ಲಾಕ್ಡೌನ್ ಹಿನ್ನೆಲೆ: ಚೌಡೇಶ್ವರಿ ದೇವಸ್ಥಾನದ ಹುಂಡಿ ಹೊತ್ತೊಯ್ದ ಕಳ್ಳರು!
ಹಾವೇರಿ, ಮೇ 11: ಲಾಕ್ಡೌನ್ನಿಂದ ಜನ ಸಾಮಾನ್ಯರು ಸಂಕಷ್ಟದಲ್ಲಿದ್ದಾರೆ, ಮನೆಯಿಂದ ಹೊರಗೆ ಹೋಗದಂತೆ ಸರ್ಕಾರ ನಿರ್ಬಂಧಿಸಿದೆ. ಆದರೂ ಕೊರೊನಾ ವೈರಸ್ ನಿಯಂತ್ರಣಕ್ಕೆ ಸಿಗುತ್ತಿಲ್ಲ. ರಾಜ್ಯದಲ್ಲಿ ಲಾಕ್ಡೌನ್ನಿಂದಾಗಿ ಕಳೆದ ಒಂದೂವರೆ ತಿಂಗಳುಗಳಿಂದ ದೇವಸ್ಥಾನಗಳ ಬಾಗಿಲನ್ನು ಮುಚ್ಚಲಾಗಿದೆ. ಪೂಜಾರಿಗಳು, ಭಕ್ತರು ದೇವಸ್ಥಾನಗಳಿಗೆ ಹೋಗುತ್ತಿಲ್ಲ. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡಿರುವ ಕಳ್ಳರು ದೇವಸ್ಥಾನದ ಹುಂಡಿಯನ್ನೇ ಕಳ್ಳತನ ಮಾಡಿದ್ದಾರೆ. ಜೊತೆಗೆ ಕಳ್ಳತನದ ಸುಳಿವು ಸಿಗದಿರಲಿ ಎಂದು ಭದ್ರತಾ ದೃಷ್ಟಿಯಿಂದ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾಗಳನ್ನೆ ಐನಾತಿ ಕಳ್ಳರು ದ್ವಂಸ ಮಾಡಿದ್ದಾರೆ.
ಮೊದಲ ಹಂತದ ಲಾಕ್ಡೌನ್ ಜಾರಿಯಾದಾಗಿನಿಂದ ಹಾವೇರಿ ಜಿಲ್ಲೆ ರಾಣಿಬೆನ್ನೂರು ನಗರ ದೇವತೆ ಚೌಡೇಶ್ವರಿ ದೇವಸ್ಥಾನದ ಬಾಗಿಲು ಹಾಕಲಾಗಿದೆ. ಭಕ್ತರು ಹಾಗೂ ಪೂಜಾರಿಗಳೂ ಕೂಡ ದೇವಸ್ಥಾನಕ್ಕೆ ಹೋಗುತ್ತಿರಲಿಲ್ಲ. ಹೀಗಾಗಿ ಲಾಕ್ಡೌನ್ ಸಂದರ್ಭದಲ್ಲಿ ಕಳ್ಳರು ದೇವಸ್ಥಾನದ ಬಾಗಿಲು ಮುರಿದು ಹುಂಡಿ ಕಳ್ಳತನ ಮಾಡಿದ್ದಾರೆ.
ಲಾಕ್ಡೌನ್ ಸಡಿಲಿಕೆ ಆದ ಬಳಿಕ ನಿನ್ನೆ ಸಂಜೆ ಪೂಜಾರಿಗಳು ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಕಳೆದ ಜನವರಿ ತಿಂಗಳಿನಲ್ಲಿ ಚೌಡೇಶ್ವರಿ ದೇವಿ ಜಾತ್ರೆ ನಡೆದಿತ್ತು. ಆಗ ಭಕ್ತರು ಹೆಚ್ಚಿನ ಪ್ರಮಾಣದಲ್ಲಿ ಹುಂಡಿಗೆ ಕಾಣಿಕೆ ಹಾಕಿದ್ದರು ಎನ್ನಲಾಗಿದೆ. ಲಕ್ಷಾಂತರ ರೂಪಾಯಿಗಳಿದ್ದ ಹುಂಡಿಯನ್ನು ಕಳ್ಳರು ಹೊತ್ತುಕೊಂಡು ಹೋಗಿರುವುದಕ್ಕೆ ಸ್ಥಳೀಯರು ಹಾಗೂ ಭಕ್ತರು ಹಿಡಿಶಾಪ ಹಾಕುತ್ತಿದ್ದಾರೆ.
ರಾಣಿಬೆನ್ನೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಸಿಸಿ ಕ್ಯಾಮರಾ ಹಾಗೂ ಹುಂಡಿ ಕಳ್ಳತನದ ಪ್ರಕರಣದ ತನಿಖೆಯನ್ನು ನಡೆಸಿದ್ದಾರೆ.