ಕೆ.ಜೆ.ಜಾರ್ಜ್ ಮಂಪರು ಪರೀಕ್ಷೆ ಮಾಡಿದ್ರೆ ಸಿದ್ದರಾಮಯ್ಯ ಕಥೆಯಷ್ಟೇ!
ಹಾವೇರಿ, ನವೆಂಬರ್.29: ರಾಜಕಾರಣ ಎಂದ ಮೇಲೆ ಆರೋಪ-ಪ್ರತ್ಯಾರೋಪ ಕಾಮನ್. ಇಲ್ಲಿ ಅವರ ಮೇಲೆ ಇವರು, ಇವರ ಮೇಲೆ ಅವರು ರೇಗುವುದು, ಗುಡುಗುವುದು ಸರ್ವೇ ಸಾಮಾನ್ಯ. ಇನ್ನು, ಚುನಾವಣೆ ಅಂದ ಮೇಲೆ ನಾಯಕರು ಸುಮ್ಮನೆ ಇರುತ್ತಾರಾ. ಈ ರಣಕಣದಲ್ಲಿ ಒಬ್ಬರು ಸೇರು ಆದರೆ, ಮತ್ತೊಬ್ಬರು ಸವಾಸೇರು.
ಗೆಲುವಿಗಾಗಿ ಒಬ್ಬರು ಚಾಪೆ ಕೆಳಗೆ ನುಸುಳಿದರೆ, ಮತ್ತೊಬ್ಬರು ರಂಗೋಲಿ ಕೆಳಗೆ ನುಸುಳುತ್ತಾರೆ. ವಿಧಾನಸಭೆ ಚುನಾವಣೆ ಅಂದ್ರೆನೇ ಜನ ನಾಯಕರಿಗೆ ಒಂದು ರೀತಿಯ ಕಿಕ್. ಅಂಥದ್ರಲ್ಲಿ ಈಗ ರಾಜ್ಯದಲ್ಲಿ ಎದುರಾಗಿರುವ ಉಪ ಚುನಾವಣೆ ಒಂದೊಂದು ಪಕ್ಷಕ್ಕೂ ಪ್ರತಿಷ್ಠೆಯಾಗಿದೆ.
ಮುಂಬೈ ನೋಟು, ಬನ್ನಿಕೋಡಗೆ ಓಟು: ಸಿದ್ದರಾಮಯ್ಯ
ಈ ಬಾರಿ ರಾಜ್ಯದಲ್ಲಿ ನಡೆಯುತ್ತಿರುವ 15 ಕ್ಷೇತ್ರಗಳ ಉಪ ಚುನಾವಣೆ ಪಕ್ಷಗಳಿಗಿಂತ ವ್ಯಕ್ತಿಗಳಿಗೆ ಪ್ರತಿಷ್ಠೆಯಾಗಿ ಬಿಟ್ಟಿದೆ. ಇಲ್ಲಿ ಗೆದ್ದರೆ ಮಾತ್ರ ರಾಜಕಾರಣದಲ್ಲಿ ಭವಿಷ್ಯ, ಇಲ್ಲದಿದ್ದರೆ ಮುಗಿದೇ ಹೋಗುತ್ತೆ ರಾಜಕೀಯದಲ್ಲಿನ ತಮ್ಮ ಆಯುಷ್ಯ ಎನ್ನುವಂತಾ ಪರಿಸ್ಥಿತಿ ಎದುರಾಗಿದೆ.
15 ವಿಧಾನಸಭಾ ಕ್ಷೇತ್ರಗಳ ಪೈಕಿ ಈ ಕ್ಷೇತ್ರವೂ ಕೂಡಾ ಸಖತ್ ಹೈವೋಲ್ಟೇಜ್ ಕದನವಾಗಿ ಮಾರ್ಪಟ್ಟಿದೆ. ಅದಕ್ಕೆ ಮಹತ್ತರ ಕಾರಣವೂ ಇದೆ. ರಣಕಣದಲ್ಲಿ ಧುಮುಕಿರುವ ಕಾಂಗ್ರೆಸ್ ಟಗರು ಎಗರಿ ಎಗರಿ ಡಿಚ್ಚಿ ಕೊಡುತ್ತಿದ್ದರೆ, ಅಖಾಡ ಮತ್ತಷ್ಟು ರಂಗ್ ಭೀ ರಂಗಿ ಆಗುತ್ತಿದೆ.
'ಕೌರವ' ಅಖಾಡದಲ್ಲಿ ಕಾಂಗ್ರೆಸ್ 'ಟಗರು'
ಅನರ್ಹ ಶಾಸಕರನ್ನು ಮನೆಗೆ ಕಳುಹಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಂತ್ರಗಳ ಮೇಲೆ ತಂತ್ರ ಹೆಣೆಯುತ್ತಿದ್ದಾರೆ. ಅದಕ್ಕಾಗಿ ಸ್ವತಃ ತಾವೇ ಅಖಾಡಕ್ಕೆ ಧುಮುಕಿ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಿದ್ದಾರೆ. ಕಣದಲ್ಲೇ ನಿಂತು ಕಾಂಗ್ರೆಸ್ ಟಗರು ಕೊಡುತ್ತಿರುವ ಡಿಚ್ಚಿಗೆ ಪ್ರತಿಸ್ಪರ್ಧಿಗಳು ಪತರ್ ಗುಟ್ಟುತ್ತಿದ್ದಾರೆ. ಅದೇ ರೀತಿ ಹಿರೇಕೆರೂರಿನಲ್ಲಿ ಸಾಲು ಸಾಲು ಪ್ರಚಾರ ಭಾಷಣಗಳನ್ನು ಮಾಡುತ್ತಿರುವ ಸಿದ್ದರಾಮಯ್ಯ, ಕೌರವ ವಿರುದ್ಧ ಕೇಕೆ ಹಾಕುತ್ತಿದ್ದಾರೆ.
ನೋಟಿನ ಬಗ್ಗೆ ಗುಟ್ಟಿನ ಬಗ್ಗೆ ಸಿದ್ದು ಗುದ್ದು!
ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ವಿರುದ್ದ ಕಿಡಿ ಕಾರಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ನೋಟಿನ ಬಾಂಬ್ ಸಿಡಿಸಿದ್ದರು. ಬಿ.ಸಿ.ಪಾಟೀಲ್ ಹಣ ಕೊಟ್ಟರೆ ಎಲ್ಲರೂ ತೆಗೆದುಕೊಳ್ಳಿ, ಆದರೆ ಕಾಂಗ್ರೆಸ್ ಅಭ್ಯರ್ಥಿ ಬನ್ನಿಕೋಡಾಗೆ ಮತ ನೀಡಿ ಎಂದು ತಮ್ಮದೇ ವೈಖರಿಯಲ್ಲಿ ಹೇಳಿದ್ದರು. ಮುಂಬೈ ನೋಟು, ಬನ್ನಿಕೋಡಾಗೆ ವೋಟು ಎಂದು ಭಾಷಣದ ವೇಳೆ ವ್ಯಂಗ್ಯವಾಗಿ ನುಡಿದಿದ್ದರು. ಈ ಹೇಳಿಕೆ ರಾಜ್ಯಾದ್ಯಂತ ಸದ್ದು ಮಾಡುತ್ತಿದ್ದಂತೆ ಕೌರವನ ಕಣ್ಣು ಕೆಂಪಾಗಿ ಹೋಯಿತು. ಅಲ್ಲಿಂದ ನೋಡಿ ಆರೋಪಗಳ ಸರಮಾಲೆಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಗಣಿನಾಡಿನಲ್ಲಿ ಧೂಳ್ ಎಬ್ಬಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ!
ಎದೆಗೆ ಚೂರಿ ಹಾಕಿದರಾ ಸಿದ್ದರಾಮಯ್ಯ?
ಅನರ್ಹ ಶಾಸಕ ಬಿ.ಸಿ.ಪಾಟೀಲ್ ಬೆನ್ನಿಗೆ ಚೂರಿ ಹಾಕಿದರು, ಬೆನ್ನಿಗೆ ಚೂರಿ ಹಾಕಿದರು. ಅಯ್ಯೋ ನೀವು ನಮ್ಮ ಬೆನ್ನಿಗೆ ಅಲ್ಲ ಸ್ವಾಮಿ ಎದೆಗೇ ಚೂರಿ ಹಾಕಿದ್ದೀರಲ್ಲ. ಹೀಗೆಂದು ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಶ್ನೆ ಮಾಡಿದ್ದಾರೆ. ಈಗ ನಮ್ಮ ಮೇಲೆ ಆರೋಪ ಮಾಡುತ್ತಿರುವ ನೀವು, ನಮ್ಮಗೆಲ್ಲ ಬೆನ್ನಿಗಲ್ಲ ಎದೆಗೆ ಚೂರಿ ಹಾಕುವ ಕೆಲಸ ಮಾಡಿದ್ದೀರಿ ಎಂದು ಕೌರವ ಕಿಡಿ ಕಾರಿದ್ದಾರೆ.
ಖಾಕಿ ಬಗ್ಗೆ ಕೆಟ್ಟ ಮಾತು ಯಾಕೆ ಸಾರ್?
ಇನ್ನು, ಬಿ.ಸಿ.ಪಾಟೀಲ್ ತಮ್ಮ ಪೊಲೀಸ್ ಬುದ್ಧಿ ತೋರಿಸಿದರು ಎಂಬ ಸಿದ್ದರಾಮಯ್ಯ ಹೇಳಿಕೆಗೂ ಕೌರವ ಕೆಂಡಾಮಂಡಲರಾಗಿ ಉತ್ತರ ಕೊಟ್ಟಿದ್ದಾರೆ. ಪೊಲೀಸರು ಎಂದರೆ ಅಷ್ಟು ಕೀಳಾಗಿ ನೋಡಬೇಡಿ. ಪೊಲೀಸರು ಇಲ್ಲದಿದ್ದರೆ ನೀವು, ಹಿಂದೆ ಮುಂದೆ ಅಲುಗಾಡುವುದಕ್ಕೂ ಆಗುವುದಿಲ್ಲ. ಈಗ ನಾನೊಬ್ಬ ಪೊಲೀಸ್ ಎಂದು ಹೇಳುತ್ತಿರುವ ನಿಮಗೆ ಈ ಮೊದಲು ಅದರ ಬಗ್ಗೆ ಗೊತ್ತಿರಲಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.
ಬಿಸಿ ಪಾಟೀಲ್ ಒಳ್ಳೆ ಪೊಲೀಸ್, ಒಳ್ಳೆ ಶಾಸಕನೂ ಆಗಲಿಲ್ಲ
ಕೌರವ ಬಿಚ್ಚಿಟ್ಟ ಕಮಿಷನ್ ಕಮಿಟಿ ಕಥೆ
ಇದೆಲ್ಲ ಏಟಿಗೆ ಎದುರೇಟು ನೀಡಿದ ವಿಚಾರವಾಯಿತು. ಆದರೆ, ಕೌರವ ಸಿಡಿಸಿರುವ ಮತ್ತೊಂದು ಬಾಂಬ್ ಅಂತಿಂಥದ್ದಲ್ಲ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಪೊಲೀಸರಿಂದ ಹಣ ವಸೂಲಿಗೆ ಎಂದೇ ಒಂದು ಕಮಿಟಿ ಇತ್ತು ಎಂದು ಬಿ.ಸಿ.ಪಾಟೀಲ್ ಆರೋಪಿಸಿದ್ದಾರೆ. ಕೆಂಪಯ್ಯ ಕಮಿಷನ್ ಕಮಿಟಿ ಕೇವಲ ಹಣ ವಸೂಲಿ ಕೆಲಸಕ್ಕಾಗಿತ್ತು ಎನ್ನುವ ಮೂಲಕ ಬಿಗ್ ಬಾಂಬ್ ಹಾಕಿದ್ದಾರೆ.
ಇವರ ತಲೆಯಲ್ಲಿ ಇದೆಯಾ ಅಸಲಿ ವಿಚಾರ?
ಇನ್ನು, ಸಿದ್ದರಾಮಯ್ಯ ಸರ್ಕಾರದಲ್ಲಿದ್ದ ಈ ಮಾಜಿ ಸಚಿವರಿಗೆ ಎಲ್ಲ ವಿಚಾರಗಳೂ ತಿಳಿದಿವೆಯಂತೆ. ಅವರನ್ನು ವಿಚಾರಿಸಿದರೆ, ಸರ್ಕಾರದ ಅವಧಿಯಲ್ಲಿ ನಡೆಸಿರುವ ಎಲ್ಲ ಅಕ್ರಮಗಳ ಬಣ್ಣ ಬಟಾಬಯಲಾಗಲಿದೆ. ಸಿದ್ದರಾಮಯ್ಯನವರ ನಿಜಸ್ವರೂಪ ಎಲ್ಲರಿಗೂ ಗೊತ್ತಾಗಲಿದೆ ಎಂದು ಬಿ.ಸಿ.ಪಾಟೀಲ್ ಆರೋಪಿಸಿದ್ದಾರೆ.
ಅಸಲಿಗೆ ತಪ್ಪು ಮಾಡಿದ್ದು ಯಾರೋ ಏನೋ?
ಸಿದ್ದರಾಮಯ್ಯ ನಡೆಸಿರುವ ಕಮಿಷನ್ ವ್ಯವಹಾರದ ಬಗ್ಗೆ ಮಾಜಿ ಸಚಿವ ಕೆ.ಜೆ.ಜಾರ್ಜ್ ಹಾಗೂ ಹೆಚ್.ಸಿ.ಮಹದೇವಪ್ಪನವರಿಗೆ ಸರಿಯಾಗಿ ತಿಳಿದಿದೆ. ಈ ಇಬ್ಬರು ಮಾಜಿ ಸಚಿವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಅಂದಾಗ ಎಲ್ಲ ವಿಷಯಗಳು ಹೊರ ಬರುತ್ತವೆ ಎಂದು ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಗಂಭೀರವಾಗಿ ಆರೋಪಿಸಿದ್ದಾರೆ. ಆದರೆ, ಇದು ಚುನಾವಣೆಗಾಗಿ ಮಾಡುತ್ತಿರುವ ಆರೋಪಗಳೋ, ಅಥವಾ ಅಂದು ಅಕ್ರಮಗಳು ನಡೆದಿದ್ದು ನಿಜವೋ ಸುಳ್ಳೋ ಎಂಬುದರ ಬಗ್ಗೆ ಸೂಕ್ತ ತನಿಖೆಯಾಗಬೇಕಿದೆ. ಅಷ್ಟೇ ಅಲ್ಲ, ಹಾಗೊಂದು ವೇಳೆ ಕಮಿಷನ್ ಕಮಿಟಿ ಇದ್ದೇ ನಿಜವಾಗಿದ್ದು, ಹಣ ಸುಲಿಗೆ ಮಾಡಿದ್ದೂ ಸತ್ಯವಾಗಿದ್ದರೆ, ಇಷ್ಟುದಿನ ಎಲ್ಲವೂ ಗೊತ್ತಿದ್ದು ಸುಮ್ಮನಿದ್ದ ಬಿ.ಸಿ.ಪಾಟೀಲ್ ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.
ಈ ಇಬ್ಬರು ನಾಯಕರು ನಡೆಸಿರುವ ಆರೋಪ-ಪ್ರತ್ಯಾರೋಪವನ್ನು ಚುನಾವಣಾ ಆಯೋಗ ಕೂಡಾ ಸೂಕ್ಷ್ಮವಾಗಿ ಗಮನ ಹರಿಸಿದ್ದೇ ಆದಲ್ಲಿ ಈ ಕುರಿತು ತನಿಖೆ ನಡೆಯೋದು ಪಕ್ಕಾ. ತಪ್ಪಿತಸ್ಥರು ಯಾರೇ ಆಗಿದ್ದರೂ ಪಕ್ಷಾತೀತವಾಗಿ ಅವರ ವಿರುದ್ಧ ಕ್ರಮ ಜರುಗಿಸಬೇಕಾಗಿದೆ.