ಹಾವೇರಿಯಲ್ಲಿ ಶತಮಾನದ ಜಾತ್ರೆ ಭಾಗ-1: ಉ-ಕ ಹೆಬ್ಬಾಗಿಲಿನಲ್ಲಿ ರೊಟ್ಟಿ ಮಾಡಲ್ಲ ಮಂದಿ!
ಹಾವೇರಿ, ಜನವರಿ.15: ಉತ್ತರ ಕರ್ನಾಟಕ ಅಂದರೆ ಜೋಳದ ರೊಟ್ಟಿ.. ಜೋಳದ ರೊಟ್ಟೆ ಎಂದರೆ ಉತ್ತರ ಕರ್ನಾಟಕ ಅನ್ನೋ ಮಾತಿದೆ. ಏಕೆಂದರೆ ಉತ್ತರ ಕರ್ನಾಟಕದ ಮಂದಿಗೂ ಈ ಜೋಳದ ರೊಟ್ಟಿಗೂ ಅಂಥ ಅವಿನಾಭಾವ ಸಂಬಂಧವಿದೆ.
ಜೋಳದ ರೊಟ್ಟಿ ಇಲ್ಲದೇ ಉತ್ತರ ಕರ್ನಾಟಕ ಮಂದಿಯೇ ಇಲ್ಲ. ಹೀಗಿರುವಾಗ ಉತ್ತರ ಕರ್ನಾಟಕದ ಹೆಬ್ಬಾಗಿಲು, ಶಿವಶರಣರ ನಾಡು, ಯಾಲಕ್ಕಿ ನಗರಿ ಹಾವೇರಿಯಲ್ಲಿ ಜನರು ರೊಟ್ಟಿ ಮಾಡುವುದೇ ಇಲ್ಲವಂತೆ. ಅದಕ್ಕೆ ಕಾರಣವಾಗಿದ್ದೇ ಶತಮಾನದ ನಂತರ ನಡೆಯುತ್ತಿರುವ ನಗರ ದೇವತೆ ದ್ಯಾವವ್ವ ದೇವಿ ಜಾತ್ರೆ.
ಕೊಪ್ಪಳ ಗವಿ ಸಿದ್ದೇಶ್ವರ ಜಾತ್ರೆ; 18 ಲಕ್ಷ ಮಿರ್ಚಿ ತಯಾರಿ!
ದ್ಯಾಮವ್ವ ದೇವಿ ಜಾತ್ರೆಗೂ ಜೋಳದ ರೊಟ್ಟಿಗೂ ಎಲ್ಲಿಂದ ಎಲ್ಲಿಗೆ ಸಂಬಂಧ ಎಂಬ ಪ್ರಶ್ನೆ ಹುಟ್ಟಬಹುದು. ಆದರೆ, ಅದಕ್ಕೆ ಬಲವಾದ ಕಾರಣವೂ ಇದೆ. ನಗರದಲ್ಲಿ ಬರೋಬ್ಬರಿ 115 ವರ್ಷಗಳ ನಂತರ ಹಾವೇರಿಯ ನಗರ ದೇವತೆ ದ್ಯಾಮವ್ವ ದೇವಿ ಜಾತ್ರೆಗೆ ಯಾಲಕ್ಕಿ ನಗರಿ ಸಜ್ಜುಗೊಂಡಿದೆ. ಒಂದು ವಾರಗಳ ಕಾಲ ನಡೆಯುವ ಜಾತ್ರೆಯಲ್ಲಿ ಪ್ರತಿದಿನವೂ ಒಂದೊಂದು ವಿಶೇಷ ಆಚರಣೆಗಳನ್ನು ಮಾಡಲಾಗುತ್ತದೆ. ಈ ಜಾತ್ರೆ ವಿಶೇಷಗಳನ್ನು ಸರಣಿ ಅಂಗಣಗಳ ಮೂಲಕ ಹಾವೇರಿ ಅಷ್ಟೇ ಅಲ್ಲದೇ ಇಡೀ ರಾಜ್ಯದ ಜನರಿಗೆ ತಿಳಿಸುವ ಉದ್ದೇಶದಿಂದ ಒನ್ ಇಂಡಿಯಾ ಸರಣಿ ಅಂಕಣಗಳನ್ನು ಪ್ರಕಟಿಸುತ್ತಿದೆ.
ಜೋಳದ ರೊಟ್ಟಿ ಮಾಡುವುದಿಲ್ಲ ಹಾವೇರಿ ಮಂದಿ!
ಫೆಬ್ರವರಿ ತಿಂಗಳಿನಲ್ಲಿ ನಡೆಯುವ ನಗರದೇವತೆ ದ್ವಾಮವ್ವ ಜಾತ್ರೆಗೆ ಹಾವೇರಿ ಜನರು ಜನವರಿ ತಿಂಗಳಿನಿಂದಲೇ ವ್ರತ ಆಚರಣೆ ಮಾಡುತ್ತಿದ್ದಾರೆ. ಫೆಬ್ರವರಿ.21 ರಂದು ಆರಂಭವಾಗುವ ಜಾತ್ರೆ ಫೆಬ್ರವರಿ.28ರವರೆಗೂ ನಡೆಯಲಿದೆ. ಅದಕ್ಕಾಗಿ 5 ವಾರ, 11 ವಾರ ಹಾಗೂ 21 ವಾರಗಳಂತೆ ನಗರದ ಮಹಿಳೆಯರು ವ್ರತ ಆಚರಣೆ ಮಾಡುತ್ತಿದ್ದಾರೆ.
ಶುಕ್ರವಾರ, ಮಂಗಳವಾರ ಜೋಳದ ರೊಟ್ಟಿ ಇಲ್ಲ
ಹಾವೇರಿ ನಗರದಲ್ಲಿ ನಡೆಯಲಿರುವ ದ್ಯಾಮವ್ವ ಜಾತ್ರೆ ವಿಶೇಷವಾಗಿ ಮಹಿಳೆಯರು ಹೆಚ್ಚಾಗಿ ನಡೆದುಕೊಳ್ಳುತ್ತಾರೆ. ವಾರಗಳ ಕಾಲ ದೇವಿಗೆ ವ್ರತ ನಡೆಸುವ ಮಹಿಳೆಯರು ಮನೆಯಲ್ಲಿ ಮಂಗಳವಾರ ಹಾಗೂ ಶುಕ್ರವಾರ ರೊಟ್ಟಿಯನ್ನು ಮಾಡುವುದಿಲ್ಲ ಎಂದು ನಗರಸಭಾ ಸದಸ್ಯರಾದ ಚನ್ನಮ್ಮ ಬ್ಯಾಡಗಿ ಅವರು ಮಾಹಿತಿ ನೀಡಿದ್ದಾರೆ.
ನಗರ ದೇವತೆಯನ್ನು ಪ್ರಾರ್ಥಿಸಿದರೆ ಇಷ್ಟಾರ್ಥ ಸಿದ್ಧಿ
ಶತಮಾನಗಳ ಇತಿಹಾಸ ಹೊಂದಿರುವ ಹಾವೇರಿಯ ನಗರ ದೇವತೆ ದ್ಯಾಮವ್ವ ದೇವಿ ಭಕ್ತರ ಪಾಲಿನ ಶಕ್ತಿದೇವತೆಯಾಗಿದ್ದಾಳೆ. ನಂಬಿ ಬಂದ ಭಕ್ತರನ್ನು ಸದಾ ಕಾಯುವ ದೇವತೆ ಪವಾಡ ಅಸಂಖ್ಯಾತವಾಗಿವೆ. ಹಾವೇರಿ ಅಷ್ಟೇ ಅಲ್ಲದೇ, ಸುತ್ತಮುತ್ತಲಿನ ಗ್ರಾಮಗಳಿಂದಲೂ ಸಾವಿರಾರು ಭಕ್ತಾದಿಗಳು ದ್ಯಾಮವ್ವ ದೇವಿಗೆ ನಡೆದುಕೊಳ್ಳುತ್ತಾರೆ. ಪ್ರತಿವರ್ಷ ದೇವಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಈ ವೇಳೆ ಸಾವಿರ ಸಾವಿರ ಭಕ್ತಾದಿಗಳು ಧಾವಿಸಿ ಬರುತ್ತಾರೆ.
ದ್ಯಾಮವ್ವ ದೇವಿ ಸನ್ನಿಧಾನದಲ್ಲಿನ ಹಲವು ವೈಶಿಷ್ಟ
ದ್ವಾಮವ್ವದೇವಿ ಸನ್ನಿಧಾನವನ್ನು ಹಲವು ವೈಶಿಷ್ಟಗಳನ್ನು ಹೊಂದಿದೆ. ಶತಮಾನಗಳ ಕಾಲ ಜಾತ್ರೆಯನ್ನು ನಡೆಸದಿರಲು ಈ ವೈಶಿಷ್ಟಗಳೇ ಕಾರಣ ಅಂತಲೂ ಹೇಳಲಾಗುತ್ತಿದೆ. ಶಕ್ತಿದೇವತೆಗೆ ಕಟ್ಟುನಿಟ್ಟಿನ ಪೂಜೆ-ಪುನಸ್ಕಾರಗಳು ನಡೆಯಬೇಕು. ಇದರ ಬಗ್ಗೆ ತಿಳಿಯದೇ ಯಾವುದೇ ಆಚರಣೆಗಳನ್ನು ಮಾಡುವಂತಿಲ್ಲ. ಹೀಗಾಗಿ ಸುಮಾರು 115 ವರ್ಷಗಳ ಕಾಲ ದೇವಿ ಸನ್ನಿಧಾನದಲ್ಲಿ ಜಾತ್ರೆಯೇ ನಡೆದಿರಲಿಲ್ಲ. 2020ರಲ್ಲಿ ದೇವಿ ಜಾತ್ರೆ ಯಾಲಕ್ಕಿ ನಗರಿಯು ಸಜ್ಜುಗೊಂಡಿದೆ. ಪ್ರತಿಯೊಂದು ಅಂಕಣದಲ್ಲಿ ಈ ಜಾತ್ರೆ ವಿಶೇಷತೆಗಳನ್ನು ಸಾರುವುದೇ ಈ ಸರಣಿಯ ಮುಖ್ಯ ಉದ್ದೇಶವಾಗಿದೆ.