ಹಾನಗಲ್ ಉಪ ಚುನಾವಣೆ ಪ್ರಚಾರದ ಸಂದರ್ಭ ಗದ್ಗದಿತರಾದ ಮಾಜಿ ಮುಖ್ಯಮಂತ್ರಿ!
ಹಾನಗಲ್, ಅ. 24: ಉಪ ಚುನಾವಣೆಯಲ್ಲಿ ಪ್ರಚಾರದ ಭರಾಟೆ ತೀವ್ರವಾಗುತ್ತಿದೆ. ಆರೋಪ ಪ್ರತ್ಯಾರೋಪಗಳ ಜೊತೆಗೆ ರಾಜಕೀಯ ನಾಯಕರು ಪ್ರಚಾರದ ಸಂದರ್ಭದಲ್ಲಿ ಭಾವೋದ್ವೇಗಕ್ಕೂ ಒಳಗಾಗುತ್ತಿದ್ದಾರೆ. ಹಾಗನಲ್ ಉಪ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ತೀವ್ರ ಭಾವೋದ್ವೇಗಕ್ಕೊಳಗಾದ ಪ್ರಸಂಗ ನಡೆದಿದೆ.
ಉಪ ಸಮರದ ಪ್ರಚಾರದ ಸಂದರ್ಭದಲ್ಲಿ ನಾಲ್ಕು ವರ್ಷಗಳ ಹಿಂದೆ 2017ರಲ್ಲಿ ಹಾವೇರಿ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ 122 ರೈತರನ್ನು ಸ್ಮರಿಸಿದ ಎಚ್ಡಿಕೆ, "ನಾನು ರೈತರಿಗಾಗಿ ಹಗಲಿರುಳು ಶ್ರಮಿಸಿದೆನೇ ಹೊರತು ಅವರ ವಿಷಯದಲ್ಲಿ ರಾಜಕೀಯ ಮಾಡಲಿಲ್ಲ" ಎಂದು ಭಾವನಾತ್ಮಕವಾಗಿ ಮಾತನಾಡಿದ್ದಾರೆ.
ಹಾನಗಲ್ ಕ್ಷೇತ್ರದಲ್ಲಿ ಶನಿವಾರ ಸಂಜೆ ಜೆಡಿಎಸ್ ಅಭ್ಯರ್ಥಿ ನಿಯಾಜ್ ಶೇಖ್ ಪರ ಪ್ರಚಾರದಲ್ಲಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಕುಮಾರಸ್ವಾಮಿ ಮಾತನಾಡಿದ್ದಾರೆ.
ಮೋದಿ ಕಡೆ ಬೆರಳು ತೋರಿಸುತ್ತಿದ್ದ ಸಿದ್ದರಾಮಯ್ಯ!
"2017ರಲ್ಲಿ ರಾಜ್ಯದಲ್ಲಿ ಸುಮಾರು 3,500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡರು. ಆಗ ಐದು ವರ್ಷ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಹೃದಯ ಕರಗಲಿಲ್ಲ. ರೈತರ ಸಾಲ ಮನ್ನಾ ಮಾಡಿ ಎಂದರೆ ಪ್ರಧಾನಿ ನರೇಂದ್ರ ಮೋದಿ ಅವರ ಕಡೆ ಬೆರಳು ತೋರಿಸುತ್ತಿದ್ದರು. ಮೋದಿ ಅವರು ರಾಷ್ಟ್ರೀಯ ಬ್ಯಾಂಕುಗಳ ಸಾಲ ಮನ್ನಾ ಮಾಡಲಿ, ನಂತರ ನಾನು ಸಹಕಾರಿ ಬ್ಯಾಂಕುಗಳ ಸಾಲ ಮನ್ನಾ ಮಾಡುತ್ತೇನೆ ಎಂದು ಹಠಕ್ಕೆ ಕೂತರು. ಆದರೆ ರೈತರು ಸಾಲಗಾರರ ಕಾಟ ತಾಳಲಾಗದೇ ತಮ್ಮ ಜಮೀನುಗಳಲ್ಲಿಯೇ ಜೀವ ಬಿಡುತ್ತಿದ್ದರು,' ಎಂದು ಕುಮಾರಸ್ವಾಮಿ ಗದ್ಗದಿತರಾಗಿ ಮಾತನಾಡಿದರು.
ಇಡೀ ರಾಜ್ಯ ತಲೆತಗ್ಗಿಸಿದ ಸಂದರ್ಭ
"ನಿಜಕ್ಕೂ ಇಡೀ ರಾಜ್ಯ ತಲೆತಗ್ಗಿಸಿದ ಸಂದರ್ಭ ಅದು. ಮಂಡ್ಯ ಜಿಲ್ಲೆಯಲ್ಲಿ 200ಕ್ಕೂ ಹೆಚ್ಚಿನ ರೈತರು ಜೀವ ಕಳೆದುಕೊಂಡರು. ಇದೇ ಹಾವೇರಿ ಜಿಲ್ಲೆಯಲ್ಲಿ 122ಕ್ಕೂ ಹೆಚ್ಚು ರೈತರು ಪ್ರಾಣ ಬಿಟ್ಟರು. ಆಗ ಕೇಂದ್ರದಲ್ಲಿದ್ದ ಬಿಜೆಪಿ ಸರಕಾರವಾಗಲಿ, ರಾಜ್ಯದಲ್ಲಿದ್ದ ಕಾಂಗ್ರೆಸ್ ಸರಕಾರ ಆಗಲಿ ರೈತ ಕುಟುಂಬಗಳ ನೆರವಿಗೆ ಬರಲಿಲ್ಲ. ನನಗೆ ಆಗ ರಾಜಕೀಯ ಶಕ್ತಿಯೂ ಇರಲಿಲ್ಲ, ಆದರೂ ಹಾವೇರಿ ಜಿಲ್ಲೆಗೆ ಕೂಡಲೇ ಧಾವಿಸಿ ಬಂದೆ. ಮನೆಯ ಯಜಮಾನನ್ನು ಕಳೆದುಕೊಂಡು ಅನಾಥವಾಗಿದ್ದ ಅಷ್ಟೂ ಕುಟುಂಬಗಳ ವಿಧವಾ ತಾಯಂದಿರನ್ನು ಹಾವೇರಿಗೆ ಕರೆಸಿಕೊಂಡು ಪ್ರತಿಯೊಬ್ಬರಿಗೂ ಪರಿಹಾರ ನೀಡಿದೆ. ಅಂದು 35 ಲಕ್ಷ ರೂ.ಗಳನ್ನು ಪರಿಹಾರವಾಗಿ ನೀಡಿದೆ. ಅಲ್ಲದೆ, ಅವರ ಮನೆಮಕ್ಕಳ ವಿದ್ಯಾಭ್ಯಾಸಕ್ಕೂ ನೆರವನ್ನು ಕೊಟ್ಟೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೆನಪಿಸಿಕೊಂಡರು.
ಮಕ್ಕಳ ಸಮೇತ ನದಿಗೆ ಹಾರಿದ್ದ ತಾಯಿ!
ಕಳೆದ ಎರಡು ವರ್ಷಗಳಿಂದ ರಾಜ್ಯದ ಜನರು ಕೋವಿಡ್ ಮತ್ತು ಪ್ರವಾಹದಿಂದ ತತ್ತರಿಸಿದ್ದಾರೆ. ಮಾಡಿದ ಸಾಲ ತೀರಿಸಲಾಗದೇ ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರು ಗ್ರಾಮದಲ್ಲಿ ಪತಿಯನ್ನು ಕಳೆದುಕೊಂಡ ತಾಯಿಯೊಬ್ಬರು ತನ್ನಿಬ್ಬರು ಮಕ್ಕಳ ಸಮೇತ ನದಿಗೆ ಹಾರಿದ್ದ ಘಟನೆ ನಡೆದಿದೆ. ಆ ದುರಂತದಲ್ಲಿ ಆ ಮಕ್ಕಳಿಬ್ಬರೂ ಅಸುನೀಗಿ ಆ ತಾಯಿಯೊಬ್ಬರನ್ನು ರಕ್ಷಣೆ ಮಾಡಲಾಯಿತು. ಬೆಳಗಾವಿ ಜಿಲ್ಲೆಯ ಮಲಫ್ರಭಾ ನದಿಗೆ ಹಾರಿ ಎಂಟು ವರ್ಷದ ಮಗಳು, ಆಕೆ ತಾಯಿ ಆತ್ಮಹತ್ಯೆ ಮಾಡಿಕೊಂಡರು. ನೆಲಮಂಗಲದಲ್ಲಿ ತೀರಾ ಇತ್ತೀಚೆಗೆ ಕೋವಿಡ್ ಮಾರಿಗೆ ಬಲಿಯಾದ ಬಿಎಂಟಿಸಿ ನೌಕರರೊಬ್ಬರ ಪತ್ನಿ ತನ್ನಿಬ್ಬರು ಮಕ್ಕಳಿಗೆ ನೇಣು ಹಾಕಿ ತಾನೂ ನೇಣು ಹಾಕಿಕೊಂಡು ಆಸುನೀಗುತ್ತಾರೆ. ಅಭಿವೃದ್ಧಿ ಎಂದರೆ ಇದಾ ಬಸವರಾಜ ಬೊಮ್ಮಾಯಿ ಅವರೇ? ಪ್ರಗತಿ ಎಂದರೆ ಇದಾ ಸಿದ್ದರಾಮಯ್ಯ ಅವರೇ? ಎಂದು ಕುಮಾರಸ್ವಾಮಿ ಅವರು ಕಿಡಿ ಕಾರಿದ್ದಾರೆ.
ಎಲ್ಲಿದೆ ಕೋವಿಡ್ ಪ್ಯಾಕೇಜ್ ಹಣ?
ಸೋಂಕಿನ ಕಾರಣಕ್ಕೆ ಎರಡು ಸಲ ಲಾಕ್ಡೌನ್ ಮಾಡಿದಾಗ 1200ರಿಂದ 1400 ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡಲಾಯಿತು. 7.5 ಲಕ್ಷ ಚಾಲಕರಿಗೆ, 2.5 ಲಕ್ಷ ಸವಿತಾ ಸಮಾಜದವರಿಗೆ, 60,000 ಜನ ಮಡಿವಾಳ ಕುಟುಂಬದವರಿಗೆ ತಲಾ 5,000 ರೂ. ನೆರವು ನೀಡಲಾಗುವುದು ಎಂದು ಸರಕಾರ ಘೋಷಣೆ ಮಾಡಿತ್ತು. ಒಂದೂವರೆ ವರ್ಷವಾದರೂ ಇನ್ನೂ ಈ ಪರಿಹಾರ ಸಿಕ್ಕಿಲ್ಲ. ಆ ಹಣ ಎಲ್ಲಿ ಹೋಯಿತು? ಈ ಸರಕಾರಕ್ಕೆ ಬಡವರ ಮೇಲೆ ಕಾಳಜಿ ಇಲ್ಲ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇರೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಇನ್ನೂ ನಾಲ್ಕು ದಿನಗಳ ಕಾಲ ಬಹಿರಂಗ ಪ್ರಚಾರಕ್ಕೆ ಅವಕಾಶವಿದ್ದು, ರಾಜ್ಯ ನಾಯಕರು ಉಪ ಚುನಾವಣೆ ನಡೆಯುತ್ತಿರುವ ಎರಡೂ ಕ್ಷೇತ್ರಗಳಲ್ಲಿ ಬೀಡು ಬಿಟ್ಟಿದ್ದಾರೆ. ಅಪರೂಪದ ಪ್ರಸಂಗಗಳು ಪ್ರಚಾರದ ಸಂದರ್ಭದಲ್ಲಿ ನಡೆಯುತ್ತಿವೆ.