ಸಿದ್ರಾಮಣ್ಣ ಬರೀ ಪಾಪದ್ದು, ಅದಕ್ಕೆ ಏನೂ ಗೊತ್ತಾಗಲ್ಲ: ಮಾಜಿ ಸಿಎಂ ಬಗ್ಗೆ ಉಕ್ಕಿ ಹರಿದ ಎಚ್.ಡಿ.ರೇವಣ್ಣ ಪ್ರೀತಿ
ಹಾಸನ, ಏಪ್ರಿಲ್ 4: "ತಾಂಬೂಲ ತಂದಿದ್ದೇವೆ, ದೇವೇಗೌಡ್ರೇ ನಿಮ್ಮ ಕಾಲಿಗೆ ಬೀಳುತ್ತೇವೆ, ಕುಮಾರಸ್ವಾಮಿಯವರೇ ನಿಮ್ಮ ಕಾಲಿಗೆ ಬೀಳುತ್ತೇವೆ, ನೀವೇ ಮುಖ್ಯಮಂತ್ರಿಯಾಗ ಬೇಕೆಂದು ಗೋಗರೆದರು, ಅದಕ್ಕೆ ಗೌಡ್ರು ಒಪ್ಪಿಕೊಂಡರು" ಎಂದು ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ, ಹೇಳಿದರು.
"ದೇವೇಗೌಡ್ರನ್ನು ಹನ್ನೊಂದು ತಿಂಗಳಲ್ಲಿ ತೆಗೆದರಲ್ವಾ, ಆ ಶಾಪ ಕಾಂಗ್ರೆಸ್ ಪಕ್ಷಕ್ಕೆ ಕಾಡುತ್ತಿದೆ. ಈ ಶಾಪದಿಂದಾಗಿಯೇ ದೇಶದಲ್ಲಿ ಕಾಂಗ್ರೆಸ್ ನಿರ್ನಾಮ ಆಗುತ್ತಿದೆ. ಬೇರೆ ಯಾರೂ ಏನೂ ಮಾಡಬೇಕಾಗಿಲ್ಲ"ಎಂದು ರೇವಣ್ಣ ಅಭಿಪ್ರಾಯ ಪಟ್ಟರು.
''ಕಾಂಗ್ರೆಸ್ ಮತ್ತು ಬಿಜೆಪಿ ಮ್ಯಾಚ್ ಫಿಕ್ಸಿಂಗ್ ಗಿರಾಕಿಗಳು''
"ನಮ್ಮ ಬಳಿ ಯಾವ ಸಿಡಿಯೂ ಇಲ್ಲ. ಆದರೂ ಬಹಳ ವಿಚಾರವಿದೆ, ಸಮಯ ಸಂದರ್ಭ ಬಂದಾಗ ಎಲ್ಲಾ ಹೇಳುತ್ತೇವೆ. ಪಾಪ ಸಿದ್ರಾಮಣ್ಣ, ಪಾಪದ್ದು ಅದಕ್ಕೆ ಏನೂ ಗೊತ್ತಾಗಲ್ಲ"ಎಂದು ರೇವಣ್ಣ ಮಾಜಿ ಸಿಎಂ ಸಿದ್ದರಾಮಯ್ಯನವರ ಮೇಲಿನ ಪ್ರೀತಿಯನ್ನು ಮತ್ತೆ ತೋರಿಸಿದ್ದಾರೆ.
"ಸಿದ್ರಾಮಣ್ಣ ಮತ್ತೆ ಮುಖ್ಯಮಂತ್ರಿಯಾಗುತ್ತಾರಾ, ಕಾಂಗ್ರೆಸ್ಸಿನವರು ಅವರನ್ನೇ ಮತ್ತೆ ಸಿಎಂ ಮಾಡುತ್ತಾರಾ ಎಂದು ಮೊದಲು ಕೇಳಿ"ಎಂದು ರೇವಣ್ಣ ಈ ಸಂದರ್ಭದಲ್ಲಿ ಹೇಳಿದರು.
"ಕಾಂಗ್ರೆಸ್ಸಿನವರ ಸಹವಾಸದಿಂದ ಕುಮಾರಸ್ವಾಮಿ ಮನೆಯಲ್ಲಿ ಕೂರುವಂತಾಯಿತು. ಕಾಂಗ್ರೆಸ್ಸಿನವರೇ ಮನೆ ಬಾಡಿಗೆ ನೀಡಿ, ಸಹಿ ಹಾಕಿಸಿಕೊಂಡು ಆ ನಂತರ ಮನೆ ಖಾಲಿ ಮಾಡಿಸಿದರು"ಎಂದು ರೇವಣ್ಣ ವ್ಯಂಗ್ಯವಾಗಿ ಅಂದಿನ ಘಟನೆಯನ್ನು ವಿವರಿಸಿದರು.
ಎಲ್ಲೋ ಇದ್ದ ಜಮೀರ್ ಅಹ್ಮದ್ ರಾಜ್ಯ ರಾಜಕಾರಣದಲ್ಲಿ ಸೃಷ್ಟಿಸಿದ ಅಚ್ಚರಿಯ ಹಿಂದಿನ ಆ ರಾಜಕೀಯ ಶಕ್ತಿ!
Recommended Video
"ಈಗ ಬಿಜೆಪಿ ಮತ್ತು ಕಾಂಗ್ರೆಸ್ಸಿನವರು ಸಿಡಿ ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಆದರೆ, ನಮ್ಮ ಬಳಿ ಯಾವ ಸಿಡಿಯೂ ಇಲ್ಲ. ಅಂದಿನ ಕಾಂಗ್ರೆಸ್ ಸಹವಾಸದಿಂದ ಕುಮಾರಣ್ಣ ದುಃಖ ಪಡುವಂತಾಯಿತು"ಎಂದು ರೇವಣ್ಣ, ಕಾಂಗ್ರೆಸ್ ವಿರುದ್ದ ಕಿಡಿಕಾರಿದರು.