ಮಹಿಳಾ ಮೀನುಗಾರರಿಗೆ ಶುಭ ಸುದ್ದಿ ನೀಡಲಿರುವ ರಾಜ್ಯ ಸರ್ಕಾರ
ಹಾವೇರಿ, ಫೆಬ್ರವರಿ 26: ಮಹಿಳಾ ಮೀನುಗಾರರಿಗೆ ಶುಭ ಸುದ್ದಿಯೊಂದನ್ನು ನೀಡಲು ರಾಜ್ಯ ಸರ್ಕಾರ ಸಜ್ಜಾಗಿದೆ.
ಹಾವೇರಿಯಲ್ಲಿ ಮಾತನಾಡಿರುವ ಮೀನುಗಾರಿಗೆ ಹಾಗೂ ಬಂದರು ಸಚಿವ ಕೋಟಾ ಶ್ರೀನಿವಾಸ ಪೂಜಾರಿ, 'ಮಹಿಳಾ ಮೀನುಗಾರರಿಗೆ ಪ್ರೋತ್ಸಾಹ ನೀಡಲೆಂದು ಬೈಕ್ ನೀಡುವ ಯೋಜನೆಯನ್ನು ಸರ್ಕಾರ ಪರಿಶೀಲಿಸುತ್ತಿದೆ' ಎಂದು ಹೇಳಿದ್ದಾರೆ.
ಅವಧಿಗೆ ಮುನ್ನವೇ ಎದುರಾಗಿದೆ ಮತ್ಸ್ಯಕ್ಷಾಮ; ಕಂಗಾಲಾಗಿರುವ ಕಡಲ ಮಕ್ಕಳು
ಮಹಿಳಾ ಮೀನುಗಾರರಿಗೆ ಬೈಕ್ ನೀಡುವ ಪ್ರಸ್ತಾವವನ್ನು ಸಿಎಂ ಅವರಿಗೆ ಕಳುಹಿಸಲಾಗಿದ್ದು, ಅನುಮೋದನೆ ದೊರೆಯುವ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ.
ಅಷ್ಟೆ ಅಲ್ಲದೆ, ಮೀನುಗಾರಿಕೆ ಇಲಾಖೆ 'ಮತ್ಸ್ಯದರ್ಶಿನಿ' ಯೋಜನೆಯಡಿ ರಾಜ್ಯದೆಲ್ಲೆಡೆ ಮೀನು ಹೋಟೆಲ್ ಸ್ಥಾಪನೆ ಮಾಡುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಅವರು ಹೇಳಿದರು. ಜೊತೆಗೆ ಮೀನು ಖಾದ್ಯಗಳ ವಿತರಣೆಯನ್ನೂ ಮಾಡಲಾಗುವುದು ಎಂದು ಅವರು ಹೇಳಿದರು.
ಮೀನು ಸಾಕಾಣಿಕೆ ಅಭಿವೃದ್ಧಿಗೆ ಮೀನು ಸಾಕಲು ಕೆರೆ ಇನ್ನಿತರ ಜಲಮೂಲಗಳನ್ನು ಗುತ್ತಿಗೆ ನೀಡುವ ಪದ್ಧತಿಯಲ್ಲಿ ಪಾರದರ್ಶಕತೆ ತರಲು ತೀರ್ಮಾನ ಮಾಡಲಾಗಿದ್ದು, ಜಲಮೂಲಗಳ ವಿಲೇವಾರಿಗೆ ಹೊಸ ಸೂತ್ರ ಅಳವಡಿಸಲಾಗುವುದು ಎಂದು ಹೇಳಿದರು.
ಉಡುಪಿಯಲ್ಲಿ ಮೂವತ್ತು ವರ್ಷಗಳಲ್ಲೇ ಕಂಡೂ ಕೇಳರಿಯದ ಮತ್ಸ್ಯಕ್ಷಾಮ
ಗುತ್ತಿಗೆ ನೀಡಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನ ಮಾಡಬೇಕೆ ಅಥವಾ ಪಟ್ಟಣ ಪಂಚಾಯಿತಿಗಗಳಿಗೆ ಜವಾಬ್ದಾರಿ ನೀಡಬೇಕೆ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ಸಿಇಓ ಅವರನ್ನು ಮುಖ್ಯಾಧಿಕಾರಿಗಳನ್ನಾಗಿಸಿ ಕೆರೆಗಳನ್ನು ಎ,ಬಿ,ಸಿ ಎಂದು ವರ್ಗೀಕರಣ ಮಾಡಲಾಗುವುದು. ನಂತರ ಮೀನುಗಾರರ ಸಂಘ, ಪರಿಶಿಷ್ಟ ಜಾತಿ, ವರ್ಗ, ಆರ್ಥಿಕ ಹಿಂದುಳಿದ ಸಮುದಾಯಗಳಿಗೆ ಇಷ್ಟು ಕೆರೆಗಳೆಂದು ವಿಂಗಡನೆ ಮಾಡಲಾಗುವುದು, ಕೆರೆಗಳ ವರ್ಗೀಕರಣವನ್ನು ಹಾವೇರಿ ಇಂದಲೇ ಪ್ರಾರಂಭ ಮಾಡಲಾಗುವುದು ಎಂದು ಸಚಿವರು ಹೇಳಿದರು.