣೆಯಲ್ಲಿ ಜನರಿಂದ ಸಂಪೂರ್ಣವಾಗಿ ತಿರಸ್ಕಾರಗೊಂಡಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿಕೊಂಡು ಅಪವಿತ್ರ ಮೈತ್ರಿ ಮಾಡಿಕೊಂಡಿದ್ದರು. ಆದ್ದರಿಂದಲೇ ಈ ಉಪ ಚುನಾವಣೆ ಎದುರಿಸಬೇಕಾಗಿದೆ. ಅಪವಿತ್ರ ಮೈತ್ರಿಯಿಂದ ಬೇಸತ್ತು 17 ಜನ ಶಾಸಕರು ರಾಜೀನಾಮೆ ನೀಡಿದರು.
ರಾಜ್ಯದಲ್ಲಿ ಸ್ಥಿರ ಸರ್ಕಾರ ನೀಡಬೇಕೆಂದರೆ ಅದುಬಿಜೆಪಿಯಿಂದ ಮಾತ್ರ ಸಾಧ್ಯ. ಜನರು ನಮಗೆ ಬೆಂಬಲ ನೀಡಲಿದ್ದಾರೆ ಎಂದರು. ವಿಪಕ್ಷ ನಾಯಕ ಸಿದ್ದರಾಮಯ್ಯ ಒಬ್ಬಂಟಿಯಾಗಿದ್ದಾರೆ. ಇತರೆ ನಾಯಕರು ಪ್ರಚಾರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ, ಅಲ್ಲಲ್ಲಿ ಕಾಣಿಸಿಕೊಂಡು ಸೈಡಾಗುತ್ತಿದ್ದಾರೆ ಎಂದು ಕಾಲೆಳಲೆದರು.
ಉಪ ಚುನಾವಣೆಯಲ್ಲಿ ಸೋಲು ಖಚಿತ ಎಂದು ಈಗಾಗಲೆ ಸಿದ್ದರಾಮಯ್ಯಗೆ ಅರ್ಥವಾಗಿದೆ. ಈ ಮಾಹಿತಿಯನ್ನು ಹೈಕಮಾಂಡ್ ಗೂ ತಲುಪಿಸಿದ್ದಾರೆ. ಈ ಉಪ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾದರೆ ನಾನು ಹೊಣೆಯಲ್ಲ ಎಂದು ತಿಳಿಸಿದ್ದಾರೆ. ಈಗಲೂ ತಾನೇ ಮುಂದಿನ ಮುಖ್ಯಮಂತ್ರಿ ಎಂಬ ಭ್ರಮೆಯಲ್ಲಿದ್ದಾರೆ ಎಂದು ಹೇಳಿದರು.
ನಾರಾಯಣಗೌಡ ಬರೆದ ಪತ್ರ ಓದಿ ಕಣ್ಣೀರಿಟ್ಟ ಕುಮಾರಸ್ವಾಮಿ
ಕುಮಾರಸ್ವಾಮಿಯವರ ಹೇಳಿಕೆಗಳನ್ನು ಆ ದೇವರೆ ಅರ್ಥ ಮಾಡಿಕೊಳ್ಳಬೇಕು ಎಂದು ಛೇಡಿಸಿದರು. ಮೊದಲು ಬಿಜೆಪಿಗೆ ಬೆಂಬಲ ನೀಡುತ್ತೇವೆ ಎಂದರು, ನಂತರ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸುವುದು ನನ್ನ ಗುರಿ ಅಂದಿದ್ದಾರೆ. ದೇವೇಗೌಡರು ಮತ್ತು ತಮ್ಮ ಮಗ ನಿಖಿಲ್ ನನ್ನು ಗೆಲ್ಲಿಸಿಕೊಳ್ಳಲಾಗಲಿಲ್ಲ. ಈಗ ನಿಮ್ಮ ಅಭ್ಯರ್ಥಿಗಳ ಠೇವಣಿಯನ್ನಾದರೂ ಉಳಿಸಿಕೊಳ್ಳಿ ಎಂದು ಟಾಂಗ್ ನೀಡಿದ್ದಾರೆ.