ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜೆ.ಎಂ ರಾಜಶೇಖರ ಕೊರೊನಾ ಜಾಗೃತಿ
ಹಾವೇರಿ, ಏಪ್ರಿಲ್ 30: ನಾನು ಫೋನ್ ಮೂಲಕ ನೇರ ಸಂಪರ್ಕಕ್ಕೆ ಕೇಳಿಕೊಂಡಾಗ ಪತ್ರಿಕೆಗೆ ವರದಿ ಮಾಡುವುದಾದರೆ ಬೇಡ ಎಂದು ಕಡ್ಡಿ ತುಂಡಾಗುವಂತೆ ಹೇಳಿಬಿಟ್ಟರು. ಕೊನೆಗೆ ಅವರ ಆಪ್ತರಾದ ವೇದಮೂರ್ತಿ ಸರ್ ಜೊತೆ ಹೇಳಿಸಿದ ಮೇಲೆ ಒಪ್ಪಿಗೆ ಕೊಟ್ಟರು. ಸಾಮಾನ್ಯವಾಗಿ ವೈದ್ಯರು ಆಸ್ಪತ್ರೆಗಳಲ್ಲಿ ಕೆಲಸ ಮಾಡುವುದು ಎಷ್ಟು ಸವಾಲಿನ ಕೆಲಸವೋ ಅಷ್ಟೇ ಸಮಾಜದೊಳಗೆ ಓಡಾಡಿ ಮಾಡುವ ಕೆಲಸ ಸಹ ಸವಾಲೇ.
Recommended Video
ಜನರ ಪ್ರಶ್ನೆಗಳಿಗೆ ಉತ್ತರಿಸುವುದು ಅಷ್ಟು ಸುಲಭವಲ್ಲ ಎಂಬ ಅರಿವು ನನಗಾಗಿದ್ದು, ಜೆ.ಎಂ ರಾಜಶೇಖರ ಅವರೊಂದಿಗೆ ನಾನೂ ಸಹ ಅವರ ಕಾರಿನಲ್ಲಿ ಪ್ರಯಾಣ ಬೆಳೆಸಿ ಅವರೊಂದಿಗೆ ಓಡಾಟ ಮಾಡಿದಾಗ.
ನಾನು ಜೆ.ಎಮ್.ರಾಜಶೇಖರ ಅವರೊಂದಿಗೆ ಸಂದರ್ಶನ ಮಾಡಬೇಕೆಂದರೆ, ಅವರ ಎಲ್ಲಾ ತಕರಾರುಗಳನ್ನು ಸಹಿಸಿಕೊಳ್ಳಬೇಕಾಯ್ತು. ನಾನು ನನ್ನ ಕೆಲಸ ಮಾಡುತ್ತಿರುತ್ತೇನೆ. ಯಾವುದೇ ಕಾರಣಕ್ಕೂ ಛಾಯಾಚಿತ್ರ ತೆಗೆಯಬಾರದು ಎಂದು ಒಂದನೇ ಕಂಡೀಷನ್ ಹಾಕಿಯೇ ನನ್ನನ್ನು ಅವರೊಂದಿಗೆ ಕರೆದೊಯ್ದರು. ಅವರು ಅಷ್ಟೇ ಕಟ್ಟುನಿಟ್ಟು. ಆರಂಭದಲ್ಲಿ ಬಿಗುವಿನ ವಾತಾವರಣ ಇದ್ದರೂ ಸಹ ಅವರೊಡನೆ ಒಂದು ದಿನದ ಅಂತ್ಯ ಕಳೆದಾಗ ತುಂಬಾ ಆತ್ಮೀಯರಾಗಿದ್ದರು. ನನ್ನ ಬೇಡಿಕೆ ಮೇಲೆ ಒಂದು ಫೋಟೋ ಅವರೊಂದಿಗೆ ಕೇಳಿ ಪಡೆದೆ. ಕೆಲಸದಲ್ಲಿ ಕೆಲಸಕ್ಕೆ ಬೇಕಾದಷ್ಟು ಮಾತ್ರ ಮಾತು. ಅದರಾಚೆ ಅವರು ಮೌನವಹಿಸಿದ್ದೆ ಹೆಚ್ಚು.
ಜನಸಾಮಾನ್ಯರಿಗೆ ಆರೋಗ್ಯ ಶಿಕ್ಷಣ
ಸಾರ್ವಜನಿಕರು ಗುಂಪಾಗಿ ಕುಳಿತು ಮಾತನಾಡುತ್ತಿರುವುದನ್ನು ನೋಡಿ ವಾಹನ ನಿಲ್ಲಿಸಿದರು. ಗುಂಪಿನ ಜನರೊಂದಿಗೆ ಮಾತಿಗಿಳಿದರು. ಕಲ್ಲೂ ಮಾತನಾಡಿಸುವ ಶಕ್ತಿ ಅವರಲ್ಲಿದೆ ಎನಿಸಿತು ನನಗೆ. ಜನರನ್ನು ಮಾತನಾಡಿಸುತ್ತಾ ಜನರಲ್ಲಿ ಬೆರೆತು ಹೋಗುವ ಗುಣ ನನಗೆ ತುಂಬಾ ಮೆಚ್ಚುಗೆ ಆಯಿತು. ಕಾರಿನಲ್ಲಿ ಹೋಗುವಾಗ ನಾನು ಹಲವಾರು ಪ್ರಶ್ನೆಗಳನ್ನು ಕೇಳಿದೆ. ಕೊರೋನಾ ಬಗ್ಗೆ ಅವರು ಹೇಳಿದ ಅಂಶಗಳು ಅವರ ಅಧ್ಯಯನ ಮನೋಭಾವವನ್ನು ಸಾಬೀತು ಮಾಡಿತು.
ಜೆ.ಎಂ ರಾಜಶೇಖರ ಹೇಳುವ ಪ್ರಕಾರ ಇಲಾಖೆಯಿಂದ ಈ ಬಗ್ಗೆ ತರಬೇತಿ ಆಗಿಲ್ಲಾ. ಇಲಾಖೆಯ ಗ್ರಾಮಾಂತರದಲ್ಲಿ ಕೆಲಸ ಮಾಡುತ್ತಿರುವ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಿಗೆ ಬೆಂಗಳೂರಿನಲ್ಲಿ ಎರಡು ದಿನದ ಕೊರೊನಾ ಕುರಿತು ತರಬೇತಿ ಆಗಿದೆ. ಜೆ.ಎಂ ರಾಜಶೇಖರ ಅವರು ವರ್ಟಿಕಲ್ ಪ್ರೋಗ್ರಾಮ್ ಕಾರ್ಯಕ್ರಮದಲ್ಲಿ ಕಣ್ಣಿಗೆ ಸಂಬಂಧಿಸಿದ ವಿಭಾಗದಲ್ಲಿ ಕೆಲಸ ಮಾಡುವವರಾದರೂ ಕೊರೊನಾ ಕುರಿತು ಮಾಹಿತಿ ಪಡೆದು ಜನಸಾಮಾನ್ಯರಿಗೆ ಆರೋಗ್ಯ ಶಿಕ್ಷಣ ನೀಡುತ್ತಿದ್ದಾರೆ. ಸುಮ್ಮನೆ ಕುಳಿತುಕೊಳ್ಳುವ ಜಾಯಮಾನ ಅವರದಲ್ಲ ಎಂದು ಅವರ ಜೊತೆ ಸ್ವಲ್ಪ ಹೊತ್ತು ಕುಳಿತು ಮಾತು ಆಲಿಸಿದರೂ ಗೊತ್ತಾಗುತ್ತದೆ.
ಸ್ನೇಹ ಜೀವಿ, ಸಹಜ ಬದುಕು
ಅವರೊಂದಿಗೆ ನಾನು ಮಾತನಾಡಿದ್ದು ಬಹಳ ವಿಷಯಗಳ ಬಗ್ಗೆ. ಕೃಷಿ, ಪತ್ರಿಕೋದ್ಯಮ, ಸಾಮಾಜಿಕ, ಸಾಹಿತ್ಯಿಕ, ಸಾಂಸ್ಕೃತಿಕ, ರಾಜಕೀಯ, ಕಾನೂನು, ತೋಟಗಾರಿಕೆ ಬಗ್ಗೆ ಮುಂತಾದವು. ಅವರಿಗೆ ಏನು ಗೊತ್ತೋ ಅದನ್ನು ನಿಖರವಾಗಿ ಮಾತನಾಡಿ ಸ್ಪಷ್ಟಪಡಿಸುತ್ತಿದ್ದರು. ಒಂದು ದಿನ ಅವರೊಂದಿಗೆ ಕಾಲ ಕಳೆದಿರುವ ನನಗೆ ಅವರ ಹೃದಯವಂತಕೆ ಪರಿಚಯ ಆಯಿತು.
ಸ್ನೇಹ ಜೀವಿ, ಬೇಡವಾದ್ದನ್ನು ತಿರಸ್ಕರಿಸುವ ಹಠ. ಅತೀಯಾಗಿ ಯಾವುದನ್ನೂ ಮನಸ್ಸಿನಲ್ಲಿಟ್ಟುಕೊಳ್ಳದೆ ಇರುವುದು. ಸಹಜವಾಗಿರಬೇಕು, ಸರಳವಾಗಿರಬೇಕು. ಆಡಂಬರದ ಸುಳಿವು ಅವರಲ್ಲಿಲ್ಲ. ಹುಚ್ಚು ಹುಳುಕು ಸಹಿಸುವುದಿಲ್ಲ ಎಂಬುದು ನನ್ನ ತಿಳುವಳಿಕೆಗೆ ಬಂದ ಅನುಭವ. ಮಾಡುವ ಕೆಲಸದಲ್ಲಿ ಶ್ರದ್ದೆ, ನಂಬಿಕೆ, ವಿಶ್ವಾಸ ಇವು ಜೆ.ಎಂ ರಾಜಶೇಖರ ಅವರ ಸಕಾರಾತ್ಮಕ ಧೋರಣೆಗಳು.
ಮಾನಸಿಕವಾಗಿ ಸಿದ್ಧವಾಗುವುದು
ಕೊರೊನಾ ಬಗ್ಗೆ ಅವರು ಎರಡು ಕವನಗಳನ್ನು ಬರೆದಿರುವುದು ಅವರ ಫೇಸ್ ಬುಕ್ ಖಾತೆಯಲ್ಲಿ ಇಣುಕಿ ನೋಡಿದಾಗ ಸಿಕ್ಕಿದ ಮಾಹಿತಿ. ಕೊರೊನಾ ಪ್ರಾಣಿಗಳ ಮೂಲದಿಂದ ಬಂದಿದೆಯೋ, ಪ್ರಯೋಗಾಲಯದ ಅವಘಡವೋ ಒಟ್ಟಾರೆ ಅದು ಮಾನವನ ಆರೋಗ್ಯಕ್ಕೆ ಮಾರಕ. ಅದಕ್ಕೆ ಬೇಕಾದ ಪರಿಹಾರ ಏನು? ಕೊರೊನಾ ಮಾಡುವ ಅವಾಂತರದ ಗಂಭೀರತೆಯನ್ನು ಜನಸಾಮಾನ್ಯರಿಗೆ ಅರ್ಥವಾಗಿಸುವುದು ಹೇಗೆ? ಸರ್ಕಾರದ ನಿಯಮಾವಳಿಗಳನ್ನು ಪಾಲನೆ ಮಾಡುವುದು. ಜೀವ ಉಳಿಸಿಕೊಳ್ಳುವುದು ಜೀವನ ಕಂಡುಕೊಳ್ಳುವುದು. ಭವಿಷ್ಯದ ಬದುಕಿನ ಸವಾಲುಗಳನ್ನು ಎದುರಿಸಲು ಮಾನಸಿಕವಾಗಿ ಸಿದ್ಧವಾಗುವುದು ಮತ್ತು ಎದುರಿಸಬೇಕಾದುದನ್ನು ಧೈರ್ಯವಾಗಿ ಪರಿಹರಿಸಿಕೊಳ್ಳುವುದಕ್ಕೆ ಮುಂದುವರಿಯುವುದು ಎಂದು ನೇರವಾದ ಮಾತುಗಳಲ್ಲಿ ಕೊರೊನಾದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಸಾಮಾಜಿಕ ಅಂತರ ಪಾಲಿಸುವುದೇ ಶಿಸ್ತು
ಕೊರೋನಾ ಅಂದರೆ ಭಯವೇಕೆ ಪಡಬೇಕು. ಎಚ್ಚರಿಕೆ ಮುಂಜಾಗ್ರತೆ ಸಾಕು. ಮುಂಜಾಗ್ರತೆ ಎಂದರೆ ಸರ್ಕಾರದ ಕ್ರಮಗಳನ್ನು ಅನುಸರಿಸುವುದು, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲಿಸುವುದು, ಮನೆಯೊಳಗಿದ್ದು ಮನಸ್ಸಿನ ಪ್ರಫುಲ್ಲತೆಗೆ ಸದಾ ಕ್ರಿಯಾಶೀಲವಾಗುವುದು, ನಮ್ಮನ್ನು ನಾವು ಗೆಲ್ಲುವುದಕ್ಕೆ ತಪಸ್ಸು ಮಾಡುವುದು, ಆರೋಗ್ಯವೇ ಪ್ರಧಾನ ಎಲೇ ಮಾನವ ಎಂದು ಕೊರೊನಾ ಎಚ್ಚರಿಕೆ ನೀಡಿದೆ. ನಾವು ಸಕಾರಾತ್ಮಕವಾಗಿದ್ದರೆ ಮಾತ್ರ ಗೆಲ್ಲುವುದು ಸುಲಭ ಸಾಧ್ಯ ಎನ್ನುತ್ತಾರೆ ಹಾವೇರಿ ಜಿಲ್ಲಾ ಆಸ್ಪತ್ರೆಯ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜೆ.ಎಂ ರಾಜಶೇಖರ.
ಅನಾರೋಗ್ಯ ಪೀಡಿತರ ಜೊತೆ ಜವಾಬ್ದಾರಿಯುತ ಸಹಾಯಕ ಇರಬೇಕು
ಸರ್ಕಾರೀ ಆಸ್ಪತ್ರೆಗಳಲ್ಲಿ ಸಾರ್ವಜನಿಕರು ಗುಂಪು ಗುಂಪಾಗಿ ಸೇರಬಾರದೆಂದು, ಮುಖಾಮುಖಿ ನಿಂತು ಹತ್ತಿರದಿಂದ ಮಾತಾಡುವುದನ್ನು ಬಿಡಬೇಕೆಂದು ಆರೋಗ್ಯ ಶಿಕ್ಷಣ ನೀಡುತ್ತಿದ್ದಾರೆ. ಸರ್ಕಾರದ ಆಸ್ಪತ್ರೆಗಳಿಗೆ ಅಥವಾ ಇತರೆ ಆಸ್ಪತ್ರೆಗಳಿಗೆ ಸುಮ್ಮ ಸುಮ್ಮನೆ ಬರಬಾರದೆಂದು ತಿಳುವಳಿಕೆ ಮೂಡಿಸುತ್ತಿದ್ದಾರೆ. ಒಬ್ಬ ತಾಯಿ ಹೆರಿಗೆಗೆಂದು ಸರ್ಕಾರೀ ಆಸ್ಪತ್ರೆಗೆ ಬರಬೇಕಾದರೆ ಜವಾಬ್ದಾರಿಯುತ ಒಬ್ಬ ಸಹಾಯಕರು ಅವರೊಂದಿಗೆ ಬಂದರೆ ಸಾಕು. ಬದಲಾಗಿ ನಾಲ್ಕಾರು ಜನ ಆಸ್ಪತ್ರೆಗೆ ಗುಂಪಾಗಿ ಬರಬಾರದು. ಬಾಣಂತಿ ಮಹಿಳೆ ಮತ್ತು ಶಿಶು ನೋಡಲು ದಾಂಗುಡಿಯಿಟ್ಟು ಸಂಬಂಧಿಕರೂ ಸಹ ಆಸ್ಪತ್ರೆಗೆ ಮತ್ತು ಬಾಣಂತಿ ಮನೆಗೂ ಸಹ ಹೋಗುವುದು ಸರಿಯಲ್ಲ. ಎಂದು ಮಾಹಿತಿ ನೀಡುತ್ತಿದ್ದಾರೆ.
ಜಾಗೃತಿ ಮೂಡಿಸುವುದು ಅಷ್ಟು ಸುಲಭವಲ್ಲ
ರಸ್ತೆಗೆ ಇಳಿಯುವ ಸಾರ್ವಜನಿಕರು ಅನಾವಶ್ಯವಾಗಿ ತಿರುಗಾಡುವುದನ್ನು ನಿಲ್ಲಿಸಬೇಕೆಂದು ಮಾಹಿತಿ ನೀಡುತ್ತಿದ್ದಾರೆ. ಆಶಾ ಕಾರ್ಯಕರ್ತರು, ಆರೋಗ್ಯ ಇಲಾಖೆಯ ಕ್ಷೇತ್ರ ಸಿಬ್ಬಂದಿಯೊಂದಿಗೆ ಮನೆಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವಲ್ಲಿ ಅವರೊಂದಿಗೆ ಹೆಜ್ಜೆ ಹಾಕಿದ್ದಾರೆ. ಜಾಗೃತಿ ನಡಿಗೆ ಹಾಕಿದ್ದಾರೆ. ಬೈಕ್, ಸ್ಕೂಟರ್ ವಾಹನಗಳಲ್ಲಿ ದ್ವಿಚಕ್ರ ವಾಹನಗಳಲ್ಲಿ ಒಬ್ಬರೇ ಓಡಾಡಬೇಕು. ಕಾರಿನಲ್ಲಿ ಇಬ್ಬರೂ ಮಾತ್ರ ಪ್ರಯಾಣಿಸಿರಿ ಎಂದು ಜಾಗೃತಿ ಮೂಡಿಸುವಲ್ಲಿ ಮುಂದೆ ಒಬ್ಬರು, ಹಿಂದಿನ ಸೀಟಿನಲ್ಲಿ ಒಬ್ಬರು ಮಾತ್ರ ಇರಬೇಕೆಂದು ಹೇಳಿದ್ದಾರೆ. ಸಾರ್ವಜನಿಕ ಜಾಗೃತಿ ಮೂಡಿಸುವುದು ಅಷ್ಟೊಂದು ಸರಳ ಸುಲಭದ ಕೆಲಸವಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತಾರೆ.
ಜಿಲ್ಲಾಧಿಕಾರಿ, ಜಿಲ್ಲಾ ಶಸ್ತ್ರಚಿಕಿತ್ಸಕ ಮಾದರಿ
ನನ್ನ ಕೊರೊನಾ ಹೋರಾಟದ ಹಾದಿಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ಕೃಷ್ಣ ಭಾಜಪೇಯಿ ಮತ್ತು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ನಾಗರಾಜ ನಾಯಕ್ ಅವರು ಮಾದರಿ. ಅವರು ಹಗಲಿರುಳೆನ್ನದೇ ತಿಂಗಳುಗಟ್ಟಲೆ ಮನೆಗೆ ಹೋಗದೇ ಯುದ್ಧೋಪಾದಿ ಕೆಲಸ ಮಾಡುತ್ತಿರುವಾಗ ನಾವು ಸುಮ್ಮನೆ ಕುಳಿತಿರಲು ಮನಸ್ಸು ಬಾರದು. ನಮ್ಮ ಪಾಲಿನ ಕೆಲಸವನ್ನು ನಾವು ನಿಯತ್ತಾಗಿ ಮಾಡಬೇಕಲ್ಲವೇ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸ್ವಯಂ ಸೇವಕರೇ ನನಗೆ ಸ್ಪೂರ್ತಿ
ಪೊಲೀಸ್ ಇಲಾಖೆಯ ಸ್ವಯಂ ಸೇವಕರು ಯೋಧರ ರೀತಿಯಲ್ಲಿ ಕಾರ್ಯಮಾಡುತ್ತಿದ್ದಾರೆ. ಅವರೊಂದಿಗೆ ನಿಲ್ಲುವುದೇ ಒಂದು ಸುಯೋಗ. ರಾಣೇಬೆನ್ನೂರು ನಗರದ ಹೊರವಲಯದ ಆಂಜನೇಯ ಬಡಾವಣೆಯಲ್ಲಿ ದಿನದ 24 ಗಂಟೆಯೂ ಕಾವಲು. ಹೊರಗಡೆಯಿಂದ ಯಾರೇ ಬಂದರೂ ಅವರನ್ನು ಕ್ವಾರಂಟೈನ್ ಮಾಡುವವರೆಗೂ ಸುಮ್ಮನಿರದ ಕಾಳಜಿ ಸಹ ನನಗೆ ಸ್ಪೂರ್ತಿ. ಸ್ವಯಂ ಸೇವಕರ ತಂಡದೊಂದಿಗೆ ನಾನು ಸಹ ಬಡಾವಣೆಯಲ್ಲಿ ಹೆಜ್ಜೆ ಹಾಕಿದ್ದೇನೆ, ಇಲ್ಲಿನ ಆಶಾ ಕಾರ್ಯಕತೆಯವರ ಜೊತೆ ಮಾಹಿತಿ ಹಂಚಿದ್ದೇನೆ. ಮನೆಯ ಹೊರಗೆ ಕಾಲಹರಣ ಮಾಡುವುದಕ್ಕೆ ಗುಂಪು ಸೇರುವಿಕೆಯನ್ನು ಮಾಡದಂತೆ ನಾಗರೀಕರಿಗೆ ತಿಳುವಳಿಕೆ ನೀಡಿದ್ದೇನೆ ಎಂದರು.
ಜೆ.ಎಂ ರಾಜಶೇಖರ ಸಾರ್ವಜನಿಕವಾಗಿ ಸಿಗುತ್ತಾರೆ
ಯಾವ ಸರ್ಕಾರೀ ಅಧಿಕಾರಿಗಳೂ ಅವರ ಖಾಸಗಿ ಮೊಬೈಲ್ ಸಾರ್ವಜನಿಕರಿಗೆ ಕೊಡುವುದಿಲ್ಲ. ಸಾರ್ವಜನಿಕವಾಗಿ ಅವರ ಸಂಪರ್ಕ ಸಂಖ್ಯೆ ಬಹಿರಂಗ ಮಾಡುವುದಿಲ್ಲ. ಅಪರೂಪಕ್ಕೆ ಇಂತಹ ವ್ಯಕ್ತಿತ್ವದವರು ಸಿಕ್ಕುತ್ತಾರೆ. ಸಾರ್ವಜನಿಕರಿಗೆ ಸುಲಭವಾಗಿ ಸಿಗುತ್ತಾರೆ. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಂದ ಮಾತ್ರಕ್ಕೆ ಆರೋಗ್ಯ ಸಂಬಂಧಿ ಮಾಹಿತಿ ಅಷ್ಟೇ ಅಲ್ಲ... ಸಾರ್ವಜನಿಕರು ಕೇಳುವ ಎಲ್ಲಾ ರೀತಿಯ ಸಮಸ್ಯೆಗಳಿಗೂ ಪರಿಹಾರ ಸೂಚಿಸುತ್ತಾರೆ. ಅಗತ್ಯಕ್ಕೆ ಬೇಕೆಂದು ತಾವೂ ಇಟ್ಟುಕೊಳ್ಳಬಹುದು ಜೆ.ಎಂ ರಾಜಶೇಖರ ಅವರ ಮೊಬೈಲ್ ಸಂಖ್ಯೆ 9448962082.
ಜೆ.ಎಂ ರಾಜಶೇಖರ ಕಿರು ಇತಿಹಾಸ
ಇವರು ಮೂಲತಃ ರಾಣೇಬೆನ್ನೂರು ತಾಲ್ಲೂಕಿನವರು. ಡಿಪ್ಲೋಮ ಮೆಕ್ಯಾನಿಕಲ್, ಡಿಪ್ಲೋಮ ಪತ್ರಿಕೋದ್ಯಮ, ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರ. ಹಲವಾರು ಖಾಸಗಿ ವೃತ್ತಿ ನಂತರ ಸರ್ಕಾರೀ ಸೇವೆಗೆ ಆರೋಗ್ಯ ಸಹಾಯಕರೆಂದು ಸೇರಿದರು. ನಂತರ ಮಾಹಿತಿ ಹಕ್ಕು ಸಾರ್ವಜನಿಕರಿಗೆ ತಿಳಿಸಿಕೊಡುತ್ತಾರೆಂದು ಸರ್ಕಾರೀ ಸೇವೆಯಿಂದ ಅಮಾನತು. ಅದೇ, ಮಾಹಿತಿ ಹಕ್ಕು ಬಳಸಿ ಸಾವಿರಾರು ಸರ್ಕಾರೀ ನೌಕರರಿಗೆ ಖಾಯಂ ಪದೋನ್ನತಿಗೆ ಯಶಸ್ವಿ ಹೆಜ್ಜೆ. ಅದೇ ಮಾಹಿತಿ ಹಕ್ಕು ಬಳಸಿ ಅಮಾನತ್ತು ರದ್ದು ಮಾಡಿಸಿಕೊಂಡು ನಂತರ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಯಾಗಿ ಪದೋನ್ನತಿ. ಅವರಿಗೆ 55 ವರ್ಷ. ಸ್ವತಂತ್ರವಾಗಿ ಬರೆದು ಪ್ರಕಟಿಸಿದ ಕನ್ನಡದ 60 ಪುಸ್ತಕಗಳು. 8 ಸಂಪಾದಿತ ಕೃತಿಗಳು. ಪ್ರಶಸ್ತಿ, ಸನ್ಮಾನ ಪುರಸ್ಕಾರಗಳ ಸಂಖ್ಯೆ 500 ಕ್ಕೂ ಹೆಚ್ಚು.
ಅರೋಗ್ಯ ಶಿಕ್ಷಣ ನಿರಂತರ ಪ್ರಕ್ರಿಯೆ
ಕೊರೊನಾ ಜಾಗೃತಿಗೆ ಜೆ.ಎಂ ರಾಜಶೇಖರ ಅವರ ಸ್ವಂತ ಕಾರಿನಲ್ಲಿ ಘೋಷಣೆ ಪತ್ರಗಳನ್ನು ಅಂಟಿಸಿದ್ದಾರೆ. ಆರೋಗ್ಯ ಶಿಕ್ಷಣ ನನ್ನ ಆದ್ಯ ಕರ್ತವ್ಯ. ಜನ ಎಚ್ಚರರಾದರೆ ಕೊರೊನಾ ಸಮಸ್ಯೆಗೆ ಮುಕ್ತಿ ಸಿಗಬಹುದು. ನನ್ನ ಕಾರು ನಿಂತಾಗ ಯಾರಾದರೂ ನಾಲ್ಕು ಜನ ಓದಿ ಪ್ರೇರಿತರಾದರೆ ಸಾಕು. ಬದಲಾವಣೆ ನಿಧಾನ ಪ್ರಗತಿ, ಆರೋಗ್ಯ ಶಿಕ್ಷಣ ನಿರಂತರ ಪ್ರಕ್ರಿಯೆ. ನಾಲ್ಕು ಜನರಿಂದ ನೂರ್ಮಡಿಸಬೇಕು, ಆಚರಣೆಯಲ್ಲಿ ಬದಲಾವಣೆ ತರಬೇಕು. ಅದಕ್ಕಾಗಿ ಇರುವ ಎಲ್ಲಾ ಸಾಧ್ಯ ಅನುಕೂಲಗಳನ್ನು ಬಳಸಿಕೊಳ್ಳುವುದೇ ನನ್ನ ಉದ್ದೇಶ ಎಂದು ಹೇಳಿಕೊಂಡರು.