86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ದೊಡ್ಡರಂಗೇಗೌಡ ಆಯ್ಕೆ; ಪರ-ವಿರೋಧ
ಹಾವೇರಿ, ಜನವರಿ 23: ಈ ವರ್ಷ ಹಾವೇರಿಯಲ್ಲಿ ನಡೆಯುವ 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ, ಒಲುಮೆಯ ಕವಿ ಎಂದೇ ಚಿರಪರಿಚಿತ ದೊಡ್ಡರಂಗೇಗೌಡ ಅವರು ಆಯ್ಕೆಯಾಗಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಾರ್ಯಕಾರಿ ಸಮಿತಿಯು ಶುಕ್ರವಾರ ದೊಡ್ಡರಂಗೇಗೌಡ ಅವರನ್ನು ಆಯ್ಕೆ ಮಾಡಿದೆ. ಯಾಲಕ್ಕಿ ನಗರಿ ಹಾವೇರಿಯಲ್ಲಿ ಫೆ.26 ರಿಂದ ಪೆ.28 ರವರೆಗೆ ಸಾಹಿತ್ಯ ಸಮ್ಮೇಳನ ನಡೆಯಲಿದೆ. ದೊಡ್ಡರಂಗೇಗೌಡರು ಹಲವು ಚಲನಚಿತ್ರಗಳಿಗೆ ಗೀತ ಸಾಹಿತ್ಯ ರಚಿಸಿದ್ದಾರೆ. ಜಾನಪದ, ಗ್ರಾಮೀಣ ಸೊಗಡಿನ ಕವನ, ಹಾಡು ರಚಿಸಿದ್ದಾರೆ.
ದೊಡ್ಡರಂಗೇಗೌಡರ ಚಿತ್ರಗೀತೆಗಳ ಸುಗ್ಗಿ ಸವಿಯೋಣ ಬನ್ನಿ
ದೊಡ್ಡ ಚರ್ಚೆಯಾಗುತ್ತಿದೆ ಹಿಂದಿ ಪ್ರೇಮ
ಹಿಂದಿ ಭಾಷೆಯ ವಿಚಾರವಾಗಿ ಮಾತನಾಡಿರುವ ಸಾಹಿತಿ ದೊಡ್ಡರಂಗೇಗೌಡ ಅವರು, ಇಂಗ್ಲೀಷಿಗೆ ನಾವು ಮಣೆ ಹಾಕುತ್ತೇವೆ. ಹಿಂದಿಯನ್ನು ಏಕೆ ತಿರಸ್ಕಾರ ಮಾಡಬೇಕು. ಹಿಂದಿ ನಮ್ಮ ರಾಷ್ಟ್ರ ಭಾಷೆ, ಇಲ್ಲಿ ಕನ್ನಡ ಹೇಗೋ ಅದೇ ರೀತಿ ಉತ್ತರ ಭಾರತದಲ್ಲಿ ಹಿಂದಿಗೆ ಹೆಚ್ಚಿನ ಸ್ಥಾನಮಾನವಿದೆ ಎಂದು ಹೇಳಿದ್ದಾರೆ. ಇಂಗ್ಲೀಷ್ ಒಪ್ಪುವ ನಾವು, ಹಿಂದಿ ಭಾಷೆಯನ್ನು ಏಕೆ ಒಪ್ಪಿಕೊಳ್ಳಬಾರದು ಎಂದು ೮೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿ ದೊಡ್ಡರಂಗೇಗೌಡ ಪ್ರಶ್ನಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ
ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರ ಹಿಂದಿಯನ್ನು ಏಕೆ ಒಪ್ಪಿಕೊಳ್ಳಾಬಾರದು ಎಂಬ ಮಾತಿಗೆ ನೆಟಿಜನ್ಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ""ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗುವವರಿಗೆ "ಹಿಂದಿ ರಾಷ್ಟ್ರಭಾಷೆ' ಅಂತ ಸುಳ್ಳು ಹೇಳುವ ಒತ್ತಡವಾದರೂ ಏನಿತ್ತು? ಅಭಿವೃದ್ಧಿ ಪ್ರಾಧಿಕಾರದವರು ಇವರಿಗೂ ನೋಟಿಸ್ ಕೊಡಬೇಕಾದ ಸಂದರ್ಭ ಬಂದಿರುವುದು ದರದುಷ್ಟಕರ'' ಎಂದು ಟ್ವೀಟ್ ಮಾಡಿದ್ದಾರೆ.
ಉತ್ತರ ಭಾರತದವರಿಗೆ ಕನ್ನಡ ಕಲಿಯಲು ಹೇಳಿ
ಇನ್ನೊಬ್ಬರು ಟ್ವೀಟ್ ಮಾಡಿ, ""ಹೋದ ವರ್ಷದ ಸಮ್ಮೇಳನದಲ್ಲಿ ಅಧ್ಯಕ್ಷರಾಗಿದ್ದ HSV ಯವರು ಸಂಸ್ಕೃತವನ್ನು ರಾಷ್ಟ್ರಭಾಷೆ ಮಾಡಿ ಅಂತ ಹೇಳಿದ್ದರು. ಈಗ ಈ ವರ್ಷದ ಅಧ್ಯಕ್ಷರು ಹಿಂದಿಯನ್ನು ಒಪ್ಪಿ ಅಂತ ಹೇಳುತ್ತಾ ಇದ್ದಾರೆ. ಬಹುಶಃ ಮುಂದಿನ ವರ್ಷದ ಸಮ್ಮೇಳನಾಧ್ಯಕ್ಷರು ಕನ್ನಡವನ್ನು ಮರೆತುಬಿಡಿ ಎಂದು ಹೇಳಿದರೆ ಅಚ್ಚರಿ ಪಡಬೇಕಾಗಿಲ್ಲ ಎಂದು ಹೇಳಿದ್ದಾರೆ. ಹಿಂದಿ ಯಾವ ದೇಶಕ್ಕೆ ರಾಷ್ಟ್ರಭಾಷೆ, ಯಾವುದರಲ್ಲಿ ಹೇಳಿದೆ. ಹಾಗಾದರೆ ಉತ್ತರ ಭಾರತದವರಿಗೆ ಕನ್ನಡ ಕಲಿಯಲು ಹೇಳಿ ಎಂದು ಫೆಸ್ ಬುಕ್ ನಲ್ಲಿ ಕಮೆಂಟ್ ಮಾಡಿದ್ದಾರೆ.
Recommended Video
ಹಿಂದಿಯೇತರರ ರಾಷ್ಟ್ರತನಕ್ಕೆ ಅವಮಾನ
ಉತ್ತರ ಭಾರತದವರು ಕರ್ನಾಟಕಕ್ಕೆ ಬಂದು ಹಲವು ವರ್ಷಗಳಾದರೂ ಕನ್ನಡ ಮಾತಾಡಲು ವಿರೋಧಿಸುತ್ತಾರೆ. ಅಂತಹದರಲ್ಲಿ ನಾವು ಸರ್ಕಾರಿ ಕೆಲಸದ ಹಕ್ಕನ್ನು ಪಡೆಯಲು ಹಿಂದಿಯಲ್ಲಿ entrance exam ಬರೆಯಬೇಕು. ಪ್ರಪಂಚದ ಬೇರೆ ಅವಕಾಶಗಳನ್ನು ಹೊಟ್ಟೆಪಾಡಿಗಾಗಿ ಮತ್ತು ತಂತ್ರಾಂಶಕ್ಕಾಗಿ ಇಂಗ್ಲಿಷ್ ಕಲಿಯುತ್ತೇವೆ. ಆದರೆ ನಾವು ಹುಟ್ಟಿ ಬೆಳೆದ ದೇಶದಲ್ಲಿ ಪರಭಾಷೆ ಕಲಿಯಲೇಬೇಕು ಅಂದರೆ ನಮ್ಮ ದೇಶ ಅನ್ನುವುದಾದರು ಹೇಗೆ? ಎಂದು ಪ್ರಶ್ನಿಸಿದ್ದಾರೆ. ಎಲ್ಲಾ MNC ಮತ್ತೆ online service ಕಂಪನಿಗಳು ಬೆರಳಂಚಿನಲ್ಲಿ ಭಾಷಾಂತರ ಮಾಡಿ ಸೇವೆ ಕೊಡುತ್ತಿರುವಾಗ ನಮ್ಮ ಕೇಂದ್ರ ಸರಕಾರ ಮಾತ್ರ ತನ್ನ ಒಂದು ಭಾಷೆ ಯಜಮಾನಶಾಹಿ ರಾಷ್ಟ್ರ ನೀತಿಯನ್ನು ತೆರಿಗೆ ಹಣವನ್ನು ನೀರಿನ ರೀತಿ ಚೆಲ್ಲಿ ಜಾರಿ ಮಾಡುತ್ತಿರುವುದು ತೀರ ಅಸಹ್ಯ ಮತ್ತು ನಮ್ಮ ಹಿಂದಿಯೇತರರ ರಾಷ್ಟ್ರತನಕ್ಕೆ ಅವಮಾನ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.