ಬಸವರಾಜ ಬೊಮ್ಮಾಯಿ ಮುಂದಿನ ಕ್ಷೇತ್ರ ಯಾವುದು?: ಅವರೇ ನೀಡಿದ ಸ್ಪಷ್ಟನೆ ಹೀಗಿದೆ..
ಹಾವೇರಿ, ಮಾರ್ಚ್ 26 : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಚರ್ಚೆಗೆ ತೆರೆ ಎಳೆದಿದ್ದಾರೆ.
ಶಿಗ್ಗಾವಿಯಲ್ಲಿ ಅಲ್ಪಸಂಖ್ಯಾತ ಮತಗಳು ಹೆಚ್ಚಿನ ಸಂಖ್ಯೆಲ್ಲಿರುವುದರಿಂದ ತಮಗೆ ಹಿನ್ನಡೆ ಆಗಬಹುದು ಎಂದು ಬಸವರಾಜ ಬೊಮ್ಮಾಯಿ ಕ್ಷೇತ್ರ ಬದಲಿಸುತ್ತಾರೆ. ಸವಣೂರು ಕ್ಷೇತ್ರಕ್ಕೆ ಹೋಗುತ್ತಾರೆ, ದಾವಣಗೆರೆ ಉತ್ತರ ಕ್ಷೇತ್ರದತ್ತ ಮುಖಮಾಡಿದ್ದಾರೆ ಎಂಬೆಲ್ಲಾ ಊಹಾಪೋಹಗಳು ಇದ್ದವು. ಎಲ್ಲ ಚರ್ಚೆಗಳಿಗೆ ಬಸವರಾಜ ಬೊಮ್ಮಾಯಿ ಅವರು ತಮ್ಮ ತವರು ಕ್ಷೇತ್ರದಲ್ಲಿಯೇ ತೆರೆ ಎಳೆದಿದ್ದಾರೆ.
ಅವರು ಇಂದು ಸವಣೂರಿನ ಹೆಸ್ಕಾಂ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು.
ಶಿಗ್ಗಾಂವಿ ಕ್ಷೇತ್ರದಿಂದಲೇ ಸ್ಪರ್ಧೆ
2023ರ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿಯವರು ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಮೂರು ಬಾರಿ ಶಿಗ್ಗಾಂವಿ ಕ್ಷೇತ್ರದ ಜನ ಗೆಲುವು ನೀಡಿದ್ದಾರೆ. ಈ ಬಾರಿಯೂ ಶಿಗ್ಗಾಂವಿ ಕ್ಷೇತ್ರದಿಂದಲೇ ಸ್ಪರ್ಧಿಸುವುದಾಗಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.
2023ರ ಕರ್ನಾಟಕ ವಿಧಾನಸಭಾ ಚುನವಣೆಯಲ್ಲಿ ಭಾರತೀಯ ಜನತಾ ಪಕ್ಷ ಸ್ವಂತ ಶಕ್ತಿಯಿಂದ ಸಂಪೂರ್ಣ ಬಹುಮತದಿಂದ ಜನರ ಆರ್ಶೀವಾದದೊಂದಿಗೆ ಆಡಳಿತ ಚುಕ್ಕಾಣಿಯನ್ನು ಹಿಡಿಯಲು ಯಶಸ್ವಿಯಾಗುತ್ತೇವೆಂಬ ಸಂಪೂರ್ಣ ವಿಶ್ವಾಸವಿದೆ ಎಂದು ತಿಳಿಸಿದರು.
ಉತ್ತರಪ್ರದೇಶದ ಚುನಾವಣೆಯ ನಂತರ ಯೋಗಿ ಆದಿತ್ಯನಾಥ 2ನೇ ಬಾರಿ ಮುಖ್ಯಮಂತ್ರಿಯಾಗಿ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡಿದ್ದೇನೆ. ಚುನಾವಣೆಯ ನಂತರ ನಾಲ್ಕು ರಾಜ್ಯಗಳಲ್ಲಿ ಭಾರತೀಯ ಜನತಾ ಪಕ್ಷದ ಗೆಲುವು ಇಡೀ ದೇಶದಲ್ಲಿ ಹೊಸ ರಾಜಕೀಯ ಸಂಚಲನ ಪ್ರಾರಂಭವಾಗಿದೆ. ಉತ್ತರಖಂಡ್, ಮಣಿಪುರ, ಗೋವಾ ಮತ್ತು ಉತ್ತರ ಪ್ರದೇಶ ಗೆಲುವು 2024ರ ಲೋಕಸಭಾ ಚುನಾವಣೆಯ ದಿಕ್ಸೂಚಿಯನ್ನು ಸ್ಪಷ್ಟವಾಗಿದೆ. ಕರ್ನಾಟಕದಲ್ಲಿಯೂ ದೊಡ್ಡ ಪ್ರಮಾಣ ಬೆಂಬಲ ವ್ಯಕ್ತವಾಗುತ್ತಿದೆ. ೨೦೨೩ ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದರು.
ಉಚ್ಛನ್ಯಾಯಾಲಯದ ತೀರ್ಪಿನ ಪಾಲನೆ ಆಗಬೇಕು:
ಹಿಜಾಬ್ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಯಿಸಿ, ಬಹಳ ವರ್ಷಗಳಿಂದ ಶಾಲೆಗಳಲ್ಲಿ ಶಾಲಾ ಸಮವಸ್ತ್ರ ನಿಯಮವನ್ನು ಪಾಲಿಸಲಾಗುತ್ತಿದೆ. ಕೆಲವು ಶಕ್ತಿಗಳ ಪ್ರಚೋದನೆಯಿಂದ ಉಚ್ಛ ನ್ಯಾಯಾಲಯದ ತೀರ್ಪಿನ ನಂತರವೂ ಗೊಂದಲವೆದ್ದಿದೆ. ಆದಾಗ್ಯೂ ರಾಜ್ಯದಲ್ಲಿ ಶಾಂತಿ,ಕಾನೂನು ಸುವ್ಯವಸ್ಥೆ ಕಾಪಾಡಲಾಗಿದೆ. ಉಚ್ಛ ನ್ಯಾಯಾಲಯದ ತೀರ್ಪಿನ ಪಾಲನೆ ಆಗಬೇಕು, ಪ್ರಚೋದನೆ ಮಾಡಬಾರದು ಎಂಬುದು ಜನಾಭಿಪ್ರಾಯವಾಗಿದೆ. ಈ ದೇಶದ ಕಾನೂನನ್ನು ಎಲ್ಲರೂ ಗೌರವಿಸಬೇಕು ಎಂದರು.
ಶಾಂತಿ ಸೌಹಾರ್ದತೆಯಿಂದ ಸಮಸ್ಯೆಗೆ ಪರಿಹಾರ :
ದೇವಸ್ಥಾನದ ಬಳಿ ಅನ್ಯಧರ್ಮದವರ ವ್ಯಾಪಾರ ವಿವಾದಕ್ಕೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ 2002ರಲ್ಲಿ ಧಾರ್ಮಿಕ ದತ್ತಿ ಇಲಾಖೆಯಲ್ಲಿ ಸ್ಪಷ್ಟ ಆದೇಶವಿದೆ. ಈ ಕಾನೂನು ಹೊಸದಾಗಿ ಆಗಿರುವುದಲ್ಲ. ಜಾತ್ರೆಯ ಸಂದರ್ಭದಲ್ಲಿ ದೇವಸ್ಥಾನದ ಪ್ರದೇಶದಲ್ಲಿ ಕಾಂಟ್ರಾಕ್ಟ್ ಸಬ್ ಲೀಸ್ ಆಗಿರುತ್ತದೆ. ಎಲ್ಲ ಜನರೂ ಶಾಂತಿ ಸೌಹಾರ್ದತೆಯಿಂದ ಕುಳಿತು ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಾಗಿದೆ ಎಂದರು.
ವಿರೋಧ ಪಕ್ಷದ ನಾಯಕರಾದ ಸಿದ್ಧರಾಮಯ್ಯ ಅವರು ಹೆಣ್ಣುಮಕ್ಕಳ ಶಿರವಸ್ತ್ರದ ಬಗ್ಗೆ ಮಾಡಿದ ವಿವಾದಿತ ಹೇಳಿಕೆ ಬಗ್ಗೆ ಅವರನ್ನೇ ಕೇಳಬೇಕು. ಆದರೆ ಶಾಲಾ ಸಮವಸ್ತ್ರದ ನೀತಿಯ ಬಗ್ಗೆ ಉಚ್ಛನ್ಯಾಯಾಲಯದ ಸ್ಪಷ್ಟ ಆದೇಶವಿದೆ. ಈ ನಿಟ್ಟಿನಲ್ಲಿ ಪುನಃ ಪ್ರಚೋದನೆ ಕೊಡುವಂತಹ ಕೆಲಸ ಆಗಬಾರದು ಎಂದು ತಿಳಿಸಿದರು.