ನಿಷೇಧಿತ ವಲಯದ ನಿವಾಸಿಗಳಿಗೆ ಸರ್ಕಾರದಿಂದ ಉಚಿತ ಪಡಿತರ, ಹಾಲು, ತರಕಾರಿ
ಹಾವೇರಿ, ಮೇ 9: ಕೊರೊನ ಪಾಸಿಟಿವ್ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಸೀಲ್ಡೌನ್ ಮಾಡಿರುವ ಸವಣೂರ ಪಟ್ಟಣದ ಎಸ್.ಎಂ.ಕೃಷ್ಣ ಬಡಾವಣೆಗೆ ಗೃಹ ಸಚಿವ ಹಾಗೂ ಜಿಲ್ಲಾ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Recommended Video
ಅಲ್ಲಿನ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿ ಅವರೊಂದಿಗೆ ಮಾತನಾಡಿದ ಸಚಿವರು, ನಿಮ್ಮ ಆರೋಗ್ಯ ಕಾಳಜಿಯಿಂದ ಕೋವಿಡ್ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸೀಲ್ಡೌನ್ ಮಾಡಲಾಗಿದೆ. ಎಲ್ಲರೂ ಸಹಕರಿಸಬೇಕು. ಸೀಲ್ಡೌನ್ ನಿಯಮಗಳನ್ನು 14 ದಿನಗಳವರೆಗೆ ಶಿಸ್ತುಬದ್ಧವಾಗಿ ನೀವು ಪಾಲಿಸಿದರೆ ತೆರವುಗೊಳಿಸಲಾಗುವುದು ಎಂದು ಹೇಳಿದರು.
ಕೊರೊನಾ ವೈರಸ್ ಬಗ್ಗೆ ಅರಿತು ಎಚ್ಚರದಿಂದಿರಿ: ಡಾ.ಕೆ.ಸುಧಾಕರ್
ಸೀಲ್ಡೌನ್ ಅವಧಿಯಲ್ಲಿ ನಿಮಗೆ ಬೇಕಾದ ಎಲ್ಲ ಅಗತ್ಯ ವಸ್ತುಗಳನ್ನು ಸರ್ಕಾರದ ವತಿಯಿಂದ ಪೂರೈಸಲಾಗುವುದು. ಅಶಿಸ್ತಿನಿಂದ ವರ್ತಿಸಿ ಸೀಲ್ಡೌನ್ ಉಲ್ಲಂಘಿಸಿ ಸೋಂಕು ಹರಡಲು ಕಾರಣವಾದರೆ ಕಠಿಣ ಕ್ರಮಕೈಗೊಳ್ಳಲಾಗುವುದು. ಸೀಲ್ಡೌನ್ ಅವಧಿಯನ್ನು ಹೆಚ್ಚಿಸಲಾಗುವುದು ಎಂಬ ಎಚ್ಚರಿಕೆ ಸಂದೇಶವನ್ನು ಬಡಾವಣೆಯ ನಿವಾಸಿಗಳಿಗೆ ಈ ಸಂದರ್ಭದಲ್ಲಿ ನೀಡಿದರು.
ಎಲ್ಲ ಕ್ರಮಕೈಗೊಳ್ಳಲಾಗುವುದು
ಈಗಾಗಲೇ ತಮಗೆ ಅಗತ್ಯವಾದ ದಿನಸಿಗಳನ್ನು ಉಚಿತವಾಗಿ ನೀಡಲಾಗಿದೆ. ಉಚಿತ ಹಾಲು ಸಹ ಒದಗಿಸಲಾಗಿದೆ. ನಿಮ್ಮ ಬೇಡಿಕೆಯಂತೆ ಸರ್ಕಾರದ ವತಿಯಿಂದಲೇ ಉಚಿತವಾಗಿ ತರಕಾರಿ ಸಹ ಭಾನುವಾರದಿಂದ ಪೂರೈಸಲಾಗುವುದು. ರೇಷನ್ ಖಾಲಿಯಾದರೆ ಸೀಲ್ಡೌನ್ ಅವಧಿವರೆಗೆ ಅಗತ್ಯವಾದ ದಿನಸಿ, ತರಕಾರಿ, ಹಾಲು ಪೂರೈಸಲು ಎಲ್ಲ ಕ್ರಮಕೈಗೊಳ್ಳಲಾಗುವುದು ಎಂದು ಬೊಮ್ಮಾಯಿ ಹೇಳಿದರು.
ಸ್ವಚ್ಛತೆಗೆ ಸೂಚನೆ
ಇದೇ ಸಂದರ್ಭದಲ್ಲಿ ಸವಣೂರು ತಹಶೀಲ್ದಾರ ಹಾಗೂ ಪುರಸಭೆ ಮುಖ್ಯಾಧಿಕಾರಿಗಳಿಗೆ ಸೀಲ್ಡೌನ್ ಪ್ರದೇಶದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲು ಸೂಚಿಸಿದರು. ಕ್ರಿಮಿನಾಶಕ ಸಿಂಪರಣೆ, ಶುದ್ಧ ನೀರಿನ ಪೂರೈಕೆ ಕುರಿತಂತೆ ಆದ್ಯತೆ ಮೇರೆಗೆ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದರು. ಸೀಲ್ಡೌನ್ ಏರಿಯಾದ ವಸತಿ ನಿಲಯದಲ್ಲಿ ಆರಂಭದಲ್ಲಿ ಫಿವರ್ ಕ್ಲಿನಿಕ್ನಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಳಮಾಡಬೇಕು. ಮಾಸ್ಕ್, ಸ್ಯಾನಿಟೈಸರ್ ಹಾಗೂ ಸಿಬ್ಬಂದಿಗಳನ್ನು ಹೆಚ್ಚುವರಿಯಾಗಿ ನಿಯೋಜಿಸಿ ದಿನದ 24 ತಾಸು ಕಾರ್ಯನಿರ್ವಹಿಸುವಂತೆ ಕ್ರಮವಹಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚನೆ ನೀಡಿದರು.
ಸೀಲ್ಡೌನ್ ಏರಿಯಾದಲ್ಲಿ 100 ಮೀಟರ್ ಅಂತರ
ಸೀಲ್ಡೌನ್ ಏರಿಯಾದಲ್ಲಿ 100 ಮೀಟರ್ ಅಂತರದಲ್ಲಿ ಮೊದಲ ರ್ಯಾಂಡಮ್ ತಪಾಸಣೆ ಹಾಗೂ ಎರಡನೇ ಹಂತದಲ್ಲಿ 200 ಮೀಟರ್ ನಲ್ಲಿ ರ್ಯಾಂಡಮ್ ಸ್ಯಾಂಪಲ್ಗಳನ್ನು ತಪಾಸಣೆಯನ್ನು ಕೈಗೊಳ್ಳಬೇಕು. ಆರೋಗ್ಯ ತಪಾಸಣೆ ಕೈಗೊಳ್ಳಬೇಕು. ಸೀಲ್ಡೌನ್ ಏರಿಯಾದಲ್ಲಿ ತೀವ್ರ ನಿಗಾವಹಿಸಿ ತಪಾಸಣೆ, ಮಾದರಿ ಸಂಗ್ರಹ, ಆರೋಗ್ಯದ ಮೇಲೆ ನಿಗಾ ವಹಿಸುವ ಕಾರ್ಯಕ್ರಮವನ್ನು ಕೈಗೊಳ್ಳುವಂತೆ ತಾಲೂಕಾ ಆರೋಗ್ಯಾಧಿಕಾರಿಗಳ ತಂಡಕ್ಕೆ ಸೂಚನೆ ನೀಡಿದರು.
ಶಿಸ್ತು ಉಲ್ಲಂಘನೆಗೆ ಅವಕಾಶ ಇಲ್ಲ
ಸೀಲ್ಡೌನ್ ಏರಿಯಾವನ್ನು ವೀಕ್ಷಣೆಮಾಡಿ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಮುಂಬೈನಿಂದ ಸವಣೂರಿನ ಎಸ್.ಎಂ.ಕೃಷ್ಣ ಬಡಾವಣೆಯ ಇಬ್ಬರಲ್ಲಿ ಪಾಸಿಟಿವ್ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಸೀಲ್ಡೌನ್ ಮಾಡಲಾಗಿದೆ. ಇವನ ಸಂಪರ್ಕಿತರ ಗಂಟಲು ದ್ರವ್ಯ ಮಾದರಿ ತಪಾಸಣೆ ವರದಿ ಬಂದಿದ್ದು, ಎಲ್ಲರ ವರದಿಗಳು ನೆಗಟಿವ್ ಬಂದಿವೆ. ಸೋಂಕಿತನ ಸಂಚಾರ ಮಾಹಿತಿ ಪಡೆಯಲಾಗಿದೆ. ಸವಣೂರಿಗೆ ಬರುವ ಮಾರ್ಗದಲ್ಲಿ ಹುಬ್ಬಳ್ಳಿ ಎ.ಪಿ.ಎಂ.ಸಿ.ಗೆ ತೆರಳಿರುವ ಕಾರಣ ಈ ಕುರಿತಂತೆ ಧಾರವಾಡ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಾಗಿದೆ. ಈಗಾಗಲೇ ಸಂಬಂಧ 20 ಜನರನ್ನು ಧಾರವಾಡ ಜಿಲ್ಲಾಡಳಿತ ಕ್ವಾರಂಟೈನ್ಗೆ ಒಳಪಡಿಸಿದೆ ಎಂದು ತಿಳಿಸಿದರು.