ಹಾವೇರಿ ಅರಣ್ಯದಲ್ಲಿ ನಡೆಯುತ್ತಿದೆ ನೀರು ಇಂಗಿಸುವ ಅಪರೂಪದ ಕೆಲಸ
Recommended Video
ಹಾವೇರಿ, ಫೆಬ್ರವರಿ 22: ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕು ಕುನ್ನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಗುಡಗೇರಿ ಅರಣ್ಯ ಕ್ಷೇತ್ರದಲ್ಲಿ ನರೇಗಾ ನೆರವಿನಲ್ಲಿ ನೀರು ಇಂಗಿಸುವ ಅಪರೂಪದ ಕಾರ್ಯಕ್ಕೆ ಅರಣ್ಯ ಇಲಾಖೆ ಕಾರ್ಯೋನ್ಮುಖವಾಗಿದೆ.
ಬೇಸಿಗೆಯ ನೀರಿನ ಬರ ಇಂಗಿಸಲು ಟ್ರಂಚ್ಗಳ ಮೂಲಕ ಮಳೆಗಾಲದಲ್ಲಿ ಭೂಮಿಗೆ ನೀರು ಇಂಗಿಸಲು ಗುಡಗೇರಿ ಕ್ಷೇತ್ರದ ಅರಣ್ಯ ಪ್ರದೇಶದಲ್ಲಿ ಸುಮಾರು 400ಕ್ಕೂ ಅಧಿಕ ಟ್ರಂಚುಗಳನ್ನು ಅರಣ್ಯ ಇಲಾಖೆ ನಿರ್ಮಿಸಿದೆ. 5 ಮೀಟರ್ ಉದ್ದ, 1 ಮೀಟರ್ ಅಗಲ, 1 ಮೀಟರ್ ಆಳವಾದ ಈ ಆಯತಾಕಾರದ ಟ್ರಂಚುಗಳನ್ನು ಅಂದಾಜು 20 ಹೆಕ್ಟೇರ್ ಪ್ರದೇಶದಲ್ಲಿ ನಿರ್ಮಾಣ ಮಾಡಿ ನೀರು ಇಂಗಿಸುವ ಕಾರ್ಯಕ್ಕೆ ಮುಂದಾಗಿದೆ.
ಮುಂದಿನ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿಯಲ್ಲಿ
ಹಾವೇರಿ ವಲಯದ ಅರಣ್ಯ ಇಲಾಖೆಯ ಈ ಕೆಲಸ ಸುತ್ತಮುತ್ತಲಿನ ರೈತರನ್ನೂ ಸೆಳೆದಿದ್ದು, ಭೂಮಿಗೆ ನೀರು ಇಂಗಿಸಲು ರೈತರು ಸ್ವಯಂಪ್ರೇರಿತವಾಗಿ ಗುಡಗೇರಿಗೆ ಭೇಟಿ ನೀಡುತ್ತಿದ್ದಾರೆ.
7.80 ಲಕ್ಷ ರೂ. ವೆಚ್ಚ
ನರೇಗಾ ನೆರವು ಪಡೆದಿರುವ ಅರಣ್ಯ ಇಲಾಖೆ ಈ ಕಾಮಗಾರಿಗಾಗಿ 2991 ಮಾನವ ದಿನಗಳ ಸೃಜಿಸಿ 7.80 ಲಕ್ಷ ರೂ. ವೆಚ್ಚಮಾಡಿದೆ. ಒಂದು ಟ್ರಂಚ್ನಲ್ಲಿ ಅಂದಾಜು ಐದು ಸಾವಿರ ಲೀಟರ್ನಷ್ಟು ನೀರು ಇಂಗಿಸಬಹುದಾಗಿದೆ. ನಿರ್ಮಾಣವಾಗಿರುವ 400 ಟ್ರಂಚನಲ್ಲಿ ಒಮ್ಮೆ ಮಳೆಯಾದರೆ 20 ಲಕ್ಷ ಲೀಟರ್ ನೀರು ಭೂಮಿ ಸೇರಿ ಅಂತರ್ಜಲ ವೃದ್ಧಿಗೊಳ್ಳುತ್ತಿದೆ ಎಂಬುದು ಪರಿಸರ ಪ್ರಿಯರ ಅನಿಸಿಕೆ.
ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರು
ಕೂಲಿಕಾರರಿಗೆ ಉದ್ಯೋಗ, ಭೂಮಿಗೆ ನೀರು, ಕಾಡಿನಲ್ಲಿರುವ ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರು ದೊರೆಯುವಂತೆ ಮಾಡುವುದು, ಅಂತರ್ಜಲ ಮಟ್ಟ ಹೆಚ್ಚಿಸುವುದು, ಮಳೆಗಾಲದಲ್ಲಿ ಮಣ್ಣು ಸವಕಳಿಕೆ ತಡೆಯುವುದು, ಮಳೆಯಿಂದ ಹರಿಯುವ ನೀರಿನ ವೇಗವನ್ನು ಕಡಿಮೆಗೊಳಿಸಿ ಗಿಡ ಮರಗಳ ಬೇರು ಭದ್ರವಾಗಿಸುವುದು ಈ ಟ್ರಂಚ್ಗಳ ಉದ್ದೇಶವಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸುತ್ತಾರೆ.
ಮಣ್ಣಿನ ಸವಕಳಿಯಾಗುತಿತ್ತು
ಈ ಕಾಮಗಾರಿ ಕುರಿತಂತೆ ಅರಣ್ಯ ಇಲಾಖೆಯ ದುಂಢಶಿ ವಲಯ ಅರಣ್ಯಾಧಿಕಾರಿ ಶಿವಾನಂದ ಪೂಜಾರ ಅವರು ವಿವರ ನೀಡಿ, "ಅರಣ್ಯ ಪ್ರದೇಶದಲ್ಲಿ ಅತಿ ಹೆಚ್ಚಿನ ಮಟ್ಟದಲ್ಲಿ ಮಣ್ಣಿನ ಸವಕಳಿಯಾಗುತಿತ್ತು ಮತ್ತು ಕಾಡಿನಲ್ಲಿ ಯಾವುದೆ ರೀತಿಯ ಕೆರೆ-ಹಳ್ಳಗಳು ಇರದಕಾರಣ ನೀರಿನ ಕೊರತೆಯಿಂದ ಪ್ರಾಣಿ-ಪಕ್ಷಿಗಳು, ಮರ-ಗಿಡಗಳಿಗೆ ತೊಂದರೆಯಾಗುತ್ತಿತ್ತು. ಆದ್ದರಿಂದ ನೆರೇಗಾ ಯೋಜನೆಯನ್ನು ಬಳಸಿಕೋಂಡು ಅಲ್ಲಲ್ಲಿ ಟ್ರಂಚ್ಗಳನ್ನು ನಿರ್ಮಿಸುವ ಕಾರ್ಯ ಕೈಗೊಳ್ಳಲಾಗಿದೆ' ಎನ್ನುತ್ತಾರೆ.
ನೀರು ಇಂಗಿಸುವ ಕೆಲಸ
ಟ್ರಂಚ್ಗಳಿಂದ ಅರಣ್ಯದಲ್ಲಿ ನೀರಿನ ಸಮಸ್ಯೆ ನೀಗಲಿದೆ. ಇದಕ್ಕೆ ಇಲ್ಲಿನ ಅರಣ್ಯ ರಕ್ಷಕ ಲಕ್ಷ್ಮಣ ಲಮಾಣಿ ಅವರು ಈ ಯೋಜನೆ ಕಾರ್ಯಗತಗೊಳಿಸಲು ಕಾರಣರಾಗಿದ್ದಾರೆ ಎಂದು ಶಿವಾನಂದ ಪೂಜಾರ ತಿಳಿಸುತ್ತಾರೆ. ಕೂಲಿಕಾರ್ಮಿಕ ಅಬ್ದುಲ್ ಮತ್ತೆಖಾನ್, "ಕೆಲಸವಿಲ್ಲದೆ ಮನೆಯಲ್ಲಿ ಕುಳಿತುಕೊಂಡಿದ ಸಮಯದಲ್ಲಿ ಅರಣ್ಯ ಇಲಾಖೆಯವರು ದುಡಿಮೆ ನೀಡಿದ್ದಾರೆ. ನಮಗೆ ಕೂಲಿ ದೊರೆತಿದೆ. ಅರಣ್ಯ ಪ್ರದೇಶದಲ್ಲಿ ನೀರು ಇಂಗಿಸುವ ಕೆಲಸವಾಗಿದೆ. ಇದು ಉತ್ತಮ ಕಾರ್ಯ' ಎನ್ನುತ್ತಾರೆ.