ಕೋವಿಡ್19: ಗೃಹಸಚಿವರ ಜಿಲ್ಲೆಯಲ್ಲಿ ಚೇತರಿಕೆ ಪ್ರಮಾಣ ಶೇ. 31 ಮಾತ್ರ!
ಹಾವೇರಿ, ಜು. 08: ಉತ್ತರ ಕರ್ನಾಟಕ ಹೆಬ್ಬಾಗಿಲು ಹಾವೇರಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಆರಂಭದಲ್ಲಿ ಗ್ರೀನ್ ಜೋನ್ನಲ್ಲಿದ್ದ ಜಿಲ್ಲೆ ಕೋವಿಡ್ ಹಾಟ್ಸ್ಪಾಟ್ ಆಗುವತ್ತ ದಾಪುಗಾಲು ಹಾಕುತ್ತಿದೆ. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ -19 ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿವೆ. ವಿಪರ್ಯಾಸ ಎಂದರೆ ಜಿಲ್ಲೆಯಲ್ಲಿ ಕೋವಿಡ್ನಿಂದ ಸಾವನ್ನಪ್ಪಿರುವ 4 ಜನರ ಸ್ವ್ಯಾಬ್ ವರದಿ ಬಂದಿರುವುದು ಅವರ ಸಾವಿನ ನಂತರವೇ ಎಂಬುದು ಗಮನಿಸಬೇಕಾದ ಅಂಶ.
ಇದೆಲ್ಲಕ್ಕಿಂತ ಮುಖ್ಯವಾಗಿ ಕೋವಿಡ್ ಪರೀಕ್ಷೆಗೆ ಕಳುಹಿಸಿರುವ ಸುಮಾರು 1800 ಸ್ವ್ಯಾಬ್ ರಿಪೋರ್ಟ್ಗಳು ಇನ್ನೂ ಬರಬೇಕಿದೆ. ಇದರೊಂದಿಗೆ ಇಡೀ ದೇಶದಲ್ಲಿ ಸೋಂಕಿತರು ಚೇತರಿಸಿಕೊಳ್ಳುತ್ತಿರುವ ಪ್ರಮಾಣ ಹೆಚ್ಚಾಗುತ್ತಿದ್ದರೆ, ಅದಕ್ಕೆ ವಿರುದ್ಧವಾಗಿ ಹಾವೇರಿಯಲ್ಲಿ ಸಾಗುತ್ತಿದೆ. ಈ ಎಲ್ಲ ಅವಾಂತರಗಳಿಗೆ ಕಳಸ ಪ್ರಾಯದಂತೆ ಚಿಕಿತ್ಸೆ ಸಿಗದೇ ಸಾಮಾನ್ಯ ರೋಗಿಯೊಬ್ಬರು ಬಸ್ನಿಲ್ದಾಣದಲ್ಲಿಯೇ ಮೃತಪಟ್ಟಿರುವುದು ಜಿಲ್ಲೆಯ ಜನರ ಆತಂಕ ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ.
ಅಚ್ಚರಿ ವರದಿ: ಫೆಬ್ರವರಿ ವೇಳೆಗೆ ಭಾರತದಲ್ಲಿ ದಿನಕ್ಕೆ 2.87 ಲಕ್ಷ ಕೊರೊನಾ ಕೇಸ್
ಆಸ್ಪತ್ರೆಯ ದುಃಸ್ಥಿತಿ
ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿತರು ಪತ್ತೆಯಾಗಿ ಎರಡು ತಿಂಗಳುಗಳು ಕಳೆದಿವೆ. ಈಗಾಗಲೇ 4 ಜನರು ಸೋಂಕಿಗೆ ತುತ್ತಾಗಿ ಮೃತಪಟ್ಟಿದ್ದಾರೆ. ಆದರೆ ಈ ವರೆಗೆ ಕೋವಿಡ್ 19 ಪರೀಕ್ಷೆಗೆ ಲ್ಯಾಬ್ ಶುರು ಮಾಡಿಲ್ಲ. ಸ್ಥಾಪನೆ ಮಾಡಲಾಗಿರುವ ಕೋವಿಡ್ ಪರೀಕ್ಷಾ ಲ್ಯಾಬ್ಗೆ ಟೆಕ್ನಿಶಿಯನ್ ಸೇರಿದಂತೆ ಅಗತ್ಯ ಸಿಬ್ಬಂದಿ ನೇಮಕವಾಗಿಲ್ಲ.
ಕೋವಿಡ್ ಪರೀಕ್ಷಾ ಲ್ಯಾಬ್ ಒಂದು ರೀತಿಯಲ್ಲಿ ಹಾವೇರಿ ಜನರಿಗೆ ತೋರಿಕೆಗೆ ಹಾಗೂ ಸರ್ಕಾರದ ಲೆಕ್ಕಕ್ಕೆ ಸ್ಥಾಪನೆ ಮಾಡಿದಂತಾಗಿದೆ. ಕಲಬುರಗಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಎರಡನೇಯ ಕೋವಿಡ್ ಪರೀಕ್ಷಾ ಘಟಕಕ್ಕೆ ಬೇಡಿಕೆ ಇಟ್ಟಿದ್ದಾರೆ. ಆದರೆ ಹಾವೇರಿಯಲ್ಲಿ ಇನ್ನೂ ಒಂದು ಲ್ಯಾಬ್ ಕಾರ್ಯಾರಂಭ ಮಾಡದಿರುವುದು ಸರ್ಕಾರ ಜಿಲ್ಲೆಯ ಜನರನ್ನು ಯಾವ ರೀತಿ ನಡೆಸಿಕೊಳ್ಳುತ್ತಿದೆ ಎಂಬುದಕ್ಕೆ ಸಣ್ಣ ಉದಾಹರಣೆಯಾಗಿದೆ.
ತಜ್ಞ ವೈದ್ಯರೇ ಇಲ್ಲ!
ಹಾವೇರಿ ಜಿಲ್ಲಾಸ್ಪತ್ರೆಯ ಜೊತೆಗೆ ಸವಣೂರು ಹಾಗೂ ಹಿರೇಕೆರೂರುಗಳಲ್ಲಿ ಕೋವಿಡ್ ಆಸ್ಪತ್ರೆಗಳನ್ನು ಸ್ಥಾಪನೆ ಮಾಡಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ಕೊಟ್ಟಿದೆ. ಜಿಲ್ಲಾಸ್ಪತ್ರೆಯಲ್ಲಿ 50 ಬೆಡ್ಗಳ ಕೋವಿಡ್-19 ಆಸ್ಪತ್ರೆ ಸ್ಥಾಪಿಸಲಾಗಿದೆ. ಅದರ ಜೊತೆಗೆ ಹೆಚ್ಚುವರಿಯಾಗಿ 50 ಬೆಡ್ಗಳನ್ನು ಸ್ಥಾಪಿಸಲಾಗಿದೆ. ಆದರೆ ಈಗಾಗಲೇ ಎಲ್ಲ 100 ಬೆಡ್ಗಳು ಭರ್ತಿಯಾಗಿರುವುದರಿಂದ ಆಯಾ ತಾಲ್ಲೂಕುಗಳಲ್ಲಿಯೆ ಸೋಂಕಿತರಿಗೆ ಚಿಕಿತ್ಸೆ ಕೊಡುವಂತೆ ಜಿಲ್ಲಾಡಳಿತ ಸೂಚಿಸಿದೆ.
ಜಿಲ್ಲೆಯ ಸವಣೂರು ಹಾಗೂ ಹಿರೇಕೆರೂರಲ್ಲಿ ಕೋವಿಡ್-19 ಆಸ್ಪತ್ರೆ ಸಜ್ಜುಗೊಳಿಸಲಾಗಿದೆ. ಹಾಗೆಯೇ ಹಾವೇರಿಯಲ್ಲಿ 70 ಬೆಡ್ಗಳ ಖಾಸಗಿ ಆಯುರ್ವೇದಿಕ್ ಆಸ್ಪತ್ರೆಯನ್ನು ಸಿದ್ಧ ಮಾಡಿಟ್ಟುಕೊಳ್ಳಲಾಗಿದೆ ಎಂದು ಜಿಲ್ಲಾಡಳಿತ ಹೇಳುತ್ತದೆ. ಆದರೆ ಅಲ್ಲಿ ಯಾವುದೇ ರೋಗಿಯನ್ನು ದಾಖಲಿಸಿಕೊಂಡಿಲ್ಲ. ಹೀಗಾಗಿ ಹಾವೇರಿ ಸೋಂಕಿತರಿಗೆ ಸೀರಿಯಸ್ ಆದಲ್ಲಿ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯನ್ನೇ ಅವಲಂಬಿಸಬೇಕಾದ ಪರಿಸ್ಥಿತಿಯಿದೆ.
ಆಸ್ಪತ್ರೆ ಇದ್ದರೂ ಚಿಕಿತ್ಸೆ ಇಲ್ಲ
ಹೀಗಾಗಿ ಹಾವೇರಿ ಜಿಲ್ಲೆಯಲ್ಲಿ 3 ಕೋವಿಡ್ ಆಸ್ಪತ್ರೆಗಳಿದ್ದರೂ ಜನರಿಗೆ ಉಪಯೋಗ ಇಲ್ಲದಂತಾಗಿದೆ. ಯಾಕೆಂದರೆ ಕೋವಿಡ್ ರೋಗಿಗಳಿಗೆ ಎದುರಾಗುವುದು ತೀವ್ರ ಉಸಿರಾಟ ಸಮಸ್ಯೆ. ಅವರಿಗೆ ಚಿಕಿತ್ಸೆ ಕೊಡಲು ಶ್ವಾಸಕೋಶಶಾಸ್ತ್ರಜ್ಞ ವೈದ್ಯರು ಬೇಕು.
ವಿರೋಧಾಭಾಸ ಎಂದರೆ ಇದೇ ಇರಬೇಕು. ಹಾವೇರಿ ಕೋವಿಡ್ ಆಸ್ಪತ್ರೆಯಲ್ಲಿ 8 ವೆಂಟಿಲೇಟರ್ಸ್ ಬೆಡ್ಗಳಿವೆ. ಆದರೆ ಶ್ವಾಸಕೋಶದ ಸಮಸ್ಯೆ ಎದುರಾದರೆ ಚಿಕಿತ್ಸೆ ಕೊಡಲು ಶ್ವಾಸಕೋಶಶಾಸ್ತ್ರಜ್ಞರು (Pulmorologist) ಇಲ್ಲ. ಹೀಗಾಗಿ ಶ್ವಾಸಕೋಶದ ಸಮಸ್ಯೆ ಇದ್ದವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸೇರಿಸಲಾಗುತ್ತಿದೆ. ಕಳೆದ ಮೂರು ತಿಂಗಳಿನಿಂದ ಹಾವೇರಿ ಕೋವಿಡ್ ಆಸ್ಪತ್ರೆಗೆ ಶ್ವಾಸಕೋಶಶಾಸ್ತ್ರಜ್ಞರನ್ನು ನೇಮಕ ಮಾಡದಿರುವುದು ಯಾಕೆ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು
ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಬಸವರಾಜ್ ಬೊಮ್ಮಾಯಿ ಅವರು ಹಾವೇರಿ ಉಸ್ತುವಾರಿ ಜೊತೆಗೆ ರಾಜ್ಯದ ಗೃಹ ಸಚಿವರಾಗಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿಯೆ ಕೆಲಸದ ಒತ್ತಡಗಳು ಹೆಚ್ಚಾಗಿವೆ. ಹೀಗಾಗಿ ಜಿಲ್ಲೆಯ ಕಡೆಗೆ ಹೆಚ್ಚಿನ ಗಮನ ಕೊಡುತ್ತಿಲ್ಲ ಎಂಬ ಆರೋಪಗಳನ್ನು ಜಿಲ್ಲೆಯ ಜನರು ಮಾಡುತ್ತಿದ್ದಾರೆ. ಅದೇನೆ ಇರಲಿ.
ಹಾವೇರಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 182ಕ್ಕೆ ಏರಿಕೆಯಾಗಿದೆ. ಈಗಾಗಲೇ 4 ಜನರು ಸೋಂಕಿನಿಂದ ಸಾವನ್ನಪ್ಪಿದ್ದು, 58 ಸೋಂಕಿತರು ಗುಣಮುಖರಾಗಿದ್ದಾರೆ. ಇನ್ನೂ 122 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೀಗಾಗಿ ಈಗಲಾದರೂ ರಾಜ್ಯ ಸರ್ಕಾರ ಹಾವೇರಿ ಜಿಲ್ಲೆಯ ಜನರ ರಕ್ಷಣೆಗೆ ಮುಂದಾಗಬೇಕಿದೆ. ದಶಕಗಳಿಂದ ವಲಸಿಗ ರಾಜಕಾರಣಿಗಳೇ ಜಿಲ್ಲೆಯಲ್ಲಿ ಅಧಿಕಾರ ನಡೆಸಿರುವ ಫಲವನ್ನು ಜಿಲ್ಲೆಯ ಜನರು ಈಗ ಅನುಭವಿಸುತ್ತಿದ್ದೇವೆ ಎನ್ನುತ್ತಾರೆ ಹಾವೇರಿ ಶಾಂತವೀರಪ್ಪ ಕರ್ಜಗಿ. ಅದೇನೆ ಇರಲಿ ತಕ್ಷಣ ಸರ್ಕಾರ ಹಾವೇರಿ ಜಿಲ್ಲೆಯ ಜನರತ್ತ ಗಮನ ಹರಿಸಬೇಕಿದೆ.