ಹಾವೇರಿ ಜಿಲ್ಲೆಗೆ ಸಿಗುತ್ತಾ ಮೂರು ಸಚಿವ ಸ್ಥಾನ..?
ಹಾವೇರಿ, ಡಿಸೆಂಬರ್ 11: ಉಪ ಚುನಾವಣೆಯಲ್ಲಿ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ಮತ್ತು ಹಿರೇಕೆರೂರು ಕ್ಷೇತ್ರದಲ್ಲಿ ಬಿಜೆಪಿ ಭರ್ಜರಿ ಜಯಗಳಿಸುತ್ತಿದ್ದಂತೆ ಜಿಲ್ಲೆಗೆ ಮೂರು ಸಚಿವ ಸ್ಥಾನ ಸಿಗುವ ನಿರೀಕ್ಷೆ ಗರಿಗೆದರಿದೆ.
ಉಪ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸುವುದರೊಂದಿಗೆ ಬಿ.ಸಿ.ಪಾಟೀಲ್ ಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗುವುದು ಪಕ್ಕಾ ಆಗಿದೆ. ಇವರ ಜೊತೆಗೆ ರಾಣೇಬೆನ್ನೂರು ಶಾಸಕರಾಗಿ ಅನರ್ಹಗೊಂಡಿರುವ ಆರ್.ಶಂಕರ್ ಅವರನ್ನು ಎಂಎಲ್ಸಿ ಮಾಡಿ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ಈಗಾಗಲೇ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ರಾಣೇಬೆನ್ನೂರಲ್ಲಿ 'ಅರುಣೋ'ದಯ, ಕೋಳಿವಾಡಗೆ ಸೋಲು
ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಮಾತಿನಂತೆ ನಡೆದುಕೊಂಡರೆ ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಹಿರೇಕೆರೂರಿನ ಬಿ.ಸಿ.ಪಾಟೀಲ್, ರಾಣೇಬೆನ್ನೂರಿನ ಮಾಜಿ ಶಾಸಕ ಆರ್.ಶಂಕರ್ ಅವರಿಗೆ ಸ್ಥಾನ ಸಿಗಲಿದೆ. ಈಗಾಗಲೇ ಶಿಗ್ಗಾವಿ ಶಾಸಕ ಬಸವರಾಜ ಬೊಮ್ಮಾಯಿ ಗೃಹ ಸಚಿವರಾಗಿದ್ದಾರೆ. ಇನ್ನಿಬ್ಬರಿಗೆ ಸಚಿವ ಸ್ಥಾನ ಸಿಕ್ಕರೆ ಹಾವೇರಿ ಜಿಲ್ಲೆಯ ಮೂವರು ಸಚಿವರಾಗಲಿದ್ದಾರೆ.
ಬಿ.ಸಿ.ಪಾಟೀಲ್, ಆರ್.ಶಂಕರ್ ಸಂಪುಟ ಸೇರಲು ರೆಡಿ
ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲ ಹಾವೇರಿ ಜಿಲ್ಲೆಗೆ ಸಚಿವ ಸ್ಥಾನದ ವಿಚಾರದಲ್ಲಿ ಶುಭ ಸುದ್ದಿ ಇರುತ್ತದೆ. ಈ ಹಿಂದೆ 2008 ರಲ್ಲಿ ಹಾವೇರಿ ಜಿಲ್ಲೆಯಿಂದ ಇಬ್ಬರು ಮಂತ್ರಿಗಿರಿ ಪಡೆದಿದ್ದರು. ಬಸವರಾಜ ಬೊಮ್ಮಾಯಿ ಮತ್ತು ಸಿ.ಎಂ.ಉದಾಸಿ ಸಚಿವರಾಗಿದ್ದರು. ಅದೇ ರೀತಿ 2013 ರಲ್ಲಿ ಕಾಂಗ್ರೆಸ್ ಅಧಿಕಾರವಧಿಯಲ್ಲಿ ಮೊದಲು ಸಚಿವ ಸ್ಥಾನ ಸಿಕ್ಕಿದ್ದಿಲ್ಲ. ನಂತರ ಮನೋಹರ್ ತಹಶೀಲ್ದಾರ್ ಅವರನ್ನು ಸೇರಿಸಿಕೊಳ್ಳಲಾಯಿತು. ಅವರಿಂದ ಕಸಿದುಕೊಂಡು ರುದ್ರಪ್ಪ ಲಮಾಣಿಗೆ ನೀಡಲಾಗಿತ್ತು.
ನಂತರ ಬಂದ ಮೈತ್ರಿ ಸರ್ಕಾರದಲ್ಲಿ ಹಾವೇರಿ ಜಿಲ್ಲೆಯನ್ನು ಕಡೆಗಣಿಸಲಾಗಿತ್ತು. ಕಾಂಗ್ರೆಸ್ ನಿಂದ ಗೆದ್ದಿದ್ದ ಒಬ್ಬರೇ ಶಾಸಕ ಎಂದರೆ ಅದು ಬಿ.ಸಿ.ಪಾಟೀಲ್. ಸಚಿವ ಸ್ಥಾನ ಸಿಗದ ಕಾರಣ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತಾಯಿತು. ರಾಣೇಬೆನ್ನೂರು ಶಾಸಕ ಆರ್.ಶಂಕರ್ ಅವರಿಗೆ ಸಚಿವ ಸ್ಥಾನ ಕೊಟ್ಟಿದ್ದರೂ, ಅವರು ರಾಜೀನಾಮೆ ನೀಡಿ ಮೈತ್ರಿ ಸರ್ಕಾರ ಉರುಳಲು ಕಾರಣರಾದರು.
ಕಾಂಗ್ರೆಸ್ ಮುಕ್ತ ಹಾವೇರಿ ಜಿಲ್ಲೆ
ಇದರಿಂದ ಹಾವೇರಿ ಕಾಂಗ್ರೆಸ್ ಮುಕ್ತ ಜಿಲ್ಲೆಯಾಯಿತು. ಜುಲೈನಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಬಸವರಾಜ ಬೊಮ್ಮಾಯಿ ಸಚಿರಾದರು. ಉಪ ಚುನಾವಣೆಯಲ್ಲಿ ಎರಡೂ ಸ್ಥಾನಗಳನ್ನು ಗೆಲ್ಲುವುದರ ಮೂಲಕ ಬಿಜೆಪಿ ಹಾವೇರಿ ಜಿಲ್ಲೆಯನ್ನು ಕ್ಲೀನ್ ಸ್ವೀಪ್ ಮಾಡಿದೆ. ಈಗ ಸಚಿವ ಸಂಪುಟ ವಿಸ್ತರಣೆಯಾದರೆ ಮತ್ತೆ ಇಬ್ಬರಿಗೆ ಸಚಿವ ಸ್ಥಾನ ಸಿಗುವ ಲಕ್ಷಣಗಳು ಗೋಚರಿಸಿವೆ.
ಮೂರು ಜನ ಮಂತ್ರಿಯಾದರೆ ಜಿಲ್ಲೆಯ ಉಸ್ತುವಾರಿ ಯಾರಿಗೆ ಕೊಡುತ್ತಾರೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಈಗಾಗಲೇ ಹಿರಿಯ ಶಾಸಕರಾಗಿರುವ ಬಸವರಾಜ ಬೊಮ್ಮಾಯಿ ಅವರಿಗೆ ನೀಡಲಾಗಿದೆ. ಬಿ.ಸಿ.ಪಾಟೀಲ್ ಕೂಡಾ ಜಿಲ್ಲಾ ಉಸ್ತುವಾರಿ ಮೇಲೆ ಕಣ್ಣಿಟ್ಟಿದ್ದಾರೆ. ಸಿಎಂ ಯಡಿಯೂರಪ್ಪ ಅವರು ಯಾರಿಗೆ ಕೃಪೆ ತೋರಲಿದ್ದಾರೆ ನೋಡಬೇಕು.
ಸಚಿವ ಸ್ಥಾನ ಆಕಾಂಕ್ಷಿಗಳಿಂದ ಸಿಎಂ ಭೇಟಿ: ಗರಿಗೆದರಿದ ರಾಜ್ಯ ರಾಜಕೀಯ
ಮೂರು ಪಕ್ಷಗಳಿಂದ ಸ್ಪರ್ಧಿಸಿ ಗೆದ್ದ ಪಾಟೀಲ್
ಈ ಹಿಂದೆ ಪೊಲೀಸ್ ಅಧಿಕಾರಿಯಾಗಿದ್ದ ಬಿ.ಸಿ.ಪಾಟೀಲ್ ಸ್ವಯಂ ನಿವೃತ್ತಿ ತೆಗೆದುಕೊಂಡು ಚಿತ್ರರಂಗ ಪ್ರವೇಶಿಸಿದ್ದರು. ಮತ್ತೆ ಅಲ್ಲಿಂದ ರಾಜಕೀಯದ ಬಗ್ಗೆ ಒಲವು ಬೆಳೆಸಿಕೊಂಡ ಬಿ.ಸಿ.ಪಾಟೀಲ್ ರಾಜಕಾರಣದತ್ತ ಮುಖ ಮಾಡಿದರು. ಒಂದು ಬಾರಿ ಜೆಡಿಎಸ್, ಎರಡು ಬಾರಿ ಕಾಂಗ್ರೆಸ್ ಮತ್ತು ಈಗ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಜಯಗಳಿಸಿರುವ ಬಿ.ಸಿ.ಪಾಟೀಲ್ ಮೂರು ಪಕ್ಷಗಳಿಂದ ಗೆದ್ದ ಹಿರಿಮೆ ಅವರಿಗಿದೆ.
ಬಿ.ಸಿ.ಪಾಟೀಲ್ ಇಲ್ಲಿಯವರೆಗೂ ತಮ್ಮ ವೈಯಕ್ತಿಕ ವರ್ಚಸ್ಸಿನ ಮೇಲೆ ಗೆದ್ದು ಬಂದಿದ್ದಾರೆ. 2004 ರಲ್ಲಿ ಜೆಡಿಎಸ್ ನಿಂದ ಚುನಾಯಿತರಾಗಿದ್ದರು, 2008 ರಲ್ಲಿ ಕಾಂಗ್ರೆಸ್ ಪಕ್ಷ ಸೇರಿ ಅವಾಗಲೂ ಗೆದ್ದರು. 2013 ರಲ್ಲಿ ಕೆಜೆಪಿ ಯಿಂದ ಸ್ಪರ್ಧಿಸಿದ್ದ ಯು.ಬಿ.ಬಣಕಾರ ಅವರ ವಿರುದ್ದ ಸೋತರು. ನಂತರ 2018 ರಲ್ಲಿ ಮತ್ತೆ ಕಾಂಗ್ರೆಸ್ ನಿಂದ ಗೆದ್ದರು. ಈಗ ಬಿಜೆಪಿಯಿಂದ ಗೆದ್ದು ನಾಲ್ಕನೆಯ ಬಾರಿಗೆ ಶಾಸಕರಾಗಿದ್ದಾರೆ.
ರಾಣೇಬೆನ್ನೂರು ಸಹವಾಸ ಬಿಡುತ್ತಾರಾ ಆರ್,ಶಂಕರ್
ತಮ್ಮ 15 ವರ್ಷಗಳ ರಾಜಕೀಯ ಜೀವನದಲ್ಲಿ ಮೂರು ಪಕ್ಷಗಳನ್ನು ಸುತ್ತಿ ಬಂದಿರುವ ಬಿ.ಸಿ.ಪಾಟೀಲ್ ಮೂರು ಪಕ್ಷಗಳಿಂದಲೂ ಚುನಾಯಿತರಾಗಿದ್ದಾರೆ. ಈಗ ಸಚಿವ ಸಂಪುಟ ಸೇರಿದರೆ ಮಹತ್ದ ಖಾತೆ ಪಡೆಯುವುದು ಅವರ ಉದ್ದೇಶವಾಗಿದೆ. ಗೃಹ ಖಾತೆಯ ಮೇಲೆ ಅವರಿಗೆ ಆಸೆಯಿದೆ. ಜೊತೆಗೆ ಹಾವೇರಿ ಜಿಲ್ಲೆಯ ಉಸ್ತುವಾರಿಯನ್ನು ಕೇಳಿದ್ದಾರೆ.
ಇನ್ನು ರಾಣೇಬೆನ್ನೂರು ಮಾಜಿ ಶಾಸಕ ಆರ್.ಶಂಕರ್ ಅವರೂ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಿದ್ದಾರೆ. ಈ ಹಿಂದೆ ಸಚಿವರಾಗಿದ್ದಾಗ ಜನರ ಸಮಸ್ಯೆಗೆ ಸ್ಪಂದಿಸಲಿಲ್ಲ ಎಂದು ಜನರಿಂದ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಅವರಿಗೆ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡಲಿಲ್ಲ. ನಿಮ್ಮನ್ನು ಎಂಎಲ್ಸಿ ಮಾಡಿ ಮಂತ್ರಿ ಮಾಡುತ್ತೇವೆ ಎಂದು ಹೇಳಿ ಸಮಾಧಾನ ಪಡಿಸಿದ್ದರು. ಮುಂದಿನ ಬಾರಿಯೂ ಅವರಿಗೆ ಪಕ್ಷದ ಟಿಕೆಟ್ ಸಿಗುವುದು ಕಷ್ಟ. ಹೀಗಾಗಿ ಅವರು ತಮ್ಮ ಮೂಲ ಬೆಂಗಳೂರಿಗೆ ಹಿಂದಿರುಗಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.