ಬಿಜೆಪಿ ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿಗೆ ಹೊಸ ಸೇರ್ಪಡೆ
ಹಾವೇರಿ, ಜನವರಿ 28: ಬಿಜೆಪಿಯಲ್ಲಿ ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿ ಹನುಮನ ಬಾಲದಂತೆ ಉದ್ದವಾಗುತ್ತಲೇ ಇದೆ. ಈ ಪಟ್ಟಿಗೆ ಹೊಸ ಸೇರ್ಪಡೆ ಶಾಸಕ ನೆಹರು ಓಲೆಕಾರ.
ಹಾವೇರಿ ಶಾಸಕ ನೆಹರು ಓಲೆಕಾರ ಅವರು 'ನಾನೂ ಸಹ ಸಚಿವ ಸ್ಥಾನದ ಆಕಾಂಕ್ಷಿ' ಎಂದು ಹೇಳಿದ್ದು, ಸಚಿವ ಸ್ಥಾನ ನೀಡಿದರೆ 'ಸ್ಥಾನಕ್ಕೆ ನ್ಯಾಯ ಒದಗಿಸುವೆ' ಎಂದಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೂರು ಬಾರಿ ಶಾಸಕನಾಗಿದ್ದೇನೆ. ಅನುಭವಿ ರಾಜಕಾರಣಿಯಾಗಿದ್ದೇನೆ. ನನಗೂ ಸಚಿವ ಸಂಪುಟದಲ್ಲಿ ಅವಕಾಶ ಕಲ್ಪಿಸಿದರೆ, ಉತ್ತಮ ಆಡಳಿತ ನೀಡಿ ಸರ್ಕಾರಕ್ಕೆ ಒಳ್ಳೆಯ ಹೆಸರು ತರುತ್ತೇನೆ' ಎಂದಿದ್ದಾರೆ.
'ಎಲ್ಲರಿಗೂ ಸಚಿವ ಸ್ಥಾನ ಬೇಕು, ಹೀಗಾಗಿ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ. ಆದರೆ ನಾಯಕರು ತುಲನಾತ್ಮಕವಾಗಿ ಯೋಚನೆ ಮಾಡಿ, ಅರ್ಹರಿಗೆ ಅವಕಾಶ ನೀಡಬೇಕು' ಎಂದಿದ್ದಾರೆ.
'ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸಂಪುಟದಲ್ಲಿ ಅವಕಾಶ ನೀಡಿದರೆ ಎಲ್ಲರಿಗೂ ಆದ್ಯತೆ ನೀಡಿದಂತಾಗುತ್ತದೆ' ಎಂದಿರುವ ಅವರು, 'ಯಡಿಯೂರಪ್ಪ ಅವರು ನನಗೆ ಸಂಪುಟದಲ್ಲಿ ಸ್ಥಾನ ನೀಡುವ ವಿಶ್ವಾಸವಿದೆ' ಎಂದಿದ್ದಾರೆ.
ಸಂಪುಟ ವಿಸ್ತರಣೆ ಕುಣಿಕೆಯು ಯಡಿಯೂರಪ್ಪ ಕೊರಳಿಗೆ ದಿನೇ-ದಿನೇ ಬಿಗಿಯಾಗಿ ಸುತ್ತಿಕೊಳ್ಳುತ್ತಿದೆ. ಹಗ್ಗದ ಒಂದು ತುದಿಯನ್ನು ಮೂಲ ಬಿಜೆಪಿಗರು ಎಳೆಯುತ್ತಿದ್ದರೆ, ಮತ್ತೊಂದು ತುದಿಯನ್ನು ಮಾಜಿ ಅನರ್ಹರು ಮತ್ತು ಉಪ ಚುನಾವಣೆಯಲ್ಲಿ ಸೋತವರು ಎಳೆಯುತ್ತಿದ್ದಾರೆ.
ಉಪಚುನಾವಣೆಯಲ್ಲಿ ಗೆದ್ದಿರುವ ಮಾಜಿ ಅನರ್ಹರು, ರೇಣುಕಾಚಾರ್ಯ, ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ, ಮುರಗೇಶ ನಿರಾಣಿ, ಬಸನಗೌಡ ಪಾಟೀಲ್, ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್, ಎಸ್.ಅಂಗಾರ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಕರುಣಾಕರ ರೆಡ್ಡಿ, ಹರತಾಳು ಹಾಲಪ್ಪ, ಕುಮಾರ್ ಬಂಗಾರಪ್ಪ, ಅರಗ ಜ್ಞಾನೇಂದ್ರ, ಎಸ್.ವಿ.ರಾಮಚಂದ್ರಪ್ಪ ಇನ್ನೂ ಹಲವು ಸಂಪುಟ ಸೇರಲು ತುದಿಗಾಲಲ್ಲಿದ್ದಾರೆ.