ಹಾನಗಲ್: ಬಹಿರಂಗ ಪ್ರಚಾರದ ಕೊನೆಯ ದಿನ ಬಿಜೆಪಿಗೆ ಭಾರೀ ಹಿನ್ನಡೆ
ಅಭಿವೃದ್ದಿ, ಜನಪರ ವಿಚಾರವನ್ನು ಬಿಟ್ಟು, ವೈಯಕ್ತಿಕ ಆರೋಪ/ಪ್ರತ್ಯಾರೋಪಕ್ಕೆ ಬಹುತೇಕ ಸೀಮಿತವಾದಂತಹ ಸಿಂಧಗಿ ಮತ್ತು ಹಾನಗಲ್ ಕ್ಷೇತ್ರದ ಉಪ ಚುನಾವಣೆಯ ಬಹಿರಂಗ ಪ್ರಚಾರ ಬುಧವಾರ (ಅ 27) ಮುಕ್ತಾಯಗೊಂಡಿದೆ. ಅಕ್ಟೋಬರ್ ಮೂವತ್ತರಂದು ಚುನಾವಣೆ ನಡೆಯಲಿದ್ದು, ನವೆಂಬರ್ ಎರಡರಂದು ಮತಎಣಿಕೆ ನಡೆಯಲಿದೆ.
ಎರಡು ಕ್ಷೇತ್ರಕ್ಕೆ ಹೋಲಿಸಿದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಹಾನಗಲ್ ಕ್ಷೇತ್ರದ ಫಲಿತಾಂಶ ಬಹುಮುಖ್ಯವಾದದ್ದು. ಈ ಕ್ಷೇತ್ರ ಅವರ ತವರು ಹಾವೇರಿ ಜಿಲ್ಲೆಯ ವ್ಯಾಪ್ತಿಗೆ ಬರುವುದು ಒಂದು ಕಡೆಯಾದರೆ, ಬಿಜೆಪಿ ಗೆದ್ದಿದ್ದ ಕ್ಷೇತ್ರವನ್ನು ಉಳಿಸಿಕೊಳ್ಳಬೇಕಾಗಿರುವ ಅನಿವಾರ್ಯತೆ ಇನ್ನೊಂದು ಕಡೆ.
ಉಪ ಚುನಾವಣೆ: ಬಿಜೆಪಿ - ಜೆಡಿಎಸ್ ನಡುವೆ ಒಂದಂತೂ ಸತ್ಯ?
ಹಾನಗಲ್ ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಏರ್ಪಡಲಿದೆ. ಜೆಡಿಎಸ್ಸಿಗೆ ಬೀಳುವ ಮತಗಳಿಂದ ಬಿಜೆಪಿಗೆ ಅನುಕೂಲವಾಗಲಿದೆ ಎಂದೇ ವ್ಯಾಖಾನಿಸಲಾಗುತ್ತಿದೆ. ಅದರಂತೇ, ದಳಪತಿಗಳು ಕಾಟಾಚಾರಕ್ಕೆ ಇಲ್ಲಿ ಬಂದು ಪ್ರಚಾರ ಮಾಡಿ ಹೋಗಿದ್ದಾರೆ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಕೂಡಾ ಪ್ರಚಾರದಲ್ಲಿ ಹಿಂದೆ ಬಂದಿಲ್ಲ. ಪಕ್ಷದ ಮುಖಂಡರ ದಂಡೇ ಪ್ರಚಾರದಲ್ಲಿ ತೊಡಗಿಸಿಕೊಂಡಿತ್ತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮಾವ (ಪತ್ನಿಯ ತಂದೆ) ನಿಧನರಾದ ಹಿನ್ನಲೆಯಲ್ಲಿ ಕೊನೆಯ ದಿನದ ಪ್ರಚಾರದಲ್ಲಿ ಅವರು ಭಾಗವಹಿಸಲಿಲ್ಲ. ಬಹಿರಂಗ ಪ್ರಚಾರದ ಕೊನೆಯ ದಿನ, ಬಿಜೆಪಿಗೆ ಹಿನ್ನಡೆಯಾಗುವ ವಿದ್ಯಮಾನವೊಂದು ನಡೆದಿದೆ.
ಒಳ ಹೊಡೆತದ ಭಯ: ಬಿಜೆಪಿಗೆ ಯಡಿಯೂರಪ್ಪ - ವಿಜಯೇಂದ್ರನೇ ಆಸರೆ
ಕಮಲದ ಅಭ್ಯರ್ಥಿ ಶಿವರಾಜ್ ಸಜ್ಜನರ್ ಸಹೋದರ ಕಾಂಗ್ರೆಸ್ ಸಭೆಯಲ್ಲಿ
ಹಾನಗಲ್ ನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಬಿಜೆಪಿ ಮತ್ತು ಕ್ಷೇತ್ರದ ಕಮಲದ ಅಭ್ಯರ್ಥಿ ಶಿವರಾಜ್ ಸಜ್ಜನರ್ ವಿರುದ್ದ ವಾಗ್ದಾಳಿ ನಡೆಸುತ್ತಿದ್ದರು. ಆ ಸಭೆಯಲ್ಲಿ ಶಿವರಾಜ್ ಸಜ್ಜನರ್ ಅವರ ಸಹೋದರ ಭಾಗವಹಿಸುವ ಮೂಲಕ ಬಿಜೆಪಿಗೆ ಇರಿಸುಮುರಿಸು ಉಂಟುಮಾಡಿದ್ದಾರೆ. "ಸಜ್ಜನರ್ ಅವರ ಸಹೋದರನೇ ಆ ಪಕ್ಷ ಬಿಟ್ಟು ಬಂದಿದ್ದಾನೆ, ಇನ್ನು ನೀವು ಬಿಜೆಪಿಗೆ ಮತ ಹಾಕುತ್ತೀರಾ" ಎಂದು ಮತದಾರರಲ್ಲಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ನುಂಗಿ ನೀರು ಕುಡಿದಂತಹ ವ್ಯಕ್ತಿ ಶಿವರಾಜ್ ಸಜ್ಜನರ್ ಒಬ್ಬ ದುರ್ಜನ
"ಈ ಭಾಗದಲ್ಲಿರುವ ಸಕ್ಕರೆ ಕಾರ್ಖಾನೆಯನ್ನು ಮುಚ್ಚಿಸಿ, ನುಂಗಿ ನೀರು ಕುಡಿದಂತಹ ವ್ಯಕ್ತಿ ಶಿವರಾಜ್ ಸಜ್ಜನರ್. ನಾನು ಈ ಮಾತನ್ನು ಹೇಳುತ್ತಿಲ್ಲ, ವೇದಿಕೆಯಲ್ಲಿ ಅವರ ಸಹೋದರ ಕೂಡಾ ಇದ್ದಾನೆ. ಅವರ ಒಡಹುಟ್ಟಿದ ತಮ್ಮನೇ ಹೇಳುತ್ತಾರೆ, ಶಿವರಾಜ್ ಅವರು ಸಜ್ಜನ ಅಲ್ಲ, ದುರ್ಜನ ಎಂದು. ಅಂತಹ ದುರ್ಜನನಿಗೆ ವೋಟು ಹಾಕಬೇಡಿ, ನಮ್ಮ ಅಭ್ಯರ್ಥಿಯ ಪರವಾಗಿ ಮತ ಚಲಾಯಿಸಿ"ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಗೌರಾಪುರ ಗುಡ್ಡವನ್ನು ನುಂಗಿ ಹಾಕಲು ಇವರು ಹೊರಟಿದ್ದಾರೆ
ಭಾಷಣ ಮಾಡುವಾಗ ತಮ್ಮ ಬಳಿಯೇ ಬಿಜೆಪಿ ಅಭ್ಯರ್ಥಿಯ ಸಹೋದರನನ್ನು ಕರೆಸಿಕೊಂಡ ಸಿದ್ದರಾಮಯ್ಯನವರು ಶಿವರಾಜ್ ಸಜ್ಜನರ್ ವಿರುದ್ದ ವಾಗ್ದಾಳಿ ಮುಂದುವರಿಸಿದರು. ಸಜ್ಜನರ್ ಸಹೋದರ ಸಿದ್ದರಾಮಯ್ಯನವರ ಭಾಷಣ ಮುಗಿಯುವವರೆಗೆ ಕೈಮುಗಿದುಕೊಂಡು ಜನರ ಮುಂದೆ ನಿಂತಿದ್ದರು. "ಸಹೋದರನನ್ನು ಸೋಲಿಸಿ ಎಂದು ಅವರ ತಮ್ಮನೇ ಹೇಳುತ್ತಾನೆ. ಗೌರಾಪುರ ಗುಡ್ಡವನ್ನು ನುಂಗಿ ಹಾಕಲು ಇವರು ಹೊರಟಿದ್ದಾರೆ"ಎಂದು ಸಿದ್ದರಾಮಯ್ಯ ಎದುರಾಳಿ ಅಭ್ಯರ್ಥಿ ವಿರುದ್ದ ವಾಗ್ದಾಳಿ ನಡೆಸಿದರು.
ಬಸವರಾಜ ಬೊಮ್ಮಾಯಿ ಜನರಿಗೆ ಸುಳ್ಳು ಹೇಳಬೇಡ, ಧಮ್ ಬೇಕು
"ಬಸವರಾಜ ಬೊಮ್ಮಾಯಿ ಜನರಿಗೆ ಸುಳ್ಳು ಹೇಳಬೇಡ, ಅಭಿವೃದ್ದಿ ಕೆಲಸ ಮಾಡಿದ್ದರೆ, ನಿಮಗೆ ಚಾಲೆಂಜ್ ಮಾಡುತ್ತೇನೆ ಒಂದೇ ವೇದಿಕೆಯ ಮೇಲೆ ಬನ್ನಿ. ಜನರ ಮುಂದೆ ನೀವೂ ಮಾತನಾಡಿ, ನಾನೂ ಮಾತನಾಡುತ್ತೇನೆ. ನನ್ನ ಈ ಚಾಲೆಂಜ್ ಎದುರಿಸಲು ಧಮ್ ಬೇಕು. ಇವತ್ತಿನವರೆಗೂ ನನ್ನ ಸವಾಲನ್ನು ಸ್ವೀಕಾರ ಮಾಡಲು ಮುಖ್ಯಮಂತ್ರಿ ಬೊಮ್ಮಾಯಿಗೆ ಆಗಲಿಲ್ಲ"ಎಂದು ಸಿದ್ದರಾಮಯ್ಯನವರು ಸಿಎಂ ಬೊಮ್ಮಾಯಿ ವಿರುದ್ದ ಕಿಡಿಕಾರಿದರು.