ನಮಗೆ ರೊಕ್ಕಾ ಕೊಟ್ಟಿಲ್ಲ, ನಾವ್ ವೋಟ್ ಹಾಕಲ್ಲ: ಇದಪ್ಪಾ ಡಿಮ್ಯಾಂಡ್!
ಹಾವೇರಿ, ಡಿಸೆಂಬರ್.05: ಅಲೆಲೆ, ಇದಪ್ಪಾ ವರಸೆ ಅಂದರೆ. ನೋಡ್ರಿ ನೀವು ಉಪ ಚುನಾವಣೆಯಾದ್ರೂ ಮಾಡಿಕೊಳ್ಳಿ. ಅಭಿವೃದ್ಧಿ ಮಾಡಿ ಇಲ್ಲ ಬಿಡಿ. ನಮಗೆ ನೋಟ್ ಕೊಟ್ಟರೆ ಮಾತ್ರ ನಾವು ವೋಟ್ ಹಾಕುವುದು. ಇದು ನಮ್ಮ ಸಮಾಜದ ಜಾಗೃತ ಮತದಾರನ ಅಸಂಬದ್ಧ ಬೇಡಿಕೆ.
ಅಚ್ಚರಿ ಪಡುವ ಅಗತ್ಯವೇ ಇಲ್ಲ. ಚುನಾವಣೆಗಳು ಅಂದರೆ ಅಲ್ಲಿ ಕುರುಡು ಕಾಂಚಾಣ ಕುಣಿಯುವುದು ಸರ್ವೇ ಸಾಮಾನ್ಯ. ವಿಧಾನಸಭಾ ಚುನಾವಣೆಗಳಲ್ಲೇ ರಾಜಕೀಯ ನಾಯಕರು ಹಣದ ಹೊಳೆ ಹರಿಸುತ್ತಾರೆ. ಇನ್ನು, ಈ ಬಾರಿ ಬಿಜೆಪಿ ಹಾಗೂ ಕಾಂಗ್ರೆಸ್ ಗೆ ಪ್ರತಿಷ್ಠಿಯಾಗಿರುವ ಉಪ ಚುನಾವಣೆಯಲ್ಲಿ ಸುಮ್ಮನೆ ಬಿಟ್ಟು ಬಿಡುತ್ತಾರಾ?
ಯಲ್ಲಾಪುರ ಬಿಜೆಪಿ ಅಭ್ಯರ್ಥಿ ಬೆಂಬಲಿಗನಿಂದ ಹಣ ಹಂಚಿಕೆ: ವಿಡಿಯೋ ವೈರಲ್
ಇಂದು ರಾಜ್ಯದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಿತು. ಈ ಪೈಕಿ ಇವತ್ತು ಹಲವು ಕ್ಷೇತ್ರಗಳು ಪ್ರತಿಷ್ಠೆ ಕಣಗಳಾಗಿ ಗಮನ ಸೆಳೆದವು. ಈ ಪೈಕಿ ವಿಭಿನ್ನ ರೀತಿಯಲ್ಲಿ ರಾಜ್ಯಾದ್ಯಂತ ಸದ್ದು ಮಾಡಿದ ಏಕೈಕ ಕ್ಷೇತ್ರವೆಂದರೆ ಅದು ರಾಣೆಬೆನ್ನೂರು.
ವೋಟಿಗಿಂತ ನೋಟಿನ ಮೇಲೆ ಇವರಿಗೆ ಅನುರಾಗ!
ನಾವ್ ಮನೆಗೆ ಬರೋದಿಲ್ಲ, ನಮ್ಗೆ ಬಾಗಿಲು ತೆಗೆಯೋರಿಲ್ಲ ಎಂಬ ಯೋಗರಾಜ್ ಭಟ್ಟರ ಹಾಡು ಕೇಳಿದ್ದೀರಿ ಅಲ್ಲವೇ. ರಾಣೆಬೆನ್ನೂರಿನ ಕೆಲವು ಮತದಾರರದ್ದು ಇದಕ್ಕಿಂತ ಕೊಂಚ ಭಿನ್ನ ರಾಗ. ವಿಧಾನಸಭೆ ಮತದಾನದ ದಿನ, ಇಲ್ಲಿನ ಕೆಲ ಮತದಾರರು ನಮಗೆ ಕಾಸು ಕೊಟ್ಟಿಲ್ಲ, ನಾವು ವೋಟ್ ಹಾಕೋದಿಲ್ಲ ಅನ್ನೋ ಹಾಡು ಹೇಳುತ್ತಿದ್ದರು.
ಬಿಜೆಪಿ 1 ಸಾವಿರ ರೂಪಾಯಿ ಕೊಟ್ಟಿದೆ
ನೋಡಿ ರಾಣೆಬೆನ್ನೂರಿನಲ್ಲಿ ಕಾಂಗ್ರೆಸ್ ನವರು ಒಬ್ಬೊಬ್ಬರಿಗೆ ಸಾವಿರ ಸಾವಿರ ರೂಪಾಯಿ ಕೊಟ್ಟಿದ್ದಾರೆ. ಕಾಂಗ್ರೆಸ್ ನವರು 300 ರೂಪಾಯಿ ಕೊಟ್ಟಿದ್ದರೆ, ಬಿಜೆಪಿಯವರು 1 ಸಾವಿರ ರೂಪಾಯಿ ಕೊಟ್ಟಿದ್ದಾರೆ. ಪ್ರತಿಯೊಂದು ಮನೆಗೂ ಹಣ ನೀಡಿದ್ದಾರೆ. ಆದರೆ, ನಮಗೆ ಹಣ ಸಿಕ್ಕೇ ಇಲ್ಲ. ನಾವು ಅದಕ್ಕಾಗಿ ಹೋರಾಟ ಮಾಡುತ್ತಿದೇವೆ ಎನ್ನುವುದು ಮತದಾರರ ಆರೋಪ.
ಹಣ ಹಂಚಿಕೆ ಮತ್ತು ಕಿತ್ತಾಟ: ಎಚ್.ಡಿ.ರೇವಣ್ಣ ಪುತ್ರನ ವಿರುದ್ಧ ಎಫ್ಐಆರ್ ದಾಖಲು
ನಾವ್ ಬೂತ್ ಬರೋದಿಲ್ಲ, ನಮ್ಗೆ ಕಾಸ್ ಕೊಟ್ಟಿಲ್ಲ!
ರಾಣೆಬೆನ್ನೂರಿನಲ್ಲಿ ಮತದಾರರು ವಿಶೇಷ ಕಾರಣಕ್ಕಾಗಿ ಪ್ರತಿಭಟನೆ ನಡೆಸಿದರು. 7ನೇ ವಾರ್ಡ್ ಹಾಗೂ 9ನೇ ವಾರ್ಡ್ ನಲ್ಲಿ ನಮಗೆ ಜನರು ಹಣವನ್ನು ಕೊಟ್ಟಿಲ್ಲ. ನಮ್ಮ ವಾರ್ಡ್ ನಲ್ಲಿ ಬಿಜೆಪಿಯವರು ಅಭಿವೃದ್ಧಿಯನ್ನೂ ಮಾಡಿಲ್ಲ. ಅದಕ್ಕಾಗಿ ನಮ್ಮ ಹೋರಾಟ ಎನ್ನುವುದು ಮತದಾರನ ವಾದ. ಅರೆ, ಬಿಜೆಪಿ ಅಷ್ಟೇ ಅಲ್ಲರೀ, ಕಾಂಗ್ರೆಸ್ ನವರನ್ನೂ ಮತದಾರರು ಬಿಟ್ಟಿಲ್ಲ. ಏಕೆಂದರೆ, ಕಾಂಗ್ರೆಸ್ ನವರೂ ಕೂಡಾ ಈ ವಾರ್ಡ್ ಗಳಲ್ಲಿ ಕಾಸು ಕೊಟ್ಟಿಲ್ಲವಂತೆ.
ನಾವು ಹಂಚಿದ ಹಾಗೆ ಅವರೂ ಬಂದು ಹಂಚಬೇಕು!
ಅರೆ, ಕಾರ್ಯಕರ್ತರ ಕೈಯಲ್ಲಿ ಹತ್ತೊತ್ತು ಸಾವಿರ ರೂಪಾಯಿಗಟ್ಟಲೇ ಹಣವನ್ನು ನೀಡಿರುತ್ತಾರೆ. ಅವರು ನಮ್ಮ ಏರಿಯಾದಲ್ಲಿ ಬಂತು ಹಣ ಹಂಚಿಲ್ಲ. ನಾವು ಬೇರೆ ಕಡೆಗಳಲ್ಲಿ ಹೋಗಿ ಹಂಚಿದ ಹಾಗೆ ಅವರೂ ನಮ್ಮ ಏರಿಯಾದಲ್ಲಿ ಬಂದು ಹಣ ಹಂಚಬೇಕು. ಇವರೇನು ಅವರಪ್ಪನ ಮನೆಯಿಂದ ತಂದು ಕೊಡುತ್ತಾರಾ. ಅವರು ಕೊಟ್ಟಿರುವ ಹಣವನ್ನು ನೀಡಲು ಇವರಿಗೇನು ಕಷ್ಟ ಎಂಬುದು ಮತದಾರರ ಪ್ರಶ್ನೆಯಾಗಿದೆ.
ಕುರುಬರಿಗೆ 500, ಲಿಂಗಾಯತರಿಗೆ 1000!
ನೋಡ್ರಿ ಇಲ್ಲಿ ಜಾತಿ ಲೆಕ್ಕಾಚಾರ ಹಾಕ್ತಾರಾ. ಕುರುಬರಿಗೆ ಒಂದು ಲಿಂಗಾಯತರಿಗೆ ಒಂದು, ಹಿಂದುಳಿದ ವರ್ಗದ ಜನರಿಗೆ ಇನ್ನೊಂದು. ಕುರುಬರಿಗೆ 500 ರೂಪಾಯಿ, ಲಿಂಗಾಯತರಿಗೆ 1 ಸಾವಿರ ರೂಪಾಯಿಯಂತೆ. ಬಿಜೆಪಿಯವರು ಬೇಕಿದ್ದಕ್ಕೆ ಮತದಾನ ಮಾಡಿ, ಇಲ್ಲದಿದ್ದರೆ ಬಿಡಿ ಎಂದು ಹೇಳುತ್ತಿದ್ದಾರೆ ಎನ್ನುವುದು ಇವರ ಆರೋಪ.
ಹತ್ತೇ ರೂಪಾಯಿ ಕೊಟ್ಟರೂ ಸರಿ ಎಲ್ಲರಿಗೂ ನೀಡಿ!
ಒಂದೊಂದು ಮನೆಗೆ ಒಂದು ಸಾವಿರ ರೂಪಾಯಿಗಿಂತ ಹೆಚ್ಚು ಹಣವನ್ನು ನೀಡಿದ್ದಾರೆ. ಇನ್ನು ಕೆಲವು ಮನೆಗಳಿಗೆ ಒಂದು ರೂಪಾಯಿಯನ್ನೂ ಕೊಟ್ಟಿಲ್ಲ. ಇದು ಅನ್ಯಾಯ ಸ್ವಾಮಿ. ನಾವು 200 ರೂಪಾಯಿ ದುಡಿಮೆ ಬಿಟ್ಟು ಬಂದಿದ್ದೇವೆ. ಹತ್ತೇ ರೂಪಾಯಿ ಬಂದರೂ ಸರಿ. ಎಲ್ಲರಿಗೂ ಸಮಾನವಾಗಿ ಹಂಚಿಕೆ ಆಗಬೇಕು. ನ್ಯಾಯಬದ್ಧವಾಗಿ ನಮಗೆ ನ್ಯಾಯ ಸಿಗಬೇಕು ಎಂಬುದು ಇಲ್ಲಿನ ಮಹಿಳಾ ಮತದಾರರ ಬೇಡಿಕೆ.