ಉಪ ಚುನಾವಣೆ: ಹಾನಗಲ್ ಮತದಾರರಿಗೆ ಭಾರಿ ಭರವಸೆ ಕೊಟ್ಟ ಸಿಎಂ ಬೊಮ್ಮಾಯಿ!
ಹಾನಗಲ್, ಅ. 22: ಉಪ ಚುನಾವಣೆ ಪ್ರಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾನಗಲ್ ಕ್ಷೇತ್ರದ ಮತದಾರರಿಗೆ ಭಾರಿ ಭರವಸೆ ಕೊಟ್ಟಿದ್ದಾರೆ. "ಹಾನಗಲ್ ವಿಧಾನಸಭೆ ಕ್ಷೇತ್ರದಲ್ಲಿ ಬಡವರಿಗೆ ಸೂರು ಕಲ್ಪಿಸಿಕೊಡಲು ಒಟ್ಟು 7.5 ಸಾವಿರ ಮನೆಗಳನ್ನು ಮಂಜೂರು ಮಾಡಿ ಆದೇಶಿಸಲಾಗಿದೆ" ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಕ್ಷೇತ್ರದ ಬೆಳಗಾಲಪೇಟೆ ಗ್ರಾಮದಲ್ಲಿ ಶುಕ್ರವಾರ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ್ದಾರೆ.
"ಘೋಷಿಸಿದ ಮನೆಗಳಿಂದ ಬಡವರ ಅಭಿವೃದ್ಧಿಯಾಗುವುದಿಲ್ಲ. ಅವರಿಗೆ ಸೂರು ಸಿಗುವುದಿಲ್ಲ. ಆದರೆ ನಾನು ಹಾನಗಲ್ ಕ್ಷೇತ್ರಕ್ಕೆ 5 ಸಾವಿರ ಮನೆಗಳನ್ನು ಮಂಜೂರು ಮಾಡಿ ಆದೇಶ ಮಾಡಿದ್ದೇನೆ. ನಾವು ಬರೀ ಮಾತನಾಡುವವರಲ್ಲ. ಕೆಲಸ ಮಾಡಿ ತೋರಿಸುವವರು" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಟೀಕೆಗೆ ಮುಖ್ಯಮಂತ್ರಿ ಬೊಮ್ಮಾಯಿ ಪ್ರತ್ಯುತ್ತರ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷದ ಬೆನ್ನು ಹತ್ತಿದರೆ ಭವಿಷ್ಯವಿಲ್ಲ
ಅಮೃತ್ ಯೋಜನೆ ಅಡಿಯಲ್ಲಿ 2.5 ಸಾವಿರ ಮನೆಗಳು ಮಂಜೂರಾಗಿದ್ದು ಅವು ಕೂಡ ಸದ್ಯದಲ್ಲೇ ದೊರಕಲಿವೆ. ಒಟ್ಟು 7.5 ಸಾವಿರ ಮನೆಗಳನ್ನು ಇದೇ ವರ್ಷ ಪ್ರಾರಂಭ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಕಾಂಗ್ರೆಸ್ಸಿಗರ ಸಹವಾಸ ಬೇಡವೆಂದು ಸ್ವಯಂಪ್ರೇರಣೆಯಿಂದ ರಾಹುಲ್ ಗಾಂಧಿ ರಾಜೀನಾಮೆ ಕೊಟ್ಟಿದ್ದಾರೆ. ಅವಸಾನದತ್ತ ಸಾಗುತ್ತಿರುವ ಕಾಂಗ್ರೆಸ್ ಪಕ್ಷದ ಬೆನ್ನುಹತ್ತಿದರೆ ಭವಿಷ್ಯವಿಲ್ಲ ಎಂದು ಮತದಾರರಿಗೆ ಮುಖ್ಯಮಂತ್ರಿ ಬೊಮ್ಮಾಯಿ ತಿಳಿ ಹೇಳಿದ್ದಾರೆ.
ತಾಲೂಕಿನ ಭವಿಷ್ಯ ಬರೆಯುವ ಮಹತ್ವದ ಚುನಾವಣೆ
ಸಿದ್ದರಾಮಯ್ಯ ಅವರ ಟೀಕೆಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾಷಣದ ವೇಳೆ ಕ್ಷೇತ್ರಕ್ಕೆ ನೀಡಿರುವ ಯೋಜನೆಗಳು, ಅನುಷ್ಠಾನಗೊಂಡ ಕಾರ್ಯಕ್ರಮಗಳ ಸಮಗ್ರ ವರದಿಯನ್ನು ದಾಖಲೆ ಸಹಿತ ಮತದಾರರ ಮುಂದೆ ತೆರೆದಿಟ್ಟಿದ್ದಾರೆ. "ಬಿಜೆಪಿ ಬರಿ ಮಾತಲ್ಲಿ ಅಭಿವೃದ್ಧಿ ಮಾಡುವುದಿಲ್ಲ ವಾಸ್ತವದಲ್ಲಿ ಅಭಿವೃದ್ಧಿ ಮಾಡುತ್ತದೆ. ಹಾನಗಲ್ನಲ್ಲಿ ಎದುರಾದ ಉಪಚುನಾವಣೆ ನಮಗೆ ಪ್ರತಿಷ್ಠೆಯ ವಿಷಯವಲ್ಲ, ಇದು ಹಾನಗಲ್ ತಾಲೂಕಿನ ಭವಿಷ್ಯ ಬರೆಯುವ ಮಹತ್ವದ ಚುನಾವಣೆ" ಎಂದು ಬೊಮ್ಮಾಯಿ ಹೇಳಿದರು.
ಅವರಿಗೆ ಹಣ-ಅಧಿಕಾರ ಬಿಟ್ಟರೆ ಬೇರೇನೂ ಕಾಣುತ್ತಿಲ್ಲ!
ಬಿಜೆಪಿ ಚುನಾವಣಾ ಪ್ರಚಾರದಲ್ಲಿ ಅಭಿವೃದ್ಧಿ ಅಜೆಂಡಾ ಇಟ್ಟುಕೊಂಡು ಹಾನಗಲ್ ಮತಕ್ಷೇತ್ರದ ಜನರಿಗೆ ಒಳ್ಳೆಯ ಯೋಜನೆಗಳನ್ನು ನೀಡುವ ಕುರಿತು, ಉಳಿದಿರುವ ಅಭಿವೃದ್ಧಿ ಕಾರ್ಯ ಪೂರ್ಣ ಮಾಡುವ ಬಗ್ಗೆ ಭಾರತೀಯ ಜನತಾ ಪಕ್ಷ ಮಾತನಾಡುತ್ತಿದೆ. ಆದರೇ ಕಾಂಗ್ರೆಸ್ ಪಕ್ಷದವರಿಗೆ ಅಧಿಕಾರ ಮತ್ತು ಹಣ ಬಿಟ್ಟರೆ ಬೇರೇನೂ ಕಾಣಿಸುವುದಿಲ್ಲ. ಅಧಿಕಾರ ಪಡೆಯುವುದು, ಅಧಿಕಾರ ಪಡೆದುಕೊಂಡು ಹಣ ಮಾಡುವುದು ಇದನ್ನು ಬಿಟ್ಟು ಕಾಂಗ್ರೆಸ್ ನವರಿಗೆ ಬೇರೆ ಏನು ಗೊತ್ತಿಲ್ಲ ಎಂದು ಸಿಎಂ ಬೊಮ್ಮಾಯಿ ಪ್ರಚಾರದಲ್ಲಿ ಹೇಳಿದರು.
Recommended Video
ಕಾಗದದಲ್ಲೇ ಉಳಿದ ಸಿದ್ದರಾಮಯ್ಯ ಮನೆಗಳು!
ಸಿದ್ದರಾಮಯ್ಯನವರಿಗೆ ಭಾಷಣ ಮಾಡುವುದೇ ಕೆಲಸ. ನಮಗೆ ಕೆಲಸ ಮಾಡುವುದೇ ಧರ್ಮ. ವಿಪಕ್ಷ ನಾಯಕ ಸಿದ್ದರಾಮಯ್ಯನ ಅವರು 15 ಲಕ್ಷ ಮನೆ ಕೊಟ್ಟಿರುವುದಾಗಿ ಚುನಾವಣಾ ಪ್ರಚಾರದ ವೇಳೆ ಹೇಳಿದ್ದಾರೆ. ಎಲ್ಲಿವೆ 15 ಲಕ್ಷ ಮನೆಗಳು? ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಚಾರದ ವೇಳೆ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಅಧಿಕಾರ ಮುಗಿಸಿ ಮನೆಗೆ ಹೋಗುವ ಸಮಯದಲ್ಲಿ ಕಾಗದದಲ್ಲಿ 15 ಲಕ್ಷ ಮನೆಗಳನ್ನು ಮಂಜೂರು ಮಾಡಿದ್ದಾರೆ. ಜನರನ್ನು ದಾರಿ ತಪ್ಪಿಸುವ ಸಲುವಾಗಿ ಕಾಗದದಲ್ಲಿ ಯೋಜನೆಗಳನ್ನು ಘೋಷಿಸಿ ಮನೆಗೆ ಹೋಗಿದ್ದಾರೆ. ಇದು ಸಿದ್ದರಾಮಯ್ಯ ಅಭಿವೃದ್ಧಿ ಮಾಡಿದ ಪರಿ. ಆದರೆ ನಾವು ವಿರೋಧ ಪಕ್ಷದವರಿಂದಲೇ ನಮ್ಮ ಅಭಿವೃದ್ಧಿಯ ಯೋಜನೆಗಳನ್ನು ಉದ್ಘಾಟನೆ ಮಾಡಿಸುತ್ತೇವೆ. ಕಾಂಗ್ರೆಸ್ ಪಕ್ಷದ ನಾಯಕರು ನಾವು ಏನು ಮಾಡಿದ್ದೇವೆ ಎಂದು ತಿಳಿದುಕೊಳ್ಳಬೇಕಿದ್ದರೆ ಜಿಲ್ಲೆಯ ಏತ ನೀರಾವರಿ ಯೋಜನೆಗಳಿಗೆ ಭೇಟಿ ನೀಡಲಿ. ಅದರ ಲಾಭ ನೂರಾರು ಹಳ್ಳಿಗಳಿಗೆ ತಲುಪಿದೆ ಎಂಬುದು ಗೊತ್ತಾಗುತ್ತದೆ ಎಂದು ಸಿಎಂ ಬೊಮ್ಮಾಯಿ ವಿವರಿಸಿದರು