ಹಾವೇರಿ ಜಿಲ್ಲೆಯ ರೈತರಿಗೆ ಸಿಹಿ ಸುದ್ದಿ ಕೊಟ್ಟ ರೇಷ್ಮೆ ಸಚಿವ ಡಾ. ನಾರಾಯಣಗೌಡ!
ಹಾವೇರಿ, ಆ. 31: ಹಾವೇರಿ ಜಿಲ್ಲೆ ರೇಷ್ಮೆ ಬೆಳೆಗಾರರಿಗೆ ರೇಷ್ಮೆ ಸಚಿವ ಡಾ. ನಾರಾಯಣಗೌಡ ಸಂತಸದ ಸುದ್ದಿ ನೀಡಿದ್ದಾರೆ. ರೇಷ್ಮೆ ಗೂಡು ಮಾರಾಟಕ್ಕೆ ಇನ್ನುಮುಂದೆ ರೈತರು ಬೇರೆ ಜಿಲ್ಲೆಗೆ ಅಲೆಯಬೇಕಾಗಿಲ್ಲ. ಹಾವೇರಿ ಜಿಲ್ಲೆಯಲ್ಲೇ ಹೈಟೆಕ್ ರೇಷ್ಮೆ ಮಾರಕಟ್ಟೆ ನಿರ್ಮಿಸಲು ನಿವೇಶನ ಗುರುತಿಸಿ ವಾರದೊಳಗೆ ವರದಿ ನೀಡಿ ಎಂದು ರೇಷ್ಮೆ, ಯುವಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣಗೌಡ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಡಾ. ನಾರಾಯಣಗೌಡ, ಹಾವೇರಿ ಅಥವಾ ರಾಣೆಬೆನ್ನೂರಿನಲ್ಲಿ ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ಪ್ರತಿನಿತ್ಯ ಒಂದು ಮೆಟ್ರಿಕ್ ಟನ್ ರೇಷ್ಮೆ ಗೂಡು ಮಾರಾಟವಾಗುತ್ತಿದೆ. 2-3 ಮೆಟ್ರಿಕ್ ಟನ್ ರೇಷ್ಮೆ ಗೂಡನ್ನು ರಾಮನಗರ, ಶಿಡ್ಳಘಟ್ಟ ಮಾರುಕಟ್ಟೆಗೆ ಕೊಂಡೊಯ್ದು ಮಾರಾಟ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯಲ್ಲಿ ರೇಷ್ಮೆ ಮಾರುಕಟ್ಟೆ ನಿರ್ಮಿಸಲು ತೀರ್ಮಾನಿಸಲಾಗಿದೆ. ವಾರದೊಳಗೆ ಮಾರುಕಟ್ಟೆ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿ ಸರ್ವೆ ಮಾಡಿ ವರದಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಹಾವೇರಿಯಲ್ಲಿ ರೇಷ್ಮೆ ಬೆಳೆ ಉತ್ತಮವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ರೇಷ್ಮೆ ಬೆಳೆಗಾರರ ಸಂಖ್ಯೆ ಹೆಚ್ಚಾಗಬೇಕು. ಈ ಹಿನ್ನೆಲೆಯಲ್ಲಿ ರೇಷ್ಮೆ ತರಬೇತಿ ಕೇಂದ್ರ ಅಗತ್ಯವಿದ್ದು, ಶೀಘ್ರವೇ ಈ ಸಂಬಂಧ ಕ್ರಮ ವಹಿಸುವ ಭರವಸೆಯನ್ನು ಕೊಟ್ಟಿದ್ದಾರೆ.
ರೈತರ ರಕ್ತ ಕುಡಿಯುವ ಅಧಿಕಾರಿಗಳನ್ನು ಸುಮ್ಮನೆ ಬಿಡಲ್ಲ
ರೇಷ್ಮೆ ಇಲಾಖೆ ಅಡಿ ರೇಷ್ಮೆ ರೈತರಿಗೆ ರೇಷ್ಮೆ ಮನೆಗಳನ್ನು ನೀಡುತ್ತಿದ್ದೇವೆ. ಆದರೆ ಕೆಲ ಅಧಿಕಾರಿಗಳು ಕಮಿಷನ್ ನೀಡದೆ ಮನೆ ನೀಡುತ್ತಿಲ್ಲ. ಬಡವರಿಗೆ ನೀಡುವ ಮನೆ ಅದು. ಕಷ್ಟದಲ್ಲಿರುವ ಕಾರಣಕ್ಕೇ ಮನೆ ನೀಡುವುದು. ಆದರೆ ಅಂತವರಿಂದಲೇ ಅಧಿಕಾರಿಗಳು ಲಂಚ ಕೇಳುತ್ತಾರೆ. ಇಂತಹ ಅಧಿಕಾರಿಗಳನ್ನು ಮನೆಗೆ ಕಳಿಸುತ್ತೇನೆ. ರೈತರ ಜೀವನದ ಜೊತೆ ಚೆಲ್ಲಾಟ ಆಡುತ್ತಾರೆ.
ಹನಿ ನೀರಾವರಿ ಮಾಡಿಕೊಡಲೂ ಕಮೀಷನ್ ಕೇಳ್ತಾರೆ. ಇದೆಲ್ಲದಕ್ಕು ಬ್ರೇಕ್ ಹಾಕಬೇಕು. ರೈತರ ರಕ್ತ ಕುಡಿಯುವವರನ್ನು ಬಿಡಲ್ಲ. ರೈತರಿಗೆ ಸಂಬಂಧಿಸಿದ ಯಾವುದೇ ಯೋಜನೆ ನೇರವಾಗಿ ಅವರಿಗೆ ತಲುಪಬೇಕು. ಅಧಿಕಾರಿಗಳು ಕಮಿಷನ್ ಕಾರಣಕ್ಕೆ ವಿಳಂಬ ಮಾಡಿದರೆ ಸುಮ್ಮನಿರಲ್ಲ ಎಂದು ಸಚಿವ ಡಾ. ನಾರಾಯಣಗೌಡ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸಿಲ್ಕು ಮತ್ತು ಮಿಲ್ಕು ರೈತರ ಜೀವನಾಧಾರ
ರಾಜ್ಯದ ಎಲ್ಲ ರೇಷ್ಮೆ ಮಾರುಕಟ್ಟೆಯಲ್ಲಿ ಶೇಕಾಡಾ ನೂರರಷ್ಟು ಇ-ಪೇಮೆಂಟ್ ಆಗಬೇಕು ಎಂದು ಸೂಚನೆ ನೀಡಲಾಗಿದೆ. ಕೆಲವೆಡೆ ಸ್ವಲ್ಪ ಪ್ರಮಾಣದಲ್ಲಾದರೂ ನಡೆಯುತ್ತಿದೆ. ಆದರೆ ಹಾವೇರಿ ರೇಷ್ಮೆ ಮಾರುಕಟ್ಟೆಯಲ್ಲಿ ಝೀರೋ ಪರ್ಸೆಂಟ್ ಇ-ಪೇಮೆಂಟ್ ಇದೆ. ಆನ್ಲೈನ್ ಪೇಮೆಂಟ್ ಆರಂಭ ಮಾಡಲೇ ಇಲ್ಲ.
ಸಿಲ್ಕು ಮತ್ತು ಮಿಲ್ಕು ರೈತರ ಜೀವನಾಧಾರ. ಇದರಲ್ಲಿ ಅನ್ಯಾಯವಾಗಬಾರದು. ಮಾರುಕಟ್ಟೆಯಲ್ಲಿ ನಗದು ವ್ಯವಹಾರ ನಿಲ್ಲಬೇಕು. ತಕ್ಷಣ ಇ-ಪೇಮೆಂಟ್ ಪ್ರಾರಂಭಿಸಬೇಕು. ಮಾರುಕಟ್ಟೆಯಲ್ಲಿ ಸಿಸಿಕ್ಯಾಮರಾ ಅಳವಡಿಸಬೇಕು. ರೈತರಿಗೆ ಆಗುತ್ತಿರುವ ಅನ್ಯಾಯ ನಿಲ್ಲಬೇಕು. ಇಲ್ಲದಿದ್ದರೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಅಧಿಕಾರಿಗಳನ್ನು ಸಚಿವ ನಾರಾಯಣಗೌಡ ತರಾಟೆಗೆ ತೆಗೆದುಕೊಂಡಿದ್ದಾರೆ.
ಹಾವೇರಿ ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ
ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರ ಹುದ್ದೆ ಖಾಲಿ ಇದ್ದು, ಕೂಡಲೆ ಉತ್ತಮ ಅಧಿಕಾರಿಯನ್ನು ತಾತ್ಕಾಲಿಕ ನೇಮಿಸುವಂತೆ ಸಚಿವರು ಸೂಚಿಸಿದರು. ಹಾವೇರಿಯಲ್ಲಿರುವ ಈಜುಕೊಳ ವ್ಯವಸ್ಥೆ ಹದಗೆಟ್ಟಿರುವುದಕ್ಕೆ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಹೀಗಾಗಿ ಖಾಸಗಿಯವರಿಗೆ ಈಜುಕೊಳ ನಿರ್ವಹಣೆಗೆ ನೀಡಬೇಕು. ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿ, ಈಜುಪಟುಗಳಿಗೆ ಸೂಕ್ತ ತರಬೇತಿ ನೀಡುವುದಕ್ಕೆ ಈಜುಕೊಳ ಬಳಕೆಯಾಗುವಂತೆ ನೋಡಿಕೊಳ್ಳಬೇಕು. ಈಜುಕೊಳ ಸರಿಯಾಗಿ ನಿರ್ವಹಣೆ ಆಗದಿರುವುದು ಅಧಿಕಾರಿಗಳ ಜವಾಬ್ದಾರಿ ಎಂದು ಕ್ರೀಡಾ ಸಚಿವ ನಾರಾಯಣಗೌಡ ಸೂಚಿಸಿದ್ದಾರೆ.
Recommended Video
ಕ್ರೀಡಾಂಗಣ ಸಂಪೂರ್ಣ ಹದಗೆಟ್ಟಿದೆ
ಇದಕ್ಕೂ ಮೊದಲು ಸಚಿವ ಡಾ. ನಾರಾಯಣಗೌಡ ಅವರು, ಹಾವೇರಿ ಜಿಲ್ಲಾ ಕ್ರೀಡಾಂಗಣ ಹಾಗೂ ಒಳಾಂಗಣ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕ್ರೀಡಾಂಗಣ ಸಂಪೂರ್ಣ ಹದಗೆಟ್ಟಿದೆ. ತಕ್ಷಣ ದುರಸ್ತಿ ಕಾರ್ಯ ಆಗಬೇಕು. ಕೂಡಲೆ ಕ್ರೀಡಾಂಗಣ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಕೋವಿಡ್ -19 ಹಿನ್ನೆಲೆಯಲ್ಲಿ ಈಜುಕೊಳ, ಕ್ರೀಡಾಂಗಣ ಎಲ್ಲ ಸ್ಥಗಿತಗೊಳಿಸಲಾಗಿತ್ತು. ಶೀಘ್ರದಲ್ಲೆ ಪುನಾರಂಭ ಮಾಡುತ್ತೇವೆ. ಎಲ್ಲ ದುರಸ್ಥಿಕಾರ್ಯ ಮುಗಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.