ಹಾವೇರಿ; ಸಿಎಂ ಮನೆ ಮುಂದೆ ಪ್ರತಿಭಟನೆ, ರೈತರು ಪೊಲೀಸ್ ವಶಕ್ಕೆ
ಹಾವೇರಿ ಮೇ 18: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನೆಗೆ ಮುತ್ತಿಗೆ ಹಾಕಲು ಹೊರಟಿದ್ದ ನೂರಾರು ರೈತರನ್ನು ಪೊಲೀಸರು ವಶಕ್ಕೆ ಪಡೆದರು. ಜೋಳ ಸೇರಿದಂತೆ 20 ಕ್ಕೂ ಹೆಚ್ಚು ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸುವಂತೆ ಒತ್ತಾಯಿಸಿ ಹಾವೇರಿಯಲ್ಲಿ ರೈತರು ಮುತ್ತಿಗೆ ಹಾಕಲು ಹೊರಟಿದ್ದರು.
ರೈತ ಮುಖಂಡ ಚೂನಪ್ಪ ಪೂಜಾರಿ ಮಾತನಾಡಿ, "ರೈತರ ಸಮಸ್ಯೆಗಳ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ರೈತರು ಬೆಳೆದ ರಾಗಿ, ಜೋಳ ಸೇರಿದಂತೆ 20 ಕ್ಕೂ ಹೆಚ್ಚು ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಬೇಕು, ರೈತರಿಗೆ ಇಂದು ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಅವರು ಬೆಳೆದ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಸಿಗುತ್ತಿಲ್ಲ" ಎಂದಿದ್ದಾರೆ.
ತುರ್ತು ದುರಸ್ಥಿ ಕಾರ್ಯ: ಮೇ 11ಕ್ಕೆ ಹಾವೇರಿ, ರಾಯಚೂರಿನಲ್ಲಿ ವಿದ್ಯುತ್ ವ್ಯತ್ಯಯ
ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಕೇಂದ್ರದ ಮಾದರಿಯಲ್ಲೇ ರಾಜ್ಯದಲ್ಲೂ ವಾಪಸ್ ಪಡೆಯುವಂತೆ ಆಗ್ರಹಿಸಿ ಶಿಗ್ಗಾವಿಯಲ್ಲಿರುವ ಸಿಎಂ ಕಚೇರಿ ಮುಂಭಾಗ ರೈತರು ಪ್ರತಿಭನೆ ನಡೆಸಿದ್ದರು. ಹಾವೇರಿ ನಗರದ ಹೊಸಮನಿ ಸಿದ್ದಪ್ಪ ವೃತ್ತದ ಸಮೀಪ ಬೆಳಗ್ಗೆ ಜಮಾವಣೆಯೊಂಡ ರೈತರು ಬೈಕ್ ಹಾಗೂ ಕಾರುಗಳ ಮೂಲಕ 'ನಮ್ಮ ನಡೆ ಶಿಗ್ಗಾವಿ ಕಡೆ' ಜಾಥಾ ಆರಂಭಿಸಿದರು.
ಹಾವೇರಿಯಿಂದ ಶಿಗ್ಗಾವಿಗೆ ರಾಷ್ಟ್ರೀಯ ಹೆದ್ದಾರಿ ಮೂಲಕ ತೆರಳಿದ ರೈತರು ಶಿಗ್ಗಾವಿ ಪಟ್ಟಣದ ಎಪಿಎಂಸಿ ಕಚೇರಿ ಆವರಣದಲ್ಲಿ ಮಧ್ಯಾಹ್ನ ಒಗ್ಗೂಡಿದರು. ಅಲ್ಲಿಗೆ ವಿವಿಧ ಜಿಲ್ಲೆ ಮತ್ತು ತಾಲೂಕುಗಳಿಂದ ರೈತರು ಸೇರ್ಪಡೆಗೊಂಡರು. ನಂತರ ಸಿಎಂ ಮನೆಗೆ ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರು ರೈತರನ್ನು ವಶಕ್ಕೆ ಪಡೆದರು.
ರೈತರ ಬೇಡಿಕೆಗಳಿವು?
* ಗೋವಿನ ಜೋಳ, ರಾಗಿ ಮತ್ತು ಇತರ ಬೆಳೆಗಳಿಗೆ ಖರೀದಿ ಕೇಂದ್ರ ಆರಂಭಿಸಬೇಕು.
* ಬೆಳೆ ವಿಮೆಯಲ್ಲಿ ಆಗುತ್ತಿರುವ ಹಗರಣವನ್ನು ತನಿಖೆ ನಡೆಸಿ, ತಪ್ಪಿತಸ್ಥರನ್ನು ಶಿಕ್ಷೆ ನೀಡಬೇಕು.
* ರಾಜ್ಯಾದಾದ್ಯಂತ ಬಾಕಿ ಇರುವ ಸುಮಾರು 100 ಕೋಟಿ ಕಬ್ಬಿನ ಬಿಲ್ ಅನ್ನು ಶೀಘ್ರದಲ್ಲೇ ಪಾವತಿಸಬೇಕು.
* ಸಕಾಲಕ್ಕೆ ರಸಗೊಬ್ಬರ ಮತ್ತು ಬಿತ್ತನೆಬೀಜ ಅಭಾವ ನೀಗಿಸಿ, ಸಕಾಲದಲ್ಲಿ ರೈತರಿಗೆ ವಿತರಿಸಬೇಕು.
* ಜೊತೆಗೆ 2021-22ರಲ್ಲಿ ಅತಿವೃಷ್ಟಿಯಿಂದ ಬಿದ್ದಿರುವ ಮನೆಗಳಿಗೆ ಕೂಡಲೇ ಪರಿಹಾರ ನೀಡಬೇಕು.
* ಹಗಲು ವೇಳೆ ನಿರಂತರ 7 ಗಂಟೆ ವಿದ್ಯುತ್ ಸರಬರಾಜು ಮಾಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.