ಹಾನಗಲ್; ಬಿಜೆಪಿ ಬಂಡಾಯ ಶಮನ, ನಾಮಪತ್ರ ವಾಪಸ್
ಹಾವೇರಿ, ಅಕ್ಟೋಬರ್ 13; ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿದ್ದ ಬಿಜೆಪಿ ಮುಖಂಡ ಚನ್ನಪ್ಪ ಬಳ್ಳಾರಿ ನಾಮಪತ್ರ ವಾಪಸ್ ಪಡೆದಿದ್ದಾರೆ. ಅಕ್ಟೋಬರ್ 30ರಂದು ಉಪ ಚುನಾವಣೆ ನಡೆಯಲಿದೆ.
ಬುಧವಾರ ಸಚಿವ ಮುರುಗೇಶ ನಿರಾಣಿ ಕಾರಿನಲ್ಲಿ ತಹಶೀಲ್ದಾರ್ ಕಚೇರಿಗೆ ಆಗಮಿಸಿದ ಚನ್ನಪ್ಪ ಬಳ್ಳಾರಿ ನಾಮಪತ್ರವನ್ನು ವಾಪಸ್ ಪಡೆದರು. ನಾಮಪತ್ರಗಳನ್ನು ವಾಪಸ್ ಪಡೆಯಲು ಇಂದು ಕೊನೆ ದಿನವಾಗಿತ್ತು.
ಹಾನಗಲ್ ಉಪ ಚುನಾವಣೆ; ಬಿಜೆಪಿ ಬಂಡಾಯಕ್ಕೆ ಬುಧವಾರ ತೆರೆ?
ಮಂಗಳವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಾವಣಗೆರೆಯ ಜಿಎಂಐಟಿಯಲ್ಲಿ ಚನ್ನಪ್ಪ ಬಳ್ಳಾರಿ ಜೊತೆ ಸಭೆ ನಡೆಸಿದ್ದರು. ನಾಮಪತ್ರ ವಾಪಸ್ ಪಡೆಯುವಂತೆ ಮನವೊಲಿಕೆ ಮಾಡಿದ್ದರು. ಆದರೆ ಬುಧವಾರ ತೀರ್ಮಾನ ಕೈಗೊಳ್ಳುವೆ ಎಂದು ಅವರು ಹೇಳಿದ್ದರು.
ಸಿಂಧಗಿ ಉಪ ಚುನಾವಣೆ ಚಿತ್ರಣ ಬದಲಿಸಿದ ಜೆಡಿಎಸ್!
ಹಾನಗಲ್ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ. ಉಪ ಚುನಾವಣೆ ಟಿಕೆಟ್ ಆಕಾಂಕ್ಷಿಯಾಗಿದ್ದ ಚನ್ನಪ್ಪ ಬಳ್ಳಾರಿ ಟಿಕೆಟ್ ಕೈ ತಪ್ಪಿದ ಬಳಿಕ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದರು. ಇದರಿಂದಾಗಿ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿತ್ತು. ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪ್ರಬಲ ಪೈಪೋಟಿ ನಡೆಯಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.
ಹಾನಗಲ್, ಸಿಂಧಗಿ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಘೊಷಣೆ
ನಾಲ್ವರ ನಾಮಪತ್ರಗಳು ವಾಪಸ್
ಹಾನಗಲ್ ಉಪ ಚುನಾವಣೆಯ ನಾಮಪತ್ರಗಳನ್ನು ವಾಪಸ್ ಪಡೆಯಲು ಬುಧವಾರ ಕೊನೆ ದಿನವಾಗಿತ್ತು. ನಾಲ್ವರು ಅಭ್ಯರ್ಥಿಗಳು ನಾಮಪತ್ರವನ್ನು ವಾಪಸ್ ಪಡೆದಿದ್ದು, ಕ್ಷೇತ್ರದ ಚುನಾವಣಾ ಚಿತ್ರಣ ಅಂತಿಮಗೊಂಡಿದೆ.
ಅಶೋಕ ಪಾಂಡಪ್ಪ ಹಣಜಿ, ಜಾಕೀರ ಹುಸೇನ ಮೌಲಾಲಿ ಅರಳಿಮರದ, ಚನ್ನಪ್ಪ ಬಳ್ಳಾರಿ, ಸಿಕಂದರ ಮೋದಿನಖಾನ ಮತ್ತಿಹಳ್ಳಿ ಬುಧವಾರ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ನಾಮಪತ್ರಗಳನ್ನು ವಾಪಸ್ ಪಡೆದಿದ್ದಾರೆ.
ಕಣದಲ್ಲಿ ಉಳಿದ ಅಭ್ಯರ್ಥಿಗಳು
ಅಕ್ಟೋಬರ್ 30ರಂದು ನಡೆಯುವ ಹಾನಗಲ್ ಕ್ಷೇತ್ರದ ಉಪ ಚುನಾವಣೆ ಚಿತ್ರಣ ಅಂತಿಮಗೊಂಡಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಮೂರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಸೇರಿ ಒಟ್ಟು 13 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ಜೆಡಿಎಸ್ನ ನಿಯಾಜ್ ಶೇಖ್, ಬಿಜೆಪಿಯ ಶಿವರಾಜ ಶರಣಪ್ಪ ಸಜ್ಜನರ, ಕಾಂಗ್ರೆಸ್ನ ಮಾನೆ ಶ್ರೀನಿವಾಸ, ಕರ್ನಾಟಕ ರಾಷ್ಟ್ರ ಸಮಿತಿಯ ಉಡಚಪ್ಪ ಬಸವಣ್ಣೇಪ್ಪ ಉದ್ದನಕಾಲ, ರೈತ ಭಾರತ ಪಕ್ಷದ ಫಕ್ಕೀರಗೌಡ ಶಂಕರಗೌಡ ಗಾಜೀಗೌಡ್ರ, ಲೋಕಶಕ್ತಿ ಪಕ್ಷದ ತಳವಾರ ಶಿವಕುಮಾರ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು.
ಮುಖ್ಯಮಂತ್ರಿಗಳ ಸಂಧಾನ ಯಶಸ್ವಿ
ಮಂಗಳವಾರ ದಾವಣಗೆರೆಯ ಜಿಎಂಐಟಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚನ್ನಪ್ಪ ಬಳ್ಳಾರಿ ಜೊತೆ ಸಂಧಾನ ಸಭೆ ನಡೆಸಿದ್ದರು. ಸಚಿವ ಬಿ. ಸಿ. ಪಾಟೀಲ್ ಸೇರಿದಂತೆ ಹಲವು ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಬಿಜೆಪಿ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ನೀವು ಕಣಕ್ಕಿಳಿದರೆ ನಮಗೆ ಕಷ್ಟವಾಗುತ್ತದೆ. ನಾನು ಮುಖ್ಯಮಂತ್ರಿಯಾದ ಬಳಿಕ ನಡೆಯುತ್ತಿರುವ ಮೊದಲ ಉಪಚುನಾವಣೆ ಆಗಿರುವುದರಿಂದ ಸಹಕರಿಸುವಂತೆ ಮನವಿ ಮಾಡಿದ್ದರು. ಮುಖ್ಯಮಂತ್ರಿಗಳ ಸಂಧಾನ ಫಲಕೊಟ್ಟಿದ್ದು, ನಾಮಪತ್ರವನ್ನು ವಾಪಸ್ ಪಡೆಯಲಾಗಿದೆ.
ಸಿ. ಎಂ. ಉದಾಸಿ ನಿಧನದ ಬಳಿಕ ಅವರ ಕುಟುಂಬ ಸದಸ್ಯರಿಗೆ ಉಪ ಚುನಾವಣೆ ಟಿಕೆಟ್ ಸಿಗಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಬಿಜೆಪಿ ಹೈಕಮಾಂಡ್ ಎಲ್ಲಾ ಲೆಕ್ಕಾಚಾರ ತಲೆಕೆಳಗು ಮಾಡಿದೆ. ಇದು ಉಪ ಚುನಾವಣೆಯಲ್ಲಿ ಪ್ರಭಾವ ಬೀರಲಿದೆಯೇ? ಕಾದು ನೋಡಬೇಕು.
Recommended Video
ಸಚಿವರಲ್ಲಿ ಗೆಲುವಿನ ವಿಶ್ವಾಸ
ಸಿ. ಎಂ. ಉದಾಸಿ ನಿಧನದಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಅದರಲ್ಲೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತವರು ಕ್ಷೇತ್ರದ ಪಕ್ಕದ ಕ್ಷೇತ್ರವಾಗಿರುವುದರಿಂದ ಹಾನಗಲ್ ಉಪ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ.
ಸಚಿವ ಬಿ. ಸಿ. ಪಾಟೀಲ್, 'ಇದೇ ತಿಂಗಳ 17ರಂದು ಹಾನಗಲ್ ಉಪಚುನಾವಣಾ ಪ್ರಚಾರಕ್ಕೆ ಬಸವರಾಜ ಬೊಮ್ಮಾಯಿ ಬರುತ್ತಾರೆ. ನಾವು ಗೆದ್ದೇ ಗೆಲ್ಲುತ್ತೇವೆ, ಇದರಲ್ಲಿ ಅನುಮಾನ ಬೇಡ. ಕಾಂಗ್ರೆಸ್ನವರು ಕೇವಲ ಪ್ರಚಾರಕ್ಕಾಗಿ ವಿನಾಕಾರಣ ಆರೋಪ ಮಾಡುತ್ತಾರೆ" ಎಂದು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.