ಕಾಪಿ ಹೊಡೆಯದಂತೆ ತಡೆಯಲು ವಿದ್ಯಾರ್ಥಿಗಳಿಗೆ 'ಪೆಟ್ಟಿಗೆ' ಹೆಲ್ಮೆಟ್!
Recommended Video
ಹಾವೇರಿ, ಅಕ್ಟೋಬರ್ 18: ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ನಕಲು ಮಾಡುವುದನ್ನು ತಡೆಯಲು ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡುವುದು, ಬೇರೆ ಬೇರೆ ವರ್ಗದ ಅಥವಾ ವಿಷಯದ ವಿದ್ಯಾರ್ಥಿಗಳನ್ನು ಒಟ್ಟಿಗೆ ಕೂರಿಸುವುದು, ಹೆಚ್ಚಿನ ಸಂಖ್ಯೆಯಲ್ಲಿ ಮೇಲ್ವಿಚಾರಕರನ್ನು ನೇಮಿಸುವುದು ಮುಂತಾದ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ನೋಡಿರುತ್ತೀರಿ. ಆದರೆ ಖಾಸಗಿ ಕಾಲೇಜೊಂದು ವಿಭಿನ್ನ ಕ್ರಮ ಅನುಸರಿಸಿದೆ. ಇದು ಕಾಪಿ ಹೊಡೆಯುವುದನ್ನು ತಡೆಯಲು ಒಳ್ಳೆಯ ಉಪಾಯದಂತೆ ಕಂಡರೂ, ಪರೀಕ್ಷೆ ಬರೆಯುವ ಟೆನ್ಷನ್ನಲ್ಲಿರುವ ವಿದ್ಯಾರ್ಥಿಗಳಿಗೆ ಇನ್ನಷ್ಟು ಸಂಕಷ್ಟ ನೀಡುವ ಅಮಾನವೀಯ ನಿರ್ಧಾರವೂ ಹೌದು. ಈ ಬಗ್ಗೆ ಎಲ್ಲೆಡೆ ವ್ಯಾಪಕ ಚರ್ಚೆಗಳು ನಡೆಯುತ್ತಿವೆ.
ವಿದ್ಯಾರ್ಥಿಗಳು ಕಾಪಿ ಹೊಡೆಯುತ್ತಾರೆ ಎಂಬ ಕಾರಣಕ್ಕೆ ಖಾಸಗಿ ಕಾಲೇಜೊಂದರ ಆಡಳಿತ ಮಂಡಳಿಯವರು ವಿದ್ಯಾರ್ಥಿಗಳ ತಲೆಯನ್ನು ರಟ್ಟಿನ ಪೆಟ್ಟಿಗೆಗಳಿಂದ ಮುಚ್ಚಿ ಪರೀಕ್ಷೆಗೆ ಕೂರಿಸಿದ ಅಮಾನವೀಯ ಘಟನೆ ಹಾವೇರಿಯಲ್ಲಿ ವರದಿಯಾಗಿದೆ.
15 ವರ್ಷಕ್ಕೆ ಕಾಲಿಟ್ಟವರು ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಬಹುದು
ಕೆಲವು ಕಾಲೇಜುಗಳಲ್ಲಿ ಕಾಪಿ ಹೊಡೆಯಲು ಮೇಲ್ವಿಚಾರಕರೇ ಅವಕಾಶ ನೀಡುವ ಘಟನೆಗಳು ನಡೆಯುತ್ತಿರುವಾಗ, ಮಕ್ಕಳು ಕಾಪಿ ಹೊಡೆಯದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವುದು ಸ್ವಾಗತಾರ್ಹದ ಸಂಗತಿ ಸರಿ. ಆದರೆ ಪರೀಕ್ಷೆ ಬರೆಯುವಾಗ ಉತ್ತಮ ಗಾಳಿ ಬೆಳಕಿನಂತಹ ಸೌಲಭ್ಯ ಇರಬೇಕು. ಅವರು ಉತ್ತಮ ವಾತಾವರಣದಲ್ಲಿ ಪರೀಕ್ಷೆಗೆ ಕೂರಬೇಕು. ಅವರಿಗೆ ಹಿಂಸೆ ಅಥವಾ ಶಿಕ್ಷೆ ನೀಡುವಂತಹ ಸ್ಥಿತಿಯಲ್ಲಿ ಅಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಡಬ್ಬಾದೊಳಗೆ ತಲೆ
ಹಾವೇರಿ ನಗರದ ಜಾನುವಾರು ಮಾರುಕಟ್ಟೆ ಮುಂಭಾಗದಲ್ಲಿರುವ ಭಗತ್ ಪಿಯು ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿಗಳು ಬಾಕ್ಸ್ ಒಳಗೆ ತಲೆಹಾಕಿಕೊಂಡು ಪರೀಕ್ಷೆ ಬರೆಯುವ ಚಿತ್ರಗಳು ಹರಿದಾಡುತ್ತಿವೆ. ಗುರುವಾರ ನಡೆದ ಪಿಯು ಪರೀಕ್ಷೆಯಲ್ಲಿ ಆಡಳಿತ ಮಂಡಳಿಯು ಎಲ್ಲ ವಿದ್ಯಾರ್ಥಿಗಳಿಗೂ ತಲೆಗೆ ರಟ್ಟಿನ ಪೆಟ್ಟಿಗೆ ಹಾಕಿಸಿ ಪರೀಕ್ಷೆ ಬರೆಯಿಸಿದೆ.
ಜನರ ಆಕ್ರೋಶ
ವಿಪರೀತ ಸೆಖೆ ಹಾಗೂ ಉಸಿರಾಟದ ಸಮಸ್ಯೆಗೆ ಒಳಗಾಗಿ ಕೆಲವು ವಿದ್ಯಾರ್ಥಿಗಳು ಪರದಾಡಿದ್ದರೆ, ಕೆಲವರು ಸರಿಯಾಗಿ ಪರೀಕ್ಷೆ ಬರೆಯಲಾಗದೆ ಒದ್ದಾಡಿದ್ದಾರೆ. ಕಾಪಿ ಹೊಡೆಯುವುದನ್ನು ತಪ್ಪಿಸಲು ಅನೇಕ ಮಾರ್ಗಗಳಿವೆ. ಅವುಗಳ ಬದಲು ವಿದ್ಯಾರ್ಥಿಗಳಿಗೆ ಈ ರೀತಿ ಬಾಕ್ಸ್ ಹಾಕಿ ಕೂರಿಸಿರುವುದು ಅಮಾನವೀಯ ವಿಚಾರ ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ: ಸರ್ಕಾರ ಏನು ಹೇಳುತ್ತೆ ಒಮ್ಮೆ ಕೇಳಿ
ಆಡಳಿತ ಮಂಡಳಿಗೆ ನೋಟಿಸ್
ಈ ಬಗ್ಗೆ ಮಾಹಿತಿ ಪಡೆದ ಕೂಡಲೇ ಹಾವೇರಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಸಂಸ್ಥೆ ಉಪನಿರ್ದೇಶರು (ಡಿಡಿಪಿಐ) ಕಾಲೇಜಿನ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜತೆಗೆ, ಆಡಳಿತ ಮಂಡಳಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಹೀಗಾಗಿ ಬಾಕ್ಸ್ ಧರಿಸಬೇಕೆಂಬ ಕಡ್ಡಾಯದ ನಿಯಮವನ್ನು ಶುಕ್ರವಾರದ ಪರೀಕ್ಷೆಯಲ್ಲಿ ಪಾಲಿಸಲಿಲ್ಲ.
ಕ್ರಮ ತೆಗೆದುಕೊಳ್ಳಲಾಗುವುದು
ಈ ಘಟನೆಗೆ ಟ್ವಿಟ್ಟರ್ನಲ್ಲಿ ಪ್ರತಿಕ್ರಿಯೆ ನೀಡಿರುವ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್, ಇದು ಖಂಡಿತವಾಗಿ ಒಪ್ಪುವಂತಹದ್ದಲ್ಲ. ಮಕ್ಕಳು ಸೇರಿದಂತೆ ಯಾರಿಗೂ ಯಾರನ್ನೂ ಪ್ರಾಣಿಗಳಂತೆ ಹಿಂಸಿಸುವ ಹಕ್ಕು ಇಲ್ಲ. ಈ ಘಟನೆಯ ಕುರಿತು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.