ಹಾವೇರಿ ಶಾಸಕ ನೆಹರು ಓಲೇಕಾರ್ ಮೊಮ್ಮಕ್ಕಳು ಆತ್ಮಹತ್ಯೆಗೆ ಶರಣು
ಹಾವೇರಿ, ನವೆಂಬರ್ 27: ಹಾವೇರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ನೆಹರು ಓಲೇಕಾರ್ರವರ ಇಬ್ಬರು ಮೊಮ್ಮಕ್ಕಳು ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಬ್ಯಾಡಗಿ ಪಟ್ಟಣದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.
ಮೃತರನ್ನು ಬ್ಯಾಡಗಿಯ ವಿನಾಯಕ ನಗರ ನಿವಾಸಿಗಳಾದ ನಾಗರಾಜ ಚಂದ್ರು ಛಲವಾದಿ (16) ಹಾಗೂ ಭಾಗ್ಯಲಕ್ಷ್ಮೀ ಚಂದ್ರು ಛಲವಾದಿ (18) ಆತ್ಯಹತ್ಯೆಗೆ ಶರಣಾದ ದುರ್ದೈವಿಗಳು.
ಸರಿಯಾಗಿ ಶಾಲೆಗೆ ಹೋಗು, ಅವರಿವರ ಜೊತೆ ತಿರುಗಾಡಬೇಡ ಎಂದು ಬುದ್ಧಿವಾದ ಹೇಳಿದ ತಂದೆಯ ಮಾತಿನಿಂದ ಕೋಪಗೊಂಡು ನಾಗರಾಜ ನೇಣಿಗೆ ಶರಣಾಗಿದ್ದಾನೆ. ಇದರ ಬೆನ್ನಲ್ಲೇ ತಮ್ಮನ ಸಾವಿನ ಸುದ್ದಿ ತಿಳಿದು ಅಕ್ಕ ಭಾಗ್ಯಲಕ್ಷ್ಮೀ ಸಹ ಅದೇ ನೇಣಿಗೆ ಕೊರಳೊಡ್ಡಿದ್ದಾಳೆ.
ನಾಗರಾಜ ಛಲವಾದಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಎಸ್ಎಸ್ಎಲ್ಸಿಯಲ್ಲಿ ವಿಷಯ ಕಠಿಣವಿರುತ್ತದೆ. ಸರಿಯಾಗಿ ಶಾಲೆಗೆ ಹೋಗು ಅವರಿವರ ಜೊತೆ ತಿರುಗಾಡಬೇಡ. ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ತಂದೆ ಚಂದ್ರು ಬುದ್ಧಿವಾದ ಹೇಳಿದ್ದರು.
ಇದನ್ನು ಅವಮಾನ ಎಂದು ಮನಸ್ಸಿಗೆ ಹಚ್ಚಿಕೊಂಡ ನಾಗರಾಜ ಛಲವಾದಿ ಬೆಳಗಿವ ಜಾವ ಸೀರೆ ಬಳಸಿಕೊಂಡು ನೇಣು ಹಾಕಿಕೊಂಡಿದ್ದಾನೆ. ಸುದ್ದಿ ತಿಳಿದು ಕೂಡಲೇ ಬ್ಯಾಡಗಿ ತಾಲೂಕಾಸ್ಪತ್ರೆಗೆ ದಾಖಲಿಸಿದರೂ ನಾಗರಾಜನನ್ನು ಉಳಿಸಿಕೊಳ್ಳಲಾಗಲಿಲ್ಲ ಎನ್ನಲಾಗಿದೆ.
ತಮ್ಮನ ಸಾವಿನ ಸುದ್ದಿ ತಿಳಿದು ಕಾಲೇಜಿನಿಂದ ತಾಲೂಕಾಸ್ಪತ್ರೆಗೆ ಓಡೋಡಿ ಬಂದ ಅಕ್ಕ ಭಾಗ್ಯಲಕ್ಷ್ಮೀ ಛಲವಾದಿ ತಮ್ಮನ ಮುಖ ನೋಡಿ ದುಃಖಿತಳಾಗಿದ್ದಾಳೆ. ಸಾವಿನ ಶಾಕ್ನಿಂದ ಹೊರಬರಲಾರದೇ ಎಲ್ಲರೂ ಆಸ್ಪತ್ರೆಯಲ್ಲಿರುವ ಸಮಯದಲ್ಲಿಯೇ ಮನೆಗೆ ತೆರಳಿ ಅದೇ ಸೀರೆಗೆ ನೇಣು ಹಾಕಿಕೊಂಡಿದ್ದು, ಅವಳು ಸಹ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.
ಮಕ್ಕಳ ಶವದೆದುರು ಪೋಷಕರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಒಂದೇ ದಿನ ಇಬ್ಬರು ಮಕ್ಕಳನ್ನು ಕಳೆದುಕೊಂಡ ತಂದೆ, ತಾಯಿ ರೋಧಿಸುತ್ತಿದ್ದ ದೃಶ್ಯ ಮನ ಕಲಕುವಂತಿತ್ತು. ಈ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಸಲಾಗಿದೆ.
ಅಕ್ಕ, ತಮ್ಮ ಇಬ್ಬರೂ ನೇಣಿಗೆ ಶರಣಾದ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಮೃತ ಮಕ್ಕಳ ಪಾಲಕರಿಗೆ ಸಾಂತ್ವನ ಹೇಳಿದರು. ಈ ಮಕ್ಕಳ ಆತ್ಮಹತ್ಯೆಯಿಂದ ಹಾವೇರಿ ಜಿಲ್ಲೆಯ ಜನತೆ ದಿಗ್ಭ್ರಮೆಗೊಂಡಿದ್ದು, ಆತುರದ ನಿರ್ಧಾರ ತೆಗೆದುಕೊಳ್ಳಬಾರದಿತ್ತು ಎಂದಿದ್ದಾರೆ.
ಮಕ್ಕಳ ಭವಿಷ್ಯಕ್ಕಾಗಿ ಹಗಲಿರುಳು ಶ್ರಮಿಸುವ ತಂದೆ, ತಾಯಿಗೆ ಬುದ್ಧಿ ಹೇಳುವ ಹಕ್ಕಿದೆ. ತಂದೆ, ತಾಯಿಯ ಮಾತನ್ನೇ ವೇದವಾಕ್ಯ ಎಂದು ಪಾಲಿಸಿದಂತಹ ಮಹನೀಯರ ದೇಶವಿದು. ಅಂತಹದರಲ್ಲಿ ಕೇವಲ ತಂದೆ ಬೈದರು ಎಂಬ ಕಾರಣಕ್ಕೆ ಮಕ್ಕಳು ನೇಣು ಹಾಕಿಕೊಂಡಿದ್ದು ದುರುದೃಷ್ಟಕರ ಸಂಗತಿ ಎಂದು ಬ್ಯಾಡಗಿ ಮಾಜಿ ಶಾಸಕ ಸುರೇಶಗೌಡ ಪಾಟೀಲ ತಿಳಿಸಿದ್ದಾರೆ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777