ಹಾಸನದಲ್ಲಿ ಜೆಡಿಎಸ್ ವಿರುದ್ಧ ಸೆಡ್ಡು ಹೊಡೆಯಲು ಎ ಮಂಜು ರೆಡಿ?
Recommended Video
ಹಾಸನ, ಮಾರ್ಚ್ 16 : ಲೋಕಸಭೆ ಚುನಾವಣೆ ನಡೆಯುವ ಮುನ್ನವೇ ಮೈತ್ರಿಕೂಟಕ್ಕೆ, ಅದರಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಭರ್ಜರಿ ಹೊಡೆತ ಬೀಳಲಿದೆ. ಈ ಸುದ್ದಿ ನಿಜವೇ ಆದರೆ, ಜಾತ್ಯತೀತ ಜನತಾ ದಳ ಕೂಡ ಪತರಗುಟ್ಟಿ ಹೋಗುವುದು ಗ್ಯಾರಂಟಿ.
ಅದೇನೆಂದರೆ, ಮೈತ್ರಿ ಸರಕಾರ ರಚಿಸಿದಂದಿನಿಂದ ಬೇಸರ ವ್ಯಕ್ತಪಡಿಸುತ್ತಲೇ ಇದ್ದ ಕಾಂಗ್ರೆಸ್ಸಿನ ಹಿರಿಯ ನಾಯಕ, ಅರಕಲಗೂಡು ಮಾಜಿ ಶಾಸಕ ಎ ಮಂಜು ಅವರು, ಕಾಂಗ್ರೆಸ್ಸಿಗೆ ಗುಡ್ ಬೈ ಹೇಳಿ, ಭಾರತೀಯ ಜನತಾ ಪಕ್ಷ ಸೇರುತ್ತಾರೆ ಎಂಬುದು.
ಮಾಜಿ ಸಚಿವ ಎ.ಮಂಜು ಬಿಜೆಪಿಗೆ, ಪ್ರಜ್ವಲ್ ರೇವಣ್ಣ ವಿರುದ್ಧ ಸ್ಪರ್ಧೆ?
ಹಾಸನದಲ್ಲಿ ದೇವೇಗೌಡರ ವಿರುದ್ಧ ಮೊದಲಿನಿಂದಲೂ ಸೆಡ್ಡು ಹೊಡೆಯುತ್ತಲೇ ಬಂದಿರುವ ಎ ಮಂಜು ಅವರು, ಹಾಸನ ಲೋಕಸಭೆ ಕ್ಷೇತ್ರದಲ್ಲಿ ದೇವೇಗೌಡರು ತಮ್ಮ ಮೊಮ್ಮಗನಿಗೆ ಬಿಟ್ಟುಕೊಟ್ಟಿದ್ದಕ್ಕೆ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರಜ್ವಲ್ ರೇವಣ್ಣ ಅವರು ಹಾಸನದಿಂದ ನಿಲ್ಲುವುದಾದರೆ ನಾವ್ಯಾರೂ ಪ್ರಚಾರ ಮಾಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು.
2014ರಲ್ಲಿ ನಡೆದಿದ್ದ ಲೋಕಸಭೆ ಚುನಾವಣೆಯಲ್ಲಿ ಎ ಮಂಜು ಅವರು ದೇವೇಗೌಡರ ವಿರುದ್ಧ ಕಾಂಗ್ರೆಸ್ಸಿನಿಂದ ಸೆಣಸಿ 1 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ಆದರೆ, ಈ ಬಾರಿ ಮೈತ್ರಿ ಸರಕಾರವಿರುವುದರಿಂದ ಈ ಕ್ಷೇತ್ರವನ್ನು ಕಾಂಗ್ರೆಸ್ಸಿಗೆ ಬಿಟ್ಟುಕೊಡಬೇಕೆಂದು ಮಂಜು ಪಟ್ಟು ಹಿಡಿದಿದ್ದರು. ದೇವೇಗೌಡರು ಈ ಕ್ಷೇತ್ರವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ.
ಶಾಸ್ತ್ರ ಕೇಳಿದ್ದೇವೆ, ಕನ್ನಡಿಗರೇ ಮತ್ತೆ ಪ್ರಧಾನಿ ಅನ್ಬೇಡಿ; ಎ ಮಂಜು ಭರ್ಜರಿ ಟಾಂಗ್
ಹಾಸನದ ಶಾಸಕ ಪ್ರೀತಂ ಗೌಡ ಅವರ ಮುಂದಾಳತ್ವದಲ್ಲಿ ಎ ಮಂಜು ಅವರು ಬಿಜೆಪಿ ಸೇರುವ ಬಗ್ಗೆ ಮಾತುಕತೆ ನಡೆದಿದ್ದು, ಲೋಕಸಭೆ ಚುನಾವಣೆಯಲ್ಲಿ ದೇಶದ ಭದ್ರತೆಯ ಹಿತದೃಷ್ಟಿಯಿಂದ ಬಿಜೆಪಿ ಗೆಲ್ಲುವುದು ಅನಿವಾರ್ಯವಾಗಿರುವುದರಿಂದ, ಎ ಮಂಜು ಅವರು ಬಿಜೆಪಿ ಸೇರಿ ಬಿಜೆಪಿಯನ್ನು ಬಲಪಡಿಸಲಿದ್ದಾರೆ ಎಂದು ಪ್ರೀತಂ ಗೌಡ ಅವರು ಈಗಾಗಲೆ ಹೇಳಿಕೆ ನೀಡಿ ಕುತೂಹಲ ಹುಟ್ಟಿಸಿದ್ದಾರೆ.
ಹಾಸನದ ಶಾಸಕ ಪ್ರೀತಂ ಗೌಡ ಅವರ ಮನೆಯಲ್ಲಿ ಇಂದು ಉಪಾಹಾರವನ್ನು ಸೇವಿಸಿರುವುದು ಕೂಡ ಹಲವಾರು ಊಹಾಪೋಹಗಳಿಗೆ ಗ್ರಾಸವಾಗಿದೆ. ಮೊದಲಿನಿಂದಲೂ ಎ ಮಂಜು ಅವರದು ರೇವಣ್ಣ ಜೊತೆ ಎಣ್ಣೆ ಸೀಗೆಕಾಯಿ ಸಂಬಂಧ. ಈಗ ರೇವಣ್ಣ ಅವರ ಮಗನೇ ಹಾಸನದಿಂದ ಲೋಕಸಭೆ ಸ್ಪರ್ಧಿಸುತ್ತಿರುವುದು ಎ ಮಂಜು ಅವರಿಗೆ ನುಂಗಲಾರದ ತುತ್ತಾಗಿದೆ.
ಒಂದು ವೇಳೆ ಎ ಮಂಜು ಅವರು ಇಂದೇ ಬಿಜೆಪಿ ಸೇರಿದರೆ, ಅವರೇ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಸ್ಪರ್ಧಿಸುವ ಸಾಧ್ಯತೆ ನಿಚ್ಚಳವಾಗಿದೆ. ಅಲ್ಲದೆ, ಹಾಸನದಲ್ಲಿ ಬಿಜೆಪಿಯಿಂದ ಯಾರೇ ನಿಂತರೂ ಗೆಲ್ಲುವುದು ಗ್ಯಾರಂಟಿ ಎಂದು ಎ ಮಂಜು ಅವರು ಹೇಳಿಕೆ ನೀಡಿರುವುದು ಈ ಗಾಳಿಸುದ್ದಿಯ ಖಚಿತತೆಯನ್ನು ದೃಢಪಡಿಸಿದೆ.
ಸಚಿವ ಎಚ್ ಡಿ ರೇವಣ್ಣಗೆ ಬುದ್ಧಿ ಕಮ್ಮಿ: ಎ ಮಂಜು ಟೀಕೆ
ಮನವೊಲಿಕೆಗೆ ಸಿದ್ದರಾಮಯ್ಯ ಯತ್ನ : ಪ್ರೀತಂ ಗೌಡ ಅವರನ್ನು ಎ ಮಂಜು ಭೇಟಿಯಾಗಿರುವ ಸುದ್ದಿ ಹರಡುತ್ತಿದ್ದಂತೆ, ಫೋನಾಯಿಸಿರುವ ಸಿದ್ದರಾಮಯ್ಯ ಅವರು ಮಂಜುವನ್ನು ತಡೆಯಲು ಎಲ್ಲ ಪ್ರಯತ್ನ ನಡೆಸಿದ್ದಾರೆ. ಒಂದು ವೇಳೆ ನೀನು ಬಿಜೆಪಿಗೆ ಹೋದರೆ ಅಲ್ಲಿ ಮೂಲೆಗುಂಪಾಗುತ್ತಿಯಾ. ಅಲ್ಲೂ ಇಲ್ಲ, ಇಲ್ಲೂ ಇಲ್ಲದ ಸ್ಥಿತಿಗೆ ಬರಬೇಡ ಎಂದು ಸಿದ್ದರಾಮಯ್ಯ ಬುದ್ಧಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಆದರೆ, ಕುಟುಂಬ ರಾಜಕಾರಣದ ವಿರುದ್ಧ ಮೊದಲಿನಿಂದಲೂ ದನಿಯೆತ್ತುತ್ತಿರುವ ತಾನು, ಅದೇ ಕುಟುಂಬದಿಂದ ಹಾಸನದಲ್ಲಿ ಸ್ಪರ್ಧಿಸುತ್ತಿರು ಪ್ರಜ್ವಲ್ ರೇವಣ್ಣ ವಿರುದ್ಧ ಹೇಗೆ ಮತ ಕೇಳುವುದು? ಇದುವೇ ಆ ಕುಟುಂಬಕ್ಕೆ ಮತ್ತು ಜೆಡಿಎಸ್ ಗೆ ಪಾಠ ಕಲಿಸಲು ಸೂಕ್ತವಾದ ಸಮಯ ಎಂದು ಎ ಮಂಜು ಸಿದ್ದರಾಮಯ್ಯನವರಿಗೆ ಉತ್ತರ ನೀಡಿದ್ದಾರೆ. ಆದರೆ, ಸದ್ಯಕ್ಕೆ ಕಾಂಗ್ರೆಸ್ಸಿಗೆ ರಾಜೀನಾಮೆ ನೀಡುವ ನಿರ್ಧಾರವನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಂಡಿದ್ದಾರೆ ಎಂಬ ಮಾಹಿತಿಯೂ ಬಂದಿದೆ.