ಹಿರೇಕೆರೂರಲ್ಲಿ ಕೈಗೆ ಸಂತಸ ಕಮಲಕ್ಕೆ ಸಂಕಟ
ಹಾವೇರಿ, ಸೆಪ್ಟೆಂಬರ್ 25: ರಾಜ್ಯದ 15 ಕ್ಷೇತ್ರಗಳಿಗೆ ಘೋಷಣೆಯಾದ ಉಪಚುನಾವಣೆಯಲ್ಲಿ ಹಾವೇರಿ ಜಿಲ್ಲೆ ಹಿರೇಕೆರೂರು ಕ್ಷೇತ್ರದ ವಾತಾವರಣ ಮಾತ್ರ ಕೊಂಚ ಭಿನ್ನ. ಕ್ಷೇತ್ರದಲ್ಲಿ ಅನರ್ಹ ಶಾಸಕ ಬಿ.ಸಿ.ಪಾಟೀಲ್ ಅವರಿಂದ ಕೊನೆಗೂ ಉಳಿದವರಿಗೆ ಅವಕಾಶ ಸಿಗುತ್ತಲ್ಲ ಎನ್ನುವ ಸಂತಸ ಕಾಂಗ್ರೆಸ್ ಪಾಳೆಯದಲ್ಲಿ ಮೂಡಿದರೆ, 2018ರ ಪರಾಜಿತ ಅಭ್ಯರ್ಥಿ ಯು.ಬಿ.ಬಣಕಾರ್ ಅವರ ಭಿನ್ನಮತದಿಂದ ಕಮಲ ಪಾಳೆಯದಲ್ಲಿ ಸಂಕಟ ಶುರುವಾಗಿದೆ.
ಉಪ ಚುನಾವಣೆ; ಒಂದು ಕ್ಷೇತ್ರದಲ್ಲಿ ಬಿಜೆಪಿಗೆ ಸುಲಭದ ಗೆಲುವು!
ಹೌದು, ಜೆಡಿಎಸ್-ಕಾಂಗ್ರೆಸ್ ಸರ್ಕಾರ ಪತನಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜಿಲ್ಲೆಯ ಇಬ್ಬರು ಶಾಸಕರ ಕ್ಷೇತ್ರಗಳಿಗೆ ಉಪಚುನಾವಣೆ ಘೊಷಣೆಯಾಗಿದೆ. ಹಿರೇಕೆರೂರ ಕ್ಷೇತ್ರದಲ್ಲಿ ಬಿ.ಸಿ.ಪಾಟೀಲ ಸೋಲಿಸಲು ಕಾಂಗ್ರೆಸ್ ಪಣ ತೊಟ್ಟಿದ್ದರೆ, ಇತ್ತ ಬಿಜೆಪಿ ಪಾಳೆಯದಲ್ಲಿ ಅಭ್ಯರ್ಥಿಯಾಗಿ ಯಾರನ್ನು ಕಣಕ್ಕೆ ಇಳಿಸಬೇಕು ಎಂಬುವದೇ ಸವಾಲಾಗಿದೆ.
ಆತ್ಮವಿಶ್ವಾಸದಲ್ಲಿ ಕಾಂಗ್ರೆಸ್ ಆಕಾಂಕ್ಷಿಗಳು
ಹಿರೇಕೆರೂರು ಕ್ಷೇತ್ರದ ಶಾಸಕ ಬಿ.ಸಿ.ಪಾಟೀಲ, 2018ರ ಚುನಾವಣೆಯಲ್ಲಿ 555 ಮತಗಳ ಅಂತರದಿಂದ ಬಿಜೆಪಿಯ ಯು.ಬಿ.ಬಣಕಾರ ವಿರುದ್ಧ ಗೆಲುವು ಸಾಧಿಸಿದ್ದರು. ಈ ಕಾರಣದಿಂದ ಬಿಜೆಪಿಯ ಆಂತರಿಕ ಬೇಗುದಿ ಮತ್ತೆ ಕಾಂಗ್ರೆಸ್ ಕೈಹಿಡಿಯಲಿದೆ ಎನ್ನುವ ಆತ್ಮವಿಶ್ವಾಸದಲ್ಲಿ ಕಾಂಗ್ರೆಸ್ ಆಕಾಂಕ್ಷಿಗಳಿದ್ದಾರೆ. ಹಿರೇಕೆರೂರು ಕಾಂಗ್ರೆಸ್ ಮುಖಂಡರಲ್ಲಿ ಈ ಬಾರಿ ಬಿ.ಸಿ. ಪಾಟೀಲಗೆ ಪಾಠ ಕಲಿಸಬೇಕು ಎಂದು ಪಣ ತೊಟ್ಟಂತೆ ಕಾಣುತ್ತಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಸಹ ಅಭ್ಯರ್ಥಿಗಳ ಆಯ್ಕೆ ಜೋರಾಗಿಯೇ ನಡೆದಿದೆ. ಮಾಜಿ ಸಚಿವ, ಶಾಸಕ ಎಚ್.ಕೆ. ಪಾಟೀಲರಿಗೆ ಹಿರೇಕೆರೂರು ಕ್ಷೇತ್ರದ ಉಸ್ತುವಾರಿ ಕೊಟ್ಟಿದ್ದಾರೆ. ಹೀಗಾಗಿ ಇತ್ತೀಚೆಗೆ ಎಚ್.ಕೆ.ಪಾಟೀಲ್ ಕ್ಷೇತ್ರಕ್ಕೆ ಭೇಟಿ ನೀಡಿ ಕಾರ್ಯಕರ್ತರ ಸಭೆ ನಡೆಸಿದ್ದಾರೆ.
ಕ್ಷೇತ್ರದಲ್ಲಿ ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಹಾಗೂ ಅವರ ಪುತ್ರ ಪ್ರಕಾಶ ಬನ್ನಿಕೋಡ, ಜಿಪಂ ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ ಟಿಕೆಟ್ಗಾಗಿ ಹೈಕಮಾಂಡ್ ಬಳಿ ಬೇಡಿಕೆ ಸಲ್ಲಿಸಿದ್ದಾರೆ. ಕ್ಷೇತ್ರದಲ್ಲಿ ಸಾದರ ಲಿಂಗಾಯತರೇ ಈವರೆಗೂ ಆಯ್ಕೆಯಾಗಿರುವುದರಿಂದ ಅದೇ ಸಮುದಾಯದವರಿಗೆ ಕೊಡಬೇಕೋ ಅಥವಾ ಕುರುಬ ಸಮುದಾಯದ ಎಸ್.ಕೆ. ಕರಿಯಣ್ಣನವರಿಗೆ ಕೊಡಬೇಕೋ ಎಂಬ ಲೆಕ್ಕಾಚಾರದಲ್ಲಿ ಹೈಕಮಾಂಡ್ ಇದೆ. ಸದ್ಯ ಬಿಜೆಪಿಯಿಂದ ಯಾರು ಸ್ಪರ್ಧಿಸಲಿದ್ದಾರೆ ಎಂಬುದನ್ನು ನೋಡಿ ಹೈಕಮಾಂಡ್ ಅಭ್ಯರ್ಥಿ ಆಯ್ಕೆ ನಡೆಸಲಿದೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರತೊಡಗಿವೆ.
ಬಣಕಾರ ಬಂಡಾಯವೇಳುವ ಸಾಧ್ಯತೆ
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಶಾಸಕರಾಗಿ ನಂತರ ಅನರ್ಹತೆಗೊಳಗಾದ ಬಿ.ಸಿ.ಪಾಟೀಲ್ ಅವರ ಅನರ್ಹತೆ ವಿಚಾರಣೆ ಪರವಾಗಿ ಬಂದರೆ, ಕ್ಷೇತ್ರದ ಬಿಜೆಪಿ ಪಾಳಯದಲ್ಲಿ ಅಸಮಾಧಾನ ಭುಗಿಲೇಳುವ ಸಾಧ್ಯತೆ ಇದೆ. ಪಾಟೀಲರಿಗೆ ಬಿಜೆಪಿಯಿಂದಲೇ ಟಿಕೆಟ್ ನೀಡುವ ಸಂದರ್ಭ ಬಂದರೆ, ಅದೇ ಪಕ್ಷದ ಪ್ರಭಾವಿ ಮುಖಂಡ ಯು.ಬಿ.ಬಣಕಾರ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಬಹುದು. ಒಂದು ವೇಳೆ ಪಾಟೀಲರು ಸ್ಪರ್ಧಿಸುವ ಅವಕಾಶ ಕಳೆದುಕೊಂಡರೂ, ತಮ್ಮ ಮಗಳು ಅಥವಾ ಪತ್ನಿಗೆ ಟಿಕೆಟ್ ನೀಡುವಂತೆ ಪಟ್ಟು ಹಿಡಿಯಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಪರಿಚಯ
ನಾಮಪತ್ರ ಸಲ್ಲಿಸುವಂತೆ ಪ್ರತಿಭಟನೆ
ನಿನ್ನೆ ಸಿಎಂ ಯಡಿಯೂರಪ್ಪ ತಮ್ಮ ನಿವಾಸದಲ್ಲಿ ಬಿ.ಸಿ.ಪಾಟೀಲ್- ಯು.ಬಿ.ಬಣಕಾರ ನಡುವೆ ನಡೆಸಿದ ಸಂಧಾನ ವಿಫಲವಾಗಿದೆ. ಬಿಜೆಪಿ ಅಧಿಕಾರಕ್ಕೆ ಬರಲು ಬಿ.ಸಿ.ಪಾಟೀಲ್ ಅವರ ತ್ಯಾಗ ಮುಖ್ಯವಾಗಿದ್ದು, ಎಲ್ಲರೂ ಸೇರಿ ಈ ಬಾರಿ ಬಿ.ಸಿ.ಪಾಟೀಲ್ ಅವರನ್ನು ಬೆಂಬಲಿಸುವಂತೆ ಯಡಿಯೂರಪ್ಪ ನಡೆಸಿದ ಮನವೊಲಿಕೆ ಯತ್ನ ವಿಫಲವಾಯಿತು. ಒಂದು ವೇಳೆ ನಾನು ಸುಮ್ಮನಿದ್ದರೆ ನನ್ನನ್ನು ನಂಬಿದ ಕಾರ್ಯಕರ್ತರು ಸುಮ್ಮನಿರಲ್ಲ ಎಂದು ಹೇಳುವ ಮೂಲಕ ಬಿಎಸ್ವೈ ಮನವೊಲಿಕೆ ಯತ್ನವನ್ನು ಬಣಕಾರ್ ನಿರಾಕರಿಸಿದರು.
ತಮ್ಮ ಅಭಿಪ್ರಾಯ ತಿಳಿಸಿ ಬಣಕಾರ್ ಹಿರೇಕೆರೂರಿಗೆ ಬರುತ್ತಿದ್ದಂತೆ ಸಾವಿರಾರು ಸಂಖ್ಯೆ ಅಭಿಮಾನಿಗಳು ಬಣಕಾರ್ ಅವರನ್ನು ಮೆರವಣಿಗೆ ಮೂಲಕ, ಅವರ ಪರ ಜಯಘೋಷ ಕೂಗಿದರು. ನಾಮ ಪತ್ರ ಸಲ್ಲಿಸಿಯೇ ಮನೆಗೆ ತೆರಳುವಂತೆ ಪಟ್ಟು ಹಿಡಿದು ರಾಜ್ಯ ಹೆದ್ದಾರಿಯಲ್ಲಿ ಮಲಗಿ ಪ್ರತಿಭಟನೆ ನಡೆಸಿದರು.
ಬಿಜೆಪಿ ಮುಖಂಡರಿಗೆ ಬಣಕಾರ್ ಸಂದೇಶ?
ಈ ವೇಳೆ ಬೆಂಬಲಿಗರು, ಕಾರ್ಯಕರ್ತರನ್ನು ಸಮಾಧಾನಪಡಿಸಲು ಬಣಕಾರ್ ಹರಸಾಹಸಪಟ್ಟರು. "ನಮ್ಮ ತಂದೆಯ ಕಾಲದಿಂದ ಪಕ್ಷವನ್ನು ಬೆಳೆಸಿದ್ದಾರೆ. ನಾಯಕರು ಹೊಂದಿಕೊಂಡರೆ ಜನ ಸಾಮಾನ್ಯರು ಹೊಂದಿಕೊಳ್ಳುತ್ತಾರೆ ಎಂಬ ಪ್ರಶ್ನೆ ಒಬ್ಬ ನಾಯಕನ ಮೇಲೆ ಅವಲಂಬಿತವಾಗಿರುವುದಿಲ್ಲ. ಯಡಿಯೂರಪ್ಪ ಅವರ ಮೇಲೆ ಗೌರವ ಇಟ್ಟು, ಚುನಾವಣೆಗೆ ನಾನು ಸ್ಪರ್ಧಿಸದಿದ್ದರೆ ಕ್ಷೇತ್ರದಲ್ಲಿ ಅಹಿತಕರ ಘಟನೆ ನಡೆಯುವ ಸಾಧ್ಯತೆಗಳಿವೆ" ಎಂದು ಹೇಳುವ ಮೂಲಕ ತಮಗೆ ಟಿಕೆಟ್ ಸಿಗದಿದ್ದರೆ ಬಂಡಾಯ ಅಭ್ಯರ್ಥಿಯಾಗುವ ಮುನ್ಸೂಚನೆಯನ್ನು ಬಣಕಾರ್ ನೀಡಿದ್ದಾರೆ. ಇಂದು ಹಿರೇಕೆರೂರ್ ನಲ್ಲಿ ನಡೆದ ಅಭಿಮಾನಿಗಳ ಸಭೆಯಲ್ಲಿ ಭಾಗವಹಿಸದಂತೆ ಬಿಎಸ್ವೈ, ಬಣಕಾರ್ ಗೆ ಸೂಚನೆ ಕೊಟ್ಟಿದ್ದರು ಎಂದು ಹೇಳಲಾಗಿದ್ದು, ಅವರ ಸೂಚನೆಯ ಮೇರೆಗೂ ಬಣಕಾರ್ ಇಂದು ತಮ್ಮ ಅಭಿಮಾನಿಗಳು ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಮೂಲಕ ಬಿಜೆಪಿ ಮುಖಂಡರಿಗೆ ಸ್ಪಷ್ಟ ಸಂದೇಶ ರವಾನಿಸಿದಂತಾಗಿದೆ. ಇದು ಯಾವ ಪರಿಣಾಮ ಬೀರಲಿದೆ ಎನ್ನುವುದು ಮಾತ್ರ ನಾಮ ಪತ್ರ ಸಲ್ಲಿಕೆಯ ಕೊನೆಯ ದಿನ ಗೊತ್ತಾಗಲಿದೆ.