ಬೆಳಗಾವಿ ವಿಭಾಗದ ಮಾಹಿತಿ ಆಯುಕ್ತರ ವಜಾಕ್ಕೆ ಜೆ.ಎಮ್.ರಾಜಶೇಖರ ಆಗ್ರಹ
ರಾಣೆಬೆನ್ನೂರು, ಡಿಸೆಂಬರ್ 20: ಕರ್ನಾಟಕ ಮಾಹಿತಿ ಆಯೋಗದ ಆಯುಕ್ತರಿಗೆ ಮಾಹಿತಿ ಹಕ್ಕು ಕಾಯ್ದೆಯ ಬಗ್ಗೆ ಮಾಹಿತಿ ಇಲ್ಲದೆ ಇರುವುದು ಪಾರದರ್ಶಕ ಆಡಳಿತ ಪದ್ದತಿಯನ್ನು ಗುಣಮಟ್ಟದಲ್ಲಿ ಜಾರಿಗೆ ತರಲು ಮಾರಕವಾಗಿದೆ ಎಂದು ಮಾಹಿತಿ ಹಕ್ಕು ತಜ್ಞ ಜೆ.ಎಮ್.ರಾಜಶೇಖರ ಹೇಳಿದ್ದಾರೆ.
ಅವರು ಪ್ರಕರಣವೊಂದನ್ನು ಮಾಹಿತಿ ಆಯೋಗದ ವೆಬ್ ತಾಣದಲ್ಲಿ ತೆಗೆದು ಅಧ್ಯಯನ ಮಾಡಿದಾಗ ಬೆಳಕಿಗೆ ಬಂದಿರುವ ಘಟನೆಯಾಗಿದೆ. ಈ ಬಗ್ಗೆ ಕರ್ನಾಟಕ ರಾಜ್ಯದ ರಾಜ್ಯಪಾಲರಿಗೆ ದೂರು ನೀಡಿರುವ ಜೆ.ಎಮ್.ರಾಜಶೇಖರ, ಮಾಹಿತಿ ಆಯೋಗದ ಬೆಳಗಾವಿ ಪೀಠದ ಆಯುಕ್ತರನ್ನು ಆಯುಕ್ತರ ಹುದ್ದೆಯಿಂದ ವಜಾ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜೆ.ಎಂ ರಾಜಶೇಖರ ಕೊರೊನಾ ಜಾಗೃತಿ
ಪ್ರಕರಣ ಸಂಖ್ಯೆ KIC 16868 APL 2019 ಕ್ಕೆ ಸಂಬಂಧಿಸಿದಂತೆ ಅರ್ಜಿದಾರ ಅನಿತಾ ಬಿ.ಆರ್ ಸಹ ಶಿಕ್ಷಕಿ ಅಬ್ಬೇನಹಳ್ಳಿ, ಚಳ್ಳಕೆರೆ ತಾಲೂಕು ಚಿತ್ರದುರ್ಗ ಜಿಲ್ಲೆಯ ಇವರು, ಕುಮುಟಾ ತಾಲೂಕು ಸರ್ಕಾರಿ ಪ್ರೌಢ ಶಾಲೆ ಅಘನಾಶಿನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಮುಖ್ಯೋಪಾಧ್ಯಾಯರೊಡನೆ ಮನಸ್ತಾಪ ಮಾಡಿಕೊಂಡಿದ್ದಾರೆ. ಇದರ ಪರಿಣಾಮ ಅರ್ಜಿದಾರರಿಂದ ಮಾಹಿತಿ ಹಕ್ಕು ಅರ್ಜಿಗಳ ಪ್ರವಾಹ. ಈ ಪೈಕಿ ಒಂದರಲ್ಲಿ ಕೇಳಿರುವ ಮಾಹಿತಿ ಮಾಹಿತಿ ಹಕ್ಕು ಕಾಯ್ದೆಯ ಕಲಂ 2 F ವ್ಯಾಪ್ತಿಗೇ ಬರುವುದಿಲ್ಲ.
ಅರ್ಜಿದಾರ ಕೇಳಿರುವ ಮಾಹಿತಿ ಹೀಗಿದೆ. "ಸರಕಾರಿ ಪ್ರೌಢ ಶಾಲೆ ಅಘನಾಶಿನಿ, ಕುಮುಟಾ ತಾಲೂಕು, ಉತ್ತರ ಕನ್ನಡ ಜಿಲ್ಲೆ ಇಲ್ಲಿನ ಮುಖ್ಯೋಪಾಧ್ಯಾಯರಾದ ಶ್ರೀಮತಿ ಮಮತಾ ನಾಯಕ್ ರವರು ಕೇಂದ್ರ ಸ್ಥಾನದಿಂದ ಎಷ್ಟು ಕಿಲೋಮೀಟರ್ ಅಂತರದಲ್ಲಿ ವಾಸ್ತವ್ಯವನ್ನು ಹೊಂದಿದ್ದಾರೆ ಎಂಬ ಮಾಹಿತಿ.'
ಸದರಿ ಮಾಹಿತಿಯು ಪ್ರಶ್ನೆ ರೂಪದಲ್ಲಿ ಇದೆ ಮಾಹಿತಿ ಕೊಡಲು ಸಾಧ್ಯವಿಲ್ಲ ಎಂದು ಸಾರ್ವಜನಿಕ ಮಾಹಿತಿ ಅಧಿಕಾರಿ ನೀಡಿರುವ ಹಿಂಬರಹ ತಪ್ಪು ಎಂದು ವಿಶ್ಲೇಷಿಸಿರುವ ಮಾಹಿತಿ ಆಯುಕ್ತರು ಮಾಹಿತಿ ನೀಡಬೇಕು ಎಂದು ಆದೇಶಿಸಿ ಮಾಹಿತಿ ಹಕ್ಕು ಅಧಿನಿಯಮ 2005 ರ ಕಲಂ 18 (3)(ಎ)(ಡಿ) ಅನ್ವಯ 25,000 ರೂಪಾಯಿ ದಂಡ ವಿಧಿಸಬಾರದೇಕೆ ಎಂದು ಸಮಜಾಯಿಷಿ ಕೇಳಿರುವುದು ಹಾಸ್ಯಾಸ್ಪದವಾಗಿದೆ.
ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಯು ತಮ್ಮ ಕಚೇರಿಯಲ್ಲಿ ಲಭ್ಯವಿರುವ ಮತ್ತು ದಿನನಿತ್ಯ ನಿರ್ವಹಿಸುವ ಕಡತಗಳಲ್ಲಿ ಲಭ್ಯವಿರುವ ದಾಖಲೆಗಳನ್ನು ಮಾಹಿತಿ ಹಕ್ಕು ಅಡಿಯಲ್ಲಿ ನೀಡಲು ಸಾಧ್ಯ. ಇದೆ ವಿಷಯಾಂಶದ ಮಾಹಿತಿಯಿಲ್ಲದ ಆಯುಕ್ತರಿಂದ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಮಾಹಿತಿ ಕೊಡಬೇಕೆಂದು ಆದೇಶಿಸಿರುವುದು ಆಯುಕ್ತ ಸ್ಥಾನಕ್ಕೆ ಅಪಮಾನಕಾರವಾಗಿದೆ.
ಮಾಹಿತಿ ಹಕ್ಕು ಕಾಯ್ದೆಯ ಬಗ್ಗೆ ಸ್ಪಷ್ಟ ಮಾಹಿತಿಯೇ ಇಲ್ಲದ ಆಯುಕ್ತರು ಮನ ಬಂದಂತೆ ಆದೇಶ ಮಾಡಿರುವುದರಿಂದ ಇಲ್ಲದ ದಾಖಲೆ ಎಲ್ಲಿಂದ ಹುಡುಕಿ ತರಬೇಕು. ಕೇಂದ್ರ ಸ್ಥಾನದಿಂದ ಅವರ ಮನೆಯವರೆಗೆ ಅಳತೆ ಪಟ್ಟಿ ಹಿಡಿದು ಎಷ್ಟು ಕಿಲೋಮೀಟರ್ ದೂರವಿದೆ ಎಂದು ಅಳತೆ ಮಾಡಿ ತರಲು ಸಾಧ್ಯವಾ? ಸರ್ಕಾರದ ಪ್ರೌಢ ಶಾಲೆಯಲ್ಲಿ ಸದರಿ ದಾಖಲೆ ಲಭ್ಯತೆ ಇರುವುದು ಹೇಗೆ ಸಾಧ್ಯ ? ಅಲ್ಲದೆ, ಸರ್ಕಾರಿ ನೌಕರರ ಖಾಸಗಿ ಮನೆಯ ವಿಳಾಸವನ್ನು ಮಾಹಿತಿ ಹಕ್ಕು ಕಾನೂನಿಗೆ ವ್ಯತಿರಿಕ್ತವಾಗಿ ಪತ್ತೆ ಮಾಡುವ ಕುತಂತ್ರವನ್ನು ಮಾಡಿರುವ ಅರ್ಜಿದಾರರ ಸಂಚಿಗೆ ಪೂರಕವಾಗಿ ಮಾಹಿತಿ ಆಯುಕ್ತರು ಆದೇಶ ಮಾಡಿರುವುದು ಶೋಚನೀಯ. ಸರ್ಕಾರಿ ನೌಕರರ ಖಾಸಗಿ ಮನೆಯ ವಿಳಾಸವನ್ನು ಮಾಹಿತಿ ಹಕ್ಕಿನಲ್ಲಿ ಬಹಿರಂಗ ಮಾಡಲು ಅವಕಾಶ ಇರುವುದಿಲ್ಲ. ಎಂದು ಜೆ.ಎಮ್ ರಾಜಶೇಖರ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮಾಹಿತಿ ಹಕ್ಕು ಕಾಯ್ದೆಯ ಬಗ್ಗೆ ಪೂರ್ವಾಪರ ತಿಳುವಳಿಕೆ ಪಡೆಯದೇ, ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಮನ ಬಂದಂತೆ ದಾಖಲೆ ಕೊಡಲು ಆದೇಶಿಸಿರುವುದು ಕಾನೂನಾತ್ಮಕವಾಗಿ ನೀಡುವ ಹಿಂಸೆಯಾಗಿದೆ ಎಂದು ಅವರು ದೂರಿನಲ್ಲಿ ದೂರಿದ್ದಾರೆ. ಮಾಹಿತಿ ಹಕ್ಕು ಬಗ್ಗೆ ಸ್ಪಷ್ಟ ತಿಳುವಳಿಕೆ ಇಲ್ಲದ ಆಯುಕ್ತರನ್ನು ಸೇವೆಯಿಂದ ವಜಾ ಮಾಡಿ ಸಾರ್ವಜನಿಕ ಹಿತಾಸಕ್ತಿ ಕಾಪಾಡಬೇಕೆಂದು ಅರ್ಜಿಯಲ್ಲಿ ಮನವಿ ಮಾಡಿಕೊಂಡು ರಾಜ್ಯಪಾಲರಿಗೆ ಮಿಂಚಂಚೆ ಕಳಿಸಿದ್ದಾರೆ.