ಹಿರೇಕೆರೂರು: ಜೆಡಿಎಸ್ಗೆ ಆಘಾತ, ನಾಮಪತ್ರ ಹಿಂಪಡೆದ ಅಭ್ಯರ್ಥಿ
Recommended Video
ಹಾವೇರಿ, ನವೆಂಬರ್ 20: ಹಿರೇಕೆರೂರು ವಿಧಾನಸಭಾ ಕ್ಷೇತ್ರಕ್ಕೆ ಉಮೇದುವಾರಿಕೆ ಸಲ್ಲಿಸಿದ್ದ ಜೆಡಿಎಸ್ ಅಭ್ಯರ್ಥಿ ಹಠಾತ್ತನೆ ಕಣದಿಂದ ಹಿಂದೆ ಸರಿದಿದ್ದಾರೆ. ಇದರಿಂದ ಜೆಡಿಎಸ್ಗೆ ಈ ಕ್ಷೇತ್ರದಲ್ಲಿ ಅಭ್ಯರ್ಥಿಗಳೇ ಇಲ್ಲದಾಗಿದೆ.
ಈ ಭಾಗದ ಖ್ಯಾತ ಸ್ವಾಮೀಜಿಗಳಲ್ಲಿ ಒಬ್ಬರಾಗಿರುವ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಕೊನೆ ಘಳಿಗೆಯಲ್ಲಿ ಟಿಕೆಟ್ ನೀಡಿದ್ದ ಜೆಡಿಎಸ್, ಬಿಜೆಪಿಗೆ ಆಘಾತ ನೀಡಿತ್ತು. ಆದರೆ ಈಗ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಅವರಿಂದ ನಾಮಪತ್ರ ಹಿಂತೆಗೆಸುವಲ್ಲಿ ಯಶಸ್ವಿ ಆಗಿರುವ ಬಿಜೆಪಿ, ಜೆಡಿಎಸ್ಗೆ ಆಘಾತ ನೀಡಿದೆ.
ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ನಾಮಪತ್ರ ವಾಪಸ್ ಪಡೆಯುವ ಮೂಲಕ ಜೆಡಿಎಸ್ಗೆ ಆಘಾತ ಉಂಟುಮಾಡಿದ್ದು, ಈಗ ಹಿರೇಕೆರೂರು ಉಪಚುನಾವಣೆ ಕಣದಲ್ಲಿ ಜೆಡಿಎಸ್ ಅಭ್ಯರ್ಥಿಯೇ ಇಲ್ಲದಂತೆ ಆಗಿದೆ.
ಸ್ವಾಮೀಜಿ ಮನವೊಲಿಸಿರುವ ಬಿ.ವೈ.ರಾಘವೇಂದ್ರ
ಶಿವಲಿಂಗ ಶಿವಾಚಾರ್ಯ ಅವರು ನಾಮಪತ್ರ ವಾಪಸ್ ಪಡೆಯುವ ಹಿಂದೆ ಯಡಿಯೂರಪ್ಪ ಪುತ್ರ ಸಂಸದ ಬಿ.ವೈ.ರಾಘವೇಂದ್ರ ಅವರ ಕೈವಾಡವಿದೆ. ರಾಘವೇಂದ್ರ ಅವರು ನಿನ್ನೆ ರಾತ್ರಿ ಬಹುಸಮಯ ಸ್ವಾಮೀಜಿ ಅವರೊಂದಿಗೆ ಮಾತನಾಡಿ ಅವರು ನಾಮಪತ್ರ ವಾಪಸ್ ಪಡೆಯುವಂತೆ ಮನವೊಲಿಸಿದ್ದಾರೆ.
ಉಜ್ಜೆನಪ್ಪ ಜಟ್ಟೆಪ್ಪ ಕೋಡಿಹಳ್ಳಿ ಗೆ ಟಿಕೆಟ್ ನೀಡಿದ್ದ ಜೆಡಿಎಸ್
ರಂಭಾಪುರಿ ಶ್ರೀಗಳು, ಸಂಸದ ರಾಘವೇಂದ್ರ ಹಾಗೂ ಇನ್ನೂ ಕೆಲವರು ಶಿವಲಿಂಗ ಶಿವಾಚಾರ್ಯ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಶಿವಾಚಾರ್ಯ ಅವರು ನಾಮಪತ್ರ ಹಿಂಪಡೆದಿದ್ದಾರೆ. ಈ ಹಿಂದೆ ಜೆಡಿಎಸ್ನಿಂದ ಉಜ್ಜೆನಪ್ಪ ಜಟ್ಟೆಪ್ಪ ಕೋಡಿಹಳ್ಳಿ ಅವರಿಗೆ ಟಿಕೆಟ್ ನೀಡಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ನಿರ್ಧಾರ ಬದಲಿಸಿ ಶಿವಲಿಂಗ ಶಿವಾಚಾರ್ಯ ಸ್ವಾಮಿಗೆ ಟಿಕೆಟ್ ನೀಡಲಾಯಿತು. ಆದರೆ ಸ್ವಾಮೀಜಿಗೆ ಜೆಡಿಎಸ್ಗೆ ಶಾಕ್ ನೀಡಿದ್ದಾರೆ.
ಶಿವಾಚಾರ್ಯ ಸ್ವಾಮೀನಿ ಭಕ್ತರಿಂದಲೂ ವಿರೋಧ ವ್ಯಕ್ತವಾಗಿತ್ತು
ಶಿವಾಚಾರ್ಯ ಸ್ವಾಮೀಜಿ ಅವರು ನಾಮಪತ್ರ ಸಲ್ಲಿಸಿದ್ದಕ್ಕೆ ಭಕ್ತರಿಂದಲೂ ವಿರೋಧ ವ್ಯಕ್ತವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಸ್ವಾಮೀಜಿ ವಿರುದ್ಧ ಪ್ರಚಾರ ಆರಂಭವಾಗಿತ್ತು. ಇದೂ ಸಹ ಸ್ವಾಮೀಜಿ ನಾಮಪತ್ರ ಹಿಂತೆಗೆದುಕೊಳ್ಳಲು ಕಾರಣವಾಗಿದೆ.
ಹಿರೇಕೆರೂರಲ್ಲಿ ಜೆಡಿಎಸ್ ಅಭ್ಯರ್ಥಿಯೇ ಇಲ್ಲ
ಕಡೆ ಘಳಿಗೆಯಲ್ಲಿ ಸ್ವಾಮೀಜಿಗೆ ಟಿಕೆಟ್ ನೀಡಿ ಬಿಜೆಪಿಗೆ ಶಾಕ್ ಕೊಟ್ಟಿದ್ದಾಗಿ ಬೀಗುತ್ತಿದ್ದ ಜೆಡಿಎಸ್ ಮಾತ್ರ ಈಗ ಕೈ-ಕೈ ಹಿಸುಕಿಕೊಳ್ಳುತ್ತಿದೆ. ಹಿರೆಕೆರೂರಿನಲ್ಲಿ ಈಗ ಜೆಡಿಎಸ್ ಅಭ್ಯರ್ಥಿಯೇ ಇಲ್ಲದಾಗಿದೆ. ಜೆಡಿಎಸ್ ಕಾರ್ಯಕರ್ತರು ಈಗ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುತ್ತಾರಾ ಅಥವಾ ಬಿಜೆಪಿಗೆ ಮತ ನೀಡುತ್ತಾರಾ ಕಾದು ನೋಡಬೇಕಿದೆ.
ಬಿಜೆಪಿಯಿಂದ 'ಅನರ್ಹ' ಬಿ.ಸಿ.ಪಾಟೀಲ್ ಅಭ್ಯರ್ಥಿ
ಹಿರೇಕೆರೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ 'ಅನರ್ಹ' ಬಿ.ಸಿ.ಪಾಟೀಲ್ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ನಿಂದ ಬಿ.ಎನ್.ಬನ್ನಿಕೋಡ್ ಸ್ಪರ್ಧೆ ಮಾಡಿದ್ದಾರೆ.