ಹಾವೇರಿ: ಆಹಾರ ಪೊಟ್ಟಣ ಕದ್ದ ಆರೋಪ, ಹಲ್ಲೆಗೊಳಗಾಗಿದ್ದ ಬಾಲಕ ಸಾವು
ಹಾವೇರಿ, ಮಾರ್ಚ್ 28: ಬಾಲಕನ ಮೇಲೆ ಕಳ್ಳತನ ಆರೋಪವೆಸಗಿ ಮಣ್ಣಿನಲ್ಲಿ ಹೂತುಹಾಕಲು ಯತ್ನಿಸಿದ ಪ್ರಕರಣದಲ್ಲಿ ಗಾಯಗೊಂಡಿದ್ದ ಬಾಲಕ ಅಸುನೀಗಿದ್ದಾನೆ.
ಈ ಘಟನೆ ಹಾವೇರಿಯಲ್ಲಿ ಬೆಳಕಿಗೆ ಬಂದಿದೆ, ತಾಲೂಕಿನ ಆಡೂರು ಸಮೀಪದ ಉಪ್ಪುಣಸಿಯ ಹರೀಶಯ್ಯ ನಾಗಯ್ಯ ಹಿರೇಮಠ (10) ಮೃತಪಟ್ಟ ಬಾಲಕನಾಗಿದ್ದಾನೆ.
ಅಂಗಡಿಗೆ ಹೋದ ಬಾಲಕ ಎಷ್ಟು ಹೊತ್ತಾದರೂ ಮನೆಗೆ ಬಾರದಿರುವುದನ್ನು ಗಮನಿಸಿದ ತಂದೆ ನಾಗಯ್ಯ ಶಿವರುದ್ರಪ್ಪ ಅವರ ಮನೆಗೆ ತೆರಳಿದ್ದಾರೆ. ಈ ವೇಳೆ ಬಾಲಕನನ್ನು ಮನೆಯಲ್ಲಿ ಬಂಧಿಸಿರುವುದು ಕಂಡು ಬಂದಿದೆ. ಬಳಿಕ ನಾಗಯ್ಯ ಅವರು ಬಾಲಕನನ್ನು ಬಿಡುವಂತೆ ಸಾಕಷ್ಟು ಬಾರಿ ಹೇಳಿದರೂ ಬಿಡದೆ ತಕ್ಕ ಪಾಠ ಕಲಿಸುವುದಾಗಿ ಹೇಳಿದ್ದಾನೆ.
ಮಾ.16ರಂದು ಶಿವರುದ್ರಪ್ಪ ಎಂಬುವವರ ಅಂಗಡಿಗೆ ನಾಗಯ್ಯ ಹಿರೇಮಠ ಅವರ ಪುತ್ರ ಹರೀಶಯ್ಯ ಹಿರೇಮಠ ಎಂಬ ಬಾಲಕ ಹೋಗಿದ್ದನು. ಈ ವೇಳೆ ಅಂಗಡಿ ಮಾಲೀಕ ಶಿವರುದ್ರಪ್ಪ, ಬಾಲಕ ಆಹಾರ ಪೊಟ್ಟಣ ಕಳ್ಳತನ ಮಾಡಿದ್ದಾನೆಂದು ಆರೋಪಿಸಿ ಮನೆಯಲ್ಲಿ ಬಂಧಿಸಿದ್ದಾನೆ.
ಬಾಂಗ್ಲಾ; ಮೋದಿ ಭೇಟಿ ವಿರುದ್ಧ ಪ್ರತಿಭಟನೆಯಲ್ಲಿ 4 ಮಂದಿ ಸಾವು
ಮಧ್ಯಾಹ್ನ 3 ಗಂಟೆ ಸುಮಾರಿಗೆ ಬಾಲಕನ ತಾಯಿ ಜಯಶ್ರೀ ಕೂಡ ಹೋಗಿ ಮನವಿ ಮಾಡಿಕೊಂಡಿದ್ದಾರೆ. ಆದರೆ, ಆತ ಸಂಜೆ 5 ಗಂಟೆಗೆ ಬರುವಂತೆ ತಿಳಿಸಿದ್ದಾನೆ. ಸಂಜೆ ಮರಳಿ ಬಂದಾಗ ಬಾಲಕನ ಬೆನ್ನಿಗೆ ಭಾರೀ ಗಾತ್ರದ ಕಲ್ಲನ್ನು ಕಟ್ಟಿ ಕೂರಿಸಿರುವುದು ಕಂಡು ಬಂದಿದೆ. ಇದನ್ನು ಕಂಡ ತಾಯಿ ಜಗಳಕ್ಕಿಳಿದಿದ್ದಾರೆ. ಈ ವೇಳೆ ಶಿವರುದ್ರಪ್ಪ ಹಾಗೂ ಆತನ ಪುತ್ರ, ಸಂಬಂಧಿಕರು ಆಕೆಗೆ ಥಳಿಸಿ, ನಂತರ ಬಾಲಕನನ್ನು ಬಿಡುಗಡೆ ಮಾಡಿದ್ದಾರೆ.
ಘಟನೆಯಿಂದ ಬಾಲಕ ಸಾಕಷ್ಟು ಗಾಯಗೊಂಡಿದ್ದು, ಪರಿಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಪೋಷಕರು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಆಸ್ಪತ್ರೆಯ ವೈದ್ಯರು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡಿದ್ದಾರೆ. ಆಸ್ಪತ್ರೆಗೆ ದಾಖಲಿಸಿದ ಬಳಿಕ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಘಟನೆ ಬಳಿಕ ಅಂಗಡಿ ಮುಂದೆ ತೆರಳಿರುವ ಬಾಲಕನ ಪೋಷಕರು ಹಾಗೂ ಕುಟುಂಬಸ್ಥರು ಶವವಿಟ್ಟು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ವೇಳೆ ಅಂಗಡಿ ಮಾಲೀಕನ ವಿರುದ್ಧ ಆಡೂರು ಪೊಲೀಸರು ಎಫ್ಐಆರ್ ದಾಖಲಿಸಿಕೊಳ್ಳಲು ನಿರಾಕರಿಸುತ್ತಿದ್ದಾರೆಂದು ಆರೋಪಿಸಿದ್ದಾರೆ.
ಆರೋಪ ಹಿನ್ನೆಲೆಯಲ್ಲಿ ಪೊಲೀಸರು ಹೇಳಿಕೆ ನೀಡಿದ್ದು, ಬಾಲಕನ ತಂದೆ ನಾಗಯ್ಯ ಅವರಿಂದ ಬರವಣಿಗೆ ಮೂಲಕ ಹೇಳಿಕೆಯನ್ನು ದಾಖಲು ಮಾಡಿಕೊಳ್ಳಲಾಗಿದೆ. ಬಾಲಕನ ಸಾವಿನ ಬಳಿಕ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.