ಸಿದ್ದರಾಮಯ್ಯ ಸವಾಲಿಗೆ ರಿಪೋರ್ಟ್ ಕಾರ್ಡ್ ಬಿಟ್ಟ ಸಿಎಂ
ಬೆಂಗಳೂರು, ಅ.23: ಬಸವರಾಜ ಬೊಮ್ಮಾಯಿ ಹಾನಗಲ್ಗೆ ಏನು ಕೊಟ್ಟಿದ್ದಾರೆ ಎಂಬ ಕಾಂಗ್ರೆಸ್ ಟೀಕೆಗೆ ಮುಖ್ಯಮಂತ್ರಿ ಅನುದಾನದ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಿದ್ದಾರೆ.
ಪ್ರತಿಪಕ್ಷದವರ ಟೀಕೆಗಳೇ ನನಗೆ ಮೆಟ್ಟಿಲು. ಟೀಕೆ ಎಂಬ ಮೆಟ್ಟಿಲುಗಳನ್ನು ಒಂದೊಂದಾಗಿ ಏರಿ ಕರ್ನಾಟಕವನ್ನು ಅಭಿವೃದ್ಧಿ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಚಿಕ್ಕಾಂಶಿ ಗ್ರಾಮದಲ್ಲಿ ಚುನಾವಣಾ ಪ್ರಚಾರದಲ್ಲಿ ಹೇಳಿದರು.
ಕಾಂಗ್ರೆಸ್ ಬಗ್ಗೆ ಮತ್ತೆ ಲೇವಡಿ ಮಾಡಿದ ಸಿಎಂ
ಅಲ್ಪಸಂಖ್ಯಾತರ ಬಗ್ಗೆ ಕಾಂಗ್ರೆಸ್ನವರು ಎಲ್ಲಿಲ್ಲದ ಪ್ರೀತಿ ತೋರಿಸುತ್ತಾರೆ. ಚುನಾವಣೆ ಸಮಯದಲ್ಲಿ ಮಾತ್ರ ಈ ಸಮುದಾಯ ಅವರಿಗೆ ನೆನಪಾಗುತ್ತದೆ. ಉಳಿದ ಸಮಯದಲ್ಲಿ ಅವರನ್ನು ಪರಿಗಣಿಸುವುದಿಲ್ಲ ಎಂದು ಬೊಮ್ಮಾಯಿ ನುಡಿದರು.
ಐದು ವರ್ಷಗಳ ಕಾಲ ಅಲ್ಪಸಂಖ್ಯಾತರನ್ನು ಬಾವಿಯಲ್ಲಿಟ್ಟಿರುತ್ತಾರೆ. ಚುನಾವಣೆ ಬಂದಾಗ ಹಗ್ಗ ಕೊಟ್ಟು ಮೇಲೆ ತಂದು ಓಟ್ ಹಾಕಿಸಿಕೊಂಡು ಮತ್ತೆ ಬಾವಿಗೆ ದೂಡುತ್ತಾರೆ. ಅಲ್ಪಸಂಖ್ಯಾತರನ್ನು ಕಾಂಗ್ರೆಸ್ನವರು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.
ಈ ದೇಶದಲ್ಲಿ ಅಲ್ಪಸಂಖ್ಯಾತರು ಇಲ್ಲದಿದ್ದರೆ ಅವರಿಲ್ಲದಿದ್ದರೆ ಕಾಂಗ್ರೆಸ್ ಪಕ್ಷ ದೇಶದಲ್ಲಿ ಹುಡುಕುವಂತಹ ಪರಿಸ್ಥಿತಿ ಬರುತ್ತಿತ್ತು. ಕಾಂಗ್ರೆಸ್ ಗೆ ಅಲ್ಪಸಂಖ್ಯಾತರ ರಕ್ಷಣೆ ಇದೆ, ಆದರೆ ಕಾಂಗ್ರೆಸ್ ಅಲ್ಪ ಸಂಖ್ಯಾತರ ರಕ್ಷಣೆ ಮಾಡುತ್ತದೆ ಎಂದು ಹೇಳುತ್ತಾರೆ. ಆದರೆ, ನಿಜವಾಗಿಯೂ ಅವರನ್ನು ಕಡೆಗಣಿಸಿಯೇ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.
ಕಾಯಕದಲ್ಲಿ ನಂಬಿಕೆ
ಭಾರತೀಯ ಜನತಾ ಪಕ್ಷ ಕಾಯಕದಲ್ಲಿ ನಂಬಿಕೆ ಇಟ್ಟಿದೆ. ಮಾತುಗಳಿಂದ ಹೊಟ್ಟೆ ತುಂಬುವುದಿಲ್ಲ ಅಭಿವೃದ್ಧಿಯಾಗುವುದಿಲ್ಲ. ರಾಜಕಾರಣ ಅಂದರೆ ಜನರನ್ನು ಮರುಳು ಮಾಡುವುದಲ್ಲ. ಕೆಳಮಟ್ಟದಲ್ಲಿ ಭಾಷೆ ಬಳಸಿದರೆ ದೊಡ್ಡವರಾಗುವುದಿಲ್ಲ. ಅಭಿವೃದ್ಧಿ ಒಂದೇ ನಮ್ಮ ಪಕ್ಷದ ಅಜೆಂಡಾ ಎಂದು ಅವರು ಹೇಳಿದರು.
ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಹಾನಗಲ್ ಕ್ಷೇತ್ರದ ಜನ ಕೆರೆ ತುಂಬಿಸುವ ಯೋಜನೆಯ ಬೇಡಿಕೆ ಇಟ್ಟಿದ್ದರು. ಈ ಕ್ಷೇತ್ರದ ಅಭಿವೃದ್ಧಿಗಾಗಿ ಒಂದೇ ದಿನದಲ್ಲಿ 625 ಕೋಟಿ ಅನುದಾನವನ್ನು ಮಂಜೂರು ಮಾಡಿದ್ದರು. ಇದು ಭಾರತೀಯ ಜನತಾ ಪಕ್ಷ ಅಭಿವೃದ್ಧಿಗೆ ನೀಡುವ ಮಹತ್ವ ಎಂದು ಬೊಮ್ಮಾಯಿ ಹೇಳಿದರು.
"ಯಾರು ಎಷ್ಟೇ ಟೀಕೆ ಮಾಡಿಲಿ. ನನ್ನ ಗುರಿ ರೈತರ, ದೀನದಲಿತರ, ನೀರಾವರಿ ಯೋಜನೆಗಳ ಕರ್ನಾಟಕದ ಸಮಗ್ರ ಅಭಿವೃದ್ದಿತ್ತ ಮಾತ್ರ ಇರುತ್ತದೆ. ಸಂಪೂರ್ಣ ಕರ್ನಾಟಕವನ್ನು ಅಭಿವೃದ್ಧಿ ಮಾಡುವುದೊಂದೇ ನನ್ನ ಕಾಯಕ. ಆ ಗುರಿಯಿಂದ ನಾನು ವಿಮುಖವಾಗುವುದಿಲ್ಲ" ಎಂದು ಅವರು ಪ್ರಚಾರದ ವೇಳೆ ಹೇಳಿದರು.
ರಿಪೋರ್ಟ್ ಕಾರ್ಡ್ ಹೀಗಿದೆ
* ಹಾನಗಲ್ ತಾಲೂಕಿನ 35,433 ರೈತರಿಗೆ ತಲಾ 10,000 ರೂ. ನೀಡಲಾಗಿದೆ.
* ಕೋವಿಡ್ ಸಂದರ್ಭದಲ್ಲಿ 12,000 ಕಾರ್ಮಿಕರಿಗೆ ಕಿಟ್ ನೀಡಲಾಗಿದೆ.
* ಪ್ರಧಾನಮಂತ್ರಿ ಕಲ್ಯಾಣ ಯೋಜನೆಯಲ್ಲಿ 66,000 ಉಚಿತವಾಗಿ ಪಡಿತರ ನೀಡಲಾಗಿದೆ.
* ಕಟ್ಟಡ ಕಾರ್ಮಿಕರಿಗೆ 42 ಕೋಟಿ ರೂ. ನೀಡಲಾಗಿದೆ
* ಹೂವು ಮಾರುವ 6463 ಜನರಿಗೆ ತಲಾ 10,000 ರೂ. ನೀಡಲಾಗಿದೆ
* ಹಣ್ಣು ಮಾರುವ 1980 ತಲಾ 10,000 ರೂ. ನೀಡಲಾಗಿದೆ.
* ಒಟ್ಟು 17.60 ಕೋಟಿ ರೂ. ಹಾನಗಲ್ ತಾಲೂಕಿನ ಜನರಿಗೆ ನೀಡಲಾಗಿದೆ.
* ಮೆಕ್ಕೆಜೋಳ ಬೆಳೆಗಾರರಿಗೆ 17.63 ಕೋಟಿ ರೂ. ಅನುದಾನ ನೀಡಲಾಗಿದೆ.
* ಎಸ್.ಸಿ ಎಸ್.ಟಿ ಸಮುದಾಯಕ್ಕೆ 20 ಕೋಟಿ ರೂ. ಅನುದಾನ ನೀಡಲಾಗಿದೆ.
* ಗ್ರಾಮೀಣ ಮತ್ತು ಲೋಕೋಪಯೋಗಿ ಸೇರಿ ಒಟ್ಟು ಕೋಟಿ 80 ಕೋಟಿ ರೂ. ಈ ವರ್ಷ ಮಂಜೂರು ಮಾಡಲಾಗಿದೆ
* ಅಕ್ಕಿ ಆಲೂರು ಮತ್ತು ಹಾನಗಲ್ ಎರಡೂ ಐಟಿಐ ಉನ್ನತೀಕರಣಕ್ಕೆ 60 ಕೋಟಿ ರೂ. ನೀಡಲಾಗಿದೆ.
* ಗ್ರಾಮೀಣ ಕುಡಿಯುವ ನೀರಿಗೆ 64 ಕೋಟಿ ರೂ. ಮಂಜೂರಾಗಿದೆ ಅದರಲ್ಲಿ 26 ಕೋಟಿ ಅನುದಾನ ಬಳಕೆ ಆಗಿದೆ.
* ಹಾನಗಲ್ ಕ್ಷೇತ್ರದಲ್ಲಿ 20 ಕೋಟಿ ರೂ. ಅನುದಾನವನ್ನು ಶಿವಕುಮಾರ ಉದಾಸಿ ಅವರು ಮಂಜೂರು ಮಾಡಿಸಿದ್ದಾರೆ.