ಟಿಪ್ಪುವನ್ನು ಮೈಸೂರು ಹುಲಿ ಎನ್ನಲು ಸಾಧ್ಯವೇ?: ಪ್ರತಾಪ ಸಿಂಹ
ಹಾಸನ, ಮೇ 22: "ಟಿಪ್ಪು ತನ್ನ ಮಕ್ಕಳನ್ನು ಒತ್ತೆಯಾಗಿಟ್ಟು ತನ್ನ ಜೀವ ಉಳಿಸಿಕೊಂಡಿರುವ ವ್ಯಕ್ತಿ. ಆತನನ್ನು ಮೈಸೂರು ಹುಲಿ ಎಂದು ಕರೆಯಲು ಸಾಧ್ಯವೇ?" ಎಂದು ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಸಂಸದ ಪ್ರತಾಪ್ ಸಿಂಹ ಪ್ರಶ್ನೆ ಮಾಡಿದರು.
ಹಾಸನದ ಖಾಸಗಿ ಹೋಟೆಲ್ನಲ್ಲಿ ಮಾತನಾಡಿದ ಅವರು, "ಭಾರತದ ಇತಿಹಾಸವನ್ನು ನಾವುಗಳು ಯಾವ ರೀತಿ ಬರೆದು ನೋಡಬೇಕು. ವಸ್ತು ನಿಷ್ಠವಾಗಿ ನೋಡಬೇಕಾ?, ಇಲ್ಲವೇ ಗಿರೀಶ್ ಕಾರ್ನಡ್ ಬರೆದಂತಹ ಟಿಪ್ಪುವಿನ ಕನಸುಗಳನ್ನು ಎಂದು ಕಾಲ್ಪನಿಕವಾದ ಪುಸ್ತಕಗಳ ರೂಪವಾಗಿ, ನಾಟಕಗಳ ರೂಪವಾಗಿ ನೋಡಬೇಕಾ?" ಎಂದರು.
ಮೈಸೂರು: ಟಿಪ್ಪು ಸುಲ್ತಾನ್ ಈ ಮಣ್ಣಿನ ಮಗ ಎಂದ ಹೆಚ್ ವಿಶ್ವನಾಥ್
"ಟಿಪ್ಪುವಿನ ಕೊಡುಗೆ ಏನೆಂದು ಹೇಳಿ?. ಹಳೇ ಮೈಸೂರು ಭಾಗ ಬಹಳಷ್ಟು ಟಿಪ್ಪುವಿನ ನಿಯಂತ್ರಣದಲ್ಲಿತ್ತು ಎಂದು ಹೇಳುವವರು ಟಿಪ್ಪುವಿನ ಒಂದು ಕೊಡುಗೆ ಏನೆಂದು ಇದ್ದರೇ ಹೇಳಿ. ಟಿಪ್ಪು ಗೆದ್ದಂತಹ ಯುದ್ಧದ ಬಗ್ಗೆ ಒಂದು ಉದಾಹರಣೆ ನೀಡಿ. ಆಗ ಆತ ಹುಲಿನಾ?, ಸಿಂಹನಾ?, ಕರಡಿಯಾ? ಎಂಬುದರ ಬಗ್ಗೆ ಯೋಚನೆ ಮಾಡೋಣ" ಎಂದು ಸವಾಲು ಹಾಕಿದರು.
"ಟಿಪ್ಪುವಿನ ಆಡಳಿತದ ವೇಳೆ 3ನೇ ಮತ್ತು 4ನೇ ಆಂಗ್ಲೋ ಮೈಸೂರು ಯುದ್ಧ ನಡೆದಿದ್ದು. 3ನೇ ಯುದ್ಧದಲ್ಲಿ ಈ ವೇಳೆ ಎದುರಾಳಿಗಳು ಕೋಟೆಯನ್ನು ಆವರಿಸಿದಾಗ ಟಿಪ್ಪು ಕೋಟೆ ಒಳಗೆ ಸಂಧಾನಕ್ಕೆಂದು ಕಳುಹಿಸುತ್ತಾರೆ. ಮಾತಿಗೆ ತಕ್ಕಂತೆ ನಡೆದುಕೊಂಡಿಲ್ಲ ಎಂದು ಬ್ರಿಟಿಷರು ಆತನ ಇಬ್ಬರೂ ಮಕ್ಕಳನ್ನು ಒತ್ತೆಯಾಗಿ ತೆಗೆದುಕೊಂಡು ಹೋಗುತ್ತಾರೆ. ಆದರೇ ಇಂದು ಟಿಪ್ಪುವನ್ನು ಒಬ್ಬ ದೊಡ್ಡ ತ್ಯಾಗಿ ಎಂದು ಬಿಂಬಿಸಲಾಗುತ್ತಿದೆ. ಟಿಪ್ಪು ತನ್ನ ಮಕ್ಕಳನ್ನು ಒತ್ತೆಯಾಗಿಟ್ಟು ತನ್ನ ಜೀವ ಉಳಿಸಿಕೊಂಡ ವ್ಯಕ್ತಿ" ಎಂದು ವ್ಯಂಗ್ಯವಾಡಿದರು.
ಹುಲಿ ಎಂದು ಕರೆಯಲು ಸಾಧ್ಯವೇ?; "ಇನ್ನು 4ನೇ ಯುದ್ಧದಲ್ಲಿ ಟಿಪ್ಪು ಸಾವನಪ್ಪಿರುವುದು ಶ್ರೀರಂಗಪಟ್ಟಣದ ಕೋಟೆ ಒಳಗೆ. ಟಿಪ್ಪು ಸುಲ್ತಾನ್ ಯಾವ ರಣರಂಗದಲ್ಲಿ ಖಡ್ಗ ಹಿಡಿದು ಹೋರಾಟ ಮಾಡಲಿಲ್ಲ. ಇಂತಹ ವ್ಯಕ್ತಿಯನ್ನು ಯಾವ ಕಾರಣಕ್ಕೆ ಹುಲಿ ಎಂದು ಕರೆಯಬೇಕು?. ಹುಲಿ ಆಗಿದ್ದರೇ ಕೋಟೆ ಒಳಗೆ ಸಾಯಲು ಸಾಧ್ಯವೇ?. ಬೋನ್ ಒಳಗೆ ಸಾಯುವುದು ಹುಲಿಯಲ್ಲ ಎಂದು ನಾನು ಹೇಳುತ್ತೇನೆ. ಜೊತೆಗೆ ಟಿಪ್ಪು ಒಬ್ಬ ಕ್ರೂರಿ" ಎಂದು ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.
"ಕ್ರೌರ್ಯ ಮತ್ತು ಶೌರ್ಯದ ನಡುವೆ ಬಹಳಷ್ಟು ವ್ಯತ್ಯಾಸವಿರುವ ಬಗ್ಗೆ ಜನರು ಅರ್ಥ ಮಾಡಿಕೊಳ್ಳಬೇಕಾಗಿದೆ. ಯುದ್ಧ ಖೈದಿ ಆಗಿ ಬಂದವನ ಹಿಡಿದು ಎದುಗೆ ಚೂರಿ ಹಾಕುವುದು, ಆತನ ಚರ್ಮ ಸುಲಿಯುವುದು ಶೌರ್ಯವಲ್ಲ ಅದು ಕ್ರೌರ್ಯ" ಎಂದು ಪ್ರತಾಪ್ ಸಿಂಹ ಸ್ಪಷ್ಟಪಡಿಸಿದರು.
ಪ್ರಧಾನಿ ಮೋದಿ ಭೇಟಿ; ಮೈಸೂರಿಗೆ ಪ್ರಧಾನಿ ಮೋದಿ ಭೇಟಿ ನೀಡುವ ಕುರಿತು ಮಾತನಾಡಿದ ಪ್ರತಾಪ್ ಸಿಂಹ, "ಈ ಬಾರಿಯ ವಿಶ್ವ ಯೋಗ ದಿನಕ್ಕೆ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜಿಯವರು ಮೈಸೂರಿಗೆ ಬರುತ್ತಿದ್ದಾರೆ. ಸಮಸ್ತ ಕನ್ನಡಿಗರು, ಮೈಸೂರಿನ ಪರವಾಗಿ ಅವರಿಗೆ ಸ್ವಾಗತ ಕೋರುತ್ತೇನೆ. ಕಳೆದ ಏಪ್ರಿಲ್ ತಿಂಗಳಲ್ಲಿ ನಾನು ಮತ್ತು ನನ್ನ ಕುಟುಂಬ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಜೊತೆ ಹೋಗಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಖುದ್ದಾಗಿ ಭೇಟಿ ಮಾಡಿ ಮೈಸೂರಿಗೆ ಆಗಮಿಸುವಂತೆ ಮನವಿ ಮಾಡಿದ್ದೆವು. ನಮ್ಮ ಮನವಿಗೆ ಸ್ಪಂದಿಸಿ ಮೋದಿಯವರು ಬರುತ್ತಿರುವುದು ನಮಗೆ ಅತೀವ ಸಂತಸ ತಂದಿದೆ" ಎಂದರು.
"ವಿಶ್ವ ಯೋಗ ದಿನದಂದು ಕಾರ್ಯಕ್ರಮಕ್ಕೆ ಸುಮಾರು ಒಂದೂವರೆ ಲಕ್ಷ ಯೋಗಪಟುಗಳನ್ನು ಒಂದೇ ಕಡೆ ಸೇರಿ ಅದ್ಭುತವಾಗಿ ಯೋಗ ನಡೆಸಿಕೊಡುತ್ತೇವೆ. ಮೈಸೂರಿಗೂ ಮತ್ತು ಯೋಗಕ್ಕೆ ಉತ್ತಮವಾದ ಸಂಬಂಧವಿದ್ದು, ಮೈಸೂರು ಸಿಟಿ ಆಫ್ ಯೋಗ ಎಂದು ಪ್ರಸಿದ್ಧಿ ಪಡೆದಿದೆ. ಮಹಾರಾಜರು, ಅಯ್ಯಂಗಾರರು, ಕೃಷ್ಣಮಾಚಾರಿ, ಪಟ್ಟಾಭಿಯವರು, ಅವರೆಲ್ಲರು ಯೋಗ ಪೋಷಕರಾಗಿದ್ದಾರೆ. ಅವರೆಲ್ಲರ ಪ್ರೋತ್ಸಾಹ ದಿಂದ ಸಿಟಿ ಆಫ್ ಯೋಗ ಎನಿಸಿಕೊಂಡಿದೆ. ಪ್ರಧಾನಿ ಆಗಮಿಸುವ ಹಿನ್ನೆಲೆಯಲ್ಲಿ ಭದ್ರತೆ ಸಂಬಂಧ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಎಸ್ಪಿಜಿ ಜೊತೆ ಸಮನ್ವಯ ನಡೆಸಲಿದ್ದಾರೆ" ಎಂದು ಹೇಳಿದರು.
ಭಗತ್ ಸಿಂಗ್ ಬಗ್ಗೆ ಪ್ರೀತಿ; "ಘಸ್ನಿಯಿಂದ ಹಿಡಿದು ಇಲ್ಲಿವರೆಗೂ ಯಾರಲ್ಲೂ ಶೌರ್ಯ ಕಂಡಿಲ್ಲ, ಕ್ರೌರ್ಯ ಮಾತ್ರ ಕಂಡಿದೆ. ದೇವಸ್ಥಾನ ಒಡೆದು ಹಾಕುವುದು ಅವರ ಕೆಲಸವಾಗಿದೆ. ಮದಕರಿ ನಾಯಕನ ವಿಚಾರಕ್ಕೆ ಬಂದರೇ ಮೋಸದಿಂದ ಸೋಲಿಸಿ ಬಂದಿಸಿದ್ದಾರೆ. ಕಾಂಗ್ರೆಸ್ಗೆ ಭಗತ್ ಸಿಂಗ್ ಬಗ್ಗೆ ಯಾವಾಗ ಈ ರೀತಿ ಪ್ರೀತಿ ಬಂದಿದೆಯೊ ಗೊತ್ತಿಲ್ಲ. ಇವರಿಗೆ ನೆಹರು, ಸೋನಿಯ ಗಾಂಧಿ, ರಾಜೀವ್ ಗಾಂಧಿ ಬಿಟ್ಟರೇ ಯಾವುದು ಕಾಣಿಸುವುದಿಲ್ಲ. ನಾಮಕವಸ್ತೆ ಮಾತ್ರ ಗಾಂಧೀಜಿ ನೆನಪಾಗುತ್ತದೆ, ಸಿದ್ದರಾಮಯ್ಯ ಅವರಿಗೆ ಭಗತ್ ಸಿಂಗ್ ಬಗ್ಗೆ ಮಾತು ಬರುತ್ತಿದೆ ಎಂದರೇ ಇದೊಂಥರ ಸೋಜಿಗ ಅನಿಸುತ್ತಿದೆ" ಎಂದು ವ್ಯಂಗ್ಯವಾಡಿದರು.
"ಸಿದ್ದರಾಮಯ್ಯ ಅವರ 5 ವರ್ಷದ ಆಡಳಿತದಲ್ಲಿ ಕೇವಲ ಟಿಪ್ಪು ಸುಲ್ತಾನ್, ಹೈದರಾಲಿ ಬಗ್ಗೆ ಮಾತನಾಡಿರುವುದು ಬಿಟ್ಟರೇ ಇನ್ಯಾವ ವಿಷಯ ಪ್ರಸ್ತಾಪ ಮಾಡಲಿಲ್ಲ. ಭಗತ್ ಸಿಂಗ್ ಅವರ ಪಠ್ಯವನ್ನು ಯಾರು ಬದಲಾಯಿಸಿರುವವರು?. ಎಸ್ಎಸ್ಎಲ್ ಸಿ ಪಠ್ಯ ಪುಸ್ತಕದಲ್ಲಿ ಅವರ ವಿಚಾರ ಹಾಗೆ ಇದೆ. ಅದೆ ರೀತಿ ನಾರಾಯಣ್ ಗುರುವಿನ ಪಾಠ 7ನೇ ತರಗತಿಯಲ್ಲಿದೆ. ಯಾವ ವ್ಯತ್ಯಾಸ ಮಾಡದಿದ್ದರೂ ವಿನಕಾರಣ ಹುರಿದೆಬ್ಬಿಸುವ ಕೆಲಸವನ್ನು ಕಾಂಗ್ರೆಸ್ ನವರು ಮಾಡುತ್ತಿದ್ದಾರೆ" ಎಂದು ದೂರಿದರು.