ವಿವಾದದ ಬಳಿಕ ಆಸ್ಪತ್ರೆಗೆ ತೆರಳಿ ಎರಡನೆಯ ಡೋಸ್ ಲಸಿಕೆಗೆ ಪಡೆದ ಬಿ.ಸಿ ಪಾಟೀಲ್!
ಹಾವೇರಿ, ಏಪ್ರಿಲ್ 3: ಮನೆಗೇ ವೈದ್ಯಕೀಯ ಸಿಬ್ಬಂದಿಯನ್ನು ಕರೆಸಿ ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದುಕೊಂಡು ವಿವಾದ ಸೃಷ್ಟಿಸಿದ್ದ ಕೃಷಿ ಸಚಿವ ಬಿ.ಸಿ. ಪಾಟೀಲ್, ಎರಡನೆಯ ಡೋಸ್ ಲಸಿಕೆಯನ್ನು ಸರ್ಕಾರಿ ಆಸ್ಪತ್ರೆಗೆ ತೆರಳಿ ಪಡೆದುಕೊಂಡಿದ್ದಾರೆ. ಆದರೆ ಬಿಸಿ ಪಾಟೀಲ್ ಅವರ ಲಸಿಕೆ ಪ್ರಕರಣದಲ್ಲಿ ತಾಲ್ಲೂಕು ಆರೋಗ್ಯ ಅಧಿಕಾರಿಯನ್ನು ಅಮಾನತುಗೊಳಿಸಿರುವುದು ಚರ್ಚೆಗೆ ಒಳಗಾಗಿದೆ.
ಕಳೆದ ಮಾರ್ಚ್ ತಿಂಗಳಲ್ಲಿ ಕೋವಿಡ್ ಲಸಿಕೆಯ ಮೊದಲ ಡೋಸ್ ಲಸಿಕೆಯನ್ನು ಬಿ.ಸಿ ಪಾಟೀಲ್ ಅವರು ಹಿರೇಕೆರೂರಿನಲ್ಲಿನ ತಮ್ಮ ಮನೆಯಲ್ಲಿಯೇ ಪಡೆದುಕೊಂಡಿದ್ದರು. ಪ್ರಧಾನಿ ಮೋದಿ, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ ಗಣ್ಯರು ಆಸ್ಪತ್ರೆಗೇ ತೆರಳಿ ಲಸಿಕೆ ಪಡೆದುಕೊಂಡಿರುವಾಗ ಬಿ.ಸಿ ಪಾಟೀಲ್ ನಿವಾಸಕ್ಕೇ ಸಿಬ್ಬಂದಿಯನ್ನು ಕರೆಸಿ ಲಸಿಕೆ ಪಡೆದುಕೊಳ್ಳುವ ಮೂಲಕ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿತ್ತು.
ಮನೆಯಲ್ಲಿ ಲಸಿಕೆ ಪಡೆದ ಸಚಿವರು; ಅಧಿಕಾರಿ ಅಮಾನತು
ವಿವಾದದ ಬಳಿಕ ಎಚ್ಚೆತ್ತ ಬಿ.ಸಿ. ಪಾಟೀಲ್ ಅವರು ಶುಕ್ರವಾರ ಹಿರೇಕೆರೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಎರಡನೆಯ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. '45 ವರ್ಷ ಮೇಲ್ಪಟ್ಟ ಎಲ್ಲ ನಾಗರಿಕರಿಗೂ ಕೊರೊನಾ ಲಸಿಕೆ ಲಭ್ಯವಿದ್ದು, ದಯವಿಟ್ಟು ಅರ್ಹ ವ್ಯಕ್ತಿಗಳು ಸ್ವಯಂಪ್ರೇರಿತವಾಗಿ ಲಸಿಕೆಯನ್ನು ಪಡೆಯಬೇಕೆಂದು ವಿನಂತಿಸಿಕೊಳ್ಳುತ್ತೇನೆ' ಎಂದು ಅವರು ಟ್ವಿಟ್ಟರ್ನಲ್ಲಿ ಹೇಳಿದ್ದಾರೆ.
ಮಾರ್ಚ್ 2ರಂದು ತಾಲ್ಲೂಕು ಆಸ್ಪತ್ರೆಯ ಸಿಬ್ಬಂದಿ ಬಿ.ಸಿ. ಪಾಟೀಲ್ ಮನೆಗೆ ತೆರಳಿ ಲಸಿಕೆ ನೀಡಿದ್ದರು. ತಾಲ್ಲೂಕು ಆರೋಗ್ಯಾಧಿಕಾರಿ ಸೂಚನೆಯಂತೆ ಲಸಿಕೆಯನ್ನು ಕೊಂಡೊಯ್ದು ಲಸಿಕೆ ನೀಡಿದ್ದಾರೆ. ಹೀಗಾಗಿ ಇದಕ್ಕೆ ಅವರೇ ಹೊಣೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಝೆಡ್. ಆರ್. ಮಕಾಂದಾರ್ ಅವರನ್ನು ಅಮಾನತುಗೊಳಿಸಲಾಗಿತ್ತು.
ಇಂದು ಹಿರೇಕೆರೂರಿನ ಸರ್ಕಾರಿ ಆಸ್ಪತ್ರೆಯಲ್ಲಿ, ಎರಡನೇ ಹಂತದ ಕೋವಿಡ್ ಲಸಿಕೆಯನ್ನು ಪಡೆದೆನು.
— Kourava B.C.Patil (@bcpatilkourava) April 2, 2021
45 ವರ್ಷ ಮೇಲ್ಪಟ್ಟ ಎಲ್ಲ ನಾಗರೀಕರಿಗೂ ಕೊರೊನಾ ಲಸಿಕೆ ಲಭ್ಯವಿದ್ದು, ದಯವಿಟ್ಟು ಅರ್ಹ ವ್ಯಕ್ತಿಗಳು ಸ್ವಯಂಪ್ರೇರಿತವಾಗಿ ಲಸಿಕೆಯನ್ನು ಪಡೆಯಬೇಕೆಂದು ವಿನಂತಿಸಿಕೊಳ್ಳುತ್ತೇನೆ. @DDChandanaNews | @KarnatakaVarthe | @CMofKarnataka pic.twitter.com/JTMpjI6AP0
ವೈದ್ಯಾಧಿಕಾರಿ ಮೇಲೆ ಒತ್ತಡ ಹೇರಿ ಬಿ.ಸಿ. ಪಾಟೀಲ್ ಅವರು ಮನೆಗೆ ಅವರನ್ನು ಕರೆಸಿಕೊಂಡು ಲಸಿಕೆ ಹಾಕಿಸಿಕೊಂಡಿದ್ದಾರೆ. ಹೀಗಾಗಿ ಸಚಿವರ ಮೇಲೆಯೂ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಅಧಿಕಾರಿಯ ಅಮಾನತು ಶಿಕ್ಷೆಯನ್ನು ವಾಪಸ್ ಪಡೆದುಕೊಳ್ಳಬೇಕು ಎಂದು ಅನೇಕರು ಆಗ್ರಹಿಸಿದ್ದಾರೆ.
Recommended Video
"ನಾನು ಯಾವುದೇ ಅಪರಾಧ ಮಾಡಿಲ್ಲ. ನಾನು ಆಸ್ಪತ್ರೆಗೆ ಹೋದರೆ ಅಲ್ಲಿರುವ ಜನರಿಗೆ ತೊಂದರೆ ಆಗುತ್ತದೆ ಎಂಬ ದೃಷ್ಟಿಯಿಂದ ಆಸ್ಪತ್ರೆಗೆ ಹೋಗಿಲ್ಲ. ಮನೆಯಲ್ಲಿಯೇ ಜನರ ದೂರುಗಳನ್ನು ಆಲಿಸುತ್ತಾ ಲಸಿಕೆ ಪಡೆದಿದ್ದೇನೆ" ಎಂದು ಬಿ.ಸಿ. ಪಾಟೀಲ್ ಸಮರ್ಥನೆ ನೀಡಿದ್ದರು.