ಶತಮಾನದ ಜಾತ್ರೆ ಭಾಗ - 02: ಹಾವೇರಿಗೆ ಹೊಳಪು ನೀಡಿತಾ ಆ ಚಂಡಿಕಾ ಯಾಗ?
ಹಾವೇರಿ, ಜನವರಿ.20: ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿ ನಗರದಲ್ಲಿ ದ್ಯಾಮವ್ವ ಜಾತ್ರೆ ನಡೆಯುತ್ತಿರುವುದು ಇದೇ ಮೊದಲು. ಆದರೆ, ಈ ದೇವಿಯೇ ಯಾಲಕ್ಕಿ ನಗರದ ಪಾಲಿನ ಶಕ್ತಿದೇವತೆಯಾಗಿ ಕಾಲ ಕಾಲಕ್ಕೆ ನಗರ ಹಾಗೂ ಜಿಲ್ಲೆಯನ್ನು ಕಾಪಾಡುತ್ತಾ ಬಂದಿದ್ದಾಳೆ.
ಶತಮಾನದ ಹಿಂದೆ ಯಾರೂ ಕಂಡು ಕೇಳರಿಯದಂತಾ ಮಾರಕ ರೋಗ ನಗರವನ್ನು ಆವರಿಸಿಕೊಂಡಿತ್ತು. ಮನುಷ್ಯರ ಆದಿಯಾಗಿ ಪ್ರಾಣಿ ಪಕ್ಷಿಗಳ ಮಾರಣಹೋಮಕ್ಕೆ ಮಾರಕ ರೋಗ ಬಾಯ್ತೆರೆದು ನಿಂತಿತ್ತು. ಅಂದು ನಗರವನ್ನು ಮೃತ್ಯುದೇವತೆಯಿಂದ ರಕ್ಷಿಸಿದ್ದು ಇದೇ ಶಕ್ತಿದೇವತೆ ದ್ಯಾಮವ್ವ ದೇವಿ ಎಂಬ ನಂಬಿಕೆಯಿದೆ.
ಹಾವೇರಿಯಲ್ಲಿ ಶತಮಾನದ ಜಾತ್ರೆ ಭಾಗ-1: ಉ-ಕ ಹೆಬ್ಬಾಗಿಲಿನಲ್ಲಿ ರೊಟ್ಟಿ ಮಾಡಲ್ಲ ಮಂದಿ!
115 ವರ್ಷಗಳ ನಂತರ ಹಾವೇರಿ ನಗರ ದೇವತೆ ದ್ಯಾಮವ್ವ ದೇವಿ ಜಾತ್ರೆಗೆ ಯಾಲಕ್ಕಿ ನಗರಿ ಸಜ್ಜುಗೊಂಡಿದೆ. ಒಂದು ವಾರಗಳ ಕಾಲ ನಡೆಯುವ ಜಾತ್ರೆಯಲ್ಲಿ ಪ್ರತಿದಿನವೂ ಒಂದೊಂದು ವಿಶೇಷ ಆಚರಣೆಗಳಿವೆ. ಈ ಜಾತ್ರೆ ವಿಶೇಷಗಳನ್ನು ಸರಣಿ ಅಂಗಣಗಳ ಮೂಲಕ ಹಾವೇರಿ ಅಷ್ಟೇ ಅಲ್ಲದೇ ಇಡೀ ರಾಜ್ಯದ ಜನರಿಗೆ ತಿಳಿಸುವ ಉದ್ದೇಶದಿಂದ ಒನ್ ಇಂಡಿಯಾ ಸರಣಿ ಅಂಕಣಗಳನ್ನು ಪ್ರಕಟಿಸುತ್ತಿದೆ. ಅವುಗಳ ಬಗ್ಗೆ ತಿಳಿಯುವ ಮೊದಲು ದ್ಯಾಮವ್ವ ದೇವಿ ದೇವಸ್ಥಾನದ ಹಿನ್ನೆಲೆಯನ್ನು ತಿಳಿದುಕೊಳ್ಳೋಣ.
ಮಾರಕ ಪ್ಲೇಗ್ ರೋಗದಿಂದ ಮಂದಿ ಹೈರಾಣ
ಸುಮಾರು 1900ನೇ ಇಸವಿಯಲ್ಲಿ ದೇಶ-ವಿದೇಶಗಳಲ್ಲೂ ಮರಣ ಮೃದಂಗವನ್ನು ಬಾರಿಸಿದ್ದ ಮಾರಕ ರೋಗ ಹಾವೇರಿಗೂ ಲಗ್ಗೆ ಇಟ್ಟಿತ್ತು. ಮೃತ್ಯುದೇವತೆಯ ರೌದ್ರನರ್ತನಕ್ಕೆ ಜನರೆಲ್ಲ ಕಂಗಾಲಾಗಿದ್ದರು. ಪ್ಲೇಗ್ ರೋಗದಿಂದ ಮನೆಯಲ್ಲಿ ಇಲಿಗಳೆಲ್ಲ ಸತ್ತು ಬೀಳುತ್ತಿದ್ದವು. ಮೂಶಿಕಗಳ ಬೆನ್ನಲ್ಲೇ ಜನರ ಸಾವಿನ ಸರಣಿ ಶುರುವಾಗಿತ್ತು. ಸಾವಿನ ಭಯದಲ್ಲೇ ದಿನ ಕಳೆಯುವಂತಾ ಪರಿಸ್ಥಿತಿ ಹಾವೇರಿ ನಗರದ ಮಂದಿಯನ್ನೂ ಕಾಡತೊಡಗಿತು.
ಮೃತ್ಯದೇವತೆ ಕೋಪ ತಣಿಸಲು ಶಕ್ತಿದೇವತೆ ಮೊರೆ
ಹಾವೇರಿಯಲ್ಲಿ ಪ್ಲೇಗ್ ಮಾರಕ ರೋಗದಿಂದ ಒಂದು ಕಡೆ ಆತಂಕ ಹೆಚ್ಚುತ್ತಿದ್ದಂತೆ ಊರಿನ ಜನರೆಲ್ಲ ಶಕ್ತಿದೇವತೆಗೆ ಮೊರೆಯಿಟ್ಟರು. ಅಂದು ಊರಿನ ಹೊರಭಾಗದಲ್ಲಿ ಇತ್ತು ಎನ್ನಲಾದ ದೇವಸ್ಥಾನಕ್ಕೆ ಜನರೆಲ್ಲ ಹರಿದು ಬಂದರು. ಮೃತ್ಯದೇವತೆಯ ಕೋಪ ತಣಿಸುವಂತೆ ದ್ಯಾಮವ್ವ ದೇವಿಗೆ ಹರಕೆ ಹೊತ್ತುಕೊಂಡರು. ಊರಿನಲ್ಲಿ ಮಳೆ-ಬೆಳೆಗಾಗಿ ದ್ಯಾಮವ್ವ ದೇವಿಯಲ್ಲಿ ಮೊರೆ ಇಟ್ಟರು.
ಶಕ್ತಿದೇವತೆ ಸನ್ನಿಧಾನದಲ್ಲಿ ಚಂಡಿಕಾ ಹೋಮ
ನಗರದಲ್ಲಿ ಎದುರಾಗಿದ್ದ ಭೀರಕ ಬರ, ಮಾರಕ ರೋಗದಿಂದ ವಿಮುಕ್ತಿ ನೀಡುವಂತೆ ದ್ಯಾಮವ್ವ ದೇವಿ ಸನ್ನಿಧಾನದಲ್ಲಿ ಚಂಡಿಕಾ ಯಾಗವನ್ನು ನೆರವೇರಿಸಲಾಯಿತು. ನಗರದ ಜನರೆಲ್ಲ ಸೇರಿಕೊಂಡು ಭಕ್ತಿಭಾವಗಳಿಂದ ಚಂಡಿಕಾ ಯಾಗದಲ್ಲಿ ಭಾಗವಹಿಸಿದ್ದರು.
ದೀಪಸ್ತಂಭ ನೀಡಿ ಹರಕೆ ತೀರಿಸಿದ ಭಕ್ತರು
ನಗರ ದೇವತೆಯಾಗಿ ಜನರ ಮೊರೆಗೆ ದೇವಿ ಓಕೊಟ್ಟಳು, ಮಾರಕರೋಗದ ಭೀತಿ ಮರೆಯಾಯಿತು. ಒಂದೇ ವರ್ಷದಲ್ಲಿ ಹಾವೇರಿಯನ್ನು ಆವರಿಸಿಕೊಂಡಿದ್ದ ಭೀಕರ ಬರ ಕ್ರಮೇಣ ಮರೆಯಾಯಿತು. ಇದರಿಂದಾಗಿ 1900ನೇ ಇಸವಿಯಲ್ಲಿ ಭಕ್ತರು ಹೊತ್ತ ಹರಕೆಯಂತೆ ದೇವಿಗೆ ದೀಪಸ್ತಂಭವನ್ನು ನೀಡಿದರು.
ನಗರ ದೇವತೆಯ ಸನ್ನಿಧಾನಕ್ಕೆ ಬಂತು ಹೊಸ ಮೆರಗು
ದ್ವಾಮವ್ವದೇವಿ ಸನ್ನಿಧಾನವನ್ನು ಹಲವು ವೈಶಿಷ್ಟಗಳನ್ನು ಹೊಂದಿದೆ. ಶತಮಾನಗಳ ಹಿಂದೆಯಿದ್ದ ದೇಗುಲದ ಚಿತ್ರಣವೇ ಬೇರೆ. ಇಂದು ನಗರದಲ್ಲಿ ಇರುವ ದೇವಸ್ಥಾನದ ಚಿತ್ರಣವೇ ಬೇರೆಯಾಗಿದೆ. ನಗರವನ್ನು ಕಾಪಾಡಿದ ದೇವಸ್ಥಾನಕ್ಕೆ ಹೊಸ ರೂಪ ಬಂದಿದ್ದು ಯಾವಾಗ, 115 ವರ್ಷಗಳ ಜಾತ್ರೆ 2020ರಲ್ಲಿ ನಡೆಯುತ್ತಿದೆ. ಹಾಗಾದರೆ ದೇವಿಯ ಸನ್ನಿಧಾನದಲ್ಲಿ ನಡೆದ ಮೊದಲ ಆಚರಣೆ ಯಾವುದು. ಅದರ ವಿಜೃಂಭಣೆ ಹೇಗಿತ್ತು ಈ ಬಗ್ಗೆ ಮುಂದಿನ ಭಾಗದಲ್ಲಿ ವಿವರವಾಗಿ ತಿಳಿಸಲಾಗುತ್ತದೆ.
( ಮಾಹಿತಿ: ಅಶೋಕ್ ಮುದಗಲ್, ಸೇವಾ ಸಮಿತಿ ಕಾರ್ಯದರ್ಶಿ)