ರೈತ ಪರ ಬಜೆಟ್ ಮಂಡಿಸದಿದ್ದರೆ ಚುನಾವಣೆ ಬಹಿಷ್ಕಾರ: ಎಚ್ಚರಿಕೆ
ಹಾವೇರಿ, ಜನವರಿ 30: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆಯ ಹಾವೇರಿ ಜಿಲ್ಲಾ ಘಟಕದ ವತಿಯಿಂದ ಹಾವೇರಿಯಲ್ಲಿ ಬೃಹತ್ ಮೆರವಣಿಗೆ ಮತ್ತು ರೈತ ಸಮಾವೇಶ ನಡೆಯಿತು.
ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ರೈತರು, ಪ್ರತ್ಯೇಕ ಕೃಷಿ ಬಜೆಟ್ ಮಂಡನೆಗೆ ಆಗ್ರಹಿಸಿದರು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ರೈತ ವಿರೋಧಿ ಧೋರಣೆಗಳನ್ನು ಖಂಡಿಸಿದರು.
ಫೆಬ್ರವರಿ 8ಕ್ಕೆ ರಾಜ್ಯ ಬಜೆಟ್: ನಿರೀಕ್ಷೆಗಳೇನೇನು?
ಹಾವೇರಿ ನಗರದ ಹಾನಗಲ್ಲ ರಸ್ತೆಯ ಜಾನುವಾರು ಮಾರುಕಟ್ಟೆಯಿಂದ ಪ್ರಾರಂಭವಾದ ಮೆರವಣಿಗೆ ಹೊಸಮನಿ ಸಿದ್ದಪ್ಪ ವೃತ್ತ, ಎಂಜೆ ವೃತ್ತ, ಜಿಲ್ಲಾ ಗುರುಭವನ, ಜೆಎಚ್ ಪಟೇಲ್ ವೃತ್ತದ ಮಾರ್ಗವಾಗಿ ಮುನ್ಸಿಪಲ್ ಹೈಸ್ಕೂಲ್ ಮೈದಾನ ತಲುಪಿತು.
ಮೆರವಣಿಗೆಯಲ್ಲಿ ರೈತ ಮುಖಂಡರಾದ ನಂಜುಂಡಸ್ವಾಮಿ ಮತ್ತು ಕೆಎಸ್ ಪುಟ್ಟಣ್ಣಯ್ಯ ಅವರ ಭಾವಚಿತ್ರವನ್ನು ಅಲಂಕೃತ ಸಾರೋಟಿನಲ್ಲಿ ಇರಿಸಿ ಕೊಂಡೊಯ್ಯಲಾಯಿತು.
ಲೋಕಸಭೆ ಚುನಾವಣೆ ಬಹಿಷ್ಕಾರ
ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಕೆ.ಟಿ. ಗಂಗಾಧರ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ಪರ ಬಜೆಟ್ ಮಂಡಿಸದೆ ಇದ್ದರೆ ಮುಂಬರುವ ಲೋಕಸಭೆ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ರಾಜಕೀಯದೆಡೆಗೆ ಗಮನವಿರಲಿ
ರಾಜಕಾರಣಿಗಳ ಒತ್ತಡದಿಂದ ಪೊಲೀಸರು ಮತ್ತು ಅಧಿಕಾರಿಗಳು ರೈತರ ಮೇಲೆ ಪ್ರಕರಣ ದಾಖಲು ಮಾಡುತ್ತಿದ್ದಾರೆ. ಹೀಗಾಗಿ ರೈತರು ಕೃಷಿ ಚಟುವಟಿಕೆಗಳ ಜೊತೆಗೆ ವಿಧಾನಸೌಧ ಮತ್ತು ಸಂಸತ್ ಪ್ರವೇಶಿಸುವ ಕಡೆಗೂ ಗಮನ ಹರಿಸಬೇಕು.
ರೈತರ ವಿರುದ್ಧವಾದ ಯಾವುದೇ ಮಸೂದೆ ಮಂಡನೆಯಾಗದಂತೆ ಎಚ್ಚರ ವಹಿಸಬೇಕು. ಇಬ್ಬರು ಮಕ್ಕಳಿದ್ದರೆ ಅವರಲ್ಲಿ ಒಬ್ಬರನ್ನು ರೈತ ಚಳವಳಿಗೆ ಕಳುಹಿಸಬೇಕು ಎಂದು ಕರೆ ನೀಡಿದರು.
ಬಜೆಟ್ ಪೂರ್ವಭಾವಿ ಸಭೆಯಿಂದ ದೂರ ಉಳಿದ ರೈತ ಸಂಘ, ಹಸಿರು ಸೇನೆ
|
ಆಮದಿನಿಂದಾಗಿ ಆತ್ಮಹತ್ಯೆ
ಪಚ್ಚೆ ನಂಜುಂಡಸ್ವಾಮಿ ಮಾತನಾಡಿ, ವಿದೇಶದಿಂದ ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಇದರಿಂದ ರೈತರ ಆತ್ಮಹತ್ಯೆ ಹೆಚ್ಚುತ್ತಿದೆ. ಇದನ್ನು ತಡೆಯಲು ರೈತ ಸಂಘವು 'ನನ್ನ ಬೆಳೆ ನನ್ನ ಬೆಲೆ' ಪರಿಕಲ್ಪನೆಯನ್ನು ಆರಂಭಿಸಬೇಕು ಎಂದು ಸಲಹೆ ನೀಡಿದರು.
ಸಂಪೂರ್ಣ ಸಾಲಮನ್ನಾಕ್ಕೆ ಆಗ್ರಹ
ಶಿವಕುಮಾರ ಸ್ವಾಮಿಗಳಿಗೆ ಭಾರತ ರತ್ನ ನೀಡಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಕೆರೆಗಳಿಗೆ ನೀರು ತುಂಬಿಸಬೇಕು. ಹಾವೇರಿ ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಮತ್ತು ಹಾಲು ಒಕ್ಕೂಟ ಸ್ಥಾಪಿಸಬೇಕು. ಆರು ತಿಂಗಳ ಹಾಲಿನ ಸಹಾಯಧನ ಬಿಡುಗಡೆ ಮಾಡಬೇಕು ಮುಂತಾದ ಹಕ್ಕೊತ್ತಾಯಗಳನ್ನು ಮಂಡಿಸಲಾಯಿತು.