ರಾಜಕೀಯ ಅಭದ್ರತೆ ಕಾಡುತ್ತಿದೆಯಾ ಅನರ್ಹ ಶಾಸಕ ಆರ್.ಶಂಕರ್ ಗೆ?
ಹಾವೇರಿ, ಸೆಪ್ಟೆಂಬರ್ 25: ಉಪ ಚುನಾವಣೆ ಘೋಷಣೆ ಹಿನ್ನೆಲೆ ರಾಣೆಬೆನ್ನೂರು ಕ್ಷೇತ್ರದಲ್ಲಿ ಬಿಜೆಪಿ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದೆ. ಒಂದೆಡೆ ಅನರ್ಹತೆ ವಿಚಾರಣೆಯಿಂದ ರಾಜಕೀಯ ಭವಿಷ್ಯದ ಬಗ್ಗೆ ಆತಂಕದಲ್ಲಿರುವ ಅನರ್ಹ ಶಾಸಕ ಆರ್.ಶಂಕರ್ ರಾಜಕೀಯ ನೆಲೆ ಕಂಡುಕೊಳ್ಳುವ ಹೋರಾಟದಲ್ಲಿ ತೊಡಗಿದ್ದಾರೆ. ಹೈಕೋರ್ಟ್ ಸ್ಪರ್ಧೆಗೆ ಅವಕಾಶ ನೀಡಿದರೆ ಬಿಜೆಪಿಯಿಂದ ಕಣಕ್ಕಿಳಿಯುವ ಸಿದ್ಧತೆಯಲ್ಲಿ ಆರ್.ಶಂಕರ್ ಇದ್ದಾರೆ.
"ಉತ್ತರ ಕರ್ನಾಟಕದ ಹೆಬ್ಬಾಗಿಲು" ರಾಣೆಬೆನ್ನೂರು ಕ್ಷೇತ್ರ ಪರಿಚಯ
ಇದರ ಬೆನ್ನಲ್ಲೆ ಬಿಜೆಪಿಯಲ್ಲಿಯೇ ಸಾಕಷ್ಟು ಆಕಾಂಕ್ಷಿಗಳು ಮಹೇಶ್ ಅವರಿಗೆ ಟಿಕೇಟ್ ನೀಡಲು ಆಕ್ಷೇಪ ವ್ಯಕ್ತಪಡಿಸಿ, ಈ ಬಾರಿಯ ಬಿಜೆಪಿ ಅಭ್ಯರ್ಥಿ ತಾವೇ ಎಂದು ಫೇಸ್ ಬುಕ್ ಮೂಲಕ ಬಿಂಬಿಸಿಕೊಳ್ಳುತ್ತಿದ್ದಾರೆ. ಇದು ಬಿಜೆಪಿ ಪಕ್ಷಕ್ಕೂ ತಲೆನೋವಾಗಿದ್ದು ಆತಂರಿಕ ಭಿನ್ನಾಭಿಪ್ರಾಯ ಭುಗಿಲೇಳುವ ಸಾಧ್ಯತೆ ದಟ್ಟವಾಗಿದೆ. ಜೊತೆಗೆ ಆರ್. ಶಂಕರ್ ಅವರಿಗೆ ರಾಜಕೀಯ ಅಭ್ರದ್ರತೆಯ ಆತಂಕ ಹೆಚ್ಚಿಸಿದೆ.
ಚುನಾವಣೆ ಮುಂದೂಡುವ ಲೆಕ್ಕಾಚಾರ
2018ರ ವಿಧಾನಸಭಾ ಚುನಾವಣೆಯಲ್ಲಿ ಕೆಪಿಜೆಪಿ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಆರ್.ಶಂಕರ್ ಇಂದು ತಮ್ಮ ಅನರ್ಹತೆ ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಪ್ರತ್ಯೇಕ ಅರ್ಜಿ ಸಲ್ಲಿಕೆಗೆ ಮುಂದಾಗಿದ್ದಾರೆ. ಇದರಿಂದ ಚುನಾವಣೆ ಮುಂದೂಡಬಹುದು ಎಂಬ ಲೆಕ್ಕಾಚಾರದಲ್ಲಿದ್ದಾರೆ. ಒಂದೆಡೆ ಉಪಚುನಾವಣೆ ಮುಂದೂಡಿ ಇಲ್ಲವೇ ನಮಗೂ ಸ್ಪರ್ಧೆಗೆ ಅವಕಾಶ ನೀಡಿ ಎಂಬ ಮನವಿಯನ್ನು ಅನರ್ಹ ಶಾಸಕರು ಹೈಕೋರ್ಟ್ ನಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕೆಪಿಜೆಪಿಯನ್ನು ವಿಲೀನ ಮಾಡಿಲ್ಲ ಎಂಬ ಕಾರಣ
ಮತ್ತೊಂದೆಡೆ ಆರ್.ಶಂಕರ್ ತಮ್ಮ ಪರ ವಕೀಲರಿಂದ ರಾಣೆಬೆನ್ನೂರು ಕ್ಷೇತ್ರದ ಚುನಾವಣೆ ಮುಂದೂಡಲು ಅರ್ಜಿ ಸಲ್ಲಿಸಿದ್ದಾರೆ. ತಾವು ಕೆಪಿಜೆಪಿ ಪಕ್ಷದಿಂದ ಆಯ್ಕೆಯಾಗಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಕೆಪಿಜೆಪಿಯನ್ನು ವಿಲೀನ ಮಾಡಿಲ್ಲ. ಈ ಕಾರಣದಿಂದ ತಮ್ಮ ಅನರ್ಹತೆಯನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ತಾವು ಟಿಕೇಟ್ ಪಡೆಯುವುದು ಕಷ್ಟಸಾಧ್ಯ. ಒಂದು ವೇಳೆ ಟಿಕೇಟ್ ಸಿಕ್ಕರೆ ಆಂತರಿಕ ಬೇಗುದಿಗೆ ತಾವು ಬಲಿಯಾಗಬೇಕಾಗುತ್ತದೆ ಎನ್ನುವ ಆತಂಕದಲ್ಲಿ ಆರ್.ಶಂಕರ್ ಇದ್ದಾರೆ ಎನ್ನುವುದು ಅವರ ಆಪ್ತ ವಲಯದಿಂದಲೇ ಕೇಳಿ ಬರುತ್ತಿರುವ ಮಾತು. ಹೀಗಾಗಿ ಅರ್ಜಿ ವಿಚಾರಣೆಯಿಂದ ಹೈಕೋರ್ಟ್ ತೀರ್ಪು ಆರ್.ಶಂಕರ್ ಪಾಲಿಗೆ ರಾಜಕೀಯ ಭವಿಷ್ಯ ನಿರ್ಧರವಾಗಲಿದೆ.
ಹಾವೇರಿ ಜಿಲ್ಲೆಯ 2 ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆ
ಹೆಚ್ಚುತ್ತಿರುವ ಅಭ್ಯರ್ಥಿಗಳ ಪಟ್ಟಿ
ಈಗಾಗಲೇ ಉಪ ಚುನಾವಣೆ ಘೋಷಣೆ ಆಗುತ್ತಿದ್ದಂತೆ ಹಲವಾರು ಜನರು ಬಿಜೆಪಿ ಅಭ್ಯರ್ಥಿ ನಾನೇ ಎಂದು ಸ್ವಯಂ ಘೋಷಿಸಿಕೊಳ್ಳುತ್ತಿದ್ದಾರೆ. ಇದರಿಂದ ದಿನೇದಿನೇ ಅಭ್ಯರ್ಥಿಗಳ ಪಟ್ಟಿ ಹೆಚ್ಚುತ್ತಲೇ ಇದೆ. 2018 ವಿಧಾನಸಭಾ ಚುನಾವಣೆಯಲ್ಲಿ ಸಾಕಷ್ಟು ಪೈಪೋಟಿ ಮದ್ಯೆ ಡಾ.ಬಸವರಾಜ್ ಕಲಗಾರ್ ಅವರು ಬಿಜೆಪಿ ಟಿಕೇಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ 50,000 ಮತಗಳ ಅಂತರದಿಂದ ಸೋಲನುಭವಿಸುವ ಮೂಲಕ ಮೂರನೇ ಸ್ಥಾನಕ್ಕೆ ಕಲಗಾರ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಕಲಗಾರ ಸೋಲಿಗೆ ಬಿಜೆಪಿಯಲ್ಲಿ ಆಂತರಿಕ ಅಸಮಾಧಾನವೇ ಕಾರಣ ಎಂಬ ಮಾತುಗಳು ಕೂಡ ಚರ್ಚೆಯಾಗಿತ್ತು. ಆದರೆ ಇದೀಗ ಕಳೆದ ಚುನಾವಣೆಯಲ್ಲಿ ಸೋಲನುಭವಿಸಿದ ಪರಿಣಾಮ ತಮ್ಮ ಮೇಲೆ ಜನರಿಗೆ ಅನುಕಂಪವಿದೆ ಎನ್ನುವ ಉದ್ದೇಶದಿಂದ ಈ ಬಾರಿ ತಮಗೆ ಟಿಕೇಟ್ ನೀಡಬೇಕು ಎನ್ನುವುದು ಕಲಗಾರ್ ಅವರ ಒತ್ತಾಯ. ಈ ಕಾರಣದಿಂದ ಪ್ರಮುಖ ಆಕಾಂಕ್ಷಿಗಳಲ್ಲಿ ಕಲಗಾರ ಕೂಡ ಒಬ್ಬರು.
ಬದಲಾದ ಪರಿಸ್ಥಿತಿ
ಆರ್.ಶಂಕರ್ ರಾಣೆಬೆನ್ನೂರು ಕ್ಷೇತ್ರಕ್ಕೆ ವಲಸಿಗರು. ಆದಾಗ್ಯೂ ಸ್ಥಳೀಯ ನಾಯಕರ ಮೇಲಿನ ಜನರ ಅವಿಶ್ವಾಸ ಆರ್.ಶಂಕರ್ ಗೆಲುವಿಗೆ ಮುಖ್ಯ ಕಾರಣವಾಗಿತ್ತು. ಪಕ್ಷೇತರ ಅಭ್ಯರ್ಥಿಯಾಗಿದ್ದರೂ ಶಂಕರ್ ಗೆ ಜೈ ಎನ್ನುವ ಮೂಲಕ ಕ್ಷೇತ್ರದ ಮತದಾರರರು ರಾಣೆಬೆನ್ನೂರು ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ಬದಲಾಣೆಗೆ ನಾಂದಿ ಹಾಡಿದ್ದರು. ಆದರೆ ಇದೀಗ ಪರಿಸ್ಥಿತಿ ಬದಲಾಗಿದೆ. ಒಂದೆಡೆ ಸುಪ್ರೀಂ ಕೋರ್ಟ್ ತೀರ್ಪು. ಮತ್ತೊಂದೆಡೆ ಟಿಕೇಟ್ ಪಡೆಯಲು ಹರಸಾಹಸ. ಮಗದೊಂದೆಡೆ ಟಿಕೆಟ್ ಸಿಕ್ಕರು ಗೆಲವಿಗಾಗಿ ಹರಸಾಹಸ. ಈ ಎಲ್ಲದರ ಲೆಕ್ಕಾಚಾರದಲ್ಲಿ ಆರ್.ಶಂಕರ್ ಇದ್ದಾರೆ.